ಅಂತರಂಗ
‘ಪ್ರಸಿದ್ಧ ಪರ್ವ’ ಕೂಡ್ಲಿಗಿ ತಾಲೂಕಿನ ಕರ್ಣ ಅಂಗಡಿ ಸಿದ್ದಣ್ಣನವರ ದಂತಕಥೆ
- ಕೆ.ಶ್ರೀಧರ್ (ಕೆ.ಸಿರಿ)
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದಾನವೇ ಒಂದು ಧರ್ಮವಾಗಿ ಅಗ್ರಪಂಕ್ತಿಯಲ್ಲಿರುವುದು ಇಡೀ ವಿಶ್ವದ ಭೂಪಟದಲ್ಲಿ ಬಹುಶಃ ಭಾರತವನ್ನು ಬಿಟ್ಟರೆ ಮೊದಲ ಸ್ಥಾನದಲ್ಲಿ ಬೇರಿನ್ಯಾವ ದೇಶವನ್ನು ನೋಡಲು ಸಾಧ್ಯವಿಲ್ಲ.
ಇದಕ್ಕೆ ಕಾರಣವೂ ಇದೆ ಅದಕ್ಕೆ ಕಾರಣ ಈ ನೆಲದ ಮಣ್ಣಿನಲ್ಲಿ ಹುದುಗಿರುವ ಶಕ್ತಿ ಈ ನಾಡು ಶರಣರು,ಸಂತರು,ಪವಾಡ ಪುರುಷರು, ಸಿದ್ದಿಗಳು ಮಹಾತ್ಮಾರು ನಡೆದಾಡಿದ ಬೀಡು, “ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು” ಎಂಬ ನಾಣ್ಣುಡಿಯಂತೆ ಈ ದೇಶದಲ್ಲಿ ಜನಿಸಿದ ಪ್ರತಿಯೋರ್ವನಿಗೂ ದೇಶಾಭಿಮಾನ ತಂತಾನೆ ಮೈದಾಳುತ್ತದೆ.
ಭಾರತದ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ, ವೇದಗಳು, ಪುರಾಣಗಳಲ್ಲಿ ಅನೇಕ ಮಹನೀಯರು ದಾನ ಧರ್ಮದ ಮೂಲಕ ಸರಳ ಕರ್ಮದ ಮೂಲಕ ಅನವರತವಾಗಿರುವುದನ್ನು ಇಂದಿಗೂ ಈ ಜಗತ್ತಿಗೆ ಸಾರುತ್ತಿವೆ.
ದಾನ ಎಂದಾಕ್ಷಣ ನಮಗೆ ನೆನಪಿಗೆ ಬರುವ ಮೊದಲ ವ್ಯಕ್ತಿಯೇ ಕರ್ಣ ಅಂತೆಯೇ ನಮ್ಮ ಕೂಡ್ಲಿಗಿ ತಾಲೂಕು ಬರದ ಸೀಮೆಯಾಗಿದ್ದು ಇಲ್ಲಿ ದೀರ್ಘಕಾಲಿಕ ಬೆಳೆಗಳಾದ ತೆಂಗು,ಅಡಿಕೆ ಮುಂತಾದ ಬೆಳೆಗಳನ್ನು ಬೆಳೆಯುವುದು ಬೆರಳೆಕೆ ಮಾತ್ರ ಅಂತೂ ಮೀರಿ ಊರಿಗೆ ಒಂದು ಅಥವಾ ಎರಡು ತೆಂಗಿನ ತೋಟಗಳಿದ್ದರೆ ಅವನು ಆ ಊರಿನ ಪ್ರಮುಖ ವಿಶೇಷ ಆಕರ್ಷಣೀಯ ವ್ಯಕ್ತಿಯಾಗಿ ಬಿಡುತ್ತಾನೆ.
