ದಿನದ ಸುದ್ದಿ
ಹೆಚ್ಚು ಶುಲ್ಕ ವಿಧಿಸಿದರೆ ‘ಕೇಬಲ್ ಟಿವಿ’ ವಿರುದ್ಧ ದೂರು ನೀಡಿ
ಸುದ್ದಿದಿನ,ಕಲಬುರಗಿ: ಕೇಬಲ್ ಟೆಲಿವಿಷನ್ ನೆಟ್ವರ್ಕ್ (ರೆಗ್ಯುಲೇಷನ್) ಅಧಿನಿಯಮ-1995ರ ವ್ಯಾಪ್ತಿಗೊಳಪಡುವ ಕಾರ್ಯಕ್ರಮ ಸಂಕೇತ ಹಾಗೂ ಜಾಹೀರಾತು ಸಂಕೇತದ ಉಲ್ಲಂಘನಾ ಪ್ರಕರಣಗಳು, ಅಕ್ಷೇಪಾರ್ಹ ಅಂಶಗಳು, ಕೇಬಲ್ ಟಿ.ವಿ.ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವೀಕ್ಷಿಸಲು ಮತ್ತು ಕೇಳಲು ಸಂಕೇತಾಕ್ಷರಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ಅಥವಾ ನಿಗದಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಿಧಿಸುವ ಪ್ರಕರಣಗಳು ಕಂಡು ಬಂದಲ್ಲಿ ಗ್ರಾಹಕರು ಮುಕ್ತವಾಗಿ ದೂರು ಸಲ್ಲಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರು ತಿಳಿಸಿದ್ದಾರೆ.
ಅವರು ಗುರುವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೇಬಲ್ ಟೆಲಿವಿಷನ್ ನೆಟ್ವರ್ಕ್ (ರೆಗ್ಯುಲೇಷನ್) ಅಧಿನಿಯಮ-1995 ಮತ್ತು ಅದರ ಮೇರೆಗೆ ಮಾಡಲಾದ ನಿಯಮಗಳ ಜಾರಿಯ ಮೇಲ್ವಿಚಾರಣೆ ಮಾಡಲು ರಚಿಸಿರುವ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಂತಾದೆಡೆ ದೂರು ಪೆಟ್ಟಿಗೆ ಇಡಲಾಗಿದ್ದು, ದೂರು ಸಲ್ಲಿಸಬಹುದು. ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ದೂರವಾಣಿ ಸಂಖ್ಯೆ 080- 2202 8013ಗೆ ಕರೆ ಮಾಡಬಹುದು ಅಥವಾ 94808 41212 ಮೊಬೈಲ್ ನಂಬರ್ಗೆ ವಾಟ್ಸಾಪ್ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಸುದ್ದಿ ಸಮಯ ಚಾನೆಲ್ (ಡೆನ್ ಕೇಬಲ್ ನೆಟ್ವರ್ಕ್)ನ ಭವಾನಿ ಸಿಂಗ್ ಠಾಕೂರ ಅವರು ಮಾತನಾಡಿ, ಯಾವುದೇ ಆಕ್ಷೇಪಾರ್ಹ ದೃಶ್ಯಗಳನ್ನು ಪ್ರಸಾರ ಮಾಡಿರುವುದಿಲ್ಲ, ಸರ್ಕಾರದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಸರ್ಕಾರದ ಭಾಗವಾಗಿ ಕೆಲಸ ಮಾಡುತ್ತೇವೆ ಎಂದು ಸಭೆಗೆ ಮಾಹಿತಿ ನೀಡಿದರು. ಗುಲ್ಬರ್ಗಾ ನ್ಯೂಸ್ (ಇನ್ ಕೇಬಲ್ ನೆಟ್ವರ್ಕ್)ನ ಸಂಜೀವ ರೆಡ್ಡಿ ಅವರು ಮಾತನಾಡಿ, ಪಲ್ಸ್ ಪೋಲಿಯೋ, ಆನೆಕಾಲು ಲಸಿಕೆ ಮುಂತಾದ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕೆಲ ಸುದ್ದಿ ವಾಹಿನಿಗಳು ತಪ್ಪು ಮಾಹಿತಿಯಿಂದ ಕೂಡಿರುವ ಸುದ್ದಿಗಳನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಕಲಬುರಗಿಯ ವ್ಯಕ್ತಿಯೊಬ್ಬರು ದೂರು ಸಲ್ಲಿಸಿದ್ದು, ದೂರಿನ ಅರ್ಜಿಯನ್ನು ರಾಜ್ಯ ಮಟ್ಟದ ಸಮಿತಿಗೆ ಕಳುಹಿಸಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಹಾಯಕ ಪೊಲೀಸ್ ಆಯುಕ್ತ ಗಂಗಾಧರ್, ಪ್ರಧಾನ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಈಶ್ವರಪ್ಪ, ಸಮಿತಿಯ ಸದಸ್ಯರಾದ ಕಲಬುರಗಿ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಖಂಡೇರಾವ್, ಕಲಬುರಗಿಯ ಅವ್ವಾ ಅಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಶಿವಾನಂದ ಅಣಜಗಿ, ಕಲಬುರಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಮನ:ಶಾಸ್ತ್ರಜ್ಞರಾದ ಡಾ. ರೇಣುಕಾ ಬಗಾಲೆ, ವಿಶ್ವಭಾರತಿ ಸೇವಾ ಸಂಸ್ಥೆ ಅಧ್ಯಕ್ಷರಾದ ಡಾ. ಶಾರಾದಾ ಯಾಕಾಪೂರ್ ಹಾಗೂ ಗುಲ್ಬರ್ಗಾ ನ್ಯೂಸ್ (ಇನ್ ಕೇಬಲ್ ನೆಟ್ವರ್ಕ್) ಮುಖ್ಯಸ್ಥ ಸಂತೋಷ್ ಜೋಷಿ ಹಾಜರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ. ಜಿ. ಬಿ. ಅವರು ಸ್ವಾಗತಿಸಿ, ಹಿಂದಿನ ಸಭೆಯ ಅನುಪಾಲನಾ ವರದಿ ಮಂಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243