ಬಹಿರಂಗ
ಒಮ್ಮೆ ಆ ಮಕ್ಕಳ ಕಡೆ ದೃಷ್ಟಿ ಹಾಯಿಸಿ, ಪ್ಲೀಸ್
- ನಾ ದಿವಾಕರ
ಪರೀಕ್ಷೆಯನ್ನು ತೊರೆದೇವು ಹಿಜಾಬ್ ಬಿಡೆವು ಎನ್ನುವ ಹಠಮಾರಿ ಧೋರಣೆ ; ಕಾರಣ ನೂರಾರು; ಮತ ಧರ್ಮ ಶ್ರದ್ಧೆ, ನಂಬಿಕೆ , ಆಚರಣೆ, ಆರಾಧನೆ, ಅಸ್ಮಿತೆ ಇತ್ಯಾದಿ ಇತ್ಯಾದಿ ; ನಂಬಿಕೆ ತೊಟ್ಟವರದೋ ತೊಡಲು ಹೇಳುವವರದೋ ; ಶ್ರದ್ಧೆ ಪೋಷಿತವೋ ಪ್ರೇರಿತವೋ ; ಪ್ರಶ್ನೆ ಹಕ್ಕಿನದೋ ಅಸ್ಮಿತೆಯದೋ ; ಹಕ್ಕು ವ್ಯಕ್ತಿಯದೋ ಸಾಮುದಾಯಿಕವೋ ; ಸ್ವಯಂ ಆಯ್ಕೆಯೋ ಅನಿವಾರ್ಯತೆಯ ಒತ್ತಡವೋ ; ಗೆದ್ದೇಗೆಲ್ಲುವ ಛಲವೋ ಸೋಲಲೊಪ್ಪದ ಆತ್ಮಬಲವೋ ; ಶಿಕ್ಷಣವೋ ಸಂಪ್ರದಾಯವೋ ಬದುಕೋ ಬದುಕಿನ ಹಾದಿಯೋ ; ಸಂವಿಧಾನವೋ ಮತಧರ್ಮವೋ ; ಇಷ್ಟೆಲ್ಲಾ ಪ್ರಶ್ನೆಗಳ ನಡುವೆ ಕರ್ನಾಟಕದ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ.
ಈ ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡದೆ ಸಾಮಾಜಿಕ ನ್ಯಾಯ ಒದಗಿಸಬೇಕಾದ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಆದರೆ ಸರ್ಕಾರದ ಕ್ರೌರ್ಯ, ನ್ಯಾಯಾಂಗದ ಅಸೂಕ್ಷ್ಮತೆ, ಶಿಕ್ಷಣ ಪರಿಚಾರಕರ ಅಮಾನುಷತೆ, ನಾಗರಿಕರ ನಿಷ್ಕ್ರಿಯತೆ ಮತ್ತು ಶಿಕ್ಷಣವಂಚಿತ ಮಕ್ಕಳತ್ತ ನೋಡಿ ಗಹಗಹಿಸುತ ಮುಸಿನಗುವ ಮತಾಂಧತೆ, ಅಧಿಕಾರಸ್ಥರ ಅಮಾನುಷತೆ ಇವೆಲ್ಲವನ್ನೂ ನೋಡುತ್ತಿದ್ದರೆ ನಮ್ಮ ಸಮಾಜ ತನ್ನ ಜವಾಬ್ದಾರಿ, ನೈತಿಕ ಹೊಣೆಯನ್ನು ಅರಿತಿದೆಯೇ ಎಂದು ಅನುಮಾನ ಮೂಡುತ್ತದೆ.
ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡುವ ಸರ್ಕಾರದ ಆದೇಶ ಅಮಾನುಷತೆಯ ಪರಾಕಾಷ್ಠೆ ಅಲ್ಲವೇ ? ಹಠಮಾರಿ ಹಸುಳೆಗಳನ್ನೂ ಸಾಂತ್ವನದ ಮಾತುಗಳಿಂದ ಸಂತೈಸಿ ಸರಿದಾರಿಗೆ ತರುವ ತಾಯಿ ಪ್ರೇಮ ಅಧಿಕಾರಸ್ಥರಲ್ಲಿ ಇಲ್ಲದೆ ಹೋದರೆ ಅದನ್ನು ಪ್ರಜಾತಂತ್ರ ಎನ್ನುವುದಾದರೂ ಹೇಗೆ ? ಹೆಣ್ಣುಮಕ್ಕಳು ತೊಡುವ ಒಂದು ತುಂಡು ವಸ್ತ್ರ, ಹಿಜಾಬ್, ಅವರ ಭವಿಷ್ಯದ ಹಾದಿಯನ್ನೇ ಮುಚ್ಚಿಬಿಡಬೇಕೇ ? ಅಥವಾ ಸರ್ಕಾರವನ್ನೇ ಆಶ್ರಯಿಸುವ ಬಡ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಲಾಭಕೋರ ಉದ್ಯಮಿಗಳನ್ನಾಶ್ರಯಿಸಬೇಕೇ ?