ಮಹಾಭಾರತದಲ್ಲಿ ಬರುವ ಕರ್ಣನಂತೆಯೇ ನಮ್ಮ ಕೂಡ್ಲಿಗಿ ತಾಲೂಕಿನ ಪ್ರಸಿದ್ಧ ಪರ್ವ ಪುಸ್ತಕದಲ್ಲಿಯೂ ಕೂಡ ಒಂದು ಕೊಡುಗೈ ದಾನದ ಕುಟುಂಬವಿದೆ ಎಂದು ನನಗೆ ತಿಳಿದದ್ದು ಶ್ರೀಯುತ ವೀರೇಶ್ ಅಂಗಡಿ ಸರ್ ರವರು ನಮ್ಮ ಮನೆಯ ಗೃಹಪ್ರವೇಶದ ಸಮಾರಂಭಕ್ಕೆ ಬಂದು ಶುಭಕೋರಿ ‘ಪ್ರಸಿದ್ಧ ಪರ್ವ’ (ತಿರು ಸಿದ್ಧ ಪರ್ವಗಳ ವಿಹಂಗಮ ನೋಟ ) ಪುಸ್ತಕ ನೀಡಿದಾಗಲೆ ನನಗೆ ತಿಳಿದದ್ದು.
ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಒಬ್ಬ ವ್ಯಕ್ತಿಯನ್ನು ಅದರಲ್ಲೂ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಪರ್ವತಕ್ಕೆ ಹೋಲಿಸಿ ಮಾತನಾಡುವುದು ಎಂದರೆ ಸುಲಭದ ಮಾತಲ್ಲ.
ಶ್ರೀಯುತ ಕೆ.ಯಂ ವೀರೇಶ್ ಲೇಖಕರು ಈ ಪುಸ್ತಕಕ್ಕೆ ಪ್ರಸಿದ್ಧ ಪರ್ವ ಎಂಬ ತಲೆಬರಹನ್ನು ಏಕೆ ನೀಡಿದರು ಎಂಬುದು ನನಗೆ ತಿಳಿದಿರಲಿಲ್ಲ ಮುಖಪುಟದ ಮೇಲಿರುವ ಸಿದ್ದಣ್ಣ ರವರ ಅಂಗಡಿರವರ ಭಾವಚಿತ್ರವನ್ನು ನೋಡಿದಾಗಲೇ ಒಂದು ರೀತಿಯ ಸೆಳೆತಕ್ಕೊಳಗಾದೆ ಆ ಮುಖದಲ್ಲಿರುವ ತೇಜಸ್ಸು ಅಂತದ್ದು ಬುದ್ದನ ನಗೆಗೆ ಸನಿಹವಿರುವ ನಗುವದು ಆ ಕಣ್ಣುಬ್ಬುಗಳು, ಆ ಚೆಂದದಣೆ, ಕುಡಿಮೀಸೆ,ಬಟ್ಟಲುಗಣ್ಣು, ಹರವಾದ ಹಣೆ, ಅನಂತತೆಯತ್ತ ಸಾಗುತ್ತಿರುವ ಆ ಮುಗುಳ್ನಗು ಓದುಗರನ್ನು ಒಂದರಗಳಿಗೆ ಧ್ಯಾನಿಸದೆ ಬಿಡುವುದಿಲ್ಲ ಅಂತಹ ತೇಜಸ್ಸು ಎಲ್ಲರಲ್ಲಿಯೂ ಬರುವುದಿಲ್ಲ ಸಿರಿವಂತಿಕೆಯನ್ನು ಮೀರಿ ಹೃದಯವಂತಿಕೆ ಮೈದಾಳಿದ ವ್ಯಕ್ತಿಯಲ್ಲಿ ಮಾತ್ರ ಆ ದಿಗಂತದ ತೇಜಸ್ಸು ಒಡಮೂಡಲು ಸಾಧ್ಯ.
