ಭಾವ ಭೈರಾಗಿ
ಸೋಲೆಂಬ ಸ್ನೇಹಿತನ ಸಾಂಗತ್ಯವೀರಬೇಕು ನೀವೇನಂತೀರಿ..!
ನಾನು ಕೂಡ ಒಬ್ಬ ಓದುಗ,ವಿದ್ಯಾರ್ಥಿ ಈ ಲೇಖನದಲ್ಲಿ ಹೇಳಹೊರಟಿರುವುದು ಸಾಧನೆಗೆ ಸಾಕ್ಷಿ ಆಗಬಲ್ಲ ಸೋಲಿನ ಸಾಂಗತ್ಯದ ಸಹವಾಸದ ಬಗ್ಗೆ.ಏನಿದು ಸೋಲಿನ ಸಹವಾಸ ಬಯಸಬೇಕು ಎನ್ನುತ್ತಿದ್ದಾರೆ,ಅಂತ ಆಶ್ಚರ್ಯವಾಗುತ್ತಿದ್ದಿರಾ…..! ಹೌದು ಪ್ರತಿ ಸೋಲು ಕೂಡ ಸಾಧಕನಿಗೆ ಸಾಹಸದ ಮಾರ್ಗ ಕಲ್ಪಿಸಿ ಕೊಡುವಂತಹದ್ದು.ಅದನ್ನು ನಾವೆಲ್ಲರೂ ಒಪ್ಪಲೇಬೇಕು ಯಾಕೆಂದರೆ, ನೆನಪಿರಲಿ ಯಾವ ಗುರಿಸಾಧನೆಯೂ ಮನುಷ್ಯನ ಪ್ರಯತ್ನಕ್ಕಿಂತ ಮುಗಿಲಿಲ್ಲ. ಯಾವ ಪ್ರಯತ್ನ ಅಥವಾ ಸಾಧನೆಯು ಸತತ ಅಭ್ಯಾಸವಿಲ್ಲದೆ ಯಶಸ್ವಿಯಾಗಲಾರದು. ಹಾಗೆಯೇ ಈ ಮಾತನ್ನು ಕೂಡಾ ಗಮನಿಸಬೇಕು ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು, ಸೋಲುಗಳಿಲ್ಲದ ಸಾಧನೆ ಆದರೆ ಪ್ರಯತ್ನ ಮಾತ್ರ ಕಡಿಮೆಯೇ ಹೀಗಾಗಿ ಅದು ಅಸಾಧ್ಯ ಎಂದು ಗೊತ್ತಿದ್ದರೂ,ನಾವು ನಮಗೆ ಬಂದ ಸೋಲನ್ನು ಇಷ್ಟಪಡುವುದಿಲ್ಲವೇಕೇ? ಆದರೆ ನನ್ನ ಈ ಪುಟ್ಟ ಜೀವನದಲ್ಲಿ ಅನುಭವಕ್ಕೆ ಬಂದಿರುವ ಪ್ರಕಾರ ಸೋಲುಗಳು ಸಮಸ್ಯೆಗಳು ಮಾರುವೇಷದಲ್ಲಿ ಬಂದು ನಿಲ್ಲುವ ಸುವರ್ಣ ಅವಕಾಶಗಳು ಎನಿಸುತ್ತದೆ.
