ದಿನದ ಸುದ್ದಿ

‘ಗೂಗಲ್ ಪೇ’ಯಿಂದ ಬ್ಯಾಂಕ್ ಖಾತೆಯ ಹಣಕ್ಕೆ ಹಾಕಿದ್ರು ಕನ್ನ..!

Published

on

ಸುದ್ದಿದಿನ,ದಾವಣಗೆರೆ : ಸುಲಭದಾಯಕವಾಗಿ ಆನ್ ಲೈನ್ ಮುಖಾಂತರ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೆ ಹುಷಾರಾಗಿರಿ. ಅಸುರಕ್ಷಿತ ಆನ್ ಲೈನ್ ವ್ಯವಹಾರದಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣಕ್ಕೆ ಅಪಾಯ ಬಂದೊದಗಲಿದೆ. ಅಸುರಕ್ಷಿತ ಆನ್ ಲೈನ್ ಆಪ್ ಗಳ ಬಗ್ಗೆ ಎಚ್ಚರವಿರಲಿ. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಯ ಹಣಕ್ಕೆ ಕನ್ನ ಬೀಳುವುದು ಖಚಿತ.

ಹೌದು, ಹೀಗೆ ಗೂಗಲ್ ಪೇ ಮುಖೇನ ತಮ್ಮ ಬ್ಯಾಂಕ್ ಖಾತೆಯಿಂದ ಪರಿಚಿತರ ಖಾತೆಗೆ ಹಣ ಕಳುಹಿಸಿದರೂ ಸಹ ಅದು ಜಮೆಯಾಗದೇ, ಆ ಕಂಪನಿಯ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗಲೂ ಸಹ ಖಾತೆಯಲ್ಲಿದ್ದ ಮತ್ತಷ್ಟು ಹಣ ಮಂಗಮಾಯವಾಗಿರುವ ಪ್ರತ್ಯೇಕ ಎರಡು ಪ್ರಕರಣಗಳು ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿವೆ.

ಮೋಸ ಹೋದ ತರಕಾರಿ ವ್ಯಾಪಾರಿ

ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿನ ತರಕಾರಿ ವ್ಯಾಪಾರಿ ಕೆ.ಪಿ. ಸುರೇಶ್ ಎಂಬಾತ ತನ್ನ ಸ್ನೇಹಿತನ ಖಾತೆಗೆ ಗೂಗಲ್ ಪೇ ಮುಖೇನ ಹಣ ಹಾಕಲು ಹೋಗಿ 75 ಸಾವಿರ ವಂಚನೆಗೊಳಗಾಗಿದ್ದಾರೆ.

ಇದೇ 15ರಂದು ತರಕಾರಿ ಮಾರುಕಟ್ಟೆಯಲ್ಲಿದ್ದಾಗ ತನ್ನ ಸ್ನೇಹಿತ ಅರುಣ್ ಬ್ಯಾಂಕ್ ಖಾತೆಗೆ ತರಕಾರಿ ವ್ಯಾಪಾರಕ್ಕೆ 35 ಸಾವಿರವನ್ನು ಸುರೇಶ್ ನು ಗೂಗಲ್ ಪೇ ಮೂಲಕ ತನ್ನ ಬ್ಯಾಂಕ್ ಖಾತೆಯಿಂದ ಕಳುಹಿಸಿದ್ದು, ಅದು ಸ್ನೇಹಿತ ಅರುಣ್ ಖಾತೆಗೆ ಜಮಾವಣೆಯೇ ಆಗಿಲ್ಲ. ಈ ಬಗ್ಗೆ ಸುರೇಶ್ ತಾನು ಖಾತೆ ಹೊಂದರುವ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಗೂಗಲ್ ಪೇ ಮುಖಾಂತರ ಹಣ ಸಂದಾಯ ಮಾಡಿದ್ದರಿಂದ ಬ್ಯಾಂಕ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲಾಗಿದೆ.

