ರಾಜಕೀಯ

ಕಾಂಗ್ರೇಸ್ ಮತ್ತು ಎಡರಂಗವೆಂಬ ಭಾರತದ ಆತ್ಮಾಹುತಿ ದಳದ ಪಕ್ಷಗಳು

Published

on

  • ಜಗದೀಶ್ ಕೊಪ್ಪ

ತ್ತೀಚೆಗಿನ ಎರಡು ರಾಜಕೀಯ ಬೆಳವಣಿಗೆಗಳು ಭಾರತದ ಪ್ರಜ್ಞಾವಂತ ನಾಗರೀಕರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ತರಿಸುವ ಸಂಗತಿಗಳಾಗಿ ಮಾರ್ಪಟ್ಟಿವೆ. ಇವುಗಳಲ್ಲಿ ಮೊದಲನೆಯದು,ಸೀತಾರಾಂ ಯಚೂರಿಗೆ ಸಿ.ಪಿ.ಐ ( ಎಂ) ಪಕ್ಷದಿಂದ ರಾಜಸಭೆಗೆ ಸೀಟು ನಿರಾಕರಿಸಿದ್ದು.

ಎರಡನೆಯದು, ಮಧ್ಯಪ್ರದೇಶದಲ್ಲಿ ಕಾಂಗ್ರೇಸ್ ಪಕ್ಷದ ಯುವ ನಾಯಕ ಜ್ಯೋತಿರಾಧ್ಯ ಸಿಂದ್ಯಾ ಕಾಂಗ್ರೇಸ್ ಪಕ್ಷವನ್ನು ತೊರೆದು ಬಿ.ಜೆ.ಪಿ. ಪಕ್ಷ ಸೇರಿದ ಘಟನೆ.

ಈ ಎರಡು ಘಟನೆಗಳನ್ನು ಸಿನಿಕತನದಿಂದ ನೋಡದೆ, ಈಗನ ವರ್ತಮಾನದ ಪರಿಸ್ಥಿತಿಗೆ ಹೋಲಿಸಿ ನೋಡಿದಾಗ, ದಶಕಗಳಷ್ಟೇ ಅಲ್ಲ, ಅರ್ಧ ಶತಮಾನದಿಂದ ತಮ್ಮ ರಾಜಕೀಯ ತಂತ್ರಗಾರಿಕೆಯಲ್ಲಿ ಯಾವುದೇ ಬದಲಾವಣೆ ಮಾಡದ ಅಥವಾ ಬಯಸದ ಕಾಂಗ್ರೇಸ್ ಮತ್ತು ಎಡರಂಗಗಳು ಅವನತಿಯ ಹಾದಿಯಲ್ಲಿ ಶರವೇಗದಲ್ಲಿ ಚಲಿಸುತ್ತಿವೆ ಎನ್ನ ಬಹುದು.

ಸಿ.ಪಿ.ಐ. ಪಾಲಿಟ್ ಬ್ಯೂರೊ ಎಂಬ ಅತ್ಯುನ್ನತ ಕಾರ್ಯಕಾರಿ ಸಮಿತಿ ಈ ಗಾಗಲೇ ಎರಡು ಬಾರಿ ರಾಜ್ಯ ಸಭೆಯ ಸದಸ್ಯರಾಗಿದ್ದ ಯಚೂರಿಯವರಿಗೆ ಟಿಕೇಟ್ ನಿರಾಕರಿಸಲು ನೀಡಿದ ಕಾರಣ ಪಕ್ಷದ ನಿಯಾಮಾವಳಿ ಪ್ರಕಾರ ಒಬ್ಬ ಸದಸ್ಯ ಎರಡು ಬಾರಿ ಮಾತ್ರ ಸದಸ್ಯನಾಗಬಹುದು ಎಂಬ ನಿಯಮ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಎಡರಂಗಕ್ಕೆ ಸದಸ್ಯನನ್ನು ಆಯ್ಕೆ ಮಾಡಿ ಕಳಿಸುವಷ್ಟು ಸದಸ್ಯರ ಸಂಖ್ಯೆ ಇರಲಿಲ್ಲ.