“ಮಾವಿನ ಮರದಲ್ಲಿ ಮಾವಿನ ಹಣ್ಣೆ ಬಿಡುವುದು ” ಎಂಬಂತೆ ತಂದೆ ತಿರುಕಪ್ಪನವರ ಗುಣಗಳ ಪಡಿಯಚ್ಚಿನಂತೆಯೇ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವ ಸಾಗಿ ಬಂದಂತೆ ಕಾಣುತ್ತದೆ ತಿರುಕಪ್ಪನವರ ತೋಟದ ಗರಿಗಳು, ತೆಂಗಿನಕಾಯಿಗಳು ಊರ ತೆಂಗಿನಕಾಯಿಗಳು ಕೂಡ್ಲಿಗಿ ತಾಲೂಕಿನ ಸುತ್ತಹತ್ತಳ್ಳಿಗೆ ಹೇರಳವಾಗಿ ನೀಡುತ್ತಿದ್ದರು ಎಂದು ಆರಂಭಗೊಳ್ಳುವ ಕಥೆ ನಿಜಕ್ಕೂ ನಮ್ಮೂರಿನ ನೀರಾವರಿ ಚಿತ್ರಣದ ಮೇಲೆ ಕನ್ನಡಿ ಹಿಡಿದಂತಿದೆ ಏಕೆಂದರೆ ಊರಿಗೊಂದಿರುವುದೇ ಹೆಚ್ಚು ಇದ್ದರೂ ಶುಭಕಾರ್ಯಗಳಿಗೆ ಗರಿ ತೆಂಗಿನಕಾಯಿಗಳನ್ನು ಉದಾರತೆಯಿಂದ ನೀಡುವ ಮನಸ್ಸು ಸಿಗುವುದು ವಿರಳ.
ಲೇಖಕರು ಬರೆದಿರುವಂತೆ “ಒಂದು ಮಂಗಳ ಕಾರ್ಯಕ್ಕೆ ನಮ್ಮ ತೋಟದ ಗರಿಗಳು ಒಂದು ಸಾರ್ಥಕ ಕೆಲಸಕ್ಕೆ ಉಪಯೋಗವಾದರೆ ಅದು ನಮ್ಮ ಸೌಭಾಗ್ಯವಲ್ಲವೇ ಈ ಕಾರ್ಯದಿಂದ ನಮ್ಮ ಮನೆತನಕ್ಕೆ ಒಳ್ಳೆಯ ಹೆಸರು ಬರುತ್ತದೆ ಇದ್ದುದರಲ್ಲಿ ಕೊಡುವುದರಲ್ಲಿ ನನ್ನ ಗಂಟೇನು ಕರಗುವುದು, ಕೊಡುವ ದಾನ ಮಾಡಿದ ಸಹಾಯ ನಮಗೆ ನೆನಪಿರದಿದ್ದರೆ ಸಾಕು” ಎಂದು ಹೇಳುವ ತಿರುಕಪ್ಪನ ಮಾತಿನಲ್ಲಿ ಎಷ್ಟೋಂದು ನಿಸ್ವಾರ್ಥ ಮನಸ್ಸಿದೆ ಎಂಬುದು ಓದುಗರಿಗೆ ತಿಳಿಯುತ್ತದೆ.
ದೈವಾನುಗ್ರಹದಂತೆ 7 ಮಕ್ಕಳ ತೀರುವಿಕೆಯಿಂದ 8 ನೇ ಮಗನಾಗಿ ಜನಿಸಿದ ಶ್ರೀಯುತ ಸಿದ್ದಣ್ಣ ಅಂಗಡಿಯವರು ಶ್ರೀಕೃಷ್ಣನಂತೆ ಜನಿಸಿದರು ನಿಂಗಮ್ಮ ಪಾಲನೆ ಪೋಷಣೆ ನಡೆಸಿದರು ಸಮಾರ್ಧ ಆಸ್ತಿಯನ್ನು ತಿರುಕಪ್ಪ ಸೋದರಳಿಯನಿಗೆ ನೀಡಿದರು ಎಂಬ ಸಂಗತಿಗಳಲ್ಲಿ ಸಿದ್ದಣ್ಣ ಅಂಗಡಿಯವರ ಮೇಲಿದ್ದ ತಿರುಕಪ್ಪನವರ ಪುತ್ರ ಪ್ರೇಮ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯಾನಂತರದ ದಿನಗಳ ಕೂಡ್ಲಿಗಿ ತಾಲೂಕಿನ ಚಿತ್ರಣವನ್ನು ಓದುಗರಿಗೆ ತಿಳಿಸಿಕೊಡುವಲ್ಲಿ ಲೇಖಕರು ಸಫಲತೆಯನ್ನು ಸಾಧಿಸಿದ್ದಾರೆ. ಆ ಕಾಲದಲ್ಲಿಯೇ ಸಿದ್ದಣ್ಣರವರು ವಿದೇಶಿ ರಷ್ಯಾ ಕ್ಯಾಮೆರಾ ಬಳಸುತ್ತಿದ್ದರು ಹಾಗೂ ಅತ್ಯುತ್ತಮ ಫೋಟೋಗ್ರಾಫರ್ ಆಗಿದ್ದರು ಎಂಬುದು ಕಥೆಯ ಮತ್ತೊಂದು ವಿಶೇಷ.
