ನೆಲದನಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ..?
- ರಂಗನಾಥ ಕಂಟನಕುಂಟೆ
“ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲ ಸಂಗಮದೇವ.”
–ಬಸವಣ್ಣನವರ ವಚನಗಳು, ಬಸವರಾಜು ಎಲ್, ಪು.53
ಬಸವಣ್ಣನವರ ಈ ವಚನ ಬಹಳ ಜನಪ್ರಿಯ ಮತ್ತು ಬಹುಚರ್ಚಿತ. ಈ ವಚನವನ್ನು ‘ಮನುಶ್ಯತ್ವ’ದ ಇಲ್ಲವೇ ವ್ಯಕ್ತಿಯ ‘ಶುದ್ಧ’, ಐಡಿಯಲ್ ವ್ಯಕ್ತಿತ್ವದ ಅಭಾವದಲ್ಲಿ ‘ಮಾನವೀಯತೆ’ಯ ಹುಡುಕಾಟದ ಕುರುಹಾಗಿ ಚರ್ಚಿಸಲಾಗಿದೆ. ‘ಮನೆ’ ಎನ್ನುವುದನ್ನು ದೇಹವಾಚಿಯಾಗಿಸಿ ಅದರ ಒಳಹೊರಗೆ ಹುಲ್ಲು ರಜ ಹುಸಿ ವಿಶಯಗಳು ಬಿದ್ದಿರುವ ವಿವರಗಳ ಮೂಲಕ ಒಂದು ಪಾಳುಬಿದ್ದಿರುವ ಭಗ್ನಚಿತ್ರವನ್ನು ನೀಡಲಾಗಿದೆ.
ಮುಖ್ಯವಾಗಿ ಮನುಶ್ಯರ ಪ್ರಜ್ಞೆಯೊಳಗೆ ತುಂಬಿಕೊಂಡಿರುವ ಅಪಕಲ್ಪನೆಗಳು, ಕೇಡಿಗತನಗಳು, ಮೌಢ್ಯಗಳು, ಸ್ವಾರ್ಥ, ದ್ವೇಶ, ದುಶ್ಟತನ, ಭವಿತ್ವ ಮುಂತಾದ ಭಾವನೆಗಳಿಂದ ತುಂಬಿಹೋಗಿ ‘ಮನುಶ್ಯರು’ ಎಂದು ಕರೆದುಕೊಳ್ಳುವವರಲ್ಲಿ ‘ಮನುಶ್ಯತ್ವ’ವೇ ಇಲ್ಲದಿರುವ ಮೌಲ್ಯಹೀನ ಬದುಕಿನ ಬಗೆಯನ್ನು ಚರ್ಚಿಸಲು ಈ ವಚನವನ್ನು ಆಕರವಾಗಿ ಬಳಸಲಾಗಿದೆ. ದೇಹ ಮತ್ತು ಮನಸ್ಸುಗಳ ನಡುವಿನ ಬಿರುಕು; ಅಂತರಂಗ ಹಾಗೂ ಬಹಿರಂಗಗಳು ಗಬ್ಬೆದ್ದುಹೋಗಿರುವುದನ್ನು ಎತ್ತಿತೋರಿಸುವ ಬಗೆಯಾಗಿ ಓದಲಾಗಿದೆ.
ಅಲ್ಲದೆ ವ್ಯಕ್ತಿಯು ತನ್ನನ್ನು ತಾನು ಆತ್ಮಶೋಧನೆ ಮಾಡಿಕೊಳ್ಳುವ ಬಗೆಯಾಗಿಯೂ ವಿವರಿಸಿಕೊಳ್ಳಲಾಗಿದೆ. ಇದಕ್ಕೆ ವಚನದಲ್ಲಿಯೇ ಸೂಚನೆಯಿದೆ. ಮೊದಲ ಸಾಲಿನಲ್ಲಿ ‘ಮನೆ’ ಎಂದು ಸೂಚಿತವಾದುದು ನಾಲ್ಕನೆಯ ಸಾಲಿನಲ್ಲಿ ‘ತನು’ ಎಂದು ಸ್ಪಶ್ಟವಾಗುತ್ತದೆ. ಹಾಗಾಗಿಯೇ ಇದನ್ನು ದೇಹ ಮತ್ತು ಮನಸ್ಸುಗಳ ಆಂತರಿಕ ಸಂಬಂಧಗಳು ಮತ್ತು ಬಿರುಕುಗಳಿಗೆ, ಅಲ್ಲಿನ ಗಬ್ಬೆದ್ದುಹೋಗಿರುವ ಚಿತ್ರಕ್ಕೆ ಲಗತ್ತಿಸಿ ಚರ್ಚಿಸಲಾಗುತ್ತದೆ. ಇದನ್ನು ಸಮಸ್ಯೆ ಎಂದು ಭಾವಿಸಬೇಕಿಲ್ಲ.
