ದಿನದ ಸುದ್ದಿ
ಕಲ್ಪವೃಕ್ಷವೆಂದರೆ..!?
- ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿಗಳು, ಚಾಮರಾಜನಗರ
ಕಲ್ಪವೃಕ್ಷವೆಂದರೆ ಬೇಡಿದ್ದನ್ನು ನೀಡುವ ಸ್ವರ್ಗ ಲೋಕದ ಮರ ಹೌದು ತೆಂಗಿನಮರವು ಕೂಡ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವಾಗುವ ಮರ. ತೆಂಗಿನ ಮರದ ಜೀವ ಮತ್ತು ಜೀವನವೇ ಹಾಗೆ ಅದರ ಯಾವುದೇ ಒಂದೇ ಒಂದು ಭಾಗವು ಕೂಡ ಅನುಪಯುಕ್ತವಾದುದಲ್ಲ ಇಡೀ ಮರವೇ ಒಂದಲ್ಲ ಒಂದು ತರದಲ್ಲಿ ಮಾನವನ ಜೀವನಕ್ಕೆ ಬದುಕ ಸಾಗಿಸಲು ಸಹಾಯಕವಾಗುತ್ತದೆ.
ತೆಂಗಿನ ಮರ ಯಾವುದೇ ರೆಂಬೆ ಕೊಂಬೆಗಳನ್ನು ಹೊಂದಿರುವುದಿಲ್ಲ ಒಂದೇ ಕಾಂಡವು ಸುಮಾರು 20 ರಿಂದ 30 ಅಡಿಯವರೆಗೂ ಬೆಳೆದು ಗರಿ ಗರಿಯಾದ ಹಸಿರು ತೆಂಗಿನ ಗರಿಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ತೆಂಗಿನ ಮರದ ಸಿಂಗಾರದಲ್ಲಿ ಅಂದರೆ ಹೊಂಬಾಳೆಯಲ್ಲಿ ಗಂಡು ಹೂವು ಹಾಗೂ ಹೆಣ್ಣು ಹೂವುಗಳು ಇರುತ್ತವೆ ಹೆಣ್ಣು ಹೂವುಗಳು ಅರಳಿದ ನಂತರವೇ ಸಿಂಗಾರದಲ್ಲಿ ಫಲ ಇಡಲು ಆರಂಭವಾಗುತ್ತದೆ.
ಸುಮಾರು 70 ರಿಂದ 80 ವರ್ಷಗಳ ಕಾಲ ಜೀವಿಸುವ ತೆಂಗಿನ ಮರದಲ್ಲಿ ತಿಂಗಳಿಗೊಂದು ಹೊಸ ಗರಿಯನ್ನು ಬಿಡುತ್ತದೆ. ಈ ಗರಿಯ ಜೀವನ ಕಾಲ 30 ತಿಂಗಳು ಮಾತ್ರ ಆಮೇಲೆ ಮರದಿಂದ ಉದುರಿ ಬೀಳುತ್ತದೆ. ಒಂದು ಮರದಲ್ಲಿ 30 ತನಕ ಹೂವಿನ ಜೊಂಪೆ ಇರುತ್ತದೆ.ತಿಂಗಳಿಗೊಂದು ಹೂ ಗೊಂಚಲು ಬಿಡುತ್ತದೆ.ಒಂದು ಮರದಿಂದ ಒಂದು ಸಂವತ್ಸರ ಕಾಲದಲ್ಲಿ 30 ರಿಂದ 60 ಕಾಯಿಗಳು ಉತ್ಪತ್ತಿಯಾಗುತ್ತವೆ.