ತಂದೆಗೆ ತಕ್ಕ ಮಗನಂತೆಯೆ ಸಿದ್ದಣ್ಣ ಅಂಗಡಿಯವರು ಕೂಡ ಮೇರು ವ್ಯಕ್ತಿತ್ವದವರು ಯಾವುದನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳದೆ ಆರೋಗ್ಯ ಸರಿ ಇದ್ದರೆ ಸಾಕು ಎಂಬ ಮನೋಭಾವದಿಂದ ಪಿತರಂತೆ ದಾನ ಧರ್ಮ ಮುಂದುವರೆಸಲು ಗುರುಗಳಾದ ಶ್ರೀ ಬಿಂದು ಮಾಧವ ರಾವ್ ರ ದೈಹಿಕ ತರಬೇತಿ ಸಧೃಡ ದೇಹ ನಿರ್ಮಾಣ ಇವೆಲ್ಲವೂ ಬಾಲ್ಯದಿಂದಲೇ ಒಂದು ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣವಾಗುವಲ್ಲಿ ತಿರುಕಪ್ಪನವರ ಅತಿಯಾದ ಮುದ್ದಿಲ್ಲದ ಅತೀ ಸೂಕ್ಷ್ಮವೂ ಅಲ್ಲದ ವಾತಾವರಣ ನಿರ್ಮಿಸಿಕೊಟ್ಟ ತಂದೆಯ ಜವಾಬ್ದಾರಿ ಗುರುತರವಾದದ್ದು ಮನೆಯಲ್ಲಿ ಸಾಕಷ್ಟು ಆಳು ಕಾಳು ಮೃಷ್ಟಾನ್ನ ಭೋಜನವಿದ್ದರೂ ಒಂದಿಷ್ಟು ಅಹಂಕಾರದ ವ್ಯಕ್ತಿತ್ವ ಮೈದಾನದ ತಂದೆಯ ಕಾಲಾಂತರದಲ್ಲಿಯೂ ಕೂಡಾ ಮನೆತನದ ದಾನ ಧರ್ಮಗಳನ್ನು ಮುಂದುವರೆಸಿಕೊಂಡು ಹೋಗುವ ಸಿದ್ದಣ್ಣ ಅಂಗಡಿಯವರವರ ಮನೋವೈಶ್ಯಾಲ್ಯತೆಯನ್ನು ಓದುಗರು ಅರಿಯಬೇಕು.
ತಿರುಕಪ್ಪನವರ ಏಕಮಾತ್ರ ಪುತ್ರ ಸಿದ್ದಣ್ಣ ಅಂಗಡಿಯವರು ಒಬ್ಬನೇ ಪುತ್ರನಾಗಿದ್ದು ಸಾಕಷ್ಟು ಆಸ್ತಿ ಅಡುವು ಇದ್ದ ಕಾರಣ ಸರ್ಕಾರಿ ನೌಕರಿ ಚಾಕರಿ ಗೊಡವೆ ಏಕೆಂದು ಪುತ್ರ ಪ್ರೇಮ ಮೆರೆದರು ಸರ್ಕಾರಿ ಶಿಕ್ಷಕ ವೃತ್ತಿ ತನ್ನೂರಿನಲ್ಲಿಯೇ ದೊರೆತಾಗ ಸ್ವತಃ ತಿರುಕಪ್ಪನವರೆ ಮಗನನ್ನು ಸೇವೆಗೆ ಸೇರಿಸುವ ಜಾಣ್ಮೆ ಮೆಚ್ಚುವಂತದ್ದು.