ಸದ್ಯ ಈ ವಚನದಲ್ಲಿ ಬಳಕೆಗೊಂಡಿರುವ ಭಾಶಿಕ ಸೂಚನೆಗಳನ್ನು ಬಳಸಿ ವಚನವನ್ನು ಬೇರೊಂದು ಬಗೆಯಲ್ಲಿ ಓದಲು ಸಾಧ್ಯವಿದೆ. ‘ಮನೆ’ಯನ್ನು ದೇಹ, ವ್ಯಕ್ತಿ, ಮನುಶ್ಯರು ಎಂದು ಮಾತ್ರವಲ್ಲದೆ ಅದನ್ನು ಲೋಕ, ವಿಶ್ವ, ಜಗತ್ತು, ಪ್ರಪಂಚ, ಯೂನಿವರ್ಸ್ ಎನ್ನುವ ರೀತಿಯಲ್ಲಿ ಓದಿದರೆ ಆಗ ಈ ವಚನ ಯಾವ ತಿರುಳನ್ನು ಧ್ವನಿಸುತ್ತದೆ? ಹಾಗೆಯೆ ‘ಒಡೆಯ’ ಎಂಬುದನ್ನು ಈ ಲೋಕವನ್ನು ಸೃಶ್ಟಿಸಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಎಂದು ಗ್ರಹಿಸಿದರೆ ಆಗ ಯಾವ ಅರ್ಥ ಧ್ವನಿಸುತ್ತದೆ? ‘ಮನೆಯೊಳಗೆ ಮನೆಯೊಡೆನಿದ್ದಾನೋ ಇಲ್ಲವೋ?
ಅಂದರೆ ಈ ಲೋಕದಲ್ಲಿ ದೇವರಿದ್ದಾನೋ? ಇಲ್ಲವೋ ಎನ್ನುವ ಮೂಲಕ ಅನುಮಾನ ಸಂದಿಗ್ಧತೆ ಹುಡುಕಾಟ ತಾಕಲಾಟಗಳನ್ನು ವ್ಯಕ್ತಪಡಿಸುವ ವಚನವಾಗಿದೆ. ಕೊನೆಯಲ್ಲಿ ‘ಮನೆಯೊಳಗೆ ಮನೆಯೊಡೆಯನಿಲ್ಲ!’ ಎನ್ನುತ್ತದೆ. ಈ ನಿರ್ಣಾಯಕ ಮಾತನ್ನು ವ್ಯಕ್ತಪಡಿಸಿದಾಗ ಈ ಲೋಕದಲ್ಲಿ ಸೃಶ್ಟಿಕರ್ತನೆಂದು ಭಾವಿಸಿ ನಂಬಲಾಗಿರುವ ‘ಅತೀಂದ್ರಿಯ ಶಕ್ತಿ’, ‘ದೇವರು’ ಇತ್ಯಾದಿ ಶಕ್ತಿ ‘ಇಲ್ಲ’ ಎಂಬ ಅರ್ಥವೂ ಧ್ವನಿಸಬಹುದಲ್ಲವೇ? ‘ಮನೆಯೊಡೆಯನಿಲ’್ಲ ಎಂಬ ಮಾತಿನಲ್ಲಿ ‘ದೇವರು’ ಇಲ್ಲ ಎಂದೂ ಧ್ವನಿಸಬಹುದಲ್ಲವೇ? ಅವನಿಲ್ಲದ ಕಾರಣಕ್ಕಾಗಿಯೇ ಮಾನವರ ಸಮಾಜ ಅತ್ಯಂತ ಹೆಚ್ಚು ಬರ್ಬರವಾಗಿದೆ ಎಂದೂ ವಾದಿಸಬಹುದು. ಪ್ರಾಣಿಜಗತ್ತಿನಲ್ಲಿ ಮಾನವರು ‘ಪ್ರಚ್ಚನ್ನ’ ಪ್ರಾಣಿಗಳಾಗಿ ಬೇರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ವ್ಯವಸ್ಥಿತವಾಗಿ ಉದ್ದೇಶಪೂರ್ವಕವಾಗಿ ಹಿಂಸೆ ಕ್ರೌರ್ಯ ದಮನ ನರಮೇಧ ಮೋಸ ವಂಚನೆಗಳನ್ನು ನಡೆಸಿದ್ದಾರೆ ಮತ್ತು ನಡೆಸುತ್ತಿದ್ದಾರೆ.