ಕಾಂಗ್ರೇಸ್ ಪಕ್ಷ ಎಡ ರಂಗಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತ್ತು. ಅದನ್ನು ಕೂಡ ಪಕ್ಷ ನಿರಾಕರಿಸಿದೆ. ಈಗ ರಾಜ್ಯ ಸಭೆಯಲ್ಲಿ ಅಥವಾ ಲೋಕ ಸಭೆಯಲ್ಲಿ ಆಡಳಿತಾರೂಢ ಪಕ್ಷವಾದ ಬಿ.ಜೆ.ಪಿ. ಪಕ್ಷವನ್ನು ಎದುರಿಸಿ, ಮಾತನಾಡುವ ಓರ್ವ ಹಿರಿಯ ಸದಸ್ಯರಿಲ್ಲ. ಇಂತಹ ಸಂದರ್ಭದಲ್ಲಿ ತನ್ನ ನಿಯಾಮಾವಳಿಗಳಲ್ಲಿ ತಿದ್ದುಪಡಿ ಮಾಡಿ ಹಿರಿಯ ನಾಯಕರನ್ನು ಕಳಿಸಬಹುದಿತ್ತು. ಈ ಹಿಂದೆ 34 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ಜ್ಯೋತಿ ಬಸು ಎಂಬ ಸಜ್ಜನ ಹಿರಿಯ ರಾಜಕಾರಣಿಯನ್ನು ಭಾರತದ ಬಹುತೇಕ ರಾಜಕೀಯ ಪಕ್ಷಗಳು ಒಗ್ಗೂಡಿ, ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದಾಗ, ಇದೇ ಪಾಲಿಟ್ ಬ್ಯೂರೊ ಎಂಬ ಎಡರಂಗದ ಗರ್ಭಗುಡಿ ಅವರಿಗೆ ಅವಕಾಶವನ್ನು ನಿರಾಕರಿಸಿತು.

ಲೋಕಸಭೆಯಲ್ಲಿ ಕೇವಲ ಎರಡು ಸದಸ್ಯರಿದ್ದ ನಮ್ಮ ದೇವೇಗೌಡರಿಗೆ ಅದೃಷ್ಟು ಕೂಡಿ ಬಂತು. ಕೊನೆಗೂ ಮಾಜಿ ಪ್ರದಾನಿ ಎನಿಸಿಕೊಂಡರು.
ದೇಶದ ಆಡಳಿತದ ಚುಕ್ಕಾಣಿ ಹಿಡಿದು ತಮ್ಮ ಪಕ್ಷದಲ್ಲಿ ವಂಶಾಡಳಿತ ರಾಜಕಾರಣವಿಲ್ಲ, ಭ್ರಷ್ಟಾರಗಳಿಲ್ಲ ಎಂದು ದೇಶಕ್ಕೆ ತೋರಿಸಿ, ಪಕ್ಷದ ಸಂಘಟನೆಯನ್ನು ದೇಶ ವ್ಯಾಪಿ ವಿಸ್ತರಿಸುವ ಅವಕಾಶವನ್ನು ಸಿ.ಪಿ.ಐ. (ಏಂ) ಕಳೆದು ಕೊಳ್ಳುವುದರ ಮೂಲಕ ಆತ್ಮಹತ್ಯೆಯ ಹಾದಿ ಹಿಡಿಯಿತು.

ಇನ್ನು, ಕಾಂಗ್ರೇಸ್ ನ ಹಾದಿ ಇದಕ್ಕಿಂತ ಭಿನ್ನವಾಗಿಲ್ಲ. ಎಪ್ಪತ್ತು ದಾಟಿದ ತಲೆ ಮಾಸಿದವರೇ ಪಕ್ಷದ ಆಸ್ತಿ ಎಂಬ ನಂಬಿಕೆ ಇನ್ನೂ ಪಕ್ಷದಿಂದ ಹೊರಹೋಗಿಲ್ಲ. ಕಳೆದ ವರ್ಷದ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ, ರಾಜಸ್ಥಾನದಲ್ಲಿ ಸಚಿನ್ ಪೈಲೆಟ್ ಎಂಬ ಯುವಕನ್ನು ಮುಖ್ಯ ಮಂತ್ರಿ ಮಾಡುವ ಬದಲು ಗೆಹ್ಲೋಟ್ ಎಂಬಾತನ್ನು ತಂದು ಕೂರಿಸಲಾಯಿತು. ಜೊತೆಗೆ ಸಚಿನ್ ಹೋರಾಟವನ್ನು ಕಡೆಗಣಿಸಲಾಯಿತು. ಮಧ್ಯ ಪ್ರದೇಶದಲ್ಲಿ ಜ್ಯೋತಿರಾದ್ಯ ಸಿಂದ್ಯಾ ಬದಲು ಕಮಲ್ ನಾಥ್ ರವರನ್ನು ಕೂರಿಸಿ ಭಿನ್ನಮತಕ್ಕೆ ದಾರಿ ಮಾಡಿಕೊಡಲಾಯಿತು.