ಅಲ್ಲದೆಯೂ ಪುಸ್ತಕ ರಚನೆಗೆ ಕೂಡ್ಲಿಗಿ ತಾಲೂಕಿನ ರಾಜಕಾರಣಿಗಳ, ಕಲಾವಿದರ, ಸಿದ್ದಣ್ಣ ಅಂಗಡಿಯವರ ಸಹಪಾಠಿಗಳ,ಸ್ನೇಹಿತರ, ಶಿಷ್ಯರ ಹಾಗೂ ಕಲಾವಿದರ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಪುಸ್ತಕದಲ್ಲಿ ದಾಖಲಿಸಿರುವುದು ಸಿದ್ದಣ್ಣ ಅಂಗಡಿಯವರ ಸಾಮಾಜಿಕ,ರಾಜಕೀಯ ಹಾಗೂ ಸಮಾಜಮುಖಿ ಸಂಘಟನೆಯ ಸಾಮರ್ಥ್ಯ ಮೇಲೆ ನೈಜತೆಯ ಕನ್ನಡಿ ಹಿಡಿದಂತಿದೆ ಅಷ್ಟೇಲ್ಲಾ ಸಂಘಟನೆ ಇದ್ದರೂ ಸಿದ್ಧಣ್ಣರವರಾಗಲಿ ಅವರ ಕುಟುಂಬದವರನ್ನಾಗಲಿ ರಾಜಕೀಯ ಗಾಳಿ ಸೋಕದಿರುವುದು ಈ ಕುಟುಂಬದ ಶಕ್ತಿ ಹಾಗೂ ಈ ದೃಷ್ಟಿಯಿಂದ ನೋಡಿದರೆ ಸಿದ್ದಣ್ಣ ಅಂಗಡಿಯವರು ಬರೀ ವ್ಯಕ್ತಿಯಲ್ಲ ಶಕ್ತಿಯಾಗಿ ಹೊರಹೊಮ್ಮಿದ್ದಾರೆ.
ತನ್ನ ಗೆಳೆಯರ ಬಳಗದವರೊಂದಿಗೆ ರಾಜಕೀಯ ಮುತ್ಸದ್ದಿಗಳೊಂದಿಗೆ ಒಂದು ಪದವಿ ಪೂರ್ವ ಕಾಲೇಜು ನಮ್ಮ ತಾಲ್ಲೂಕಿನಲ್ಲಿ ಸ್ಥಾಪಿಸಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಶಾಸಕರೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳ ಸಮ್ಮತಿ ಸಿಕ್ಕಾಗ ಕಟ್ಟಡ ನಿರ್ಮಾಣಕ್ಕೆ ಭೂಮಿಯ ಸಮಸ್ಯೆಯಾದಾಗ ಕೋಟ್ಯಾಂತರ ರೂಪಾಯಿ ಮೌಲ್ಯದ 7 ಎಕರೆ ಜಾಗವನ್ನು ಸರ್ಕಾರಕ್ಕೆ ಭೂದಾನ ಮಾಡಿದ ಕೂಡ್ಲಿಗಿ ತಾಲೂಕಿನ ಕರ್ಣ ಸಿದ್ದಪ್ಪ ಅಂಗಡಿಯವರ ಹಾಗೂ ಅವರ ಮನೆತನದ ಈ ಎದೆಗಾರಿಕೆಯ ನಿಲುವನ್ನು ಸ್ಮರಿಸದೆ ಹೋದರೆ ದೇವರು ಮೆಚ್ಚಲಾರ ಇಷ್ಟಲ್ಲದೆಯೂ ವಿದ್ಯಾರ್ಥಿ ನಿಲಯಗಳಿಗೆ ಆ ಕಾಲದಲ್ಲಿ ಪ್ರಸಾದ ವ್ಯವಸ್ಥೆ ಮಾಡಿದಂತಹ ಪುಣ್ಯಾತ್ಮ ಸಿದ್ದಣ್ಣ ಅಂಗಡಿಯವರು ತಮ್ಮ ಕೈಲಾದ ಆರ್ಥಿಕ ಸಹಾಯವನ್ನು ಕೂಡ ಬಡ ಮಕ್ಕಳಿಗೆ ಮಾಡಿದ್ದರು ಎಂಬುದನ್ನು ಕೂಡ್ಲಿಗಿ ತಾಲೂಕಿನ ಬಲ್ಲವರು ಹೃದಯ ತುಂಬಿ ಹೇಳುತ್ತಾರೆ.
ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ 144 ಸೆಕ್ಷನ್ ಜಾರಿಯಾಗಿ ಸುಮಾರು 800 ಕ್ಕೂ ಅಧಿಕ ಮಂದಿ ಜೈಲಾದಾಗ ನ್ಯಾಯಾಲಯದಲ್ಲಿ ಜಾಮೀನು ನೀಡಿ ನ್ಯಾಯಾಧೀಶರ ಹುಬ್ಬೇರಿಸುವಂತೆ ಮಾಡಿ ಔದಾರ್ಯ ಮೆರೆದು ಇಂದಿಗೂ ಆ ಎರಡು ಗುಂಪಿನ ನಡುವೆ ಘರ್ಷಣೆಯಾಗದಂತೆ ಸಿದ್ದಣ್ಣ ಅಂಗಡಿಯವರ ಆ ಘಟನೆಯೇ ಕಾರಣ ಎಂಬುದನ್ನು ಆ ಪ್ರಕರಣದಿಂದ ಮುಕ್ತರಾದವರು ಹೇಳಿರುವುದು ಪುಸ್ತಕದಲ್ಲಿ ದಾಖಲಾಗಿದ್ದು ನಿಜಕ್ಕೂ ಈ ನಿಲುವಿನ ಹಿಂದೆ ಅವರಲ್ಲಿದ್ದ ತನ್ನೂರಿನ ಅಭಿಮಾನ ಹಾಗೂ ನಾಯಕತ್ವದ ಗುಣದ ಅರಿವು ನಮಗಾಗುತ್ತದೆ ಅಲ್ಲಲ್ಲಿ ರಾಮಕೃಷ್ಣ ಹೆಗಡೆಯವರ ರಾಜಕೀಯ ವಿಚಾರಗಳು ಬರುತ್ತಲೇ ಕೂಡ್ಲಿಗಿ ತಾಲೂಕಿನ ಆ ಕಾಲದ ರಾಜಕೀಯ ಚೀತ್ರಣದ ಅರಿವು ನಮನ್ನು ಕಾಡದೆ ಬಿಡುವುದಿಲ್ಲ.
