ದಿನದ ಸುದ್ದಿ
ಮತ್ತೆಲ್ಲಿಯ ನ್ಯಾಯ !? ಯಾರಿಗೆ ನ್ಯಾಯ ?
- ಕಾರ್ತಿಕ್ ಬೆಳಗೋಡು ಅವರ ಫೇಸ್ಬುಕ್ ವಾಲ್ನಿಂದ
ಪ್ರಿಯಾಂಕ ರೆಡ್ಡಿ ಎಂಬ ಹುಡುಗಿಯ ದಾರುಣ ಕೊಲೆಯ ಸುದ್ದಿ ನೋಡಿದಾಗ ‘ಅಯ್ಯೋ ಛೇ…’ ಎನಿಸುವ ಬದಲು ತೀವ್ರ ಆತಂಕವಾಗುತ್ತಿದೆ. ಈ ದೇಶ ಈ (ಅ)ನಾಗರಿಕ ಜಗತ್ತು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಆತಂಕ ಕಾಡುತ್ತಿದೆ. ಇತ್ತೀಚೆಗೆ ಗೆಳೆಯರೊಬ್ಬರು ಕುಟುಂಬ ಸಮೇತ ಜರ್ಮನಿಗೆ ವಲಸೆ ಹೋದರು. ಅವರು ಅಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಅವರಿಗಲ್ಲಿನ ನಾಗರಿಕತ್ವ ದೊರೆತಿದೆ.
ಅವರೊಂದಿಗೆ ಮಾತನಾಡಿದಾಗ ‘ ಅಯ್ಯೋ ದೇಶಭಕ್ತಿ , ಊರಿನ ಮೇಲಿನ ಪ್ರೀತಿ ಎಂದೆಲ್ಲಾ ಯೋಚಿಸಿದರೆ ಈ ಕೆಟ್ಟ ವ್ಯವಸ್ಥೆಯೊಳಗೆ ಕೊಳೆತುಹೋಗ್ಬೇಕಾಗುತ್ತೆ ಈ ಭ್ರಷ್ಟ ವ್ಯವಸ್ಥೆ , ಈ ಶಿಕ್ಷಣ, ಆರೋಗ್ಯ ಸಂಸ್ಥೆಗಳ ಸುಲಿಗೆ ಅದರೊಂದಿಗೆ ಮೃಗಗಳಂತೆ ವರ್ತಿಸುವ ಈ ಜನ. ನನಗಿರೋದು ಇಬ್ಬರು ಹೆಣ್ಣು ಮಕ್ಕಳು ಅವರನ್ನು ಈ ಕೆಟ್ಟ ಸಮಾಜದೊಳಗೆ ಬೆಳೆಸಲು ಆತಂಕವಾಗುತ್ತದೆ. ಆ ದೇಶ ಎಲ್ಲಾ ದೃಷ್ಟಿಯಿಂದಲೂ ನಮಗೆ ಸುರಕ್ಷಿತ ಎನಿಸುತ್ತಿದೆ.’ ಎಂದಿದ್ದರು. ದೇಶಭಕ್ತಿ ಬದನೇಕಾಯಿ ಎಂದೆಲ್ಲಾ ಭ್ರಮೆಯಿಂದ ಬಡಬಡಿಸದೆ ಒಂಚೂರು ವಾಸ್ತವದ ನೆಲೆಯಲ್ಲಿ ನಿಂತು ಯೋಚಿಸಿದರೆ ಅವರ ಮಾತಿನಲ್ಲೂ ಹುರುಳಿದೆ ಎನ್ನಿಸುತ್ತದೆ.
ನಮ್ಮ ಜನಗಳ್ಯಾಕೆ ದಿನದಿನಕ್ಕೂ ಇಷ್ಟೊಂದು ಕ್ರೂರಿಗಳಾಗುತ್ತಿದ್ದಾರೆ. ? ನಮ್ಮನ್ನು ಅಡರಿಕೊಂಡಿರುವ ಪುಗಸಟ್ಟೆ ತಂತ್ರಜ್ಞಾನ ಕಾರಣವಾ ? ತಂತ್ರಜ್ಞಾನದ ಬಳಸುವ ಕುರಿತಾಗಿರುವ ಅಜ್ಞಾನ ಕಾರಣವಾ ? ಅಥವಾ ಮಾನಸಿಕತೆಗೆ ತಗುಲಿರುವ ಕೆಟ್ಟ ವ್ಯಾಧಿ ಕಾರಣವಾ ? ಇವುಗಳಿಂದ ಹೊರಬರುವ ದಾರಿ ಯಾವುದು ? ಏನೊಂದೂ ಅರ್ಥವಾಗುತ್ತಿಲ್ಲ. ಎಲ್ಲಾ ಮಸುಕು ಮಸುಕಾಗಿದೆ.
ನಿರ್ಭಯಾ ಅತ್ಯಾಚಾರಿಯನ್ನು ಅಪ್ರಾಪ್ತ ಎನ್ನುವ ಕಾರಣಕ್ಕೆ ಕೋರ್ಟು ಬಿಟ್ಟು ಕಳಿಸಿತು. ಈ ಹುಡುಗಿಯನ್ನು ದಾರುಣವಾಗಿ ಕೊಂದವರೂ ನಾಳೆ ಸಾಕ್ಷಿ ಕೊರತೆಯಿಂದ ಹೊರ ಬರಬಹುದು. ಅಂಥವರನ್ನು ಹೊರತರಲೂ ನ್ಯಾಯವಾದಿಗಳು ಸಿದ್ದವಾಗುತ್ತಾರೆ ಕೇಳಿದರೆ ‘ವೃತ್ತಿಧರ್ಮ’ ಎನ್ನುತ್ತಾರೆ.! ಧರ್ಮ…!!!?? ವೃತ್ತಿಯಷ್ಟೇ…
ಮತ್ತೆಲ್ಲಿಯ ನ್ಯಾಯ !? ಯಾರಿಗೆ ನ್ಯಾಯ ?
ಜಡ್ಡುಗಟ್ಟಿ ನಿಂತಿರುವ ನಮ್ಮ ದೇಶದ ವ್ಯವಸ್ಥೆ ಯಾಕೋ ತುಂಬಾ ಅಸಹನೀಯವೆನಿಸುತ್ತಿದೆ. ನಮ್ಮಿಂದ ಈ ಜಡವನ್ನು ಕರಗಿಸಲು ಸಾಧ್ಯವಾ… ? RIP , I AM WITH ಎಂದು ಕಂಡಕಂಡಲ್ಲಿ ಬರೆದುಕೊಳ್ಳುವ ಹೊರತಾಗಿ…
ತುಂಬಾ ನೋವಾಗುತ್ತಿದೆ…
ಸುದ್ದಿದಿನ.ಕಾಂ|ವಾಟ್ಸಾಪ್|9980346243