ಇದರಿಂದ ಮಾನವರ ಕುಲ ಬೇರೆ ಪ್ರಾಣಿಗಳಿಂದ ಅತ್ಯಂತ ಹೆಚ್ಚು ಹಿಂಸೆಯನ್ನು ಅನುಭವಿಸಿದೆ. ಅಂದರೆ ಮನೆಯೊಡೆಯನಾದ ಆ ಶಕ್ತಿ ಮತ್ತು ಆ ಶಕ್ತಿರೂಪಿಯಾಗಿರುವ ‘ಅರಿವು’ ಮನುಶ್ಯರ ಅಂತರಂಗ ಬಹಿರಂಗಗಳಲ್ಲಿ ಆಚರಣೆಯಲ್ಲಿ ಇಲ್ಲದಿರುವುದೇ ಇಶ್ಟೆಲ್ಲಾ ದುರಂತಗಳಿಗೆ ಕಾರಣ. ಈ ಬಗೆಯ ಅನುಮಾನ ಬಸವಣ್ಣನಿಗೆ ಕಾಡಿರಬಹುದೇ? ಲೋಕದಲ್ಲಿರುವ ಮನುಶ್ಯತ್ವದ ಅಭಾವವೇ ಬಸವಣ್ಣನ ಒಳಗಿನ ತುಮುಲಕ್ಕೆ ಕಾರಣ. ಅದೇ ಇಂತಹ ವಚನದ ಹಿಂದಿನ ಪ್ರೇರಣೆಯಾಗಿದೆ.
ಇಲ್ಲಿನ ಮುಖ್ಯ ಪ್ರಶ್ನೆಯೆಂದರೆ, ಬಸವಣ್ಣನಿಗೆ ಈ ಲೋಕದಲ್ಲಿ ಮನೆಯೊಡೆಯ ಇಲ್ಲವೇ ಅತೀಂದ್ರಿಯ ಶಕ್ತಿ ಇದೆಯೋ ಇಲ್ಲವೋ ಎಂಬ ಅನುಮಾನ ಹುಟ್ಟಿರುವ ಸಾಧ್ಯತೆ ಇದ್ದಂತಿದೆ. ಆ ಮೂಲಕ ನಿರಂತರವಾಗಿ ಒಂದು ‘ಶಕ್ತಿ’ಯನ್ನು ಕಲ್ಪಿಸಿಕೊಳ್ಳುವ, ಹುಡುಕಿಕೊಳ್ಳುವ, ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾನೆ ಎನ್ನಿಸುತ್ತದೆ. ಹಾಗಾಗಿಯೇ ದೇವರು ಗುಡಿಯಲ್ಲಿದ್ದಾನೆ/ಇದ್ದಾಳೆ ಎಂದು ನಂಬಿಸುವ ಪುರೋಹಿತಶಾಹಿ ಕಲ್ಪನೆಗಿಂತ ಭಿನ್ನವಾಗಿ, ಆ ‘ಶಕ್ತಿ’ ಎಲ್ಲಿಯೋ ಇಲ್ಲ ಮತ್ತು ಅದು ನಮಗೆ ಪ್ರತ್ಯಕ್ಶವಾಗುವುದಿಲ್ಲ. ಅದೇನಿದ್ದರೂ ನಮ್ಮೊಳಗೆ ನಾವೇ ಕಂಡು ಕೊಳ್ಳಬೇಕಾದ ‘ಸತ್ಯ’ ಎಂದು ಭಾವಿಸಿದಂತಿದೆ. ಅದಕ್ಕಾಗಿಯೇ ಬಸವಣ್ಣ ‘ದೇಹವೇ ದೇಗುಲ, ಕಾಯವೇ ಕೈಲಾಸ’ ಎಂದಿರುವಂತಿದೆ. ದೇಹ ಮತ್ತು ಕಾಯಕಗಳು ಕಣ್ಣೆದುರಿನ ವಾಸ್ತವಗಳು.
