ದಿನದ ಸುದ್ದಿ

ಅಪ್ಪನ ಹರಕು ಕೋಟು..! : ಅಂಬೇಡ್ಕರ್ ನೆನಪಿಸಿಕೊಂಡ ತಂದೆಯ ಚಿತ್ರಗಳು

Published

on

01

ನನ್ನ ವಿಷಯದಲ್ಲಿ ಎರಡು ಮೂರು ಸಂಗತಿಗಳನ್ನು ಮಾತ್ರ ನಿಶ್ಚಿತವಾಗಿ ಹೇಳುವುದಕ್ಕೆ ಆಗುತ್ತದೆ. ರಾಜಪುತಾನದ ಮಹೂ ಮುಕ್ಕಾಮಿನಲ್ಲಿ ನಾನು ಜನಿಸಿದೆ. ಹಾಗಾಗಿ ಕೊಂಕಣದೊಂದಿಗೆ ನನಗೆ ಯಾವುದೇ ಸಂಬಂಧವೂ ಇಲ್ಲ. ನನ್ನ ತಂದೆಯವರು ಕೊಂಕಣದವರೇ, ಆದರೆ ಉದ್ಯೋಗದ ಕಾರಣದಿಂದ ಅವರು ರಾಜಪುತಾನಕ್ಕೆ ಹೋಗಬೇಕಾಯಿತು.

ಆಗ ನನ್ನ ಜನನವು ಮಹೂನಲ್ಲಿ ಮುಕ್ಕಾಮು ಮಾಡಿದ್ದಾಗ ಆಯಿತು ಎಂಬುದನ್ನು ಮಾತ್ರ ಖಚಿತವಾಗಿ ಹೇಳಬಹುದು. ಮತ್ತೊಂದು ಸಂಗತಿಯೆಂದರೆ, ನನ್ನ ಜನನವು ಸರಿಯಾಗಿ ಹನ್ನೆರಡು ಹೊಡೆದಾಗಲೇ ಆದುದು. ಆ ಸಮಯದಲ್ಲಿ ನನ್ನ ತಂದೆಯವರು ಕೆಲಸದ ಮೇಲೆ ಇದ್ದರು.

ಇತ್ತ ನನ್ನ ತಾಯಿಯವರ ಬಾಣಂತಿತನವು ನಡೆದಿತ್ತು , ನನ್ನ ಪಿಂಡವು ಬಹಳ ದೊಡ್ಡದಾಗಿತ್ತು. ನನ್ನ ತಾಯಿಯವರಿಗೆ ಹೆರಿಗೆಯಲ್ಲಿ ಬಹಳ ತೊಂದರೆಯಾಯಿತು ಎಂಬುದಾಗಿ ಹೇಳುತ್ತಾರೆ. ನನ್ನ ತಂದೆಯವರಿಗೆ ಚಿಂತೆಯಾಗುತ್ತಿತ್ತು. ಆದರೆ ಕೊನೆಗೆ ದಾದಿಯು ಬಂದು ಅವರಿಗೆ ಹೇಳಿದಳು “ಮನೆಗೆ ಹೋಗು, ನಿನಗೆ ಗಂಡು ಮಗ ಜನಿಸಿದ್ದಾನೆ”

ನನ್ನ ತಂದೆಯವರ ಮನೆಯನ್ನು ಧರ್ಮಾಸನ ಎಂದು ಕರೆಯಬಹುದು. ನನ್ನ ತಂದೆಯವರು ವಿದ್ಯೆಯ ಭಕ್ತರೂ ಆಗಿದ್ದರು . ಹಾಗೆಯೇ ಅವರು ಧರ್ಮವನ್ನು ಪ್ರೀತಿಸುತ್ತಿದ್ದರು . ನಾನು ಚಿಕ್ಕವನಾಗಿರುವಾಗಲೇ ರಾಮಾಯಣ , ಮಹಾಭಾರತ ಇತ್ಯಾದಿ ಎಲ್ಲಾ ಗ್ರಂಥಗಳನ್ನು ಅವರು ಪಾರಾಯಣ ಮಾಡಿಸುತ್ತಿದ್ದರು . ರಾಮಾಯಣ , ಮಹಾಭಾರತಗಳನ್ನು ಓದಿದ ಕಾರಣ ನನ್ನ ಮನಸ್ಸಿನ ಮೇಲೆ ಬಹಳ ಪರಿಣಾಮವು ಉಂಟಾಗಿದ್ದಿತು.

