ಬಹಿರಂಗ
ಕರ್ನಾಟಕದ ಅಂಬೇಡ್ಕರ್ ‘ಪ್ರೊ.ಬಿ.ಕೃಷ್ಣಪ್ಪ’..!
ಪ್ರೋ.ಬಿ.ಕೃಷ್ಣಪ್ಪ ಅಂದ್ರೆ ಅದೊಂದು ಅಂಬೇಡ್ಕರ್ ಸಿದ್ದಾಂತದ ಮಾತೃಕೆ.ಕರ್ನಾಟಕದ ಕೋಟ್ಯಂತರ ಶೋಷಿತರ ಎದೆಯೊಳಗೆ ಮನುಷ್ಯತ್ವಕ್ಕಾಗಿ ಹೋರಾಟದ ಕಿಚ್ಚಚ್ಚಿದ ಸಂಘರ್ಷದ ಬೆಂಕಿ. ಭೀಮವಾದವೆಂಬ ಬೀಜವನ್ನು ನಾಡಿನ ದಲಿತರ ತಲೆಯೊಳಗೆ ಬಿತ್ತಿದ ಅಪ್ಪಟ ಅಂಬೇಡ್ಕರ್ ವಾದಿ.
ಸಾಮಾಜಿಕ ಸಂಕಟಗಳಿಗೆ ಸಿಲುಕಿ ನಲುಗಿದ್ದ ಅಸ್ಪೃಶ್ಯರಿಗೆ ಧ್ವನಿಯಾದವರು.ತಾನು ಗಂಧದಂತೆ ತೇದು ನಾಶವಾಗಿ ದಲಿತರಿಗೆ ಸುಗಂದ ನೀಡಿದ ಮಹಾತ್ಮನೆಂದತೆ ಬಿ.ಕೃಷ್ಣಪ್ಪ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಎಂಬ ಹಳ್ಳಿಯಲ್ಲಿ ತಾಯಿ ಚೌಡಮ್ಮ ತಂದೆ ಬಸಪ್ಪರ ಮಗನಾಗಿ ಜನಿಸಿದ ಬಿಕೆ ಬಾಲ್ಯದ ಬದುಕಿನಲ್ಲಿಯೆ ಅನೇಕ ಅವಮಾನ ಅಪಮಾನ ಅನುಭವಿಸಿ ಅದರ ವಿರುದ್ದ ಪ್ರತಿರೋಧ ಒಡ್ಡುತ್ತಿದ್ದ ಛಲಗಾರ.
ಕನ್ನಡದಲ್ಲಿ ಎಮ್ ಎ ಮುಗಿಸಿ ಭದ್ರಾವತಿಯ ಸರ್ ಎಮ್.ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದರು.
ಅಂಬೇಡ್ಕರ್ ಸಿದ್ದಾಂತಕ್ಕೆ ಬದ್ದನಾಗಿದ್ದ ಬಿಕೆ ತಾನು ಪ್ರೀತಿಸಿದ ಬ್ರಾಹ್ಣರ ಹುಡುಗಿಯಾದ ಇಂದಿರಾರವರನ್ನು ಮದುವೆಯಾಗುವುದರ ಮೂಲಕ ಬಸವಾದಿಶರಣರು ಪ್ರೋತ್ಸಾಹಿಸಿದ ಹಾಗು ಬಾಬಸಾಹೇಬರು ಒಪ್ಪಿಕೊಂಡಿದ್ದ ಅಂತರ್ಜಾತಿ ವಿವಾಹವಾದರು.ಇದರೊಂದಿಗೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ ನಡೆಯುತಿದ್ದ ದಲಿತರ ಮೇಲಿನ ದೌರ್ಜನ್ಯಗಳು ದಲಿತ ಸಂಘರ್ಷ ಸಮಿತಿ ಸ್ಥಾಪಿಸಲು ತತ್ ಕ್ಷಣದ ಕಾರಣವಾಯಿತು. 1974ರಲ್ಲಿ ಬಿಕೆಯವರು ಟಿ.ರಾಜಣ್ಣ.ಎಸ್.ಟಿ.ರಾಜು,ಎನ್ .ಗಿರಿಯಪ್ಪ.ಈರಯ್ಯ.ಬೋರಯ್ಯ ಮುಂತಾದ ದಲಿತರ ಸಮ್ಮುಖದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯೆಂಬ ಸಂಘಟನೆಯನ್ನು ಹುಟ್ಟು ಹಾಕಿದರು.