ಒಂದು ಕ್ಷಣ, ಹಲವು ಗಂಟೆಗಳ ಕಾಲ ಹಿಜಾಬ್ ತೆರೆದಿಟ್ಟು ಪರೀಕ್ಷೆ ಬರೆದರೆ, ಧರ್ಮ ನಶಿಸುವುದೇ ? ಅಥವಾ ಸೋತ ಅಪಮಾನದಿಂದ ಬದುಕು ದುರ್ಭರವಾಗುವುದೇ ? ನಂಬಿಕೆ ಶ್ರದ್ಧೆಗೆ ಧಕ್ಕೆ ಉಂಟಾಗುವುದೇ ? ಹಿಜಾಬ್ ಸಾಂವಿಧಾನಿಕ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ದ್ಯೋತಕ. ಶಿಕ್ಷಣ ? ಶಿಕ್ಷಣ ಬದುಕುವ ಹಕ್ಕಿಗೆ ಆಕರ ಅಲ್ಲವೇ ? ತಮ್ಮ ಹಕ್ಕುಗಳಿಗೆ ಹೋರಾಡುವ ಸ್ಥೈರ್ಯ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಲು ಶಿಕ್ಷಣ ಒಂದು ಅಸ್ತ್ರ ಅಲ್ಲವೇ ?
ಬದುಕಿನ ಆಯ್ಕೆಯ ಪ್ರಶ್ನೆ ಎದುರಾದಾಗ ಆದ್ಯತೆಗಳು ವಿವೇಕಯುತವಾಗಿ ನಿಷ್ಕರ್ಷೆಗೊಳಗಾಗಬೇಕಲ್ಲವೇ ? ಸಮುದಾಯದ ಆದ್ಯತೆ ವ್ಯಕ್ತಿಗತ ಆಯ್ಕೆಗೆ ಅಡ್ಡಿಯಾಗಬಾರದಲ್ಲವೇ ? ಮುಂದಿಟ್ಟ ಪ್ರತಿ ಹೆಜ್ಜೆಯೂ ಉಜ್ವಲ ಬದುಕಿನ ಪಂಜುಗಳಾಗುತ್ತವೆ. ಹಿಂದೆ ಸರಿದ ಪ್ರತಿ ಹೆಜ್ಜೆಯೂ ಸಮಾಜವನ್ನು ಅಂಧಕೂಪಕ್ಕೆ ತಳ್ಳುತ್ತದೆ. ಸಮುದಾಯ ಪ್ರಜ್ಞೆಗೆ ಈ ವಿವೇಕ ವಿವೇಚನೆ ಮುಖ್ಯ.
ಇನ್ನು ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಪರೀಕ್ಷೆ ಬರೆದರೆ ಯಾವ ನ್ಯಾಯದ ಉಲ್ಲಂಘನೆಯಾಗುತ್ತದೆ ?
ಹೆಣ್ಣು ಮಕ್ಕಳು ಧರಿಸುವ ಒಂದು ವಸ್ತ್ರ ಒಂದು ಸಮುದಾಯದ ಅಥವಾ ಸಮಾಜದ ತಪೋಭಂಗ ಮಾಡುತ್ತದೆ ಎನ್ನುವುದಾದರೆ, ಆ ಸಮಾಜ ಎಷ್ಟು ದುರ್ಬಲವಾಗಿರಬೇಕು ಅಥವಾ ಆ ಸಮುದಾಯ ಎಷ್ಟು ವ್ಯಸನಿಯಾಗಿರಬೇಕು ?
