ರಾಜಕೀಯ

‘ಸತ್ಯಪ್ಪ ಸಾಹುಕಾರ’ ಎಂಬ ರೈತ ನಾಯಕ..!

Published

on

  • ಸುರೇಶ ಎನ್ ಶಿಕಾರಿಪುರ ಶಿಕಾರಿಪುರ

ನಾನು ರೈತ ನಾಯಕ ಎಂದು ಬಿಂಬಿಸಿಕೊಳ್ಳುವುದು ಇತ್ತೀಚೆಗೆ ರಾಜಕಾರಣಿಗಳಿಗೊಂದು ಖಯಾಲಿಯಾಗಿದೆ. ರೈತರು ಕೆಲವರಿಗೆ ಬಿಕರಿಯಾಗಿ ಸಿಕ್ಕಿಬಿಟ್ಟಿದ್ದಾರೆ. ಅದರಲ್ಲೂ ಬಿಜೆಪಿಯಂತೂ ರೈತ ಪಕ್ಷವಲ್ಲ. ಅದು ಜ‌ನಿವಾರ ತುಪ್ಪದ ಸೌಟು ಸಂಸ್ಕೃತ ಮಂತ್ರ ಹೇಳುವ ಬೆವರು ಸುರಿಸಿ ದುಡಿವ ಜನರನ್ನು ಬೆವರು ಸುರಿಸದೇ ಸುಲಿಯುವ ದರ್ಭೆ ಹಿಡಿದ ಪುರೋಹಿತರ ಹಾಗೂ ವಂಚಕ ಬಂಡವಾಳಗಾರ ದೊಡ್ಡ ದೊಡ್ಡ ವ್ಯಾಪಾರಿಗಳ ಏಳಿಗೆಗಾಗಿಯೇ ಜನುಮ ತಾಳಿದ ಪಕ್ಷ. ಆ ಪಕ್ಷದ ನಾಯಕರು ರೈತರ ಹೆಸರು ಎತ್ತಿದಾಗ ಹಸಿರುಶಾಲು ಹೊದ್ದಾಗ ನಗು ಬರುತ್ತದೆ.

ಹಸಿರು ಶಾಲು ಹೊದ್ದು ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ತಿಂಗಳಲ್ಲೇ ರೈತರ ಮೇಲೆ ಗೋಲಿಬಾರ್ ಮಾಡಿಸಿದವರೆಲ್ಲಾ ರೈತ ನಾಯಕರಲ್ಲ. ರೈತರ ಸಾಲ ಮನ್ನಾ ಮಾಡಿರೆಂದು ರೈತರು ವಿರೋಧ ಪಕ್ಷದವರು ಹೋರಾಡುವಾಗ ನನ್ನ ಬಳಿ ನೋಟ್ ಪ್ರಿಂಟ್ ಮಾಡುವ ಮಿಷಿನ್ ಇಟ್ಕೊಂಡಿಲ್ಲ ಎಂದು ಸದನದಲ್ಲಿ ಹೇಳಿಕೆ ಕೊಟ್ಟವರೆಲ್ಲಾ ರೈತ ನಾಯಕರಲ್ಲ. ಹಾಗೂ ತನ್ನ ಸರ್ಕಾರದ ಆಡಳಿತದ ಉದ್ಧಕ್ಕೂ ರೈತರು ಬೀಜ ಗೊಬ್ಬರ ಔಷಧಿಗಳಿಗಾಗಿ ಸಾಲು ಹಚ್ಚಿ ನಿಲ್ಲುವಂತೆ ಮಾಡಿ ಅವರ ಮೇಲೆ ಲಾಟಿ ಚಾರ್ಜು ಮಾಡಿಸುವವರೆಲ್ಲಾ ರೈತ ನಾಯಕರಲ್ಲ.

ಯಡಿಯೂರಪ್ಪನವರ ರಾಜ್ಯ ಬಿಜೆಪಿ ಸರ್ಕಾರ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು APMC (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಕಾಯ್ದೆಗೆ ತಿದ್ದುಪಡಿ ತಂದು ರೈತರ ಮರಣಶಾಸನ ಬರೆದಿದೆ. ಇದರ ಭವಿಷ್ಯದ ದುಷ್ಪರಿಣಾಮಗಳನ್ನು ನಮ್ಮ ರೈತ ಸಮುದಾಯ ಇನ್ನೂ ಅರ್ಥ ಮಾಡಿಕೊಳ್ಳದೆ ಇರುವುದು ನಮ್ಮ ದೇಶದ ದುರಂತ.

