ದಿನದ ಸುದ್ದಿ
ಅನಧಿಕೃತ ಲೂಸ್ ಮೆಕ್ಕೆಜೋಳ ಬಿತ್ತನೆ ಬೀಜಗಳ ಮಾರಾಟ-ಖರೀದಿ ಬಗ್ಗೆ ಎಚ್ಚರಿಕೆ..!
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಕಳೆದ ವಾರ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆ ಪೂರ್ವ ಭೂಮಿ ಸಿದ್ಧತೆ ಮಾಡುತ್ತಾ, ಬಿತ್ತನೆಗೆ ತಯಾರಿ ನಡೆಸುತ್ತಿದ್ದಾರೆ.
ಉತ್ತಮ ಭೂಮಿ ಸಿದ್ಧತೆ ಸಮಗ್ರ ಬೆಳೆ ನಿರ್ವಹಣೆಯ ಜೊತೆಗೆ ಉತ್ತಮ ಇಳುವರಿ ಪಡೆಯುವಲ್ಲಿ ಬಿತ್ತನೆ ಬೀಜಗಳು ಬಹು ಮುಖ್ಯ. ಪಾತ್ರವಹಿಸುತ್ತವೆ. “ಬೆಳೆಯುವ ಸಿರಿ ಮೊಳಕೆ” ಯಲ್ಲಿ ಎಂಬಂತೆ ಉತ್ತಮ ಇಳುವರಿ ಬೆಳವಣಿಗೆ ಹಾಗೂ ಇಳುವರಿ ಪಡೆಯುವಲ್ಲಿ ಉತ್ತಮ ಬಿತ್ತನೆ ಬೀಜಗಳು ಅತ್ಯಮೂಲ್ಯವಾಗಿವೆ.
ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ನಿಗಧಿಪಡಿಸಿದ ಸಹಕಾರಿ ಸಂಘಗಳಲ್ಲಿ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಕ್ರಮ ವಹಿಸಲಾಗಿದೆ. ಹಾಗೂ ಜಿಲ್ಲೆಯ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ದೃಢೀಕೃತ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರಿಗೆ ಯಾವುದೇ ಕೊರತೆಯಾಗುವುದಿಲ್ಲ.
ಆದರೆ ಇತ್ತೀಚಿನ ದಿನಗಳಲ್ಲಿ ಕಳಪೆ-ಬಿಡಿ ಬಿತ್ತನೆ ಬೀಜದ ಹಾವಳಿ ಹೆಚ್ಚಾಗುತ್ತಿದ್ದು, ಕೆಲ ವ್ಯಕ್ತಿಗಳು ನೇರವಾಗಿ ಹಳ್ಳಿಗಳಿಗೆ ತೆರಳಿ ವಿವಿಧ ಕಂಪನಿಗಳ ಕ್ಷೇತ್ರ ಸಹಾಯಕರುಗಳೆಂದು ಪರಿಚಯಿಸಿಕೊಂಡು ಅನಧಿಕೃತವಾಗಿ ರೈತರಿಗೆ ನೇರವಾಗಿ ಲೂಸ್ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ರೈತರು ಬಿಡಿ ಬೀಜಗಳು-ಲೂಸ್ ಬೀಜಗಳನ್ನು ಖರೀದಿಸಿ, ಬಿತ್ತನೆ ಮಾಡಿ ನಷ್ಟ ಅನುಭವಿಸಿದಲ್ಲಿ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಪರಿಹಾರ ಪಡೆಯಲು ಅರ್ಹರಾಗುವುದಿಲ್ಲ. ಆದ್ದರಿಂದ ನಷ್ಟಕ್ಕೆ ರೈತರೇ ನೇರ ಹೊಣೆಯಾಗುತ್ತಾರೆ. ಹಾಗೂ ಕೃಷಿ ಇಲಾಖೆಯು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ.
ಆದ್ದರಿಂದ ರೈತರು ಲೂಸ್ ಬಿತ್ತನೆ ಬೀಜ ಮಾರಾಟ ಜಾಲಕ್ಕೆ ಸಿಲುಕದೆ ಬೀಜಗಳನ್ನು ಕೃಷಿ ಇಲಾಖೆ/ಅಧಿಕೃತ ಮಾರಾಟಗಾರರಿಂದಲೇ ಖರೀದಿಸಿ ಬಿತ್ತನೆ ಮಾಡಬೇಕು. ಯಾವುದೇ ಕಾರಣಕ್ಕೂ ಬಿಡಿ ಬೀಜಗಳನ್ನು ಅನಧಿಕೃತ ಮೂಲಗಳಿಂದ ಖರೀದಿಸಬಾರದು.
ಅನಧಿಕೃತ ಲೂಸ್ ಬಿತ್ತನೆ ಬೀಜಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡುವವರು ಕಂಡುಬಂದರೆ ತಕ್ಷಣ ಸ್ಥಳೀಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಅಥವಾ ಈ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರ (ವಿಷಯ ತಜ್ಞರು) ದೂರವಾಣಿ ಸಂಖ್ಯೆ 8277931105 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243