ರಾಜಕೀಯ

ಕುದುರೆ-ಹಸುಗೆ ಸಿಕ್ಕ ಮನ್ನಣೆ ಕಪ್ಪು ಬಣ್ಣದ ಕಂಬಳದ ಕೋಣನಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ : ಬಿ ಕೆ ಹರಿಪ್ರಸಾದ್

Published

on

ಸುದ್ದಿದಿನ,ಬೆಂಗಳೂರು : ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಕಂಬಳ ಕ್ರೀಡೆಗೆ ನಿರ್ಲಕ್ಷದ ಕುರಿತು ಮಾತನಾಡಿದ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ , ಕೆಲವು ವರ್ಷಗಳ ಹಿಂದೆ ಪ್ರಾಣಿ ದಯಾ ಸಂಘದವರು ಕಂಬಳವನ್ನ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ರು.

ಇದರ ಬಗ್ಗೆ ನಾವು ಹಾಗೂ ದಿವಂಗತ ಆಸ್ಕರ ಫರ್ನಾಂಡೀಸ್ ಅವರು ಸಂಸತ್ತಿನಲ್ಲಿ ಚರ್ಚೆ ನಡೆಸಿ ಯಾವುದೇ ಕಾರಣಕ್ಕೂ ಕಂಬಳವನ್ನ ನಿಲ್ಲಿಸಬಾರದು ಎಂದು ವಾದ ಮಾಡಿದ್ವಿ. ಚರ್ಚೆಯಲ್ಲಿ ಆಸ್ಕರ್ ಫರ್ನಾಂಡೀಸ್ ಅವರು ಸಂಸತ್ತಿನಲ್ಲಿ ಕೋಣ ಹಾಗೂ ಕಂಬಳದ ಮೇಲೆ ಭಾಷಣದ ಜೊತೆಗೆ ಹಾಡನ್ನೂ ಹಾಡಿದ್ರು.

ಇದು ಕೇವಲ ಕಂಬಳದ ಕ್ರೀಡೆಯ ವಿಚಾರವಲ್ಲ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ, ಸಂಸ್ಕಾರ, ವೈಶಿಷ್ಟ್ಯಗಳ ಸಂಕೇತ. ಕೇವಲ ಕಂಬಳವನ್ನ ಉಳಿಸುವುದಷ್ಟೇ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ,ಕೋಳಿ ಅಡ್ಕ ಹಾಗೂ ಪಾಡ್ದನಗಳನ್ನೂ ಉಳಿಸಬೇಕಿದೆ. ಈ ಪಾಡ್ದನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವೈಶಿಷ್ಟ್ಯಗಳನ್ನ ಅದ್ಭುತವಾಗಿ ಹಾಡಲಾಗುತ್ತೆ. ಆದ್ರೆ ಇವೆಲ್ಲ ಇಂದು ನಶೀಸಿ ಹೋಗುತ್ತಿದೆ. ಕರಾವಳಿ ಪ್ರದೇಶಗಳಲ್ಲಿ ಕೇವಳ ಕಂಬಳ ಮಾತ್ರವಲ್ಲ ಕರಾವಳಿಯ ಬಹುತೇಕ ವೈಶಿಷ್ಟ್ಯಗಳು ಇವತ್ತು ನಶಿಸಿ ಹೋಗುತ್ತಿದೆ.‌ಸರ್ಕಾರ ಇಂತಹ ಕಲೆಗಳನ್ನ ಉಳಿಸಲು ನೆರವಿಗೆ ಧಾವಿಸಬೇಕಿದೆ.

ದೇಶದಲ್ಲಿ ರಾಜ್ಯವಾರು ವಿಂಗಡನೆಯಾಗುವಾಗ ಐಡೆಂಟಿಟಿಗಳ(ಅಸ್ಮಿತೆಗಳ) ಮೇಲೆ ವಿಂಗಡನೆ ಮಾಡಲಾಗಿದೆ. ಕೊಡುಗು ಹಾಗೂ ಕರಾವಳಿ ಜಿಲ್ಲೆಗಳು ಸಾಕಷ್ಟು ಅಸ್ಮಿತೆಗಳನ್ನ ಹೊಂದಿರುವ ಪ್ರದೇಶಗಳು. ಸರ್ಕಾರದ ಮೊದಲ ಆದ್ಯತೆಯಾಗಿ ಭಾಷೆ ಹಾಗೂ ಕಲೆಗಳನ್ನ ಕಾಪಾಡಿ ಉಳಿಸುವಂತಾಗಬೇಕಿದೆ.

ಕಂಬಳ ಪ್ರತಿಷ್ಟೆ ಹಾಗೂ ಗೌರವದ ಸಂಕೇತ.ಎಲ್ಲರೂ ಪ್ರಾಣಿಗಳನ್ನ ಸಾಕ್ತಾರೆ. ಆದರೆ ಕುದುರೆ, ಹಸು,ಸಿಕ್ಕಂತಹ ಪ್ರಾಮುಖ್ಯತೆ ಕೋಣಕ್ಕೆ ಸಿಕ್ಕಿಲ್ಲ. ಅದಕ್ಕೆ ಕಾರಣ ಕೋಣನ ಬಣ್ಣ ಕಪ್ಪು ಎಂಬ ಕಾರಣಕ್ಕೆ. ಅಲ್ಲಿಯೂ ಕೂಡ ಭೇದ ಭಾವ ನಡೆದಿದೆ. ಅಲ್ಲೂ ವರ್ಣಭೇದ ಆಗಿದೆ. ಇಂತಹ ಸೂಕ್ಷ್ಮತೆಯನ್ನ ಅರ್ಥ ಮಾಡಿಕೊಳ್ಳಬೇಕಿದೆ. ಕಂಬಳದ ಜೊತೆಗೆ ಸರ್ಕಾರ ಕರಾವಳಿಯ ವೈಶಿಷ್ಟ್ಯಗಳನ್ನ ಕಾಪಾಡಿಕೊಂಡು ಹೋಗಬೇಕಿದೆ. ಹಾಗೂ ಮೀನುಗಾರರಿಗೂ ಕೂಡ ಸರಿಯಾಗಿ ಪ್ರೋತ್ಸಾಹ ನೀಡಬೇಕಿದೆ.

ಸಮುದ್ರದಲ್ಲಿ ಈಜುವವರು ಕರಾವಳಿ ಭಾಗದಲ್ಲಿ ಸಿಗ್ತಾರೆ. ಅವರನ್ನ ಟೆಕ್ನಿಕಲ್ ಆಗಿ ಸ್ವಿಮ್ಮಿಂಗ್ ಫೂಲ್ ಗಳನ್ನ ಕಟ್ಟಿಸಿ ತರಬೇತಿ ನೀಡಬೇಕಿದೆ. ಕರಾವಳಿಯ ಯುವಕರನ್ನ ಬೇರೆ ಅನ್ಯದಾರಿಗೆ ಹೋಗುವುದನ್ನ ತಡೆಗಟ್ಟಿ ಇಡೀ ರಾಷ್ಟ್ರಕ್ಕೆ , ರಾಜ್ಯಕ್ಕೆ ಹೆಮ್ಮೆ ತರುವಲ್ಲಿ ಪಾತ್ರರಾಗುವಂತೆ ಉತ್ತೇಜನ ನೀಡಬೇಕಿದೆ ಎಂದು ಸರ್ಕಾರದ ಗಮನ ಸೆಳೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version