ಭಾವ ಭೈರಾಗಿ
ಎಂದೂ ಮುಗಿಯದ ಪ್ರೀತಿಯ ಪಯಣ ಈ ಗೆಳೆತನ..!
ಕತ್ತಲೆಯಲ್ಲಿ ಕರಗುವ ಕನಸಿಗೆ ಬೆಳಕ ತರುವುದು ಗೆಳೆತನ. ನೋಯುವ ನೋವಿನ ಮನಸಿಗೆ ಒಲವ ತುಂಬುವುದು ಈ ಗೆಳೆತನ. ಬೆಂಕಿಯಂತೆ ಬೇಯುವ ಭಾವನೆಗೆ ಜೀವ ತುಂಬುವುದು ಗೆಳೆತನ. ಏಕಾಂತದಲ್ಲಿರುವ ಒಂಟಿತನಕ್ಕೆ ಹೊಸತನವೇ ಈ ಗೆಳೆತನ..!!
ಹೌದು..ನನ್ನ ಈ ಗೆಳೆತನ ಏಳು ನಿಮಿಷದಲ್ಲಿ ಏಳು ಹೆಜ್ಜೆಯನ್ನಿಟ್ಟು ಸಂಸಾರ ನಡೆಸಿದ ಹಾಗಲ್ಲ. ಪತಿ ಪತ್ನಿಯರಷ್ಟೇ ಅಲ್ಲ ಸಪ್ತಪದಿ ತುಳಿದು ಜೀವನಕ್ಕೆ ಕಾಲಿಡುವುದು. ನಮ್ಮ ಈ ಗೆಳೆತನದಲ್ಲು ಏಳು ವರ್ಷಗಳ ಕಾಲ ಏಳು ಹೆಜ್ಜೆಯನ್ನಿಟ್ಟು, ಪ್ರೀತಿ, ವಿಶ್ವಾಸ, ನೋವು, ಅಸುಹೆ ಹೀಗೆ ಎಲ್ಲದರ ನಡುವೆ ನಂಬಿಕೆಯೆಂಬ ಮೂರು ಗಂಟನ್ನು ಹಾಕಿಸಿಕೊಂಡು, ನಮ್ಮದು ಏಳೇಳು ಜನ್ಮಗಳ ಅನುಬಂಧವೆಂದು ಹಾಡಿ ನಲಿದವರು. ನಮ್ಮ ಭಾಂದವ್ಯ ನೋಡಿ ಕಾಲೇಜು ಅಧ್ಯಪಕರೆ ತ್ರಿಮೂರ್ತಿಗಳೆಂಬ ಪಟ್ಟವನ್ನು ಮುಡಿಸಿದ್ದಾರೆ. ಅನೇಕ ಸ್ನೇಹಿತರು ಮರುಗಿದವರಿದ್ದಾರೆ, ನಮ್ಮ ನಡುವೆ ಜಗಳ ತಂದಿಟ್ಟು ತಮಾಷೆ ನೋಡಿದವರು ಇದ್ದಾರೆ.. ಜಗಳವಾದಾಗ ವಿಚ್ಚೆದನ ಪತ್ರವನ್ನು ಬರೆದು ಮೂರು ತಿಂಗಳ ಕಾಲ ಮಾತಾಡೊದ್ದನ್ನ ನಿಲ್ಲಿಸಿದ್ದು ಉಂಟು.
ಪ್ರೇಮಿಗಳಲ್ಲಿ ಹೇಗೆ ನನ್ನವಳೆಂಬ ಸ್ವಾರ್ಥ ತುಳುಕಾಡುತ್ತೋ ಹಾಗೆ ನಮ್ಮಲ್ಲೂ ಸಹ. ನಮ್ಮನ್ನ ಬಿಟ್ಟು ಯಾರಾತ್ರನಾದ್ರು ಅತೀ ಹೆಚ್ಚು ಮಿಂಗಲ್ ಆದ್ವೋ ಮುಗಿತು ಆವತ್ತೆ ಪ್ರಾರಂಭವಾಯ್ತು ಅಂತ ಈ ಮುನಿಸು. ಅಬ್ಬಾ! ಈ ಮುನೇಶ್ವರ ಏನಾದ್ರು ಒಬ್ಬರಲ್ಲಿ ಮನೆ ಮಾಡಿದ್ನೋ ಆ ದಿನವೇ ಮೂಡ್ ಔಟ್ ಆಗಿಬಿಡ್ತಿತ್ತು. ಇವರ ಬಗ್ಗೆ ಹೇಳಬೇಕೆಂದರೆ, ಒಬ್ಬಳು ವಿಜಯಲಕ್ಷ್ಮಿ ತಾಯಿಯ ಹಾಗೆ ಪ್ರೀತಿಸಿ ಮುದ್ದಿಸುವವಳು, ಇನ್ನೊಬ್ಬಳು ಮಾಲತಿ ಸದಾ ನನ್ನಲ್ಲಿರುವ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳುವವಳು.