ಸೋನಿಯಾ ಗಾಂಧಿ ಸುತ್ತ ಇರುವ ಅಷ್ಟ ದಿಕ್ಕುಗಳ ನಾಯಕರನ್ನು ಒಮ್ಮೆ ಗಮನಿಸಿ, ಆಸ್ಕರ್ ಫೆರ್ನಾಂಟಿಸ್, ಅಹಮದ್ ಪಟೇಲ್, ದಿಗ್ವಿಜಯ ಸಿಂಗ್, ಬಿ.ಕೆ. ಹರಿಪ್ರಸಾದ್ ಇವರೆಲ್ಲರೂ ತಮ್ಮ ತಮ್ಮ ರಾಜ್ಯಗಳ ನಗರಗಳಲ್ಲಿ ಒಂದು ನಗರದ ಕಾರ್ಪೋರೇಷನ್ ಸಿಟು ಗೆಲ್ಲಲಾರದ ಗಿರಾಕಿಗಳು. ಪಕ್ಷ ದೇಶ ವ್ಯಾಪಿ ತನ್ನ ಬೇರುಗಳನ್ನು ಕಳಚಿಕೊಂಡು ಒಣಗುತ್ತಿದ್ದರೂ ಸಹ ನೇರವಾಗಿ ಕಾರ್ಯಕರ್ತರ ಜೊತೆ ಕುಳಿತು ಸಂವಹನ ಮಾಡುವ ವ್ಯವಧಾನ ತಾಯಿ ಮತ್ತು ಮಗನಿಗೆ ಇಲ್ಲ. ಇವೊತ್ತಿಗೂ ಕಾಂಗೇಸ್ ಮುಖ್ಯಮಂತ್ರಿಯಾದವನು ಇವರನ್ನು ಭೇಟಿ ಮಾಡಲು ಮೂರು ದಿನ ದೆಹಲಿಯಲ್ಲಿ ಕಾಯಬೇಕು. ಇಂತಹ ಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಭವಿಷ್ಯ ಇದೆ ಎಂದು ಹೇಳಲು ಸಾಧ್ಯವಿದೆಯಾ?

ನರೇಂದ್ರಮೋದಿ ಎರಡನೆಯ ಬಾರಿ ಪ್ರಧಾನಿಯಾದದ್ದು ತನ್ನ ಸಾಧನೆಗಳ ಮೂಲಕ ಅಲ್ಲ, ದೇಶದಲ್ಲಿ ಒಂದು ಪರ್ಯಾಯ ರಾಜಕೀಯ ವೇದಿಕೆಯನ್ನು ಹುಟ್ಟು ಹಾಕಲು ರಾಜಕೀಯ ಪಕ್ಷಗಳು ಸೋತಿದ್ದು ಮೂಲ ಕಾರಣವಾಗಿದೆ. ನಾವು ಈ ದಿನ ಮೋದಿ ಸರ್ಕಾರದ ತಪ್ಪುಗಳ ಬಗ್ಗೆ ಕೂಗುಮಾರಿಗಳಂತೆ ಆರ್ಭಟಿಸುತ್ತಿದ್ದೆವೆ ನಿಜ. ಒಬ್ಬ ಸಾಮಾನ್ಯ ಮತದಾರ ನನಗೆ ಪರ್ಯಾಯ ತೋರಿಸಿ ಎಂದಾಗ ನಮ್ಮಲ್ಲಿ ಈಗಲೂ ಉತ್ತರವಿಲ್ಲ.
ಎಲ್ಲವನ್ನೂ ಸಹಜ ಸಾವಿಗೆ ಬಿಟ್ಟು ಮೌನ ಸಾಕ್ಷಷಿಯಾಗಿ ಇರಬೇಕಾಗಿರುವುದು ಕಾಲದ ಅಗತ್ಯವೇನೋ ಎಂದು ಅನಿಸತೊಡಗಿದೆ.

(ಇದು ನನ್ನ ವೈಯಕ್ತಿಕ ಅನಿಸಿಕೆ ಮಾತ್ರ. ಯಾವುದೇ ಚರ್ಚೆಗೆ ಅಥವಾ ವಾದಕ್ಕೆ ನಾನು ಇಳಿಯಲಾರೆ ಕ್ಷಮಿಸಿ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version