ದಿನದ ಸುದ್ದಿ
ಮಾನವೀಯತೆ ಮರೆತು ದಲಿತ ಯುವಕನ ಬೆತ್ತಲೆ ಮೆರವಣಿಗೆ
ಸುದ್ದಿದಿನ, ಮೈಸೂರು : ಇದೇ ಜೂನ್ 2ರಂದು ಎಸ್. ಪ್ರತಾಪ್ ರವರು ಶ್ಯಾನಾಡ್ರಹಳ್ಳಿ, ಗುಂಡ್ಲುಪೇಟೆ ನಿವಾಸಿಯಾಗಿದ್ದು ಐ.ಎ.ಎಸ್. ಪರೀಕ್ಷೆಯನ್ನು ಬರೆಯಲು ಮೈಸೂರಿನ ಮರಿಮಲ್ಲಪ್ಪ ಹಿರಿಯ ಪ್ರಾಥಮಿಕ ಶಾಲೆಗೆ ಬಂದಿದ್ದು, ಈತ ತಡವಾಗಿ ಹೋದ ಕಾರಣ ಪರೀಕ್ಷೆ ವಂಚಿತನಾಗಿ, ಇದೆ ಬೇಸರದಿಂದ ಮೈಸೂರಿನಲ್ಲಿ ಕಾಲ ಕಳೆದು ವಾಪಸ್ಸು ಗುಂಡ್ಲುಪೇಟೆ ಕಡೆಗೆ ತನ್ನ ಬೈಕಿನಲ್ಲಿ ಬಂದು ಅದೇ ದಿನ ರಾತ್ರಿ ರಾಘವಾಪುರ ಗ್ರಾಮದ ಹತ್ತಿರ ತನ್ನ ಬೈಕ್ ಕೆಟ್ಟುಹೋಗಿದ್ದು, ಅಲ್ಲಿ ಯಾರೋ ದುಷ್ಕರ್ಮಿಗಳು ಬಂದು ಈತನನ್ನು ದರೋಡೆ ಮಾಡಿದ್ದಾರೆ.
ನಂತರ ಮಾನಸಿಕವಾಗಿ ಹೆದರಿಹೋದ ಈತನು ರಾತ್ರಿಯಿಡಿ ಅಲ್ಲೆ ಕಾಲ ಕಳೆದು ಬೆಳಿಗ್ಗೆ ಜೂನ್ 3 ರಂದು ಬೆಳಿಗ್ಗೆ 6-00 ಗಂಟೆಗೆ ಆಶ್ರಯಕ್ಕಾಗಿ ವೀರನಪುರ ಗೇಟ್ ಹತ್ತಿರವಿರುವ ಶನಿಮಹಾತ್ಮ (ಕೆಬ್ಬೆಕಟ್ಟೆ ಹತ್ತಿರ) ದೇವಸ್ಥಾನಕ್ಕೆ ಹೋಗಿದ್ದು, ಈತನನ್ನು ಕಂಡ ಅರ್ಚಕರು ಈತನ ಮೇಲೆ ಅನುಮಾನಸ್ಪದ ವ್ಯಕ್ತಪಡಿಸಿ ವಿಚಾರಿಸಿದಾಗ ಈತನ ಗಾಬರಿಯಾಗಿದ್ದಾನೆ ನಂತರ ಗ್ರಾಮಸ್ಥರ ಗುಂಪು ಈತನ ಬಗ್ಗೆ ವಿಚಾರಿಸಿ ಈತನ ಊರು ಮತ್ತು ಈತ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೆಂದು ತಿಳಿದ ನಂತರ ಹಲ್ಲೆ ನಡೆಸಿ ಈತನ ಬಟ್ಟೆಯನ್ನೆಲ್ಲ ಬಿಚ್ಚಿ ಕೈಗೆ ಹಗ್ಗದಿಂದ ಕಟ್ಟಿ ಬೆತ್ತಲೆ ಮೆರವಣಿಯನ್ನು ದೇವಸ್ಥಾನದಿಂದ ಊಟಿ ಮೈಸೂರು ರಸ್ತೆಯ ಮುಖ್ಯ ರಸ್ತೆಯವರೆವಿಗೂ ಮೆರವಣಿಗೆ ಮಾಡಿದ್ದಾರೆ.