ಎಲ್ಲೆಡೆ ನಡೆಯುತಿದ್ದ ದಲಿತರ ಶೋಷಣೆ. ದೌರ್ಜನ್ಯ. ಕೊಲೆ.ಹಲ್ಲೆಅತ್ಯಾಚಾರಗಳು ನಾಯಿಕೊಡೆಯಂತೆ ರಾರಜಿಸುತಿದ್ದವು ಇದೊಂದು ಸಂದಗ್ದ ಸಮಯ ಬಿಕೆಯವರಿಗೆ ಸಿಕ್ಕಿದ್ದೆ ತಡ ಈ ದಲಿತ ಸಂಘಟನೆ ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು.ಚಂದ್ರಗುತ್ತಿಯ ಬೆತ್ತಲೆ ಸೇವೆ ವಿರುದ್ದ .ತತ್ತೂರಿನಲ್ಲಿ ದಲಿತರಿಗೆ ಮಲ ತಿನಿಸಿದ ಪ್ರಕರಣ.ಕ್ಯಾಸಿನಕೆರೆ ಅಸ್ಪೃಶ್ಯತೆ ವಿರುದ್ದ.ಪತ್ರಸಂಗಪ್ಪನ ಕೊಲೆ.ದುರ್ಗಪ್ಪನ ಕೊಲೆ.ಭೂಪರವಾನಗಿ ನಿಷೇಧ ಕಾಯ್ದೆಯ ಪರ.ಸಿದ್ಲಿಪುರ ಭೂಮಿ ಹೋರಾಟ. ಮೊದಲಾದ ಅಮಾನವೀಯ ಪ್ರಕರಣಗಳ ವಿರುದ್ದ ಪ್ರತಿಭಟಿಸಿ ದೇಶಾದ್ಯಂತ ಹೆಸರಾಗಿತ್ತು.ಬಿಕೆಯವರು ಬಾಬಸಾಹೇಬರ ಬರಹಗಳನ್ನು ಸಂಪೂರ್ಣವಾಗಿ ಓದಿ ಕೊಂಡಿದ್ದರು ಬುದ್ದನ ಸಿದ್ದಾಂತ ಬಸವಣ್ಣನ ಕಾಯಕ ಪರಂಪರೆ ಬಿಕೆಯವರಿಗೆ ಶಕ್ತಿಸಾಧಕಗಳಾದವು.
ಬಿಕೆ ಕರ್ನಾಟಕದಾದ್ಯಂತ ಯುವಕನಂತೆ ತಿರುಗಿ ಬಾಬಸಾಹೇಬರ ಹೋರಾಟಗಳನ್ನು ತಿಳಿಸುವುದರ ಮೂಲಕ ಕೋಟ್ಯಂತರ ದಲಿತರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ ಸ್ವಾಭಿಮಾನದ ನಾಯಕರನ್ನು ಹುಟ್ಟುಹಾಕಿದರು. ದೇಶದ ಯಾವುದೆ ಮೂಲೆಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ದಸಂಸ ಅದನ್ನು ಖಂಡಿಸುತಿತ್ತು ಬಡಬಗ್ಗರಿಗೆ ದೀನದಲಿತರ ವಿರುದ್ದ ಮಾಡುವ ಕಾನೂನು ಕಾಯ್ದೆಗಳನ್ನು ವಿರೋಧಿಸುತ್ತಾ ಶೋಷಣೆ ತಡೆಯುವಲ್ಲಿ ವಿಪಲವಾದ ಸರ್ಕಾರಗಳಿಗೆ ದಸಂಸ ಸಿಂಹಸ್ವಪ್ನವಾಗಿ ಗುಡುಗುತಿತ್ತು.ಒಂದು ರೀತಿಯಲ್ಲಿ ವಿರೋಧಪಕ್ಷದನಾಯಕಂತೆ ಕಾರ್ಯವನ್ನು ನಿರ್ವಹಿಸುತಿತ್ತು.
