ದಿನದ ಸುದ್ದಿ
ಕುಂದಗೋಳ ಉಪಚುನಾವಣೆ : ಸಂಗಟಿಕೊಪ್ಪ ಚೆಕ್ ಪೋಸ್ಟಿನಲ್ಲಿ 1118 ಗ್ರಾಂ ಚಿನ್ನ ವಶ
ಸುದ್ದಿದಿನ, ಹುಬ್ಬಳ್ಳಿ : ಇಂದು ಮೇ.05 ರ ಬೆಳಿಗ್ಗೆ 11.30 ರ ಸುಮಾರಿಗೆ ಅಧಿಕೃತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1118.46 ಗ್ರಾಂ ತೂಕದ ಸುಮಾರು 30 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಲಘಟಗಿ ತಾಲೂಕು ಸಂಗಟಿಕೊಪ್ಪ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಕಾರವಾರದ ಸತೀಶ ಪಾಂಡುರಂಗ ಶೇಠ್ ಎಂಬುವರು ಬಾಳೆಗುಳಿ ಕ್ರಾಸ್ ನಿಂದ ಹುಬ್ಬಳ್ಳಿ ಕಡೆಗೆ ಕಾರೊಂದರಲ್ಲಿ ಈ ಆಭರಣಗಳನ್ನು ತರುತ್ತಿದ್ದರು. ಸಂಗಟಿಕೊಪ್ಪ ಚೆಕ್ ಪೋಸ್ಟ್ ನಲ್ಲಿ ತಪಾಸಣೆಗೆ ಒಳಪಡಿಸಿದಾಗ ಸಮರ್ಪಕ ದಾಖಲೆಗಳನ್ನು ಒದಗಿಸದೇ ಈ ಆಭರಣಗಳನ್ನು ಹುಬ್ಬಳ್ಳಿ ಮಾಳಸಾ ಜ್ಯುವೆಲರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು.
ಇವುಗಳನ್ನು ಕುಂದಗೋಳ ಉಪಚುನಾವಣೆಯ ಅಭ್ಯರ್ಥಿಯೊಬ್ಬರ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರಲು ಒಯ್ಯುತ್ತಿರಬಹುದೆಂಬ ಸಂದೇಹದ ಮೇರೆಗೆ ಚೆಕ್ ಪೋಸ್ಟ ತಪಾಸಣೆ ಅಧಿಕಾರಿ ವೆಂಕಟೇಶ ಕಟ್ಟಿ ಅವರು ದೂರು ನೀಡಿದ್ದಾರೆ.ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕುಂದಗೋಳ ಚುನಾವಣಾಧಿಕಾರಿ ವಿ.ಪ್ರಸನ್ನ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243