ಲೋಕಾರೂಢಿ

ಎಣ್ಣೆ ಇಲ್ಲರೀ, ರಾಮರಸ ಐತ್ರಿ..!

Published

on

  • ಸೋಗಿ ವಿಶ್ವನಾಥ, ಪತ್ರಕರ್ತರು

ದೇಶವನ್ನೆ ತಲ್ಲಣಗೊಳಿಸಿದ ಲಾಕ್ಡೌನ್ ನಡುವೆಯೇ ಹಳ್ಳಿಯಿಂದ ಪಟ್ಟಣಕ್ಕೆ ಆಗಮಿಸಿದ್ದ ವ್ಯಕ್ತಿ ನನಗೆ ಸಿಕ್ಕಿದ್ದ. ನಾನು ಸುಮ್ನೆ ಅವರನ್ನೊಮ್ಮೆ ಮಾತನಾಡಿಸಿದೆ, ‘ನಿಮ್ಮೂರಾಗ ಹೆಂಗೈತೆ’ ಅಂತ ಕೇಳಿದೆ, ಅದಕ್ಕೆ ಆ ವ್ಯಕ್ತಿ ಹೇಳಿದೆ, ನಮ್ಮೂರಾಗ ಎಲ್ಲ ಸಿಗ್ತೈತೆ ಬೆಳಿಗ್ಗೆ 12 ಗಂಟೆ ತನಕ ಹೋಟೆಲ್, ಕಿರಾನಿ ಅಂಗಡಿ, ಗುಳಿಗಿ, ಕಡ್ಡಿ ಪಟ್ಣದ ಅಂಗಡಿ ತೆಗೆತಾವು, ನಮ್ಗೇನು ಸಮಸ್ಯೆ ಇಲ್ಲ ಬಿಡಿ ಸರ್ ಅಂದ’.

ಎಲ್ಲ ಸಿಗ್ತಾವ ಅಂದ್ರ ಪ್ಯಾಟೆಗೆ ಬಂದಿದ್ದು ಯಾಕ ? ಅಂತ ಮರು ಪ್ರಶ್ನೆ ಮಾಡಿದೆ, ಅದಕ್ಕೆ ಆತ ಅರ್ಧ ಗಂಟೆ ಹೇಳಿದ ಕಥೆ ನನಗೆ ಮೈ ಜುಮ್ಮೆನಿಸಿತು. ಆ ವ್ಯಕ್ತಿ ಹೇಳಿದ ಸರ್ ಲಾಕ್ ಡೌನ್ ಆಗುವುದಕ್ಕಿಂತ ಮುಂಚೆ ನಾನು ದಿನಾಲು ಲೈಟಾಗಿ ಮಧ್ಯಪಾನ ಮಾಡ್ತಾ ಇದ್ದೆ. ಅಂಗಡಿಗಳು ಬಂದ್ ಆದಮೇಲೆ ಒಂದು ವಾರ ಯಾವ ಚಿಂತೆ ಇರಲಿಲ್ಲ, ಮೂರು ಪಟ್ಟು ಹೆಚ್ಚಿಗೆ ಹಣಕೊಟ್ಟು ಸಿಕ್ಕಿದ್ದ ಎಣ್ಣೆ ಕುಡಿತಿದ್ದೆ.

ಈಗ ಒಂದು ವಾರದಿಂದ ನನಗೆ ಯಾವ ಎಣ್ಣೆ ಸಿಕ್ಲಿಲ್ಲ, ಅದಕ್ಕೆ ಸಿಟ್ಯಾಗ ಸಿಗುತ್ತೆ ಅಂತಾ ಹೇಳಿದ್ರು ಬಂದೆ. ಆದರೆ ಇಲ್ಲಿ ತುಂಬಾ ದುಬಾರಿ ಎಣ್ಣೆ ಬಿಡ್ರಿ. ನಾನು ವಾಪಾಸು ಹೊಂಟಿನ್ರಿ,, ಕೊನೆಗೆ ರಾಮರಸನಾದ್ರು ಸಿಗುತ್ತೆ ಅಂತಾ ಹೇಳಿದೆ. ರಾಮರಸ ಅಂದ್ರೆ ಏನಣ್ಣ ? ಅಂತ ರೈತನ ಕೈಹಿಡಿದು ಪ್ರಶ್ನೆ ಮಾಡಿದೆ, ಅದಕ್ಕೆ ರೈತ, ಸರ್,, ಎಣ್ಣೆ ಸಿಕ್ಕಿಲ್ಲ ನೋಡ್ರಿ, ನಮ್ಮೂರ್ಯಾಗ ಒಂದು ವಾರಿಗೆ ಹುಡುಗ್ರು ಒಂದು ಲೀಟರ್ ಹಾಲು, ಗೋಡಂಬಿ, ಒಣದ್ರಾಕ್ಷಿ, ಇನ್ನೊಂದು ಎರಡು-ಮೂರು ಪದಾರ್ಥ ತಗೊಂಡು ಹೊಲ್ದಾಕ ಹೊಕ್ಕಿವಿ.