ಆದರೆ ಅಂತಹ ಒಂದು ಶಕ್ತಿಯಿಲ್ಲದೆ ಈ ಜಗತ್ತು ಸೃಶ್ಟಿಗೊಳ್ಳಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯೂ ಕಾಡಿರುವಂತಿದೆ. ಅಂತಹ ಕಾಡುವಿಕೆಯಿಂದಲೇ ‘ಶಕ್ತಿ’ಯಾದ ಕೂಡಲಸಂಗಮನ ಹುಡುಕಾಟ ಮಾಡಲಾಗಿದೆ. ಎಲ್ಲ ವಚನಕಾರರು ಸಂತರು ಇದನ್ನೇ ಮಾಡಿದ್ದಾರೆ. ಅಕ್ಕ ಪ್ರಿಯಕರ ಮಲ್ಲಿಕಾರ್ಜುನನನ್ನು ಹುಡುಕುವ ಪರಿಯನ್ನು ಗಮನಿಸಿದರೆ ಇದರ ತೀವ್ರತೆಯ ಅರಿವಾಗುತ್ತದೆ. ಬಸವಣ್ಣನಲ್ಲಿ ‘ಶಕ್ತಿ’ಯ ನಿರಂತರ ಹುಡುಕಾಟವಿದೆಯೇ ಹೊರತು ಆತ್ಯಂತಿಕ ನಿರ್ಣಯವಿಲ್ಲ.
ಇಂತಹ ಹುಡುಕಾಟದಲ್ಲಿಯೇ ‘ದೇವರು’ ಜೀವಂತವಾಗಿ ಕಾಣಿಸಿಕೊಂಡಿದ್ದಾನೆ. ಇಂತಹ ಹುಟುಕಾಟ ನಡೆಸಿದ ಬುದ್ಧ ಕೊನೆಗೆ ಮೌನವಹಿಸುತ್ತಾನೆ. ದೇವರನ್ನು ಜಡಶಿಲೆಗೊಳಿಸಿರುವ ಕಡೆಗಳಲ್ಲಿ ದೇವರು ಪ್ರಚ್ಚನ್ನ ಮೌಢ್ಯದ ಅವತಾರವೆತ್ತಿದ್ದಾನೆ. ಅಲ್ಲಿ ಹಿಂಸಾಮಯಿ ಕೂಡ ಆಗಿರುವುದನ್ನು ಕಾಣಬಹುದು. ಉಳಿದೆಡೆ ಚಲನಶೀಲತೆಯ ಅರಿವಿನ ಸ್ವರೂಪವಾಗಿ ಕಾಣಿಸುತ್ತದೆ.
ಆದರೆ ಇಂದು ಬಸವಾನುಯಾಯಿಗಳಲ್ಲಿ, ಮಠಾಧೀಶರಲ್ಲಿ, ಸ್ವಾಮೀಜಿಗಳಲ್ಲಿ, ಪಾದ್ರಿಗಳು ಮುಲ್ಲಾಗಳು ಹಾಗೂ ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಆ ಶಕ್ತಿಯಿದೆ ಎಂಬ ಆತ್ಯಂತಿಕ ನಿಲುವಿದೆ. ಅಂತಹ ನಂಬಿಕೆಯನ್ನು ಬಲವಾಗಿ ಬೆಳೆಸಲಾಗಿದೆ. ಅಲ್ಲಿ ಯಾವುದೇ ಹುಡುಕಾಟವಿರುವುದಿಲ್ಲ. ಬಸವಣ್ಣನಿಗಿರುವಂತೆ ಆ ‘ಶಕ್ತಿ’ ಇದೆಯೋ ಇಲ್ಲವೋ ಎಂಬ ಅನುಮಾನ ಸಂಶಯ ಸಂದಿಗ್ಧತೆಗಳೇ ಕಾಡುವುದಿಲ್ಲ. ಆ ಶಕ್ತಿಯನ್ನು ಕಾಣಬೇಕು ಎಂಬ ತವಕ ತಲ್ಲಣ ಅಚಲ ಅದಮ್ಯ ಬಯಕೆಗಳೂ ಇರುವುದಿಲ್ಲ.