ಅದಾಗಲೆ ಉತ್ತರ ಪ್ರದೇಶದಲ್ಲಿ ಬಹುಜನ ಚಳುವಳಿ ಆಳುವ ಮಟ್ಟಿಗೆ ಹಬ್ಬಿರುತ್ತದೆ”ಪೊಲಿಟಿಕಲ್ ಪವರ್ ಇಸ್ ದ ಮಾಸ್ಟರ್ ಕೀ”ಎಂಬ ಬಾಬಸಾಹೇಬರ ಮಹದಾಸೆಯಂತೆ ರಾಕೀಯ ವಿಜ್ಞಾನಿ ದಾದಾಸಾಹೇಬ್ ಕಾನ್ಷಿರಾಂ ಸಾಹೇಬರು ಉತ್ತರದಲ್ಲಿ ದಲಿತರನ್ನು ಬೇಡುವ ವರ್ಗಕ್ಕೆ ಮಾತ್ರ ಸೀಮಿತಗೊಳಿಸದೆ ಆಳುವ ವರ್ಗಮಾಡುವ ಕೆಲಸವನ್ನು ಪೂರ್ವಿಕರ ಇತಿಹಾಸದೊಂದಿಗೆ ರಾಜ್ಯಾಧಿಕಾರದ ಮಹತ್ವನ್ನು ಹೇಳಿ ಯಶಸ್ವಿಯಾಗಿದ್ದರು.ಇದು ಕೇವಲ ಉತ್ತರಪ್ರದೇಶದಕ್ಕೆ ಮಾತ್ರ ಸೀಮಿತವಾಗದೆ ಅಖಂಡ ಭಾರತದಾದ್ಯಂತ ಬಹುಜನ ಚಳುವಳಿಯನ್ನು ಕಟ್ಟಲಿಕೆ ಯೋಚಿಸುತ್ತಾರೆ ಅಂತಹ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಸಿಕ್ಕಿದ ದೊಡ್ಡ ಶಕ್ತಿ ಒಳ್ಳೆ ವ್ಯಕ್ತಿ ಎಂದರೆ ಬಿಕೆಯವರು.
ಕಾನ್ಷೀರಾಮ್ ಸಾಹೇಬರು ಬಿಕೆಯೊಂದಿಗೆ ಮಾತನಾಡಿ ಬಾಬಸಾಹೇಬರ “ಕೊನೆ ಆಸೆ” ಯನ್ನು ಹೇಳುತ್ತಾರೆ.ಅಲ್ಲದೆ ದಲಿತ ಹೋರಾಟಗಳು ಮನವಿ ಕೊಡುವುದಕ್ಕೆ ಸೀಮಿತಗೊಳ್ಳದೆ ಮನಸ್ಸು ಮಾಡಿದರೆ ಮನವಿ ತೆಗೆದುಕೊಳ್ಳಬಹುದು ಎಂಬುದು ಬಿಕೆಯವರಲ್ಲಿ ಚಿಗೊರಡೆಯಿತು.ಬಿಕೆಯವರು ಒಂದು ದಿನ ಇಡೀ ದಲಿತ ನಾಯಕರನ್ನು ಸಭೆಕರೆದು “ನಾನು ಗುಡ್ಡಕ್ಕೆ ಕಲ್ಲೊತ್ತೆ” ಇಷ್ಟು ವರ್ಷ ಏನು ಸಾಧಿಸಲಿಕೆ ಆಗಲಿಲ್ಲ ಆಗಾಗಿ ದಲಿತರ ವಿಮೋಚನೆಗೆ ರಾಜ್ಯಾಧಿಕಾರವೆ ಮೂಲ ಮದ್ದು.ಬಾಬಸಾಹೇಬರ ಮಹದಾಸೆಯು ಇದೆ ಆಗಿತ್ತು ಆಗಾಗಿ ದಸಂಸವನ್ನು ಬಿಎಸ್ ಪಿಗೆ ವಿಲೀನಗೊಳಿಸೋಣ ದೇಶಾದ್ಯಂತ ಬೀಸುತ್ತಿರುವ ಪರಿವರ್ತನೆ ಗಾಳಿ ನಾಡಿನೆಲ್ಲೆಡೆ ಬೀಸಲಿ ಎಂದರು. ಅಲ್ಲದೆ ಎಲ್ಲರು ಒಪ್ಪಿದ್ದರು ರಾತ್ರಿಯ ವೇಳೆ ಜನತಾದಳದ ಬೂಟುನೆಕ್ಕಿ ಬೆಳಿಗ್ಗೆ ದೊಡ್ಡ ದಲಿತನಾಯಕರಂತೆ ನಟಿಸುತಿದ್ದ ಗೋಮುಖವ್ಯಾಘ್ರರು ಒಲ್ಲದ ಮನಸಿನಲ್ಲಿ ಒಪ್ಪುತ್ತಾರೆ.
ಬಿಕೆಯವರಿಗೆ ಈಗ ಆನೆಬಲ ಬರುತ್ತದೆ.”ಪರಿವರ್ತನೆಗಾಗಿ ಬಿಎಸ್ಪಿಗೆ”ಎಂಬ ಸ್ಲೋಗನ್ ಹಿಡಿದು ಊರೂರು ಅಲೆದು ಬಹುಜನ ಚಳುವಳಿಯನ್ನು ಕಟ್ಟುತ್ತಾರೆ.ಅಂಬೇಡ್ಕರ್ ವಾದಕ್ಕಿರುವ ಶಕ್ತಿಯನ್ನು ಎಲ್ಲರಿಗು ತಿಳಿಸುತ್ತಾರೆ.ಹೇಗಾದರು ಮಾಡಿ ಆಳುವ ವರ್ಗವಾಗಲೇಬೇಕು ಎಂಬ ಹಠ ಹಿಡಿಯುತ್ತಾರೆ.