ನನ್ನ ತಂದೆಯವರು ನನಗೆ ಹೇಳುತ್ತಿದ್ದರು , “ನಾವು ಬಡವರಾಗಿದ್ದೇವೆ ಎಂದುಕೊಂಡು ಮಂಕಾಗಿರುವ ಕಾರಣವಿಲ್ಲ , ನೀನು ಏಕೆ ವಿದ್ವಾಂಸನಾಗಲು ಸಾಧ್ಯವಿಲ್ಲ? ” ಒಮ್ಮೆ ನಾನು ಯಾವುದೋ ಒಂದು ಪರೀಕ್ಷೆಯಲ್ಲಿ ಪಾಸಾಗಿದ್ದೆನು, ಆಗ ನನ್ನ ಓಣಿಯಲ್ಲಿದ್ದ ಜನರು ನನ್ನ ತಂದೆಯವರಿಗೆ ಇಷ್ಟವಿಲ್ಲದೆ ಇದ್ದರೂ ದಾದಾ ಕೇಳುಸ್ಕರ ಅವರ ಸಹಾಯದಿಂದ ನನಗೆ ಸತ್ಕಾರ ಮಾಡುವುದೆಂದು ನಿರ್ಧರಿಸಿದರು.

ಆಗ ನನ್ನ ತಂದೆ ಹೇಳುತ್ತಿದ್ದರು , “ ಸತ್ಕಾರ ಮಾಡುವುದು ಬೇಡ , ಮಕ್ಕಳಿಗೆ ಹೀಗೆ ಸತ್ಕಾರ ಮಾಡಿದರೆ ಅವರಿಗೆ ನೇತಾರನಾಗಿದ್ದೇನೆ ಎಂಬುದಾಗಿ ಜಂಭ ಬರುತ್ತದೆ” ಎನ್ನುತ್ತಿದ್ದರು. ಆ ಹೊತ್ತಿನಲ್ಲಿ ಕೊನೆಗೂ ನನಗೆ ಸತ್ಕಾರವನ್ನು ಮಾಡಲಾಯಿತು. ಆಗ ದಾದಾ ಕೇಳುಸ್ಕರ ಅವರು ನನಗೆ ಬುದ್ಧನ ಚರಿತ್ರೆಯ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಆ ಪುಸ್ತಕವನ್ನು ಓದಿದ ನಂತರ ನನ್ನಲ್ಲಿ ಯಾವುದೋ ಒಂದು ರೀತಿಯ ನಿರಾಳ ಭಾವನೆಯ ಬೆಳಕು ಬಂದಂತೆ ಆಯಿತು, ಮಾರುತಿ, ಸೀತಾ, ರಾಮ ಇವರೆಲ್ಲರೂ ವನವಾಸಕ್ಕೆ ಹೋದರು, ಧೋಬಿಯೊಬ್ಬನು ಏನೋ ಮಾತನಾಡಿದ ಎಂಬ ಕಾರಣದಿಂದ ಸೀತೆಯ ತ್ಯಾಗ, ಕೃಷ್ಣನ ಹದಿನಾರು ಸಾವಿರ ಹೆಂಡತಿಯರು ಎಂಬ ಸಂಗತಿ ಏನೋ ಭಯಂಕರವೆನಿಸುತ್ತಿತ್ತು. ಈ ವಿಚಾರಗಳು ನನ್ನ ಮನಸ್ಸನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಆಗಲಿಲ್ಲ .