ಆದರೆ ನೆನಪಿರಲಿ ಸೋಲುಗಳನ್ನು ಸಮಸ್ಯೆಗಳನ್ನು ಅವಕಾಶ ಎಂದು ನೋಡಿದವರು ಇಂದು ಜಗತ್ತಿನಲ್ಲಿ ಸಾಧಕರಾಗಿದ್ದಾರೆ,ಯಶಸ್ವಿ ವ್ಯಕ್ತಿಗಳಾಗಿದ್ದಾರೆ. ಸೋಲುಗಳನ್ನು ಶಪಿಸುತ್ತಲೇ ಕುಳಿತರೆ ಸಾಧನೆಗೆ ಸಮಾಧಿ ಸೃಷ್ಟಿಸಿದಂತಾಗುತ್ತದೆ. ಅದರ ಬದಲಾಗಿ ಸೋಲುಗಳನ್ನು ಪ್ರೀತಿಸಿ ಅದಕ್ಕೆ ಕಾರಣ ಗುರುತಿಸಿ ಮತ್ತೆ ಸಾಧನೆಗೆ ಸಿದ್ಧವಾದರೆ ಅದಕ್ಕಿಂತ ಮಿಗಿಲಾದ ಸಾಧನೆ ಸಂತೋಷ ಸಾಧಕನಿಗೆ ಬೇರೊಂದಿಲ್ಲ. ನಮ್ಮೆಲ್ಲರಲ್ಲೂ ಅಪಾರವಾದ ಸಾಮರ್ಥ್ಯ ಅಡಗಿದೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತಲೇ ಬಂದಿದ್ದೇವೆ.ಈ ಸಾಮರ್ಥ್ಯದ ಬಲದಿಂದ ನಮಗೇನು ಬೇಕೋ ಅದನ್ನು ಸಾಧಿಸಲು ಸಾಧ್ಯ. ಬದುಕಿನಲ್ಲಿ ಯಾವುದೋ ಒಂದು ಸೋಲು ಸಮಸ್ಯೆ ನಮ್ಮನ್ನ ಕಾಡುತ್ತಿದ್ದರೆ, ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದವರಂತೆ ಕೂಡುವ ಅಗತ್ಯವೇ ಇಲ್ಲ.ಕಾರಣ ಅದೊಂದು ವೇಷಮರೆಸಿಕೊಂಡು ಬಂದಂತಹ ಸುವರ್ಣಾವಕಾಶ ಎಂದುಕೊಳ್ಳಬೇಕಷ್ಟೇ.. ನಿಜ ಅದೊಂದು ಸಮಸ್ಯೆ ಎಂದು ಆರಂಭದಲ್ಲಿ ಎನಿಸಿಕೊಳ್ಳುತ್ತದೆ ಅನಿಸುತ್ತದೆ ನಿಜ.ಆ ಸಮಯಕ್ಕೆ ಬಂದ ಇದೊಂದು ಅನಿವಾರ್ಯ ಸ್ಥಿತಿ ಎಂದುಕೊಂಡು ಮರೆತು ಬಿಡಬೇಕು. ಬದುಕಿನಲ್ಲಿ ಸೋಲುಗಳೇ ಇಲ್ಲದೆ ಹೋದರೆ ಸಾಧನೆಗೆ ಬೆಲೆ ಇರುವುದಿಲ್ಲವಲ್ಲ. ಬದುಕಿಗೆ ಅರ್ಥವೇ ಇರುವುದಿಲ್ಲ ಎಂಬುವುದನ್ನು ಗಮನಿಸಬೇಕು.
ಬದುಕಿನಲ್ಲಿ ಸೋಲಿನ ಭಯ ಯಾವತ್ತೂ ಬೇಡ ಒಂದು ವೇಳೆ ನಿಮಗೆ ಆ ಭಯವಿದ್ದರೆ ಸೋಲಿಗೆ ಒಂದು ಮಾತನ್ನು ಹೇಳಿಬಿಡಿ “ನನ್ನ ಹಿಂದೆ ನಡೆಯಬೇಡ ನಾನು ನಿನ್ನನ್ನು ಮುನ್ನಡೆಸದಿರಬಹುದು, ಹಾಗೆ ನನ್ನ ಮುಂದೆ ನಡೆಯಬೇಡ ನಾನು ನಿನ್ನನ್ನು ಹಿಂಬಾಲಿಸದೆ ಇರಬಹುದು ನನ್ನ ಜೊತೆಯಲ್ಲಿಯೇ ನಡೆ ಮತ್ತು ನನ್ನ ಸ್ನೇಹಿತನಾಗು ಸಾಧನೆಗೆ ಸಾಕ್ಷಿಯಾಗು” ಆಗಲಾದರೂ ಸೋಲು ನಿಮ್ಮ ಸ್ನೇಹಿತನೇಂಬ ಬಲವಾದ ನಂಬಿಕೆ ಬರಬಹುದು ನಿಮಗೆ.ಅದರಿಂದಾಗಿಯಾದರು ನಿಮ್ಮ ಸತತ ಸಾಧನೆ ಸಾಗಬಲ್ಲದು ಅಲ್ವೇ….!