ನಂತರ ಆತ ಗೂಗಲ್ ಪೇ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗ ಕರೆ ಸ್ವೀಕಾರವಾಗಿಲ್ಲ. ಸ್ವಲ್ಪ ಸಮಯದಲ್ಲಿ ಈತನ ಮೊಬೈಲ್ ನಂಬರ್ ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ತಾನು ಗೂಗಲ್ ಪೇ ಕಸ್ಟಮರ್ ಕೇರ್ ನಿಂದ ಮಾತನಾಡುತ್ತಿರುವುದಾಗಿ ಪರಿಚಿತಗೊಂಡಾಗ ಸುರೇಶ್ ತನ್ನ ಖಾತೆಯಿಂದ ಹಣ ಕಡಿತವಾಗಿದ್ದು, ಮರುಪಾವತಿಗೆ ಕೇಳಿದಾಗ ಅಪರಿಚಿತನು ಹಣ ಮರುಪಾವತಿಸುವುದಾಗಿ ನೆಪ ಹೇಳಿ ಮೊಬೈಲ್ ನಲ್ಲಿರುವ ಗೂಗಲ್ ಪೇ ಓಪನ್ ಮಾಡಿಸಿ, ಖಾತೆಯಿಂದ ಕಡಿತವಾಗಿರುವ 35 ಸಾವಿರ ನಮೂದಿಸಲು ತಿಳಿಸಿ, ನಂತರ ಇದೇ ರೀತಿ ಮತ್ತೊಂದು ಬಾರಿ 35 ಸಾವಿರ ನಮೂದಿಸಲು ಹೇಳಿದ್ದು, ನಂತರ ಅದು ಸಕ್ಸಸ್ ಆಗದ ಕಾರಣ 5 ಸಾವಿರ ಮತ್ತೊಮ್ಮೆ ನಮೂದಿಸಲು ಹೇಳಿ, 24 ಗಂಟೆಯಲ್ಲಿ ನಿಮ್ಮ ಖಾತೆಗೆ ಹಣ ಜಮಾಯಾಗಲಿದೆ ಎಂದು ಅಪರಿಚಿತನು ನಂಬಿಸಿದ್ದಾನೆ.

ನಂತರ ಖಾತೆಗೆ ಹಣ ಮರುಪಾವತಿ ಆಗಿದ್ದಾಗ ತರಕಾರಿ ವ್ಯಾಪಾರಿ ತನ್ನ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಿಂದ 40 ಸಾವಿರ ಕಡಿತವಾಗಿರುವ ಬಗ್ಗೆ ತಿಳಿದು ಬಂದಿದೆ. ಸ್ನೇಹಿತ ಅರುಣ ಖಾತೆಗೆ ಕಳುಹಿಸಿದರೂ ಜಮೆಯಾಗದ 35 ಸಾವಿರ ಜೊತೆಗೆ ಮೋಸ ಮಾಡಿ ಕಟಾವು ಮಾಡಿಕೊಂಡ 40 ಸಾವಿರ ಸೇರಿ ಒಟ್ಟು 75 ಸಾವಿರ ವಂಚನೆಯಾಗಿರುವುದಾಗಿ ತರಕಾರಿ ವ್ಯಾಪಾರಿ ದೂರು ನೀಡಿದ್ದಾನೆ.

ಹಣ ಕಳೆದುಕೊಂಡ ಎನ್ ಜಿಓ ನೌಕರ

ಎನ್ ಜಿಓ ನೌಕರ ಹೆಚ್.ಎನ್. ಸುನೀಲ್ ಎಂಬಾತ ತನ್ನ ತಂದೆ ನಿವೃತ್ತ ‘ಡಿ’ ನೌಕರ ಹನುಮಂತಪ್ಪ ಅವರ ಬ್ಯಾಂಕ್ ಖಾತೆಯಿಂದ ಇದೇ 19ರಂದು ಗೂಗಲ್ ಪೇ ಮುಖಾಂತರ ತನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡರೂ ಸಹ ಜಮೆಯಾಗದೇ ಗೂಗಲ್ ಪೇ ಕಸ್ಟಮರ್ ಕೇರ್ ಸಂರ್ಕಿಸಿದಾಗ ತನ್ನ ಹಾಗೂ ತನ್ನ ತಂದೆ ಇಬ್ಬರ ಖಾತೆಯಿಂದ ಒಟ್ಟು 53 ಸಾವಿರಕ್ಕೂ ಅಧಿಕ ಹಣ ಕಡಿತಗೊಂಡು ಮೋಸ ಹೋಗಿದ್ದಾರೆ.