ಆದರೆ ಬುದ್ಧನ ಧರ್ಮದ ಆ ಅಧ್ಯಯನದಿಂದ ನನಗೆ ಹೆಚ್ಚು ಅಭ್ಯಾಸ ಮಾಡಬೇಕು ಎಂದು ಅನ್ನಿಸಿತು. ನನ್ನ ಮನಸ್ಸಿನ ಮೇಲೆ ಆ ಧರ್ಮದ ಹಿಡಿತವು ಖಾಯಂ ಆಗಿ ಉಳಿಯಿತು. ನನ್ನ ಮನಸ್ಸಿನಲ್ಲಿ ಈಗ ಇಂತಹದ್ದೊಂದು ನಿರ್ಧಾರವಾಗಿದೆ, – ಜಗತ್ತಿನ ಕಲ್ಯಾಣವನ್ನು ಕೇವಲ ಬೌದ್ದಧರ್ಮವು ಮಾತ್ರವೇ ಮಾಡುವುದಕ್ಕೆ ಸಾಧ್ಯ , ಹಿಂದೂ ಜನರಿಗೆ ತಮ್ಮ ರಾಷ್ಟ್ರವನ್ನು ಎಚ್ಚರಗೊಳಿಸುವುದು ಬೇಕಿದ್ದರೆ ಬುದ್ಧ ಧರ್ಮವನ್ನು ಸ್ವೀಕಾರ ಮಾಡಬೇಕು ಎಂಬುದಾಗಿ ನಾನು ಯಾವಾಗಲೂ ಹೇಳುತ್ತಲೇ ಬಂದಿದ್ದೇನೆ.

(ಸಂ: 20, ಪುಟ ಸಂಖ್ಯೆ: 676 ರಿಂದ 684 )

02

ಮುಂಬೈಯಲ್ಲಿ
1938 ರ ಡಿಸೆಂಬರ್ 12ರಂದು
ಅಸ್ಪೃಶ್ಯ ವಿದ್ಯಾರ್ಥಿಗಳ ಪರವಾಗಿ ಏರ್ಪಡಿಸಲಾದ ‘ಮುಂಬೈ ಅಸ್ಪೃಶ್ಯ ವಿದ್ಯಾರ್ಥಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅಂಬೇಡ್ಕರರು ವಿದ್ಯಾರ್ಥಿಗಳ ಕುರಿತು ಮಾತನಾಡುವಾಗ ತನ್ನ ತಂದೆಯನ್ನು ನೆನಪಿಸಿಕೊಳ್ಳುತ್ತಾರೆ.

“ನಿಮ್ಮಲ್ಲಿ ಹಲವರು ವಿವಾಹಿತರಾಗಿರಬೇಕು. ಮತ್ತೆ ಹಲವರು ಮದುವೆಯಾದವರೂ ಇದ್ದಿರಬಹುದು. ಆದರೆ ಮದುವೆಯ ನಂತರ ನೀವೇನು ಮಾಡಲಿದ್ದೀರಿ? ಈ ವಿಷಯದಲ್ಲಿ ನಿಮ್ಮ ಮೇಲೆ ಗುರುತರವಾದ ಜವಾಬ್ದಾರಿಯಿದೆ. ನಾನು ನನ್ನ ತಂದೆಯದೇ ಉದಾಹರಣೆ ನೀಡುತ್ತೇನೆ. ಅವರಿಗೆ ಒಟ್ಟೂ 14 ಮಕ್ಕಳು ಜನಿಸಿದವು. ಅವರಲ್ಲಿ ನಾನು 11ನೇ ರತ್ನ. ಆದರೆ ನಾನು ಎಲ್‌ಪಿನ್‌ಸ್ಟನ್ ಕಾಲೇಜಿಗೆ ಹೋದಾಗ ನನ್ನ ಸ್ಥಿತಿ ಹೇಗಿತ್ತು ಅಂತೀರಾ? ನನ್ನ ಕಾಲಲ್ಲಿ ಪಾದರಕ್ಷೆಯಿರಲಿಲ್ಲ.