ಈ ಲೇಖನ ಬರೆಯಲು ಕಾರಣವೊಂದಿದೆ ಇತ್ತೀಚಿಗೆ ನಡೆದ ಕೆಲವು ಪರೀಕ್ಷೆಗಳಲ್ಲಿ ಗೆಲುವಿನ ದಡದಿಂದ ದೂರ ಉಳಿದ ಸ್ನೇಹಿತನೊಬ್ಬ ಕರೆ ಮಾಡಿ ಸೋಲು ತಂದ ಸಂಕಷ್ಟಗಳ ಬಗೆಗೆ ಸಂವಾದ ನಡೆಸಿಯೇ ಬಿಟ್ಟ ನಮ್ಮಿಬ್ಬರ ಮಾತುಗಳು ಮುಂದುವರೆದು ಕೊನೆಗೆ ಮೌನ ಆವರಿಸಿಬಿಟ್ಟಿತ್ತು. ತದನಂತರ ಏಕಾಂಗಿಯಾಗಿ ಮೌನ ತಾಳಿದ ನನ್ನ ಮನಸ್ಸು ಸೋತು ಸಾಧನೆಗೈದ ಸಾಧಕರತ್ತ ಚಿತ್ತ ಹರಿಸಿ ಸಾಧನೆಗೆ ಪ್ರತಿ ಸೋಲು ಕೂಡ ಸಾಕ್ಷಿ ಆಗಬಲ್ಲದು ಎಂಬ ಬರಹಕ್ಕೆ ಮುನ್ನುಡಿ ಹಾಡಿತ್ತು ಅದರದೇ ಆದ ಒಂದು ಪುಟ್ಟ ಸಂದೇಶವನ್ನು ನಿಮಗೆ ತಲುಪಿಸುವ ಹಂಬಲದಿಂದ ಇದನ್ನು ಅಕ್ಷರ ಪುಟಕ್ಕೆ ಆಹ್ವಾನ ನೀಡಿ ಬಿಟ್ಟೆ.ಕೊನೆಯಲ್ಲಿ ಹೇಳುವುದು ಇಷ್ಟೇ “ನಿನ್ನನ್ನು ನೀನು ನಂಬದೆ ಹೋದರೆ ಮುಕ್ಕೋಟಿ ದೇವತೆಗಳನ್ನು ನಂಬಿದರು ಪ್ರಯೋಜನವಿಲ್ಲ”.ಹಾಗಾಗಿ ನಿಮ್ಮ ಪ್ರಯತ್ನದ ಮೇಲೆ ನಂಬಿಕೆ ಇರಲಿ ಪ್ರತಿ ನಿಮ್ಮ ಸೋಲು ಕೂಡ ಹೊಸದೊಂದು ಸಾಧನೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.ಹಾಗೆಯೇ ಸೋತು ಸಾಧಿಸುವ, ಸಾಧಿಸಿದ ಸಾಧನೆಗೆ ಸಿದ್ಧವಾದ ಹೃದಯಗಳಿಗೆ, ಮನಸ್ಸುಗಳಿಗೆ ನನದಿಷ್ಟು ಸಲಾಂ ಇದಕ್ಕೆ ನೀವೇನಂತೀರಿ ಅನುಭವಕ್ಕೋಂದಿಷ್ಟು ನೆನಪುಗಳು ಇರಲಿ ಅದು ನಮಗೂ ನಿಮಗೂ ಬದುಕಿಗೆ ಬೆಳಕು ನೀಡುವಂತಿರಲಿ ಮತ್ತೆ ಭೇಟಿಯಾಗೋಣ…….
ಸಂಗಮೇಶ.ಹತ್ತರಕಿಹಾಳ
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243