ನನ್ನ ತಂದೆಯ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮುಖಾಂತರ ತನ್ನ ಬ್ಯಾಂಕ್ ಖಾತೆ ಎರಡು ಬಾರಿ ತಲಾ 20 ಸಾವಿರ ಹಣ ವರ್ಗಾವಣೆ ಮಾಡಿಕೊಂಡಿದ್ದು, ಅದು ಖಾತೆಗೆ ಜಮೆಯಾಗದಿದ್ದಾಗ, ಗೂಗಲ್ ಪೇ ಕಸ್ಟಮರ್ ಕೇರ್ ಸಂಪರ್ಕಿಸಿದ್ದು, ಅವರು ಇನ್ನೊಂದು ನಂಬರ್ ನಿಂದ ಫೋನ್ ಬರುವುದಾಗಿ ತಿಳಿಸಿ, ಮರುದಿನ ಕರೆ ಮಾಡಿ ಹಿಂದೆ ಭಾಷೆಯಲ್ಲಿ ಮಾತನಾಡಿ ಗೂಗಲ್ ಪೇ ಗೆ ಹೋಗಿ ಹೇಳಿದಂತೆ ಮಾಹಿತಿ ತುಂಬಿದರೆ ಹಣ ವಾಪಾಸ್ ಬರುವುದಾಗಿ ನಂಬಿಸಿ, ನನ್ನ ಅಕೌಂಟ್ ನಿಂದ 8901 ರೂ. ಹಾಗೂ ತಂದೆಯ ಅಕೌಂಟ್ ನಿಂದ 44,600 ರೂ. ಹಣ ಕಡಿತ ಮಾಡಿರುವುದಾಗಿ ಸುನೀಲ್ ದೂರು ನೀಡಿದ್ದಾರೆ.


  • ಗೂಗಲ್ ಪೇ ಅಸುರಕ್ಷಿತ

ಗೂಗಲ್ ಪೇ ಮುಖಾಂತರ ಆನ್ ಲೈನ್ ಹಣಕಾಸಿನ ವ್ಯವಹಾರವೇ ಅಸುರಕ್ಷಿತ. ಯಾವುದೇ ಸುರಕ್ಷಿತವಾದ ವ್ಯವಸ್ಥೆ ಇಲ್ಲ. ಗೂಗಲ್ ಪೇ ಕಸ್ಟಮರ್ ಕೇರ್ ಮೋಸವಾಗಿದ್ದು, ಅಪಾಯಕಾರಿ. ಹೀಗೆ ಹಣ ಕೈ ತಪ್ಪಿ ಹೋದಾಗ ಸಂಪರ್ಕಿಸುವ ಜನರಿಂದಲೇ ಬ್ಯಾಂಕ್ ಖಾತೆ ನಂಬರ್ ಹಾಗೂ ಇನ್ನಿತರ ಮಾಹಿತಿ ಪಡೆದು ಹಣ ವಂಚಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿವೆ. ಬ್ಯಾಂಕ್ ಗ್ರಾಹಕರು ಇಂತಹ ಅಸುರಕ್ಷಿತ ಹಣಕಾಸಿನ ಆನ್ ಲೈನ್ ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಪೇಟಿಎಂ ಮುಖೇನ ಹಣಕಾಸಿನ ವ್ಯವಹಾರದ ಬಗ್ಗೆಯೂ ಜಾಗರೂಕರಾಗಬೇಕಿದೆ. ಖಾತೆ ಹೊಂದಿರುವ ಬ್ಯಾಂಕ್ ಗಳಿಂದಲ್ಲೇ ನೀಡುವ ಆನ್ ಲೈನ್ ಹಣಕಾಸಿನ ವ್ಯವಹಾರಕ್ಕೆ ಭದ್ರತೆ ಇರಲಿದೆ. ಹಾಗಾಗಿ ಜನ ಎಚ್ಚೆತ್ತುಕೊಳ್ಳಬೇಕು.

| ಮುಸ್ತಾಕ್ ಅಹ್ಮದ್, ಪಿಎಸ್ ಐ, ಸಿಇಎನ್ ಅಪರಾಧ ಪೊಲೀಸ್ ಠಾಣೆ


ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version