ದಿನದ ಸುದ್ದಿ
ನಾಡಿನ ಖ್ಯಾತ ವಿಚಾರವಾದಿ ಎ.ಕೆ. ಸುಬ್ಬಯ್ಯ ನಿಧನ : ಗಣ್ಯರ ಸಂತಾಪ
ಸುದ್ದಿದಿನ,ಬೆಂಗಳೂರು: ನಾಡಿನ ಖ್ಯಾತ ವಿಚಾರವಾದಿ, ವಕೀಲ ಮತ್ತು ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಕಾಲವಶರಾಗಿದ್ದಾರೆ. ಎ.ಕೆ.ಸುಬ್ಬಯ್ಯ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ನಿಧನರಾಗಿದ್ದಾರೆ.
ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬೆಳ್ಳೂರಿನಲ್ಲಿ ಅಜ್ಜಿಕುಟೀರ ಕಾರ್ಯಪ್ಪ ಮತ್ತು ಸೀತಮ್ಮ ದಂಪತಿ ಪುತ್ರನಾಗಿ 1936ರ ಆಗಸ್ಟ್ 8ರಂದು ಇವರು ಜನಿಸಿದ್ದರು. 1980ರಲ್ಲಿ ಕರ್ನಾಟಕ ಬಿಜೆಪಿಯ ಮೊದಲ ಅಧ್ಯಕ್ಷರಾಗಿ ಇವರು ಆಯ್ಕೆಯಾಗಿದ್ದರು. ಆದರೆ, ಕಾಲಾನಂತರದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ತತ್ವ, ಸಿದ್ಧಾಂತಗಳಿಂದ ಸಂಪೂರ್ಣ ವಿಮುಖವಾಗಿ, ಅದಕ್ಕೆ ತದ್ವಿರುದ್ಧವಾದ ವಿಚಾರವನ್ನು ನಾಡಿನಲ್ಲಿ ಹರಡಲು ಯತ್ನಿಸಿದ್ದರು.
ಅವರು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಒಡನಾಡಿಯಾಗಿದ್ದರು. ಅಲ್ಲದೇ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸುಮಾರ್ 19 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು.
ನೇರ ನಡೆ, ನುಡಿ, ಪ್ರಖರ ಚಿಂತನೆ, ನಿರರ್ಗಳ ಭಾಷಣಗಳಿಂದ ಅವರು ಪ್ರಸಿದ್ಧರಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರ ಆಸ್ತಿ ಕುರಿತು ಅವರು ನೀಡಿದ್ದ ಹೇಳಿಕೆ “ಆಲೂಗೆಡ್ಡೆ ಬೆಳೆದು ಅವರ ಆಸ್ತಿಯ ಪ್ರಮಾಣದಲ್ಲಿ ಏರಿಕೆಯಾಯಿತೇ?” ತುಂಬಾ ಪ್ರಸಿದ್ಧವಾಗಿದೆ.
ಇವರ ಸಾವಿನ ಟ್ವೀಟರ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಕಂಬನಿ ಮೀಡಿದಿದ್ದಾರೆ. ನೇರ, ದಿಟ್ಟ ಮಾತುಗಳಿಂದ ಸಮಕಾಲೀನ ವಿದ್ಯಮಾನಗಳಿಗೆ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಾ ನಮ್ಮ ಆತ್ಮಸಾಕ್ಷಿಯಂತಿದ್ದ ಹಿರಿಯ ಹೋರಾಟಗಾರ ಎ.ಕೆ.ಸುಬ್ಬಯ್ಯ ಸಾವಿನಿಂದ ವೈಯಕ್ತಿಕವಾಗಿ ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾಡು ಮಾರ್ಗದರ್ಶಕನನ್ನು ಕಳೆದುಕೊಂಡು ಬಡವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಅವರು ಹೇಳಿದ್ದಾರೆ.
ಕೆ.ಎಲ್.ಅಶೋಕ್, ಹರ್ಷಕುಮಾರ್ ಕುಗ್ವೆ, ಬಿ.ಎಂ.ಬಷೀರ್, ದಿನೇಶ್ ಅಮಿನ್ ಮಟ್ಟು ಹೀಗೆ ಹಲವು ವಿಚಾರವಾದಿಗಳು ಸಂತಾಪ ಮಿಡಿದಿದ್ದಾರೆ.
ನೇರ,ದಿಟ್ಟ ಮಾತುಗಳಿಂದ ಸಮಕಾಲೀನ ವಿದ್ಯಮಾನಗಳಿಗೆ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಾ ನಮ್ಮ ಆತ್ಮಸಾಕ್ಷಿಯಂತಿದ್ದ ಹಿರಿಯ ಹೋರಾಟಗಾರ ಎ.ಕೆ.ಸುಬ್ಬಯ್ಯ ಸಾವಿನಿಂದ ವೈಯಕ್ತಿಕವಾಗಿ ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಾಡು ಮಾರ್ಗದರ್ಶಕನನ್ನು ಕಳೆದುಕೊಂಡು ಬಡವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. pic.twitter.com/SIvRDLsZfH
— Siddaramaiah (@siddaramaiah) August 27, 2019