ಇದನ್ನೂ ಓದಿ | ದಾವಣಗೆರೆ | ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕೋವಿಡ್ ಲಸಿಕಾ ಜಾಗೃತಿ ಅಭಿಯಾನ

ರೈತರ ಹೆಸರಲ್ಲಿ ರೈತ ವಿರೋಧಿ ಚಟುವಟಿಕೆಗಳನ್ನು ಮಾಡುವವರು ರೈತದ್ರೋಹ ಮಾಡುವವರೇ ತಾನು ರೈತ ನಾಯಕ ಎಂದು ಬಿಂಬಿಸಿಕೊಳ್ಳುವುದು ಬ್ರಹ್ಮರಾಕ್ಷಸವೊಂದು ವಿಭೂತಿ ಶಿವದಾರ ರುದ್ರಾಕ್ಷಿ ಧರಿಸಿ ನಾನು ಶಿವಭಕ್ತ ಎಂದು ಹೇಳಿಕೊಂಡಂತೆ ಅಲ್ಲವೇ…? ರೈತರಿಗಾಗಿ ಸರ್ಕಾರದ ಮಟ್ಟದಲ್ಲಾಗಲೀ ವಯಕ್ತಿಕವಾಗಿಯಾಗಲೀ ಕಿಂಚಿತ್ ಕೊಡುಗೆ ಕೊಡದವರ ರೈತರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಸರ್ವನಾಶಕ್ಕೆ ಮುನ್ನುಡಿ ಬರೆದಿದೆ‌. ದೇಶ ಕಳೆದ ವರ್ಷದಿಂದ ಈ ವರೆಗೆ ವಿಶ್ವ ಕಂಡಿರದ ಅತಿ ದೊಡ್ಡ ಪ್ರಮಾಣದ ರೈತ ಚಳುವಳಿಗೆ ಸಾಕ್ಷಿಯಾಗಿದ್ದು ನೂರಾರು ರೈತರು ಜೀವ ಕಳೆದುಕೊಂಡರೂ ನಾನು ನಿಮ್ಮ ಚೌಕಿದಾರ ನಾನು ನಿಮ್ಮ ಪ್ರಧಾನ ಸೇವಕ ಎಂದು ಭಾಷಣ ಬಿಗಿದಿದ್ದ ಪ್ರಧಾನಿ ನರೇಂದ್ರ ಮೋದಿ ರೈತರ ಪ್ರಧಾನ ಭಕ್ಷಕನಾಗಿ ತನ್ನ ದೇಶದ ರೈತರನ್ನೇ ಅಮಾನವೀಯವಾಗಿ ಶೋಷಿಸುತ್ತಿದ್ದಾರೆ.

ರೈತರು ಅಂಬಾನಿ ಅದಾನಿ ಮತ್ತಿತರೆ ಬಂಡವಾಳಗಾರರ ಒತ್ತೆಯಾಳಾಗಬೇಕಾದ ಪರಿಸ್ಥಿ ನಿರ್ಮಾಣವಾಗಿದೆ. ಇಂತ ಹೊತ್ತಿನಲ್ಲಿ ದೇಶದ ನಾನಾ ಕಡೆ ಸಂಸತ್ ಮತ್ತು ವಿಧಾನ ಸಭೆಗಳಿಗೆ ಸಾರ್ವತ್ರಿಕ ಹಾಗೂ ಕೆಲವು ಕಡೆ ಉಪ – ಚುನಾವಣೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲಿ ನಮ್ಮ ಕರ್ನಾಟಕದ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಶ್ರೀ ಸತೀಶ್ ಜಾರಕಿಹೊಳಿಯವರು ಹೆಗಲ ಮೇಲೆ ಹಸಿರು ಶಾಲು ಹೊದ್ದು ಮತ್ತೋರ್ವ ರೈತ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ಜೊತೆಗೂಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ‌.