ಹೆಣ್ಣು ಹೂವು ಹುಟ್ಟಿದ ಮೇಲೆ ಕಾಯಿ ಆಗುವುದಕ್ಕೆ ಒಂದು ಸಂವತ್ಸರ ಕಾಲಬೇಕು. ಬಹುತೇಕವಾಗಿ ಕರ್ನಾಟಕ,ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಗೋವಾ ರಾಜ್ಯಗಳ ಕರಾವಳಿ ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ ತೆಂಗಿನ ಮರದ ಫಲಗಳಿಗಿಂತ ಆ ಮರದ ಗರಿಗಳು ಬಡತನದಲ್ಲಿರುವವರಿಗೆ ಸೂರು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ದುಡಿದು ತಿನ್ನುವ ವರ್ಗದವರು ಇಟ್ಟಿಗೆ, ಸಿಮೆಂಟು,ಕಬ್ಬಿಣ ಮತ್ತು ಗಾರೆ ಕೆಲಸದವರಿಗೆ ದುಡ್ಡು ಕೊಟ್ಟು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇಂತಹ ಸಂದರ್ಭದಲ್ಲಿ ಈ ವರ್ಗದವರು ತೆಂಗಿನ ಗರಿಗಳ ಕೊಂಡು ತೆಂಗಿನ ಗರಿಯ ಗುಡಿಸಲನ್ನು ಕಟ್ಟಿಕೊಂಡು ಜೀವನ ಸಾಗಿಸುವುದನ್ನು ನಾವು ಇಂದಿಗೂ ನೋಡುತ್ತೇವೆ ಈ ಸಂಗತಿ ನೋಡಿದೆ ನಿಜಕ್ಕೂ ತೆಂಗಿನ ಮರ ಕಲ್ಪತರುವೇ ಸರಿ ಇನ್ನು ಉಳ್ಳವರು ತೆಂಗಿನ ಮರವನ್ನು ಕಡಿಸಿ ತೆಂಗಿನ ತೀರು/ಅಡ್ಡತೊಲೆಯಾಗಿ ಬಳಸಿ ಸುಂದರ ಗೃಹ ನಿರ್ಮಾಣ ಮಾಡಿಕೊಳ್ಳುವಲ್ಲಿ ತೆಂಗಿನ ಮರದ ಪಾತ್ರ ನಿಜಕ್ಕೂ ಶ್ರೇಷ್ಠ.
ತ್ರಿನೇತ್ರಫಲ ಬರೀ ಗೃಹ ನಿರ್ಮಾಣ ಮಾಡಿಕೊಳ್ಳುವಲ್ಲಿ ಅಷ್ಟೇ ಉಪಯುಕ್ತ ಅಲ್ಲ ಸಾಂಸ್ಕೃತಿಕ ಒಡೆತನದ ರಾಯಭಾರಿಯೂ ಹೌದು ಬಾಲ್ಯದಲ್ಲಿ ಮಕ್ಕಳ ಆಟಿಕೆಗೆ ಉಪಯುಕ್ತವಾಗುವ ದುಡ್ಡೇ ನೀಡದೆ ಮನರಂಜನೆ ನೀಡುವ ಸಾಧನವೂ ಹೌದು. ತೆಂಗಿನ ಕಾಯಿ ಮನುಷ್ಯ ಜೀವನದ ಹುಟ್ಟಿನಿಂದ ಮರಣದವರೆಗೂ ಸಹ ಪ್ರಮುಖ ಪಾತ್ರ ವಹಿಸುತ್ತವೆ.
ಯಾವುದೇ ಒಂದು ಪೂಜೆ ಪುನಸ್ಕಾರಗಳು ಯಶಸ್ವಿಯಾಗಬೇಕಾದರೆ ತೆಂಗಿನ ಕಾಯಿ ಇರಲೇಬೇಕು ಮದುವೆಯ ಹಂದರಗಾಯಿಯಾಗಿಯೂ ಮರಣದ ಈಡು ಗಾಯಿಯೂ ಆಗಿಯೂ ತೆಂಗಿನ ಕಾಯಿ ಅತ್ಯವಶ್ಯಕ. ಇನ್ನೂ ಒಣಗಿದ ತೆಂಗಿನ ಕಾಯಿಂದ ಪರಿಶುದ್ಧ ಕೊಬ್ಬರಿ ಎಣ್ಣೆ ದೊರೆತರೆ ಹಸಿ ತೆಂಗಿನ ಕಾಯಿಯಿಂದ ದೋಸೆಗೆ ಚಟ್ನಿ ಹಾಗೂ ಕೊಬ್ಬರಿ ಹೋಳಿಗೆಯಲ್ಲಿಯೂ ಸಹ ತೆಂಗಿನ ಕಾಯಿ ಬಳಕೆಯಾಗುತ್ತದೆ.