ಅದೆ ಸಮಯದಲ್ಲಿ ಉತ್ತರಪ್ರದೇಶದಲ್ಲಿ ಬಿಎಸ್ಪಿ ಎಸ್ಪಿಯೊಂದಿಗೆ ಮೈತ್ರಿಕಡಿದುಕೊಂಡು ಬಿಜೆಪಿಯೊಂದಿಗೆ ಕೈ ಜೋಡಿಸಿ ಅಕ್ಕಾಮಾಯವತಿಯನ್ನು ಮುಖ್ಯಮಂತ್ರಿ ಮಾಡಿ ಮೈತ್ರಿ ಮುಂದುವರೆಸುತ್ತದೆ.
ಯಾರಾದರೇನು.?ನಮಗೆ ಬೇಕಾಗಿರುವುದು ರಾಜ್ಯಾಧಿಕಾರ.ಎಂಬ ತತ್ವ ಕಾನ್ಷಿರಾಂ ಅವರದಾಗಿತ್ತು.ಆದರೆ ದಲಿತ ಚಳುವಳಿಯ ಮೆದುಳಿನಂತೆ ಕೆಲಸ ಮಾಡುತಿದ್ದ ಬುದ್ದಿಗೇಡಿ ಬುದ್ದಿಜೀವಿಗಳು ಹಾಗು ಜನತಾದಳದ ಮಲಮೂತ್ರಕುಡಿಯಲು ಸಂಧರ್ಭಗಳನ್ನು ಕಾಯುತಿದ್ದ ದಲಿತ ನಾಯಕರು”ಅಯ್ಯೊ ಕೋಮುವಾದಿಗಳೊಂದಿಗೆ ಕೈ ಜೋಡಿಸಿದ್ದಾರೆ ಎಂದು ಡಂಗುರ ಸಾರುತ್ತಲೆ ದಸಂಸವನ್ನು ಕತ್ತಿಯಿಂದ ಎರಡು ಸೀಳು ಮಾಡಿದರು.
ಬಿಕೆಯೊಂದಿಗಿದ್ದ ಡಿಜಿ ಸಾಗರ್ ರವರು ಹೊರಬಂದು ಸಾಗರ್ ಬಣವೆಂದು ಮಾಡಿಕೊಂಡು ಜನತಾದಳಕ್ಕೆ ಬೇಷರತ್ತಾಗಿ ಬೆಂಬಲ ಸೂಚಿಸುತ್ತಾರೆ. ಇನ್ನು ಎದೆಯೊಳಗೆ ಗಾಂಧಿವಾದದ ಬೀಜ ಬೀಳಿಸಿಕೊಂಡಿದ್ದ ದೇವನೂರು ಮಹಾದೇವರು.ಕಮ್ಯುನಿಸ್ಟ್ ಚಳುವಳಿಯನ್ನು ಮೈಗಂಟಿಸಿಕೊಂಡು ಇಕ್ರಲಾ ವದಿರ್ಲಾ ಎಂದು ಹಾಡುತಿದ್ದ ಡಾ.ಸಿದ್ದಲಿಂಗಯ್ಯರವರು ಮುಂತಾದ ಸಾಹಿತಿಗಳು ಉತ್ತರದ ನಿರ್ಧಾರವನ್ನು ಖಡಾಖಂಡಿತವಾಗಿ ವಿರೋಧಿಸಿದರು.
ಇದರೊಂದಿಗೆ ಬಿಕೆಯವರನ್ನು ಒಬ್ಬಂಟಿಗಾರನ್ನಾಗಿ ಮಾಡಿದರು.
ಆದರೆ ಬಿಕೆಗೆ ನೋವಾದರು ಎದೆಗುಂದದೆ “ಕಾನ್ಷಿರಾಂ ಸಾಹೇಬರು ಏನೆ ನಿರ್ಧಾರ ತೆಗೆದುಕೊಂಡರು ಅದು ದಲಿತರಿಗೆ ಬಹುಜನರಿಗೆ ಒಳ್ಳೆಯದಾಗಲಿಕೆ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂದು ಕಾನ್ಷಿರಾಂರ ಮೈತ್ರಿಯನ್ನು ಸಮರ್ಥಿಸಿಕೊಂಡರು.ಬಿಕೆ ಅಂದ್ರೆ ಅಂಬೇಡ್ಕರ್ ಬಂಡೆಯಂತೆ ಗಟ್ಟಿಯಾಗಿದ್ದರು. ಎಮ್.ಜಯಣ್ಣ. ಶ್ರೀಧರ್ ಕಲ್ವೀರ್.ಹೂಡಿ ವೆಂಕಟೇಶ್.ಕೋಲಾರದ ಶಿವಣ್ಣ.ಮಂಗಳೂರಿನ ಗಂಗಾದರಯ್ಯ.ಚಂದ್ರಪ್ರಸಾಧ್ ತ್ಯಾಗಿ.ಮಾವಳ್ಳಿ ಶಂಕರ್.ಮುಂತಾದ ದಲಿತ ನಾಯಕರನ್ನು ಒಟ್ಟುಗೊಡಿಸಿ ಎಮ್.ಜಯಣ್ಣರವರನ್ನು ದಸಂಸದ ರಾಜ್ಯಸಂಚಾಲಕರನ್ನಾ ಮಾಡಿ ತಾವುಗಳು ಎಲ್ಲರ ಸಹಕಾರದಿಂದ ಬಹುಜನ ಚಳುವಳಿಯನ್ನು ಮುಂದುವರೆಸಿದರು.