ಅದೇನಿದ್ದರೂ ಕೇವಲ ಕುರುಡು ನಂಬಿಕೆ ಮಾತ್ರ. ಆ ನಂಬಿಕೆಯಾಚೆಗೆ ಆ ಶಕ್ತಿಗೆ ಯಾವ ಅಸಿತ್ವವೂ ಇಲ್ಲ. ಅರ್ಥವೂ ಇಲ್ಲ. ಆ ಶಕ್ತಿಯ ಬಗೆಗೆ ಪ್ರಾಮಾಣಿಕ ಜಿಜ್ಞಾಸೆಯೂ ಇರುವುದಿಲ್ಲ. ಮತೀಯ ಕುರುಡುತನದ ನಂಬಿಕೆಗಳ ಹುದುಲಿನಲ್ಲಿ ಆ ‘ಶಕ್ತಿ’ಯನ್ನು ಹೂತುಹಾಕಿ ಅದರ ಮೇಲೆ ಸಾಮ್ರಾಜ್ಯಗಳನ್ನು, ಧರ್ಮಗಳನ್ನು ದಂತಗೋಪುರಗಳನ್ನು ಕಟ್ಟಲಾಗಿದೆ.
ಇವೆಲ್ಲವೂ ಅಕ್ರಮ ಮತ್ತು ಅನೈತಿಕ ನೆಲೆಯ ಮೇಲೆಯೇ ಸ್ಥಾಪನೆಗೊಂಡಿವೆ. ಇವುಗಳ ಸ್ಥಾಪಕರಿಗೆ ದೇವರು ಒಂದು ಸಂಕೇತನಾಮ ಮಾತ್ರ. ಅಂತಹ ಸಂಕೇತನಾಮವನ್ನು ಭರ್ಜರಿಯಾಗಿ ವ್ಯಾಪಾರ ಮಾಡಲಾಗುತ್ತದೆ. ಎಲ್ಲ ಧರ್ಮಗಳು ಇಂತಹ ವ್ಯಾಪಾರದಲ್ಲಿ ತೊಡಗಿವೆ. ಅವು ಮಾನವರ ಅಂತರಂಗವನ್ನು ಶುದ್ಧಗೊಳಿಸುತ್ತಿಲ್ಲ. ಮತ್ತಶ್ಟು ಕಲುಶಿತಗೊಳಿಸುತ್ತಿವೆ. ಮತ್ತು ಅಂತಹ ಶಕ್ತಿಯನ್ನು ಒಂದು ಅನುಭವವಾಗಿ, ಅರಿವಾಗಿ ಅಂತರಂಗಕ್ಕೆ ತೆಗೆದುಕೊಳ್ಳುವುದಿಲ್ಲ. ಬಹಿರಂಗದಲ್ಲಿ ಜೀವನ ಮೌಲ್ಯವಾಗಿ ಯಾವ ಧರ್ಮೀಯರೂ ಆಚರಿಸುವುದಿಲ್ಲ. ಆ ಮೂಲಕ ಲೋಕವನ್ನು ಶುಚಿಯಾಗಿಡುವುದಿಲ್ಲ.
ಬದಲಿಗೆ ಶಿಲುಬೆ, ಲಿಂಗ, ಹಸ್ತ-ನಕ್ಶತ್ರ, ಓಂ ಇತ್ಯಾದಿಗಳನ್ನು ಸಂಕೇತಗಳಾಗಿ ಬಳಸಲಾಗುತ್ತದೆ. ಗುಡಿ ಚರ್ಚು ಮಸೀದಿ ಮಂದಿರಗಳನ್ನು ಕಟ್ಟಲಾಗುತ್ತದೆ. ಅವುಗಳನ್ನು ಜನರ ಎದೆಯ ಮೇಲೆ ಹೊರಿಸಿ ಅರಿವನ್ನು ನಾಶ ಮಾಡಲಾಗುತ್ತದೆ. ನಂಬಿಕೆಯ ಕೋಟೆಯ ಸುತ್ತ ಕುರುಡುತನ, ಮೌಢ್ಯದ ಆಚರಣೆಗಳ ಬೇಲಿ ನಿರ್ಮಿಸಲಾಗುತ್ತದೆ. ಅಲ್ಲಿ ಅವೈಚಾರಿಕತೆ ಹುಟ್ಟಿಕೊಳ್ಳುವುದೇ ಹೊರತು ಯಾವುದೇ ಅರಿವು ಹುಟ್ಟುವುದಿಲ್ಲ. ಹಾಗಾಗಿಯೇ ಬಸವಣ್ಣ ಹೇಳಿರುವಂತೆ ಲೋಕದ ಅಂತರಂಗ ಬಹಿರಂಗಗಳಲ್ಲಿ ಹುಸಿ ರಜ ವಿಶಯಗಳು ತುಂಬಿ ಈ ಜಗತ್ತು ಭಗ್ನಗೊಂಡಿದೆ ಇಲ್ಲವೇ ಪಾಳುಬಿದ್ದಂತಿದೆ. ‘ಪ್ರಚ್ಛನ್ನ ಪಶುತ್ವ’ದ ಕ್ರೌರ್ಯ ಅನಾವರಣಗೊಳ್ಳುತ್ತಲೇ ಇದೆ.