ಒಣ ಕೊಬ್ಬರಿಯು ಪೌಷ್ಟಿಕ ಆಹಾರವಾಗಿ ಉಪಯುಕ್ತವಾಗುವುದರ ಜೊತೆಗೆ ಹೆಣ್ಣಿಗೆ ಉಡಿಹಕ್ಕಿ ಹಾಕುವ ಪದ್ದತಿಯಲ್ಲಿ ಒಣಕೊಬ್ಬರಿ ಪ್ರಮುಖ ಪಾತ್ರ ವಹಿಸುತ್ತದೆ. ಬರೀ ತೆಂಗಿನ ಕಾಯಿಯಷ್ಟೇ ಅಲ್ಲ ತೆಂಗಿನ ಚಿಪ್ಪುನ್ನು ಕೂಡ ಗೃಹ ಪೀಠೋಪಕರಣಗಳಾಗಿಯೂ ಬಳಸಬಹುದು ಅಲ್ಲದೆಯೂ ತೆಂಗಿನ ಕಾಯಿ ಚಿಪ್ಪಿನ್ನು ಚೆನ್ನಾಗಿ ಬೇಯಿಸಿ ಮದರಂಗಿಯಾಗಿಯೂ ಬಳಸಬಹುದು.
ತೆಂಗಿನ ನಾರು ಸುಲಿದು ದಿನ ನಿತ್ಯ ಬಳಕೆಯ ಹಗ್ಗವಾಗಿಯೂ ಮನೆಯಲ್ಲಿ ಕಾಲ್ವಸ್ತ್ರವಾಗಿಯೂ ಬಳಸಬಹುದು ಉಳಿದಂತೆ ತೆಂಗಿನ ಸಿಪ್ಪೆಯನ್ನು ಅಡುಗೆ ಬೇಯಿಸಲು ಕಟ್ಪಿಗೆಯಾಗಿಯೂ ಉಪಯೋಗವಾಗುತ್ತದೆ. ತೆಂಗಿನ ಗರಿಗಳಿಂದ ಚಿಕ್ಕ ವಯಸ್ಸಿನಲ್ಲಿ ಊದಲು ಪೀಪಿ ಹಾಗು ಕನ್ನಡಕ,ಜಡೆ ಹೆಣೆಯುವುದು ಹಾಗೂ ತೆಂಗಿನ ಗರಿಯ ಕಡ್ಡಿಗಳಿಂದ ಕಸ ಗುಡಿಸಲು ಪೊರಕೆ ಮಾಡಿಕೊಳ್ಳುವುದು ತೆಂಗಿನ ಗರಿಗಳನ್ನು ಒಂದು ತೊಟ್ಟಿಯಲ್ಲಿ ಹಾಕಿ ನೀರು ಬಿಟ್ಟರೆ ಕೊಳೆತು ಚೆನ್ನಾಗಿ ಕೊಬ್ಬರವಾಗುತ್ತದೆ.
ಇದನ್ನೂ ಓದಿ | ಕರ್ನಾಟಕ | ಶುಕ್ರವಾರ 592 ಮಂದಿ ಕೊರೋನಾದಿಂದ ಸಾವು, 50ಸಾವಿರ ಹೊಸ ಪ್ರಕರಣಗಳು ದಾಖಲು
ಹೊಂಬಾಳೆಯಿಂದಲೂ ಕೆಲವರು ಅಂಗಳದ ಕಸ ಗುಡಿಸುತ್ತಾರೆ. ಇನ್ನೂ ವಿಶೇಷವೆಂದರೆ ತೆಂಗಿನ ಮರಗಳಲ್ಲಿಯೇ ಹೆಜ್ಜೇನುಗಳು ಆಶ್ರಯ ತಾಣಗಳಾಗಿ ಬಳಸುವುದು ಹೆಚ್ಚು ಗಿಣಿಗಳಂತೂ ತೆಂಗಿನ ಮರದಲ್ಲೊಂದು ಪೊಟರೆ ಕೊರೆದು ತಮ್ಮ ಗೂಡಾಡಗಿಸಿಕೊಂಡು ಸಂತಾನೋತ್ಪತ್ತಿ ಕಾರ್ಯ ಮಾಡುತ್ತವೆ. ಕೋತಿಗಳಂತೂ ಮರದಿಂದ ಮರಕ್ಕೆ ಹಾರುತ್ತಾ ತೆಂಗಿನ ತೋಟದಲ್ಲಿಯೇ ದಿನವೆಲ್ಲಾ ಕಳೆಯುತ್ತವೆ.