ಚಿತ್ರದುರ್ಗದಲ್ಲಿ ಎಮ್ ಜಯಣ್ಣನವರ ನೇತೃತ್ವದಲ್ಲಿ ” ದಲಿತರ ಪುನಶ್ಚೇತನ ಸಮಾವೇಶ” ಮಾಡಲು ನಿಂತಾಗ ಕೆಲವು ಬುದ್ದಿಜೀವಿಗಳು ಬರದೆ ಬರುವವರನ್ನು ಬಿಡದೆ ಬಿಕೆಯವರಿಗೆ ನೋವು ಮಾಡಿದರು.ಆದರೆ ಆ ಸಮಾವೇಶ ತುಂಬಾಯಶಸ್ವಿಯಾಯಿತು.ಕೆಲವು ಘಟಾನುಘಟಿ ದಲಿತ ನಾಯಕರು ಬರದಿದ್ದಕ್ಕೆ ಅಸಮಧಾನವು ಆಯಿತು.
ಬಿ.ಕೆಯವರು ಯಾವ ವಾದವನ್ನು ಬೆನ್ನತ್ತಲಿಲ್ಲ
“ನಮ್ಮ ರಾಷ್ಟನಾಯಕ ಬಾಬಸಾಹೇಬ ಅಂಬೇಡ್ಕರ್.ನಮ್ಮ ಸಿದ್ದಾಂತ ಅಂಬೇಡ್ಕರ್ ವಾದ.ನಮ್ಮ ಪಕ್ಷ ಬಹುಜನ ಸಮಾಜ ಪಕ್ಷ. ನಮ್ಮ ಧರ್ಮ ಬೌದ್ದ ಧರ್ಮ ಎಂಬ ಮಹಾಸಂದೇಶಗಳನ್ನು ದಲಿತರಿಗೆ ನೀಡಿದರು ಇದಲ್ಲದೆ ಇನ್ನ ಯಾವುದರಿಂದಲೂ ನೀವು ಉದ್ದಾರವಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಬಿಕೆಯವರಿಗೆ ತುಂಬಾ ನೋವಿನ ದಿನಗಳು ಬರಲಾರಂಬವಾದವು ಮನುವಾದಿಗಳಿಗಿಂತ ತನ್ನವರೆ ತನಗೆ ಮೇಲಿಂದ ಮೇಲೆ ಗಾಯಮಾಡಿದರು.ತಾನು ಬೆಳೆಸಿದ ಹುಡುಗರು ಹಾಗುನಾನು ಕಲಿಸಿದ ಸಂಘರ್ಷದ ಪಾಠವನ್ನು ಇಂದು ತನಗೆ ಕಲಿಸುತ್ತಿರುವುದು.ದಲಿತ ಸಂಘಟನೆಯಲ್ಲಿ.ಚೆಡ್ಡಿಹಾಕುವ ಬಾಲಕರೆಲ್ಲಾ ಬಿಕೆಯವರಿಗೆ ಅರಳುಮರಳು ಎಂದು ಛೇಡಿಸುವುದನ್ನು ಕಣ್ಣಾರೆ ಕಂಡು ಮಮ್ಮಲ ಮರುಗುತಿದ್ದರು.
ಬಿಕೆ ಬಾಬಸಾಹೇಬರಂತೆ ಶಿಸ್ತಿಗೆ ತುಂಬಾ ಒತ್ತುಕೊಡುತಿದ್ದರು ತಮ್ಮ ಬಟ್ಟೆಗಳನ್ನೆಲ್ಲಾ ತಾವೆ ತೊಳೆದುಕೊಳ್ಳುತಿದ್ದರು.ಕುಡಿತ ಸಿಗರೇಟ್ ಮಸ್ತ್ ಮಾಜಾನೆ ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.ಸರಾಯಿಬೇಡ “ಹೋಬಳಿಗೊಂದು ವಸತಿಶಾಲೆ” ಬೇಕು ಎಂದು ಬಿಕೆ ಚಳುವಳಿ ಮಾಡಿದರೆ ಕೆಲವು ಬುದ್ದಿಜೀವಿ ದಲಿತನಾಯಕರು ” ಕುಡಿಯುವುದು ದಲಿತರ ಹಕ್ಕು”ಎಂದು ಉದ್ದುದ್ದ ಲೇಖನ ಬರೆದಿದ್ದುಂಟು.