ನಾನು ದರಿಸಿದ್ದು ಮಂಜರಪಾಟದಂತಹ ತೆಳು ಶರ್ಟು ಮತ್ತು ಅಪ್ಪನ ಹರಕು ಕೋಟು!! ನೀವು ಎಲಿಪನ್‌ಸ್ಟನ್ ಕಾಲೇಜಿಗೆ ಹೋದಿರಿ ಎಂದರೆ ಅಲ್ಲಿ ನಿಮಗೆ ಮುಲ್ಲರ್ ಸಾಹೇಬರ ಚಿತ್ರ ಕಾಣಿಸುತ್ತದೆ. ಅವರು ನನಗೆ ಕೊನೆಯ ಎರಡು ವರ್ಷ ಶರ್ಟು ನೀಡಿದರು. ನಾನು ಯೋಚಿಸುತ್ತಿದ್ದೆ. ಅಪ್ಪನಿಗೆ 14ರ ಬದಲು 4 ಮಕ್ಕಳು ಹುಟ್ಟಿದ್ದರೆ ಎಂಥ ಸುಖ ಸಿಗುತ್ತಿತ್ತಲ್ಲ ಎಂದು ‘ನನ್ನ ಈ ದುಃಖಕ್ಕೆ ಅಪ್ಪನೇ ಕಾರಣನಾಗಿದ್ದ.

ನಾನೊಮ್ಮೆ ಕಾಲೇಜಿಗೆ ಹೋಗುವಾಗ ರೇಲ್ವೆ ಪಾಸನ್ನು ಮನೆಯಲ್ಲೇ ಮರೆತೆ. ಅದೇ ದಿನ ಪಾಸಿನ ತಪಾಸಣೆ ನಡೆದಿತ್ತು. ಟಿಕೇಟು ಸ್ವೀಕರಿಸುವ ಮಾಸ್ತರ ನನ್ನನ್ನು ತಡೆದು ನಿಲ್ಲಿಸಿದ. ಹತ್ತಿರವಂತೂ ದಮ್ಮಡಿಯಿಲ್ಲ. ನಾಲ್ಕು ಗಂಟೆಯವರೆಗೆ ಚರ್ಚ್ಗೇಟಿನ ಸ್ಟೇಶನ್ನಿನಲ್ಲಿ ಕೂತೇ ಇರಬೇಕಾಯಿತು. ಬಳಿಕ ಕೈಶಿಣಿ ಎಂಬ ಸಹಪಾಠಿ ಅಲ್ಲಿಗೆಬಂದ. ‘ಏನೋ, ಇಲ್ಲೇಕೆ ಕುಳಿತಿರುವೆ?’ ಎಂದು ಕೇಳಿದ. ನಾನು ಅವನಿಗೆ ಎಲ್ಲ ವಿಷಯ ಹೇಳಿದೆ. ಅವನು ನಾಲ್ಕಾಣೆ ತುಂಬಿ ನನ್ನ ಬಿಡುಗಡೆ ಮಾಡಿದ ಬಳಿಕ ಟಿಕೇಟ ತೆಗೆಸಿ ಮನೆಗೆ ಮರಳಿ ಕಳಿಸಿದ.

ಈ ಕಾರಣಕ್ಕಾಗಿ ನಾನಗೆ ಅಪ್ಪನ ಮೇಲೆ ಕೋಪವಿದೆ. ಏಕೆಂದರೆ ಅವರು ತಮ್ಮ ಜವಾಬ್ದಾರಿಯನ್ನು ಮರೆತರು. ಅಪ್ಪ ತಪ್ಪಿದಾಗ ಅವರಿಗೆ ಅದನ್ನು ಹೇಳುವುದು ತಪ್ಪೇನಲ್ಲ ಎಂದು ನನಗೆ ಅನಿಸುತ್ತದೆ. ಈಗ ನಿಮ್ಮ ಮೇಲೆ ಈ ಜವಾಬ್ದಾರಿಯಿದೆ. ಅದೇ ರೀತಿ ಮಹಿಳೆಯರ ಮೇಲೂ ಇದೆ. ನಾನು ಕೇವಲ ಪುರುಷರಿಗಾಗಿ ಮಾತ ಹೇಳುತ್ತಿಲ್ಲ. ಮಹಿಳೆಯರೂ ಸಹ ತಮ್ಮ ಜವಾಬ್ದಾರಿಯನ್ನು ಅರಿಯಬೇಕು.

(ಸಂ:19-ಪು:722)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version