ನಿಮಗೆ ಅನಿಸಬಹುದು ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಇವನ್ಯಾಕೆ ಹೇಳುತ್ತಿದ್ದಾನೆಂದು, ಮೊನ್ನೆ ಮೊನ್ನೆಯಷ್ಟೇ ಚಾಮರಾಜನಗರದ ಕೋರ್ಟ್ ರೋಡಿನಿಂದ ಹೋಗುತ್ತಿರಬೇಕಾದರೆ ಮದ್ಯಾಹ್ನದ ಉರಿಬಿಸಿಲು ಹೊಟ್ಟೆಯಲ್ಲಿ ಒಂಚೂರು ಸಂಕಟವಾದ ಹಾಗೆ ಎನಿಸಿತು. ಸುಮ್ಮನೆ ಬೈಕಿನಲ್ಲಿ ಹೋಗುವಾಗ ಡಿವೈಎಸ್ಪಿ ಆಫೀಸಿನ ಪಕ್ಕದಲ್ಲಿಯೇ ಒಬ್ಬ ಎಳನೀರು ವ್ಯಾಪರಿಯೂ ಎಳನೀರು ಮಾರುತ್ತಿರುವುದನ್ನು ಕಂಡು ಒಂದೆಳ್ನೀರು ಕುಡಿಯುವ ಮನಸ್ಸಾಯಿತು.
ಹಾಗೆಯೇ ಬೈಕ್ ತಿರುಗಿಸಿಕೊಂಡು ಎಳ್ನೀರು ಕುಡಿಯಲು ಹೊರಟೆ ಸ್ವಲ್ಪ ವಯಸ್ಸಾದ ಮುದುಕಪ್ಪ ಒಂದು ಕೈಯಲ್ಲಿ ಎಳ್ನೀರು ಇನ್ನೊಂದು ಕೈಯಲ್ಲಿ ಹರಿತವಾದ ಮಚ್ಚನ್ನು ಹಿಡಿದು ಕೊಚ್ಚುತ್ತಿದ್ದರು ಒಂದಿಬ್ಬರು ಸ್ನೇಹಿತರು ಐದು ಎಳನೀರನ್ನು ಪಾರ್ಸೆಲ್ ಕೊಡುವಂತೆ ಹೇಳಿ ಈ ರೀತಿಯಾಗಿ ಮಾತಿಗಿಳಿದರು.
“ತಾತಪ್ಪ್ಯೋ ಐದೆಳ್ನೀರು ಕೊಡಿ”
“ಇಲ್ಲೆ ಕುಡ್ದರೋ ಮನಗ ಪಾರ್ಸೆಲ್ ಹೊಯ್ದರೋ?”
“ಎಲ್ಲಾ ಮನ್ಗೆಯಾ ಪಾರ್ಸೆಲ್ ಕಟ್ಟಿ”
“ಹೂಂ ಆಯ್ತೇಳಿ ” ಎಂದು ಒಂದು ತೆಂಗಿನ ಕಾಯಿ ಕೊಚ್ಚಲು ಮುಂದಾದರು.
“ತಾತ ಕೈ ಜೋಪಾನ ನಮ್ಗ ನೀವು ಕೊಚ್ಚದ್ ನೋಡಿದ್ರೆನೇ ಭಯವಾಯ್ತ್ ಆಮೇಗ ಕೈ ಗಿಯ್ಗೆ ಹಾಕಂಡರೀ” “ಯಾನು ಇಲ್ಲಾ ಕಣಾ ಐದಾ ಸಾಕ ಹ್ವೇಳಿ”?.”ಹೂಂ ಸಾಕು ಕೆಂಚಕಿರೋ ಕಾಯಿ ಕೊಚ್ಚರೀ”. “ಇದ್ಯಾಕ ಬೇರೆ ಯಾನಾಗಿದ್ದಾವು ಕಣೀ”! “ಕೆಂಚಗಿರೋವು ವಸಿ ಸಿಹಿ ಇರ್ತಾವೆ ಕಣ್ ತಾತ”,”ಸಿಹ್ಯೋ ಕಹ್ಯೋ (ಸಿಹಿಯೋ- ಕಹಿಯೋ) ಯಾವನಾರ ಒಳ್ಗ ನುಗ್ಗಿ ನೋಡಿದರಾ ಕಣೀ”? “ವ್ಹಾ…. ಇದ್ಸರಿ ಮತ್ತೆ ಕೆಂಚಗಿರೋವೆ ಕೆಚ್ಚಿ ”
ಎಂದು ತಾವೆ ಇನ್ನೆರಡು ತೆಂಗಿನ ಕಾಯಿಗಳನ್ನು ಆಯ್ಕೆ ಮಾಡಿಕೊಂಡು ಪಾರ್ಸೆಲ್ ಕೊಂಡು ಹೊರಟರು ನಾನು ಕೂಡ ಎರಡು ಎಳನೀರು ಕುಡಿದು ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ನೆಮ್ಮದಿಯ ಉಸಿರು ಬಿಟ್ಟು ಹೊರಟೆ ಮನಸ್ಸು ಸ್ವಲ್ಪ ತಂಪಾಯಿತು.