ದೇವರ ಇರುವಿಕೆಯ ಬಗೆಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಕಾಣುವ ತವಕ ತಲ್ಲಣಗಳಿಂದ ಬೆಂದ ಭಕ್ತರಲ್ಲಿ ಸಂತರಲ್ಲಿ ಮಾತ್ರ ದೇವರು ಮತ್ತೆ ಮತ್ತೆ ಹುಟ್ಟಿದ್ದಾನೆ. ಅಲ್ಲಿಯೇ ಇಂದಿಗೂ ಆ ಶಕ್ತಿ ಜೀವಂತವಾಗಿರುವುದು. ಮತ್ತು ಅಂತಹ ಕಡೆಯಲ್ಲಿ ಹೊಸ ತಿಳುವಳಿಕೆ ಹುಟ್ಟಿದೆ. ಇದಕ್ಕೆ ಸ್ವತಃ ಬಸವಣ್ಣನೇ ಉದಾಹರಣೆ. ನಂತರ ಅಲ್ಲಮ ಅಕ್ಕ ಕಬೀರ ಮೀರಾ ಕುವೆಂಪು ಇತ್ಯಾದಿ. ಅಂತಹ ಕಡೆಗೆ ಮಾತ್ರ ಮಾನವರು ತಮ್ಮ ಬದುಕನ್ನು ಹಸನಾಗಿಡುವ ಮೂಲಕ ಜೀವನದ ಪಥವನ್ನು ಶುದ್ಧವಾಗಿಟ್ಟುಕೊಳ್ಳುವ ಪಾರದರ್ಶಕ ನುಡಿಯನ್ನು ರೂಪಿಸುವ ಕೆಲಸ ಮಾಡಿದ್ದಾರೆ.
ಬಸವಣ್ಣನ ಈ ವಚನವನ್ನು ಬ್ರೆಕ್ಟನ ಕವಿತೆಯ ಜೊತೆಗೆ ಓದಬಹುದೆನಿಸುತ್ತದೆ. ಬ್ರೆಕ್ಟ್ ಹೇಳುವಂತೆ, ‘ಹಂದಿಗಳು ತಾವು ಮಲಗುವ ಜಾಗವನ್ನು ಹೇಲು ಉಚ್ಚೆಗಳಿಂದ ಅಧ್ವಾನಗೊಳಿಸಿಕೊಂಡಂತೆ ಜರ್ಮನಿ ತನ್ನ ನಾಡನ್ನು ಮಲಿನ ಮಾಡಿಕೊಂಡಿದೆ’ ಎನ್ನುತ್ತಾನೆ. ಅವನ ಮತ್ತು ಬಸವಣ್ಣನ ಮಾತನ್ನು ಸಮೀಕರಿಸಿ ಹೇಳುವುದಾದರೆ, ‘ಮಾನವರು’ ತಮ್ಮ ಇಡೀ ಮನುಕುಲವನ್ನು ದ್ವೇಶ, ಹಿಂಸೆ, ಕೊಲೆ, ಸುಲಿಗೆ, ಕ್ರೌರ್ಯ, ಸ್ವಾರ್ಥ, ಅಧಿಕಾರದ ಮದ ಮತ್ತು ಭ್ರಶ್ಟ ಗುಣಗಳಿಂದ ಇಡೀ ಭೂಮಂಡಲವನ್ನು ಸ್ಮಶಾನದಂತೆ, ಕಸಾಯಿಖಾನೆಯಂತೆ ಮಾಡಿದ್ದಾರೆ. ಇಲ್ಲಿ ಆಗಿಹೋಗಿರುವ ಜನಾಂಗಿಯ ಕಲಹಗಳು, ಯುದ್ಧಗಳು, ಧಾರ್ಮಿಕ ಸಂಘರ್ಶಗಳು