ಜಾತಿಯ ಕ್ರೂರತೆಯೂ ಎಷ್ಟರ ಮಟ್ಟಿಗೆ ಇದೆ ಎಂಬುದು ಇಲ್ಲಿ ಕಾಣಬಹುದು. ಒಬ್ಬ ವ್ಯಕ್ತಿ ಇನ್ನೊಬ್ಬನ ಎದುರು ಬೆತ್ತಲೆ ಇದ್ದಾಗ ಕನಿಷ್ಠ ಸೌಜನಕ್ಕೂ ಬಟ್ಟೆಕೊಡಬಾರದೇ ಇದು ಮಾನವೀಯತೆಯನ್ನೆ ತಲ್ಲಣಿಸುವ ಸಂಗತಿ ಎಂದರೆ ತಪ್ಪಾಗಲಾರದು! ನಂತರ ಈಗಾಗಲೇ ದಣಿದಿದ್ದ ದೇಹಕ್ಕೆ ಒಂದು ಗುಟುಕು ನೀರು ಕೊಡದೇ ಏಕಾಏಕಿ ಥಳಿಸಿ ಅವನ ತಲೆಯಿಂದ ರಕ್ತಸೋರುತ್ತಿದ್ದರೂ ಮಾನವೀಯನ್ನು ಕಾಣದೇ ವಿಜೃಂಭಿಸಿದ್ದಾರೆ. ಇದು ಇಂದಿನ ಜಾಗತೀಕರಣ ಎಂದು ಕೂಗಾಡುವಾಡುವ ನಮ್ಮ ದೇಶ, ಇಂತಹ ಪೈಶಾಚೀಕ ಕೃತ್ಯಕ್ಕೆ ಹೊಣೆಯಾರು.
ಈ ರೀತಿ ಗುಂಪು ಹಲ್ಲೆ, ಜಾತಿ ನಿಂದನೆ, ಬೆತ್ತಲೆ ಮೆರವಣಿಗೆ ನಡೆದು ಒಂದು ವಾರವಾದರೂ ಪೊಲೀಸ್ ಯಾಕೆ ಯಾವ ಕ್ರಮ ಕೈಗೊಂಡಿಲ್ಲ, ಪೊಲೀಸ್ನವರು ಕನಿಷ್ಠ suo-motto ಅಡಿಯಲ್ಲಿ ದಾಖಲಿಸಬಹುದಿತ್ತು. ಇಂತಹ ಪ್ರಕರಣವು ಸಂವಿಧಾನ ಕಲಂ. 17 ರ ಉಲ್ಲಂಘನೆಯಾಗಿದೆ. ಪೊಲೀಸ್ ವ್ಯವಸ್ಥೆ ಇವತ್ತು ತಳಸಮುದಾಯ ಮತ್ತು ಕಟ್ಟಕಡೆಯ ಜನರಿಗೆ ತನ್ನ ಬಾಗಿಲನ್ನು ಮುಚ್ಚಿದೆಯೇ ಎಂಬುವುದು ನಮ್ಮೆಲ್ಲರ ಪ್ರಶ್ನೆಯಾಗಿದೆ! ಜಾತಿಯ ಕ್ರೂರತೆಯ ವಿಜೃಂಭಿಸುವ ಈ ಗುಂಪು ಇಂದು ಇವರ ಪ್ರಬಲಶಕ್ತಿ ತೋಳ್ಬಲ ಮತ್ತು ಇನ್ಯಾವುದೋ ಅಗೋಚರ ಅಧಿಕಾರದ ಶಕ್ತಿಯಿಂದ ಕಾನೂನಿಂದ ತಪ್ಪಿಸಿಕೊಂಡಿದ್ದಾರೆ.
ಸದ್ಯ ನೊಂದ ಪ್ರತಾಪನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಯೋಗಕ್ಷೇಮವನ್ನು ಅವರ ತಮ್ಮನಾದ ಕಾಂತರಾಜು ರವರು ನೋಡಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯನ್ನು ಕಂಡು ಪ್ರತಾಪನ ಪೋಷಕರು ಯಾವ ಮಾರ್ಗವು ತೋಚದೇ ದಿನನಿತ್ಯ ನೋವನ್ನು ನುಂಗಿಕೊಂಡು ಬದುಕುತ್ತಿದ್ದಾರೆ. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರ ಮತ್ತು ನೊಂದ ಪ್ರತಾಪನಿಗೆ ನ್ಯಾಯ ದೊರಕುವಂತಾಗಬೇಕು ಎಂಬುದು ಈತನ ಸಹೋದರ ಕಾಂತರಾಜುರವರ ಅಳಲು.
ಸುದ್ದಿದಿನ.ಕಾಂ|ವಾಟ್ಸಾಪ್|9980346243