ಹಾಗೆಯೇ ಬೈಕಿನಲ್ಲಿ ಹೋಗುತ್ತಿರುವಾಗ ಆ ತಾತ ಹೇಳಿದ ಮಾತು ನೆನಪಾಯಿತು.”ಸಿಹ್ಯೋ ಕಹ್ಯೋ (ಸಿಹಿಯೋ- ಕಹಿಯೋ) ಯಾವನಾರ ಒಳ್ಗ ನುಗ್ಗಿ ನೋಡಿದರಾ ಕಣೀ”? ಹೌದು ಈ ಮಾತು ಎಷ್ಟು ಸತ್ಯ ಅಲ್ಲವೇ ಎಳ್ನೀರು ಕೃತಕವಾಗಿ ತಯಾರಾಗುವಂತದ್ದಲ್ಲ ಮರದ ಮೇಲೆ ನೈಸರ್ಗಿಕವಾಗಿ ತಯಾರಾಗುವಂತದ್ದು ಅದರೊಳಗೆ ಸಿಹಿ ಕಹಿ ಎನ್ನುವುದು ಇರುವುದಿಲ್ಲ ಎಲ್ಲದು ಒಳ್ಳೆಯ ನೀರೆ.
ಆದರೆ ನಾವೇ ಅವುಗಳನ್ನು ಸಿಹಿ ಕಹಿ ಎಂದು ವಿಂಗಡಿಸಿಕೊಳ್ಳುತ್ತೇವೆ. ಇನ್ನೊಂದು ವಿಶೇಷವೆಂದರೆ ಎಳ್ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ನೂರಾರು ತಂಪು ಪಾನೀಯ ಕೊಕೊ ಕೋಲಾ,ಮಜಾ ,ಪೆಪ್ಸಿಗಳಿಗಿಂತ ಒಂದು ಎಳ್ನೀರು ಶ್ರೇಷ್ಠ. ಆಧುನಿಕತೆಯ ಫಲವಾಗಿ ನಾವು ನಿಸರ್ಗದತ್ತವಾಗಿ ತಯಾರಾದ ಎಳ್ನೀರಿನ ಬದಲಾಗಿ ಕೃತಕವಾಗಿ ರಾಸಾಯನಿಕ ವಸ್ತುಗಳಿಂದ ತಯಾರಾಗುವ ಪಾನೀಯಗಳಿಗೆ ಮೊರೆ ಹೋಗುವುದೇ ವಿಷಾದನೀಯ ಸಂಗತಿ.
ಇದನ್ನೂ ಓದಿ | ನಿಮ್ಮ ಮಗುವಿಗೆ ಅನುವಂಶಿಕ ದೋಷಗಳಿವೆಯೇ..,? ತಿಳಿಯುವುದು ಹೇಗೆ..?
ಹೀಗೆ ಈ ಎಳ್ನೀರು ನನ್ನ ಕಾಡಿತು ಆ ತಾತಪ್ಪನ ಅನುಭವದ ಮಾತು ಪ್ರಕೃತಿಯ ಮಹತ್ವ ಮತ್ತು ವಾಸ್ತವತೆಯನ್ನು ತಿಳಿಸಿತು. ಈ ತೆಂಗಿನ ಮರದ ಕುರಿತಾಗಿ ವರಕವಿ ದ.ರಾ ಬೇಂದ್ರೆಯವರು ತಮ್ಮ ಸಖಿಗೀತದಲ್ಲಿ ತೆಂಗಿನ ಮರದ ಕುರಿತಾಗಿ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ ‘ಇಕೋ ನೆಲ – ಅಕೋ ಜಲ, ಅದರ ಮೇಲೆ ಮರದ ಫಲ’.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿಗಳು
ಚಾಮರಾಜನಗರ
9741270125)
ಸುದ್ದಿದಿನ.ಕಾಂ|ವಾಟ್ಸಾಪ್|9980346243