ಅತ್ಯಂತ ಸೂಕ್ಷ್ಮ ಮತಿಯಾದ ಸತೀಶ್ ಜಾರಕಿಹೊಳಿಯವರು ದೇಶದ ರೈತರು ಕಂಗಾಲಾಗಿರುವ ಈ ಸಂದರ್ಭದಲ್ಲಿ ಹಸಿರುಶಾಲು ಹೊದ್ದು ನಾನು ರೈತರೊಟ್ಟಿಗಿದ್ದೇನೆ ಎಂಬ ಮೌನ ಸಂದೇಶವನ್ನು ಜನತೆಗೆ ನೀಡಿದ್ದಾರೆ. ಹೆಗಲ ಮೇಲೆ ಹಸಿರುಶಾಲು ಹೊದ್ದು ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ ಯವರು ಇದನ್ನೆಲ್ಲಾ ತೋರಿಕೆಗಾಗಿ ಮಾಡುವ ಅಪಾರ್ಚುನಿಷ್ಟ್ ರಾಜಕಾರಣಿ‌ ಅಲ್ಲ.

ಅವರಿಗೆ ಆ ಅರ್ಹತೆ ಇದೆ ಹಸಿರುಶಾಲು ಹೊದ್ದು ರೈತರನ್ನು ಒದೆಯುವವರಲ್ಲ ಎಂಬುದಕ್ಕೆ ಅವರ ಕ್ಷೇತ್ರದ ರೈತರಿಗಾಗಿ ಅವರು ಮಾಡಿರುವ ಸೇವೆಗಳೇ ಸಾಕ್ಷಿ ನುಡಿಯುತ್ತಿವೆ. ಯಾರಾದರೂ ಬೆಳಗಾವಿ ಜಿಲ್ಲೆಯ ಕೆಲ ಕೆಲವು ರಸ್ತೆಗಳಲ್ಲಿ ಸಂಚರಿಸಿದ್ದರೆ ತಮ್ಮನ ಗಮನಕ್ಕೆ ‘ಸತೀಶ್ ಶುಗರ್ಸ್ ಲಿಮಿಟೆಡ್ ಹೆಸರಿನಲ್ಲಿ ಕಬ್ಬು ತುಂಬಿದ ಲಾರಿ ಟ್ರಾಕ್ಟರ್ ಗಳನ್ನು ಉಚಿತವಾಗಿ ತೂಕ ಮಾಡಿ ಕೊಡಲಾಗುವುದು ಎಂದು ಬೋರ್ಡ್ ಹಾಕಿದ ಅನೇಕ ಕಟ್ಟಡಗಳು ಇರುವುದು ಕಂಡು ಬಂದಿರುತ್ತದೆ.

ಇದನ್ನೂ ಓದಿ | ಸಚಿವ ಲಕ್ಷ್ಮಣ ಸವದಿ ತವರು ಜಿಲ್ಲೆಯಲ್ಲೇ ಸಾರಿಗೆ ನೌಕರ ನೇಣಿಗೆ ಶರಣು..!

ಇಡೀ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತುಂಬಿದ ರೈತರ ವಾಹನಗಳು ಸಂಚರಿಸುವೆಡೆ ಸ್ವತಃ ಜಾಗ ಖರೀದಿಸಿ ಅಲ್ಲಿ ವೇಬ್ರಿಡ್ಜ್ ತೂಕ ಸೇತುವೆಗಳನ್ನು ಕಟ್ಟಿಸಿ ಉಚಿತವಾಗಿ ರೈತರ ವಾಹನಗಳಿಗೆ ತೂಕ ಮಾಡಿಕೊಡವುದ ವ್ಯವಸ್ಥೆ ಮಾಡಿಸಿದ್ದಾರೆ. ಇಂತ ಅನೇಕ ತೂಕಸೇತುವೆಗಳನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ್ದಾರೆ.

ತೂಕದಲ್ಲಿ ಕಾರ್ಖಾನೆಗಳಿಂದಾಗುವ ಮೋಸವನ್ನು ತಪ್ಪಿಸಲಿಕ್ಕಾಗಿ ಆ ಮೂಲಕ ರೈತರ ಶ್ರಮಕ್ಕೆ ಮೋಸವಾಗದಂತೆ ರೈತ ಪರವಾಗಿ ನಿತ್ತಿದ್ದಾರೆ. ಬೆರಳೆಣಿಕೆಯ ಬಂಡವಾಳಗಾರರನ್ನು ಎದುರುಹಾಕಿಕೊಂಡು ಜನರಿಗಾಗಿ ಮಿಡಿಯುವ ನಾಯಕರು ಈಗ ಯಾರಿದ್ದಾರೆ.? ಅದು ಸಿದ್ದರಾಮಯ್ಯ ಸತೀಶ ಜಾರಕಿಹೊಳಿ ಅಂತವರಿಗೆ ಮಾತ್ರ ಸಾಧ್ಯ.

