ದಿನದ ಸುದ್ದಿ
ನಾಡಿನೆಲ್ಲೆಡೆ ಗೌರಿ-ಗಣೇಶ ಸಂಭ್ರಮ
ಇಂದು ಗೌರಿ ಹಬ್ಬ. ರಾಜ್ಯದೆಲ್ಲೆಡೆ ಗೌರಿ-ಗಣೇಶ ಹಬ್ಬದ (Gauri Ganesh Festival ) ಸಂಭ್ರಮ ಕಂಡು ಬರುತ್ತಿದೆ. ವ್ಯಾಪಕ ಮಳೆ ಮತ್ತು ಪ್ರವಾಹದ ನಡುವೆಯೂ ಹಬ್ಬಕ್ಕಾಗಿ ಗೌರಿ ಮತ್ತು ಗಣೇಶ ಮೂರ್ತಿಗಳ ಖರೀದಿ ನಡೆಯುತ್ತಿದೆ. ವಿಶೇಷವಾಗಿ ಮಣ್ಣಿನ ಮತ್ತು ಪರಿಸರ ಸ್ನೇಹಿ ಮೂರ್ತಿಗಳ ಮಾರಾಟ ಹೆಚ್ಚಾಗಿದೆ. ಹಬ್ಬಕ್ಕೆ ಅಗತ್ಯವಾಗಿರುವ ವಸ್ತುಗಳ ಖರೀದಿ ಮತ್ತು ಮಾರಾಟ ಜೋರಾಗಿದೆ.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಹಬ್ಬಕ್ಕಾಗಿ ಹೂವು, ಹಣ್ಣು ಮತ್ತಿತರ ವಸ್ತುಗಳ ಖರೀದಾಗಿ ಜನ ಮುಗಿ ಬಿದ್ದಿದ್ದಾರೆ. ಮಾರುಕಟ್ಟೆಯ ಗಿಜಿಗುಡುವ ವಾತಾವರಣದಲ್ಲಿ ಖರೀದಿ ಭರಾಟೆ ಜೋರಾಗಿದೆ. ಮಾರುಕಟ್ಟೆ ಆಸುಪಾಸಿನಲ್ಲಿ ಬೆಳಿಗ್ಗೆ 4 ಗಂಟೆಯಿಂದಲೇ ವಾಹನ ದಟ್ಟಣೆ ಕಂಡು ಬಂತು. ಮಲ್ಲೇಶ್ವರಂ, ಜಯನಗರ ಮತ್ತಿತರ ಪ್ರದೇಶಗಳಲ್ಲೂ ಸಹ ಹಬ್ಬದ ಸಡಗರ ಕಂಡು ಬಂದಿದೆ.
ಮೈಸೂರಿನಲ್ಲಿ ಕುಶಲ ಕರ್ಮಿಗಳು ಗೌರಿ ಹಬ್ಬದಂದು ಬಾಗಿನ ನೀಡಲು ಬಳಸುವ ’ಗೌರಿ ಮೊರ’ ತಯಾರಿಕೆಯಲ್ಲಿ ತೊಡಗಿದ್ದಾರೆ. ಹಬ್ಬದ ದಿನದಂದು ಗೌರಿ ಮೊರದಲ್ಲಿ ಧಾನ್ಯ, ಬೆಲ್ಲ ಇತ್ಯಾದಿ ವಸ್ತುಗಳನ್ನು ತುಂಬಿ ಬಾಗಿನ ಅರ್ಪಿಸುವ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿ ಬಿದಿರಿನ ಮೊರಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.
ಕಾರ್ಮಿಕರಾದ ಪಾರ್ವತಿ, ಸುಮಾರು ೧೫ ವರ್ಷಗಳಿಂದ ಬುಟ್ಟಿ ಹೆಣೆಯುತ್ತಿದ್ದು, ಗೌರಿ ಹಬ್ಬ ಸಂದರ್ಭದಲ್ಲಿ ಉತ್ತಮ ಬೇಡಿಕೆ ಬರುತ್ತದೆ ಎಂದರು.
ಮತ್ತೋರ್ವ ಕಾರ್ಮಿಕರಾದ ಭಾಗ್ಯಮ್ಮ ಮಾತನಾಡಿ, ಗೌರಿಗೆ ಮೊರದಲ್ಲಿ ಬಾಗಿನ ಅರ್ಪಿಸುವುದರಿಂದ ಈ ಹಬ್ಬದ ವೇಳೆ ಬೇಡಿಕೆ ಹೆಚ್ಚಾಗಿದೆ ಎಂದರು.
ಗ್ರಾಹಕರಾದ ಮೋನಿಕಾ ಈಗಲೂ ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ವೇಳೆ ವಿವಿಧ ಬುಟ್ಟಿಗಳ ಮೂಲಕ ಬಾಗಿನ ಅರ್ಪಿಸುತ್ತೇವೆ ಎಂದರು.
ಶುಭ ಎಂಬವರು ಮಾತನಾಡಿ, ಗೌರಿ-ಗಣೇಶ ಹಬ್ಬದಂದು ಬಿದಿರಿನ ಬುಟ್ಟಿಗಳನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ಗೌರಿ ಮೊರವನ್ನು ಖರೀದಿಸುತ್ತಿದ್ದೇವೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243