ಇನ್ನು “ಮಹಾತ್ಮಾ ಗಾಂಧಿ” ಸಿನಿಮಾ ಬಂದಾಗ ಅದರಲ್ಲಿ ಪೂನ ಒಪ್ಪಂದದ ಘಟನೆಯನ್ನು ಸಿನಿಮಾದಲ್ಲಿ ಸೇರಿಸಿರಲಿಲ್ಲ ಈ ವಿಚಾರ ತಿಳಿದ ಬಿಕೆ ಹಾಗು ದಸಂಸ ರಾಜ್ಯಾದ್ಯಂತ ಉಗ್ರವಾಗಿ ಹೋರಾಟ ಮಾಡಿ ಪೂನ ಒಪ್ಪಂದ ದೃಶ್ಯವಿಲ್ಲದ ಈ ಸಿನಿಮಾ ಸಂಪೂರ್ಣ ಬ್ಯಾನ್ ಆಗಬೇಕೆಂದು ಖಂಡಿಸಿದರು. ಆದರೆ ದೇವನೂರು ಮಹಾದೇವರವರು ಮಾತ್ರ”ನಾನು ಗಾಂಧಿ ಸಿನಿಮಾ ನೋಡಿದೆ ಅದರಲ್ಲಿ ದಲಿತರಿಗೆ ಅಪಮಾನದ ಅಂಶಗಳಿಲ್ಲ ಎಂದು ಪತ್ರಿಕೆಯಲ್ಲಿ ಲೇಖನ ಬರೆದರು.
ಬಿ.ಕೃಷ್ಣಪ್ಪರ ಕೊನೆಯ ದಿನಗಳು ತುಂಬಾ ನೋವಿನಿಂದ ಕೂಡಿದ್ದವು.ಹೆಜ್ಜೆ ಹೆಜ್ಜೆಗು ಮುಳ್ಳಾಗಿ ಕಾಡುತಿದ್ದ ಮನುವಾದಿಗಳು ಒಂದೆಡೆಯಾದರೆ ತಮ್ಮವರೆ ತನಗೆ ಚೂರಿಹಾಕಿದ್ದು ಒಂದುಕಡೆಯಾಗುತ್ತದೆ.
ಬಿಕೆಯವರು ಕೋಲಾರದಲ್ಲಿ ಚುನಾವಣೆಗೆ ನಿಂತಾಗ ಹೀನಾಯ ಸೋಲನ್ನು ಉಣ್ಣುತ್ತಾರೆ ಅಂದಿನ ಜನತಾದಳ ಹಾಗು ಕಾಂಗ್ರೆಸ್ ಬಿಕೆಯವರನ್ನು ಸೋಲಿಸಿತು.ಅಂದು ಬಾಬಸಾಹೇಬ ಅಂಬೇಡ್ಕರ್ ಅವರನ್ನು ಸೋಲಿಸಿದಂತೆ ಬಿಕೆಯವರನ್ನು ಸೋಲಿಸಿದರು.ಅವರೆ ಸಾಕಿಬೆಳೆಸಿದ ದಲಿತನಾಯಕರಿಂದ ಅವಮಾನಕ್ಕೆ ಗುರಿಯಾದರು.ಇದು ಬಿಕೆಯವರ ಸೋಲಾಗಿರಲಿಲ್ಲ ಅಂಬೇಡ್ಕರ್ ವಾದದ ಸೋಲಾಗಿತ್ತು.
ಅವರೆ ಕಟ್ಟಿ ಬೆಳೆಸಿದ ದಸಂಸ ತನ್ನ ಕಣ್ಣೆದುರಿಗೆ ಹೊಡೆದು ಚೂರುಚೂರಾಗಿರುತ್ತಿರುವುದನ್ನು ಕಂಡು ಸಂಕಟ ವೇಧನೆ ಪಡುತಿದ್ದರು.ಬಹುಸಂಖ್ಯಾತ ಶೋಷಿತರ ಹಕ್ಕುಗಳನ್ನು ರಕ್ಷಿಸುವಂತ ದಲಿತ ಸಾಹಿತಿಬುದ್ದಿಜೀವಿಗಳು ವ್ಯವಸ್ಥೆ ಯೊಂದಿಗೆ ರಾಜಿಯಾಗಿ ಗುಲಾಮರಾಗಿ ಚಮಚಗಳಾಗಿ ಬದುಕುತಿದ್ದು ಬಿಕೆಯವರಿಗೆ ಅಗಾಧ ನೋವು ತರಿಸುತ್ತೆ.ಹೇಗಾದರು ಮಾಡಿ ಬಿಎಸ್ಪಿಯನ್ನು ಅಧಿಕಾರಕ್ಕೆ ತರಬೇಕೆಂದು ಹಾಗು ಕೊನೆ ಪಕ್ಷ ವಿರೋಧ ಪಕ್ಷದ ನಾಯಕನಾಗಬೇಕು ಎಂದು ಬಹುದೊಡ್ಡ ಕನಸ್ಸ ಕಂಡರು.