ಹಲವಾರು ನ್ಯಾಯಾಂಗದ ಆದೇಶಗಳನ್ನು ಧಿಕ್ಕರಿಸುತ್ತಲೇ, ಉಲ್ಲಂಘಿಸುತ್ತಲೇ ಅಧಿಕಾರಪೀಠವನ್ನಲಂಕರಿಸುವ ಜನಪ್ರತಿನಿಧಿಗಳಿಗೆ, ವಿವೇಚನೆಯೊಂದಿಗೆ ಕೊಂಚ ಮಾನವೀಯ ಮೌಲ್ಯಗಳ ಪರಿಚಯ ಇದ್ದಿದ್ದರೆ, ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಪರೀಕ್ಷೆ ಬರೆಯುವ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸುವ ಅವಕಾಶ ನೀಡಬಹುದಿತ್ತಲ್ಲವೇ ? ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಅವಕಾಶಗಳನ್ನು ಕಸಿದುಕೊಂಡು ಇನ್ನೆಂತಹ ಸಮಾಜವನ್ನು ರೂಪಿಸಲು ಸಾಧ್ಯ ? ಮಾನವೀಯ ಸಂವೇದನೆಯನ್ನೂ ಮೀರಿದ ಆಡಳಿತ ವ್ಯವಸ್ಥೆ ಮಾನವ ಸಮಾಜವನ್ನು ಹೇಗೆ ನಿರ್ವಹಿಸಲು, ರೂಪಿಸಲು ಸಾಧ್ಯ ?
ಈ ಎರಡೂ ಹಠಮಾರಿ ಧೋರಣೆಗಳ ನಡುವೆ ಸಿಲುಕಿ, ನಲುಗಿ, ಶಿಕ್ಷಣ ವಂಚಿತರಾಗಿ,ಭವಿಷ್ಯದ ಹಾದಿಯಿಂದ ವಿಮುಖವಾಗುವ ಹೆಣ್ಣುಮಕ್ಕಳತ್ತ ಒಂದು ಕ್ಷಣವಾದರೂ ತಾಯಿ ಪ್ರೇಮದಿಂದ ದೃಷ್ಟಿ ಬೀರಿದರೆ ಸಾಕಲ್ಲವೇ ? ಏನನ್ನು ಸಾಧಿಸಲು ಹೊರಟಿದ್ದೇವೆ ? ಯಾವುದನ್ನು ರಕ್ಷಿಸಲು ಹೊರಟಿದ್ದೇವೆ ? ಎಂತಹ ಸಮಾಜವನ್ನು ಕಟ್ಟಲು ಹೊರಟಿದ್ದೇವೆ ?
ಹಚ್ಚೇವು ಕನ್ನಡದ ದೀಪ ಎಂದು ನಿತ್ಯ ಹಾಡುವ ನಮಗೆ, ನಮ್ಮ ಪ್ರತಿಷ್ಠೆಗೆ ಬಲಿಯಾಗಿ ಭವಿಷ್ಯದ ನಂದಾದೀಪಗಳು ನಂದಿಹೋಗುತ್ತಿರುವುದು ಕಾಣುತ್ತಿಲ್ಲವೇ ? ಹೆಣ್ಣು ಮಕ್ಕಳ ಘನತೆ ರಕ್ಷಿಸುವ ಒಂದು ವಸ್ತ್ರ ಇಡೀ ಸಮಾಜವನ್ನು ನೈತಿಕವಾಗಿ ಬೆತ್ತಲಾಗಿಸುತ್ತಿದೆಯೇಕೆ ? ಪರೀಕ್ಷೆ ಬರೆಯಲಾಗದೆ ತಮ್ಮ ಮುಂದಿನ ಹೆಜ್ಜೆಗಳನ್ನೇ ಕಾಣದಾಗದೆ ಮೌನಕ್ಕೆ ಜಾರುವ ಆ ಹೆಣ್ಣುಮಕ್ಕಳ ಮೌನವೇದನೆ ಸಂವೇದನಾಶೀಲ ಸಮಾಜವನ್ನು ಬಾಧಿಸಬೇಕಲ್ಲವೇ ?
ವ್ಯಕ್ತಿ ಪ್ರತಿಷ್ಠೆ, ಧರ್ಮ ನಿಷ್ಠೆ, ಮತಶ್ರದ್ಧೆ, ನ್ಯಾಯ ನಿಷ್ಠುರತೆ, ಕಾನೂನು ಬದ್ಧತೆ ಇವೆಲ್ಲವನ್ನೂ ಬದಿಗೊತ್ತಿ ಹೆಣ್ಣು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಸಮಾಜದ ನೈತಿಕ ಜವಾಬ್ದಾರಿ. ಭವಿಷ್ಯದ ಹಾದಿಗಳನ್ನು ಮುಚ್ಚಿ ವರ್ತಮಾನದಲ್ಲಿ ಸಂಭ್ರಮಿಸುವುದು ಕ್ರೌರ್ಯವಷ್ಟೇ ಅಲ್ಲ ಅಪ್ರಬುದ್ಧತೆಯೂ ಹೌದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243