ಕೂಡ್ಲಿಗಿ ತಾಲೂಕಿನ ಚಿತಾಭಸ್ಮದ ಹಿನ್ನೆಲೆ ನನಗಲ್ಲದೆ ಬಹುಶಃ ಕೂಡ್ಲಿಗಿ ತಾಲೂಕಿನ ಬಹುತೇಕ ಯಾರಿಗೂ ತಿಳಿದಿರುವುದಿಲ್ಲ ಎಂಬುದು ನನ್ನ ಭಾವನೆ ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದಲ್ಲಿ ಮೊಳಗುತ್ತಿದ್ದ ರಾಷ್ಟ್ರಗೀತೆ ಹಾಡುಗಳು ಗೀತೆಗಳು ಆಗ ತಾನೆ ಸ್ವಾತಂತ್ರ್ಯ ಬಂದಿದ್ದರಿಂದ ಅದೊಂದು ತರಹದ ನಿತ್ಯ ಸ್ವಾತಂತ್ರ್ಯ ದಿನಾಚರಣೆ ರೀತಿ ಇತ್ತು ಎನ್ನುವ ಹಾಗೆ ರಾಷ್ಟ್ರೀಯ ಹಬ್ಬಗಳು ಬಂದರೆ ಸಾಕು ಸಿದ್ದಣ್ಣ ಅಂಗಡಿಯವರು ತಯಾರಾಗಿ ದೇಶಭಕ್ತಿ ಗೀತೆಗಳನ್ನು ಹಾಡುತ್ತಿದ್ದ ರೀತಿ ರಿವಾಜುಗಳು ಹಾಗೂ ಬಿಂದು ಮಾಧವ್ ರಾಯ್ ರ ಗಾಂಧೀಜಿ ಅಭಿಮಾನಿಗಳ ಸಂಘದ ಮೂಲಕ ಸಿದ್ದಣ್ಣ ಅಂಗಡಿಯವರು ಗೋಡ್ಸೆ ಗಾಂಧೀಜಿಯವರನ್ನು ಕೊಂದಾಗ ಕಷ್ಟಪಟ್ಟು ಭಸ್ಮವನ್ನು ತಂದು ಹುತಾತ್ಮ ಮಹಾತ್ಮ ಗಾಂಧಿಯವರ ಚಿತಾಭಸ್ಮವನ್ನು ಸ್ಥಾಪಿಸಿದ ಕೀರ್ತಿ ಸ್ವಾತಂತ್ರ್ಯ ಹೋರಾಟದ ಕುರುವಾಗಿ ಕೂಡ್ಲಿಗಿ ಮತ್ತು ಭಾರತದ ಸ್ವಾತಂತ್ರ್ಯದ ಹೋರಾಟದ ದಿನದ ಸಂಬಂಧಗಳ ಮೇಲೆ ಬೆಳಕು ಚೆಲ್ಲುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಇಷ್ಟಲ್ಲದೆಯೂ ರಕ್ತರಾತ್ರಿ ನಾಟಕದ ಮೂಲಕ ತಾವೇ ಶಕುನಿ ಪಾತ್ರ ಮಾಡಿ ಬಂದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡುವ ಅವರ ಕಾಯಕದಲ್ಲಿ ಅದೆಷ್ಟು ನಾಡ ಪ್ರೇಮವಿದೆಯೆಂಬುದನ್ನು ನಾವೆಲ್ಲರೂ ಅಲ್ಲಗಳೆಯುವಂತಿಲ್ಲ.
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುವಂತೆ ಶ್ರೀಯುತ ದಿವಂಗತ ಸಿದ್ದಣ್ಣ ಅಂಗಡಿಯವರ ಹೆಂಡತಿಯ ಪ್ರೇರಣೆ ಆ ತಾಯಿ ಕಾಸಿನಗಲ ಹಣೆಯ ಮೇಲೆ ಇಡುತ್ತಿದ್ದ ಹಣೆಯ ಕುಂಕುಮ ಹಾಗೂ ಹುಣಸೆ ಹಣ್ಣಿನ ಬೀಜವನ್ನು ಬೇರ್ಪಡಿಸಲು ಬರುತ್ತಿದ್ದ ಆಳುಗಳೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ ಕೆಲಸದವರ ಮಕ್ಕಳುಗಳಿಗೆ ಹಾಲು ಬಿಸ್ಕೇಟ್ ನೀಡಿ ಸತ್ಕರಿಸಿ ವಿಶ್ವಾಸದಿಂದ ಕೆಲಸ ತೆಗೆದುಕೊಳ್ಳುತ್ತಿದ್ಧ ರೀತಿ ನಿಜಕ್ಕೂ ಅನುಕರಣೀಯ.
ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವಕ್ಕೆ ಪ್ರೇರಣೆ ನೀಡುವಂತಹ ಮಡದಿ ಇದೇ ಅಲ್ಲವೇ ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುವುದು ಶಿವಂಗೆ. ಹಾಗೂ ಯಾರೆ ಅತಿಥಿಗಳು ಮನೆಗೆ ಬಂದರೂ ಅತಿಥಿ ಸತ್ಕಾರ ಮಾಡುವುದು ಒಂದು ದಿನವೂ ಬೆಣ್ಣೆ ತುಪ್ಪವಿಲ್ಲದೆ ಊಟ ಮಾಡುತ್ತಿದ್ದ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವದಲ್ಲಿ ಮಾತ್ರ ಸಾತ್ವಿಕ ಗುಣವೆ ಬಂದದ್ದು ದೈವಾನುಗ್ರಹವಲ್ಲವೇ? ತೋಟದಲ್ಲಿ ಬೆಳೆದ ಮಾವಿನ ಹಣ್ಣಿಗಳನ್ನು ಓಣಿಯ ಮಂದಿಗೆ ಸ್ನೇಹಿತರಿಗೆ ಹಂಚಿ ತಿನ್ನುವ ಗುಣ ನಿಜಕ್ಕೂ ಶ್ಲಾಘನೀಯ.
ಹೀಗೆಯೇ ತಮ್ಮ ತಂದೆ ಕಟ್ಟಿದ್ದ ಮನೆಯಲ್ಲಿ ತಮ್ಮ ತಂದೆಯಂತೆಯೇ ನೀವು ದಾನ ಧರ್ಮಗಳನ್ನು ಮಾಡಿ ಈ ಬದುಕು ನಶ್ವರ ಕೊಟ್ಟು ಕೊರಗಬೇಡಿ ನಿಮ್ಮಿಷ್ಟದಂತೆ ಬದುಕಿ ಎಂದು ಹೋದ ವರುಷ ದೈವಾದೀನರಾದರು ಎಂದು ಶ್ರೀಯುತ ವೀರೇಶ್ ಅಂಗಡಿ ಸರ್ ಸಿದ್ದಣ್ಣ ಅಂಗಡಿಯವರ ತೃತೀಯ ಪುತ್ರ ಗದ್ಗದಿತರಾಗಿ ಹೇಳುವಲ್ಲಿ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವ ನಮ್ಮ ಕಣ್ಮುಂದೆ ಕಟ್ಟಿ ನಿಲ್ಲುತ್ತದೆ ಶ್ರೀಯುತರು ಶತಾಯುಷಿಗಳಾಗಬೇಕಿತ್ತು ಆದರೆ ದೈವಾನುಗ್ರಹವೇನಿದೆಯೋ ಯಾರು ಬಲ್ಲರು.
ಹೂಂ… ಇರಲಿ ಶ್ರೀಯುತ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವ ನಮ್ಮ ಕೂಡ್ಲಿಗಿ ತಾಲೂಕಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತದ್ಧು ಈ ಪುಸ್ತಕವನ್ನು ನಮ್ಮ ನಾಡಿನ ಮೂಲೆ ಮೂಲೆಗು ತಲುಪಿಸಬೇಕೆಂಬ ನನ್ನ ವೈಯಕ್ತಿಕ ಮನವಿಯನ್ನು ವೀರೇಶ್ ಅಂಗಡಿ ಸರ್ ರವರಲ್ಲಿಡುತ್ತಾ ಸಿದ್ದಣ್ಣ ಅಂಗಡಿಯವರ ವ್ಯಕ್ತಿತ್ವವನ್ನು ನಾನು ಕೊಂಚ ಮಟ್ಟಿಗೆ ವೀರೇಶ್ ಅಂಗಡಿ ಸರ್ ರವರಲ್ಲಿ ಕಂಡೆ ಈ ಸಿದ್ದಣ್ಣ ಅಂಗಡಿಯವರ ಕುಟುಂಬಕ್ಕೆ ಇನ್ನಷ್ಟು ದಾನ ಧರ್ಮ ಮಾಡುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂಬುದು ನನ್ನ ಮನದಾಸೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243