ದಿನದ ಸುದ್ದಿ
ಜನಸಾಮಾನ್ಯರ ಬಳಕೆಗೆ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್ ಲೋಕಾರ್ಪಣೆ
ಸುದ್ದಿದಿನ,ದಾವಣಗೆರೆ : ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳ, ಆಸ್ಪತ್ರೆಗಳ, ಯಾತ್ರಾಸ್ಥಳ, ಜನೌಷದಿ ಇತ್ಯಾದಿ ಸ್ಥಳ, ವಿಳಾಸ ಮತ್ತು ಇತರ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್ನ್ನು ಜಿಲ್ಲೆಯ ಎನ್ಐಸಿ ಅಧಿಕಾರಿಗಳು ಅಭಿವೃದ್ದಿಪಡಿಸಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ನ್ಯಾಷನಲ್ ಇನ್ಫರ್ಮಾಟಿಕ್ಸ್ ಸೆಂಟರ್(ಎನ್ಐಸಿ) ಅಧಿಕಾರಿಗಳು ಅಭಿವೃದ್ದಿಪಡಿಸಿರುವ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್ಗೆ ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಅಧಿಕೃತವಾಗಿ ಚಾಲನೆ ನೀಡಿ, ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಲು ಆಯೋಜಿಸದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲೇ ಈ ಆ್ಯಪ್ನ್ನು ಲೋಕಾರ್ಪಣೆಗೊಳಿಸಿದ ಮೊದಲ ಜಿಲ್ಲೆ ನಮ್ಮದು ಎಂದರು.
ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಮಾ.29 ರೊಳಗೆ ಈ ರೀತಿ ಆಪ್ ಪ್ರಕಟಿಸಲು ಸಮಯ ನಿಗದಿಗೊಳಿಸಲಾಗಿದ್ದು, ರಾಜ್ಯದಲ್ಲೇ ಮೊದಲನೆಯದಾಗಿ ನಮ್ಮ ಜಿಲ್ಲೆಯಲ್ಲಿ ಈ ಆಪ್ನ್ನು ಅಭಿವೃದ್ದಿಪಡಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.
‘ದಾವಣಗೆರೆ ಆನ್ ಮ್ಯಾಪ್’ ಒಂದು ವಿಶಿಷ್ಟವಾದ ಮೊಬೈಲ್ ಆ್ಯಪ್ ಆಗಿದೆ. ಡಿಸ್ಟ್ರಿಕ್ಟ್ ಗವರ್ನೆನ್ಸ್ ಮೊಬೈಲ್ ಚಾಲೆಂಜ್ ಅಡಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳ ಎನ್ಐಸಿ ಅಧಿಕಾರಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದರ ಅಂಗವಾಗಿ ‘ದಾವಣಗೆರೆ ಆನ್ ಮ್ಯಾಪ್ ಮೊಬೈಲ್ ಆಪ್ನ್ನು ಕೇವಲ 15 ರಿಂದ 20 ದಿನಗಳಲ್ಲಿ ನಮ್ಮ ಅಧಿಕಾರಿಗಳು ಅಭಿವೃದ್ದಿಪಡಿಸಿದ್ದಾರೆ ಎಂದರು.
ಆರು ಸೇವೆ ಮಾಹಿತಿ ಅಳವಡಿಕೆ
ಇದು ಮುಖ್ಯವಾಗಿ ಜನಸಾಮಾನ್ಯರಿಗೆ ಒಂದು ಯುಟಿಲಿಟಿ ಆಗಿ ಹೆಚ್ಚು ಉಪಯೋಗ ಆಗಲಿದ್ದು, ಇದರಲ್ಲಿ ದಾವಣಗೆರೆ ಜಿಲ್ಲೆಯ ಆರು ಪ್ರಮುಖ ಮಾಹಿತಿಗಳನ್ನು ಅಳವಡಿಸಲಾಗಿದೆ. ಅವುಗಳೆಂದರೆ ಆಸ್ಪತ್ರೆಗಳು, ಜನೌಷಧ ಕೇಂದ್ರಗಳು, ಪೊಲೀಸ್ ಸ್ಟೇಷನ್ಗಳು, ಪೆಟ್ರೋಲ್ ಬಂಕ್ಗಳು, ಗ್ರಾಮ ಒನ್ ಕೇಂದ್ರಗಳು ಮತ್ತು ಯಾತ್ರಾ ಸ್ಥಳಗಳು.
ಉದಾಹರಣೆಗೆ ಆಸ್ಪತ್ರೆಗಳು ಆಯ್ಕೆ ಮಾಡಿದಾಗ ಇವುಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಗೂಗಲ್ ಮ್ಯಾಪ್ ನಲ್ಲಿ ನೋಡಿಕೊಳ್ಳಬಹುದು. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 400ಕ್ಕಿಂತ ಹೆಚ್ಚು ಸರ್ಕಾರಿ ಆಸ್ಪತ್ರೆಗಳಿವೆ. ಅದರಲ್ಲಿ ಬೇರೆ ಬೇರೆ ವರ್ಗದ ಆಸ್ಪತ್ರೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಯಾವುದೇ ವರ್ಗವನ್ನು ಆಯ್ಕೆ ಮಾಡಿದ ನಂತರ ಅದಕ್ಕೆ ಸಂಬಂಧಪಟ್ಟ ಆಸ್ಪತ್ರೆಗಳೆಲ್ಲವೂ ಗೂಗಲ್ ಮ್ಯಾಪ್ ಮೇಲೆ ಕಾಣಿಸುತ್ತದೆ.