ಅಲ್ಲಿ ಒಲೆ ಹೂಡಿ, ಪಾತ್ರೆಯಲ್ಲಿ ಚೆನ್ನಾಗಿ ಕುದಿಸಿ ಅದಕ್ಕೆ ಗೋಡಂಬಿ, ದ್ರಾಕ್ಷಿ ಹಾಕ್ತೇವ್ರಿ,, ನಮ್ಮುಡುಗ್ರು ಕಾಡಿನಲ್ಲಿ ಸಿಗೋ ಅದು ಎಂತದೊ ಸೊಪ್ಪು ಹಾಕಿ ಅರ್ಧ ಹೊತ್ತು ಕುದಿಸ್ತಾರೆ, ಅದನ್ನು ಸೊಸಿಗೊಂಡ ಕುಡಿ ಬೇಕ್ರಿ ಮಜಾನೆ ಬೇರೆ ಬಿಡ್ರಿ.. ಎಣ್ಣೆ ಹೊಡದಾಗಿನ ನಿಶೆಗಿಂತ, ಇದೆ ಬಹಳ ಚೆನ್ನಾಗಿರುತ್ತಿ.

ಮೊನ್ನೆ ಈಂಗ ನಮ್ಮ ಹೊಲ್ದಾಕ ಹೋಗಿದ್ದೇವೆನ್ರಿ,, ಅಲ್ಲಿ ಮೂರು ಜನ ಇದ್ವಿ, ರಾಮರಸ ಮಾಡಿ ಒಂದೊಂದು ಗ್ಲಾಸ್ ಕುಡ್ದಿವ್ರಿ.. ನನ್ನ ಜೊತೆಗಿದ್ದವರ ಸ್ವಲ್ಪ ಬೇಗ ಕುಡ್ದು ಬಿಟ್ರು, ಪಾನಮತ್ತರಾದರು. ಅವರ ಮಾತು ಕೇಳ ಬೇಕ್ರಿ ಒಬ್ಬವ ಮಳೆಗೆ ಹರಿದಿದ್ದ ನೀರಿನ ಸಾಲು ನೋಡಿ, ಲೇ ಅಲ್ಲಿ ನೋಡಲೆ ದೊಡ್ಡ ಚರಂಡಿ ಐತಿ, ನನಗೆ ದಾಟಕೆ ಬರುವಲ್ದು ಅಂತಾ ಮಲಗಿದ.

ಮತ್ತೊಬ್ಬ ಹೊಲದಾಗ ರಂಟೆ ಹೊಡದಿದ್ದ ಹೆಂಟೆ ನೋಡಿ, ಅಲ್ಲಿ ನೋಡಲೆ ದೊಡ್ಡ ಬಂಡೆ ಐತಿ ನನಗೆ ಮೇಲೆ ಹೋಗಕಾಗ್ವಲ್ದು ಅಂತಿದ್ದ’ ಎಂದು ಹೇಳುತ್ತಿದ್ದ ರೈತ ನಕ್ಕು, ಕೊನೆಗೆ ನಾನು ಕುಡ್ದಿರಿ, ನನ್ನ ಕಥೆನು ತೆಂಗಿನ ಮರಗಳು ಆಕಾಸದಷ್ಟು ಎತ್ತರ ಕಾಣ್ತಿದ್ದಿವ್ರಿ, ಬೇವಿನ ಮರದ ಕೆಳಗೆ ಮಲಗಿದ್ದೆ, ಮುಸ್ಸಂಜೆ 7 ಗಂಟೆಗೆ ಎಚ್ಚರ ಆಗಿತ್ತು. ಅವರಿಬ್ಬರು ಎದ್ದು ಕುಳಿತಿದಿದ್ದರು ಮುಖಕ್ಕೆ ನೀರು ಹಾಕ್ಕೊಂಡು ಮನೆಗೆ ಬಂದಿವ್ರಿ,, ಇವತ್ತು ಹೊಕ್ಕೆನ್ರಿ ರಾಮರಸ ಬಹಳ ಕುಡಿಯಲ್ರಿ ಇವತ್ತು,, ಟೀ ಕಪ್ಪು ಮಾತ್ರ ಕುಡಿತಿನಿ.. ಅಂತ ಹೇಳಿದ. ಆದ್ರೆ ಎಷ್ಟು ಗೋಗರಿದ್ದು ಆ ವ್ಯಕ್ತಿ ಮಾತ್ರ ಹಾಲಿಗೆ ಹಾಕುವ ಪದಾರ್ಥಗಳ ಹೆಸರು ಹೇಳದೆ ಹೊರಟ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version