ಅಂದು ಗದಗದಲ್ಲಿ ಬಾಬಸಾಹೇಬ ಅಂಬೇಡ್ಕರವರ ಜನ್ಮ ದಿನೋತ್ಸವಕ್ಕೆ ಉದ್ಘಾಟಕರಾಗಿ ಹೋಗಿದ್ದರು ಸ್ಟೇಟ್ ಕನ್ವಿನರ್ ಆಗಿದ್ದ ಎಮ್.ಜಯಣ್ಣ ಆ ಕಾರ್ಯಕ್ರಮದ ಉಸ್ತುವಾರಿ ಆಗಿದ್ದರು.ಕಾರ್ಯಕ್ರಮ ಆರಂಭಗೊಂಡಿದೆ .ಬಿಕೆ ಗದಗದ ಲಾಡ್ಜನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತಿದ್ದರು.ಇನ್ನೇನು ಸಾವಿರಾರು ಜನರನ್ನು ಕುರಿತು ಮಾತನಾಡಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದರು.ಆಯೋಜಕರಿಗೆ ನೀವು ಕಾರ್ಯಕ್ರಮ ಆರಂಭಿಸಿ ನಂತರ ಬರುತ್ತೇನೆ ಎಂದು ಸಂದೇಶ ರವಾನೆ ಮಾಡಿದರು.ಕಾರ್ಯಕ್ರಮ ಆರಂಭವಾಗಿದೆ ಎಲ್ಲರು ಬಿಕೆಯವರ ಮಾತುಗಳನ್ನು ಆಲಿಸಲು ಹಳ್ಳಿಹಳ್ಳಿಗಳಿಂದ ತಂಡೋಪತಂಡವಾಗಿ ಆಗಮಿಸಿ ಕಾದು ಕುಳಿತಿದ್ದಾರೆ.ವೇದಿಕೆ ಮೇಲಿದ್ದ ವ್ಯಕ್ತಿಯೊಬ್ಬ ಮೈಕಿನ ಮುಂದೆ ಬಂದು ಬಿ.ಕೆಯವರಿಗೆ ಹೃದಯಘಾತವಾಯಿತಂತೆ ಆಸ್ಪತ್ರೆಗೆ ದಾಖಲಿಸಿದೆ ಎಂದಾಗ ಇಡೀ ಸಭೆಯೆ ಆತಂಕಕ್ಕೆ ಸಿಲುಕುತ್ತದೆ.
ಏನಾಗುತ್ತೊ..ಎಂಬ ಭಯದಿಂದಲೆ ಬೇಗ ಗುಣಮುಖರಾಗಿ ಬರಲಿ ಎಂದು ಹಾರೈಸುತಿದ್ದರು.ಆಸ್ಪತ್ರೆಗೆ ಆಗಮಿಸಿದ ಜಯಣ್ಣನವರಿಗೆ ಬಿ.ಕೆ.ಕೇಳಿದ್ದು ಪ್ರೋಗ್ರಾಂ ಚನ್ನಗಾಯ್ತೇನೊ ಎಂದು.ಹೂಂ ಚನ್ನಾಗಾಯ್ತು ನೀವು ಮೊದಲು ಗುಣವಾಗ್ರಿ ಎಂದಾಗ .ನನ್ಗೇನು ಆಗಿಲ್ಲ ನಾ ಚನ್ನಾಗಿದಿನಿ ಎಂದರು.ಬಿಕೆಯವರ ಹೆಂಡತಿಯಾದ ಶ್ರೀಮತಿ ಇಂದಿರಾ ಹಾಗು ಮಕ್ಕಳು ಬಂದು ಬಿಕೆಯವರನ್ನು ನೋಡುತ್ತಾರೆ ,ಬಿಕೆ ಇನ್ನೇನು ಮೇಲೇಳಿ ಮಾತನಾಡಬೇಕೆಂದು ತವಕಿಸುತ್ತಲೇ ಕೊನೆಯುಸಿರೆಳೆದರು. ಈ ಅಘಾತದ ಸುದ್ದಿ ತಿಳಿದ ದಲಿತರಿಗೆ ತಂದೆ ಕಳೆದುಕೊಂಡ ಅನಾಥ ಪ್ರಜ್ಞೆ ಕಾಡಲಾರಂಭಿಸುತ್ತದೆ.ನೆರೆದಿದ್ದವರ ಕಣ್ಣಾಲೆಗಳು ತುಂಬಿ ಬಂದವು.ಕರ್ನಾಟಕದ ಶೋಷಿತರು ದಲಿತಚಳುವಳಿಯ ಮಾತೃಕೆಯನ್ನೆ ಕಳೆದುಕೊಂಡತಾಯಿತು.