ಕೊಟ್ಟು ಕೊಳ್ಳುವುದುಂಟು, ಹೇಳಿ ಕೇಳುವ ಗುಟ್ಟುಂಟು
ಜೊತೆಗೆ ತಿನ್ನುವ, ತಿನ್ನಿಸಿ ಮೆಲ್ಲುವ ತುಂಟಾಟವುಂಟು
ದೇಹವೆರಡರ ನಡುವೆ ಜೀವ ಒಂದಾಗಿರುವ ನಂಟು
ಪ್ರೀತಿ ಸ್ನೇಹದ ಬೆರಗಿನ ಅಂಟು, ನೂರೆಳೆಯ ಗಂಟು
ನಾ ತಪ್ಪು ಮಾಡಿದಾಗ ಇವರಿಬ್ಬರು ನಯವಾಗಿಯೋ ಮೆಲುಸಾಗಿಯೋ, ಬಿರುಸಾಗಿಯೋ ಗಡುಸಾಗಿಯೋ ಕಟುವಾಗಿಯೋ ಇದ್ದುದ್ದನ್ನು ಇದ್ದಂತೆ ಸಮಯೋಚಿತವಾಗಿ ತಿಳಿಹೇಳಿ, ತಪ್ಪು ದಾರಿ ಹಿಡಿಯದ ಹಾಗೆ ನೋಡಿಕೊಂಡವರು.
ಮಕ್ಕಳಿಗೆ ಅ,ಆ ಕಲಿಸಿದಂತೆ ನನ್ನ ಬರಹದಲ್ಲಿ ಆಗುತ್ತಿದ್ದ ತಪ್ಪುಗಳನ್ನು ಸಾಕಾಷ್ಟು ತಿದ್ದುಪಡಿಮಾಡಿದವರು. ನೊಂದಾಗ ತೊಡೆಯ ಮೇಲೆ ಮಲಗಿಸಿಕೊಂಡು ತಲೆಸವರಿ ಸಮಾಧಾನ ಮಾಡುವವರು. ಕೈತುತ್ತು ತಿನ್ನಿಸಿ ಅಮ್ಮನ ಪ್ರೀತಿಯನ್ನು ತೋರಿಸಿದವರು.
ಇಷ್ಟೆಲ್ಲಾ ಆದರೂ ಸಹ ಪರೀಕ್ಷೆ ಎಂದು ಬಂದರೆ ಪೈಪೋಟಿ ಬೀಳುತ್ತಿದದ್ದು ಅನ್ಯದವರೊಡನೆ ಅಲ್ಲಾ.. ಬದಲಾಗಿ ನಮ್ಮೂವರ ನಡುವೆಯೇ ಹೆಚ್ಚು. ಒಮ್ಮೆ ನನ್ನ ಗೆಳತಿ ವಿಜಯಲಕ್ಷ್ಮೀ ನನಗಿಂತ ಒಂದು ಮಾಕ್ರ್ಸ್ ಹೆಚ್ಚಿಗೆ ತೆಗೆದಿದ್ದಕ್ಕೆ ಸರ್ನೊಂದಿಗೆ ಬರೋಬರಿ ಮೂರು ತಾಸು ಜಗಳ ಮಾಡಿ ನಾಲ್ಕು ದಿನ ಮಾತು ಬಿಟ್ಟಿದನ್ನ ನೆನಪಿಸಿಕೊಂಡರೆ ಇವಾಗ್ಲು ನಗು ಬರುತ್ತದೆ. ಅದೇ ನಾವು ಒಮ್ಮೆ ಡಿಗ್ರಿ ಓದುವಾಗ ಏನು ಓದಿಲ್ಲವೆಂದು ಒಬ್ಬರಿಗೊಬ್ಬರು ಕಾಪಿ ಹೊಡೆದು ಸೇಮ್ ಮಾಕ್ರ್ಸ್ ಗಿಟ್ಟಿಸಿಕೊಂಡಿದ್ದು ಉಂಟು. ತರಗತಿಯಲ್ಲಿ ನಾವು ಮಾಡಿದ ತರಲೆಗಳು, ತುಂಟಾಟಗಳನ್ನ ಇವಾಗ್ಲು ನಮ್ಮ ಪ್ರಾಧ್ಯಾಪಕರು ನೆನಪಿಸುತ್ತಾರೆ.
ಹೀಗೆ ಹೇಳುತ್ತಾ ಹೋದರೆ ಈ ಲೇಖನಕ್ಕೆ ಅಂತಿಮವೆಂಬುದೆ ಇರುವುದಿಲ್ಲ. ಕೊನೆಯದಾಗಿ ಈ ನನ್ನ ಮುದ್ದು ಗೆಳತಿಯರ ಬಗ್ಗೆ ಹೇಳಬೇಕೆಂದರೆ, ನಮ್ಮ ಈ ಗೆಳೆತನ ದೇವರು ಬರೆದ ಸ್ನೇಹದ ದಾರ, ದಾರಕ್ಕೆ ಬೆಸೆದ ಭಾವನೆಗಳ ಹಾರ, ಭಾವನೆಗಳ ಜೊತೆಗೆ ಎಂದೆದೂ ಮುಗಿಯದ ಈ ಪ್ರೀತಿಯ ಪಯಣ.
–ಪ್ರೀತಿ.ಟಿ.ಎಸ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ದಾವಣಗೆರೆ ವಿಶ್ವವಿದ್ಯಾಲಯ
ಸುದ್ದಿದಿನ.ಕಾಂ|ವಾಟ್ಸಾಪ್|9980346243