ಘಟಾಪ್ರಭಾ ಹಿಡಕಲ್ ಡ್ಯಾಂ ನಿಂದ ಮಳೆಗಾಲಕ್ಕೂ ಮುಂಚೆಯೇ ನೀರು ಬಿಡುತ್ತಿರಲಿಲ್ಲ. ಆ ಕುರಿತು ಸರ್ಕಾರದ ಗಮನ ಸೆಳೆದು ನೀರು ಬಿಡಿಸುವ ಮೂಲಕ ರೈತರ ಕೃಷಿಯ ನೀರಡಿಕೆಯನ್ನು ನೀಗಿಸಿದ್ದಾರೆ. ಬ್ರಿಟಿಷ್ ಕಾಲದ ಧುಪದಾಳ ಬ್ಯಾರೇಜನ್ನು ದುರಸ್ಥಿ ಮಾಡಿಸಿ ಹಾಳುಬಿದ್ದ ಅದರ ಕಾಲುವೆಗಳನ್ನು ದುರಸ್ಥಿ ಮಾಡಿಸಿ ರೈತರಿಗೆ ಅನುಕೂಲ ಮಾಡಿದ್ದಾರೆ. ರೈತರ ಗದ್ದೆ ತೋಟ ರೈತರ ಊರುಗಳಿಗೆ ಮುಖ್ಯರಸ್ತೆಗಳಿಗೆ ರೈತೋತ್ಪನ್ನಗಳು ಸುಲಭದಲ್ಕಿ ಸಿಗುವಂತಾಗಲು ಸುಸಜ್ಜಿತ ರಸ್ತೆ ಕಾಮಗಾರಿಗಳನ್ನು ಮಾಡಿಸಿದ್ದಾರೆ.

ಕೋವಿಡ್ ಸಂಕಷ್ಟದ ಕಾಲದಲ್ಲಿ ರೈತರು ನೂರಾರು ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ ಬಾಳೆ ಮಾವಿನ ತೋಟಗಳ ಫಲವನ್ನು ಖರೀದಿಸಿ ಆ ಹಣ್ಣು ಹಂಪಲನ್ನು ನೆಡೆದು ಊರು ಸೇರುತ್ತಿದ್ದ ಕಾರ್ಮಿಕರಿಗೆ ಗುಡ್ಡ ಬೆಟ್ಟದ ಮಂಗಗಳಿಗೆ ಹಳ್ಳಿಗಳ ಬಡವರಿಗೆ ಉಚಿತವಾಗಿ ತಿನ್ನಲು ಹಂಚಿ ರೈತರಿಗೆ ಸಂತ್ರಸ್ಥರಿಗೆ ಪ್ರಾಣಿಗಳಿಗೆ ನೆರವಾದ ಮನುಷ್ಯತ್ವ ಮೇರು ವ್ಯಕ್ತಿ ಸತೀಶ್ ಜಾರಕಿಹೊಳಿ.

ಆದರೆ ಇವು ಯಾವುವನ್ನೂ ಬೊಬ್ಬೆ ಹೊಡೆದು ಹೇಳಿಕೊಂಡಿಲ್ಲ. ರೈತರಿಗಾಗಿ ನಿಸ್ವಾರ್ಥದಿಂದ ಮಾಡಿದ ಕಾಯಕದ ಕಾರಣಕ್ಕೆ ನೆರವಿಗಾದ ಕಾರಣಕ್ಕೆ ಜನತೆ ಸತೀಶ್ ಜಾರಕಿಹೊಳಿಯವರನ್ನು ‘ಸತ್ಯಪ್ಪ ಸೌಕಾರ’ ಎಂದೇ ಅಭಿಮಾನದಿಂದ ಕರೆಯುತ್ತಾರೆ. ಜನ ಹಣಮಾತ್ರಕ್ಕೆ ಸಾಹುಕಾರ್ ಎನ್ನದೆ ತಮ್ಮ ನಾಯಕನನ್ನು ಗುಣದಲ್ಲೂ ‘ಸೌಕಾರ್ರು’ ಎಂದೇ ಕರೆದು ಅಭಿಮಾನ ಮೆರೆಯುತ್ತಾರೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version