ಬಿಕೆ ಎಂದು ಅಧಿಕಾರದ ಆಸೆಗೆ ಒಳಗಾಗಲಿಲ್ಲ.ಮಂತ್ರಿ MLA.MP.ನಿಗಮ ಮಂಡಳಿ ಸ್ಥಾನಮಾನದ ಆಸೆಆಕಾಂಶೆಗಳು ಸಾಲಾಗಿ ಹರಿದು ಬಂದರು ಯಾವುದಕ್ಕೊ ತಲೆ ಕೆಡಿಸಿಕೊಳ್ಳಲಿಲ್ಲ.ಎಲ್ಲವನ್ನು ತಮ್ಮ ಕಾಲಿನಿಂದ ತಳ್ಳಿದರು.ತಾವು ನಂಬಿದ್ದ ಅಂಬೇಡ್ಕರ್ ವಾದಕ್ಕೆ ಯಾವತ್ತು ರಾಜಿಮಾಡಿಕೊಳ್ಳಲಿಲ್ಲ.ಅಂಬೇಡ್ಕರ್ ವಾದವೆಂಬ ಹಣತೆಯನ್ನು ಎಲ್ಲರ ಮನಮನೆಯಲ್ಲೂ ಹಚ್ಚಿದರು. ದಲಿತರು ಅಂಬೇಡ್ಕರ್ ವಾದದಿಂದ ಮಾತ್ರ ಮುಕ್ತಿ ಎಂದು ಸಾರಿಸಾರಿ ಹೇಳುತಿದ್ದರು.
ಬಿಕೆ ಇವತ್ತು ಇಲ್ಲ ಆದರೆ ಅವರು ಹೇಳಿದ” ದಲಿತರ ಗುಡಿಸಲಲ್ಲಿ ಹೋರಾಟದ ಹಣತೆ ಹಚ್ಚಿದ್ದೇನೆ ಹೊರಗೆ ಬಿರುಗಾಳಿ ರಭಸವಾಗಿ ಬೀಸುತ್ತಿದೆ.ಈ ಹಣತೆ ಆರದಂತೆ ನೋಡಿಕೊಳ್ಳಿ.ನಮ್ಮ ನಾಯಕ ಬಾಬಸಾಹೇಬರು,ನಮ್ಮ ಪಕ್ಷ ಬಹುಜನ ಸಮಾಜ ಪಕ್ಷ,ನಮ್ಮ ಸಿದ್ದಾಂತ ಅಂಬೇಡ್ಕರ್ ವಾದ.ನಮ್ಮ ಧರ್ಮ ಬೌದ್ದ ಧರ್ಮ ಈ ನನ್ನ ಮಾತುಗಳೆ ಅಂತಿಮ ನನ್ನ ಮಹದಾಸೆ ಎಂದು ಕಣ್ಣೀರಾಕಿ ಹೇಳಿದ ಬಿಕೆಯವರ ಮಾತುಗಳನ್ನು ಇಂದಿನ ದಲಿತರು ಬಹುಜನರು ಅರ್ಥಮಾಡಿಕೊಳ್ಳಬೇಕಾಗಿದೆ.
ವರ್ತಮಾನವು ಸಂವಿಧಾನ ಹಾಗು ಅಂಬೇಡ್ಕರ್ ವಾದ ಅಪಾಯಕಾರಿ ಸಂಧರ್ಭದಲ್ಲಿ ನಿಂತಿದೆ ಇಗ್ಲಾದ್ರು ತಮ್ಮ ದಲಿತ ನಾಯಕರು ಒಣಪ್ರತಿಷ್ಟೆಗಳನ್ನು ಬಿಟ್ಟು ಬಿಕೆಯವರ ಹಾದಿಯಲ್ಲಿ ನಡೆಯಲಿ.
–ಹುಚ್ಚಂಗಿ ಪ್ರಸಾದ್
ಸುದ್ದಿದಿನ.ಕಾಂ|ವಾಟ್ಸಾಪ್|9980346243