ಇವುಗಳಲ್ಲಿ ಯಾವುದನ್ನಾದರೂ ಕ್ಲಿಕ್ ಮಾಡಿದಾಗ ಈ ಆಸ್ಪತ್ರೆಯ ಮಾಹಿತಿ ವಿಂಡೋ ಕಾಣಿಸುತ್ತದೆ. ಮಾಹಿತಿ ವಿಂಡೋ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿದಾಗ ಅದರಲ್ಲಿರುವ ದೂರವಾಣಿ ಸಂಖ್ಯೆಗೆ ನೇರವಾಗಿ ಫೋನ್ ಕಾಲ್ ಹೋಗುತ್ತದೆ. ಇನ್ನೂ ಹೆಚ್ಚುವರಿಯಾಗಿ ನಾವು ಇರುವ ಸ್ಥಳದಿಂದ ಆಸ್ಪತ್ರೆಗೆ ರಸ್ತೆ ಮಾರ್ಗ, ದೂರ ಮತ್ತು ಅಲ್ಲಿಗೆ ತಲುಪುವ ಸಮಯ ಸಹ ಕಾಣಿಸುತ್ತದೆ. ಇದೇ ರೀತಿ ಮೇಲ್ಕಂಡ ಉಳಿದ ಇಲಾಖೆಗಳ ಮಾಹಿತಿಯನ್ನು ಪಡೆಯಬಹುದು.
ಹೆಚ್ಚುವರಿಯಾಗಿ ದಾವಣಗೆರೆ ಜಿಲ್ಲೆಯ ವೆಬ್ಸೈಟ್ ಸಹ ಇದರಲ್ಲಿಯೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಇಲಾಖೆಗಳ ಮಾಹಿತಿಗಳನ್ನು ಆ್ಯಪ್ನಲ್ಲಿ ಅಳವಡಿಸಲಾಗುವುದು. ಅದರಲ್ಲಿ ಮುಖ್ಯವಾಗಿ ಶಾಲೆಗಳು, ರೈತ ಸಂಪರ್ಕ ಕೇಂದ್ರಗಳು, ವೆರ್ಟನರಿ ಹಾಸ್ಪಿಟಲ್ಗಳು ಮತ್ತು ಗ್ರಾಮ ಪಂಚಾಯಿತಿಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.
ಈ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಯಾರು ಬೇಕಾದರೂ ಇದನ್ನು ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಬಹುದು. ಪ್ಲೇಸ್ಟೋರ್ ಲಿಂಕ್ ಈ ರೀತಿ ಇದೆ.
https://play.google.com/store/apps/details?id=davanagere.kar.nic.in.testmap1
ಮತ್ತು ಇದರ ಲಿಂಕ್ ಅನ್ನು davanagre.nic.in
ವೆಬ್ಸೈಟ್ ಮುಖಾಂತರ ಸಹ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹಾಗೂ ಮುಂದಿನ ದಿನಗಳಲ್ಲಿ ಸಾರ್ವಜನಿಕರು ವೆಬ್ಪೋರ್ಟಲ್ನಲ್ಲಿ ಜಿಲ್ಲೆಯ ವಿವರವಾದ ಮಾಹಿತಿಯನ್ನು ಸಹ ಪಡೆಯುವಂತೆ ಆ್ಯಪ್ನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇದೊಂದು ಜನರಿಗೆ ಉಪಯುಕ್ತವಾದ ಸೇವೆಯಾಗಿದೆ ಎಂದು ಎನ್ಐಸಿ ಅಧಿಕಾರಿಗಳಾದ ಉದಯಕುಮಾರ್ ಮತ್ತು ರಮೇಶ್ ತಿಳಿಸಿದರು.
ಖಾಸಗಿಯವರನ್ನು ನಂಬಿ ಮೋಸ ಹೋಗದಿರುವಂತೆ ಡಿಸಿ ಎಚ್ಚರಿಕೆ
ಪಳನಿಸ್ವಾಮಿ ಎಂಬುವವರು ಆಶ್ರಯ ಮನೆಗಳನ್ನು ಕೊಡಿಸುವುದಾಗಿ ಜನರಿಂದ ಹಣಕಾಸು ವ್ಯವಹಾರ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಜನರು ಯಾವುದೇ ಖಾಸಗಿ ವ್ಯಕ್ತಿಗಳನ್ನು ನಂಬಿ ಹಣ ನೀಡಿ ಮೋಸ ಹೋಗಬಾರದು.
ಜಿಲ್ಲಾಡಳಿತ ಆಗಲೀ ಅಥವಾ ಯಾವುದೇ ಸಕ್ಷಮ ಪ್ರಾಧಿಕಾರ ಅವರಿಗೆ ಯಾವುದೇ ಅಧಿಕಾರ ನೀಡಿಲ್ಲ ಎಂದು ಸ್ಪಷ್ಪಪಡಿಸಿದ ಅವರು ಆಶ್ರಯ ನಿವೇಶನಗಳಿಗಾಗಿ ರಾಜೀವಗಾಂಧಿ ವಸತಿ ನಿಗಮಕ್ಕೆ ನಮ್ಮಿಂದ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ನಿವೇಶನ ಮಂಜೂರಾದ ನಂತರ ಜೇಷ್ಟತೆಯ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಲಾಗುವುದು. ಅಲ್ಲಿಯವರೆಗೆ ಜನರು ಯಾವುದೇ ಖಾಸಗಿ ವ್ಯಕ್ತಿಗಳನ್ನು ನಂಬಿ ಮೋಸ ಹೋಗಬಾರದು ಎಂದು ಎಚ್ಚರಿಕೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243