ವರ್ಣ ಜಾತಿ ದ್ವೇಶದ ಕಗ್ಗೊಲೆಗಳನ್ನು ಗಮನಿಸಿದರೆ ಇದರ ಭೀಕರತೆ ತೀವ್ರತೆಗಳು ಅರ್ಥವಾಗುತ್ತವೆ. ಇದರಿಂದ ನದಿಗಳಲ್ಲಿ ನೀರಿಗಿಂತಲೂ ಹೆಚ್ಚು ರಕ್ತಹರಿದಿದೆ. ಚರಿತ್ರೆಯ ಪುಟಗಳೇ ಇದನ್ನೇ ಸಾಬೀತುಪಡಿಸುತ್ತಿದೆ. ಹಿಟ್ಲರನ ಜರ್ಮನಿ ಇಡೀ ಜಗತ್ತನ್ನು ರಕ್ತಸಿಕ್ಕಗೊಳಿಸಿತ್ತು. ಕಲ್ಯಾಣವೂ ಕೂಡ ನೆತ್ತರಿನಲ್ಲಿ ನೆಂದೇ ನಾಶವಾಗಿದ್ದು ಸುಳ್ಳಲ್ಲ.
ಇಂದು ಜಗತ್ತಿನ ಕೆಲವು ದೇಶಗಳು ಈ ದಾರಿಯಲ್ಲಿ ಹೆಜ್ಜೆಹಾಕುತ್ತಿವೆಯೇ ಎಂಬ ಭಯ ಮೂಡುತ್ತಿದೆ. ಈಗಾಗಲೇ ಅದರ ದಟ್ಟ ವಾಸನೆ ವಿಶ್ವದಲ್ಲಿರುವ ಜಾಗೃತ ಮೂಗುಗಳಿಗೆ ಬಡಿಯುತ್ತಿದೆ. ಬಂಡವಾಳಶಾಹಿ ಸಾಮ್ರಾಜ್ಯಗಳನ್ನು ಕಟ್ಟಲು, ಧರ್ಮವನ್ನು ಸ್ಥಾಪಿಸಲು ಮತ್ತು ಜಾತಿ ವರ್ಣಗಳ ಭದ್ರಕೋಟೆಗಳನ್ನು ಸ್ಥಾಪಿಸಲು ಕೋಟ್ಯಂತರ ಜನರನ್ನು ಬಲಿಕೊಡಲಾಗಿದೆ. ಅದರ ಮುಂದುವರಿದ ಅಧ್ಯಾಯ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಆರಂಭವಾಗಿರುವಂತೆ ಕಾಣುತ್ತದೆ.
ಹೀಗೇ ತಮ್ಮದೇ ಸಂತತಿಯವರನ್ನು ಬಲಿಕೊಟ್ಟು ಸಾಮ್ರಾಜ್ಯವನ್ನು ಧರ್ಮಗಳನ್ನು ಸ್ಥಾಪಿಸಿದ ‘ಪ್ರಾಣಿ’ ಪ್ರಪಂಚವಿಲ್ಲ. ಅಂದರೆ ಬ್ರೆಕ್ಟ್ ಹೇಳಿದ ಮಾತು ಕೇವಲ ಜರ್ಮನಿಗೆ ಸೀಮಿತವಲ್ಲ. ಬಸವಣ್ಣ ಹೇಳಿದ ಹುಸಿ ವಿಚಾರಗಳು ಕೇವಲ ವ್ಯಕ್ತಿಗೆ, ಕಲ್ಯಾಣಕ್ಕೆ ಸಂಬಂಧಿಸಿದವು ಮಾತ್ರವಲ್ಲ. ಅವು ಇಡೀ ಮಾನವರ ಕುಲವನ್ನು ಕುರಿತ ವಿಚಾರಗಳು. ಅಂದರೆ ಅವರಿಬ್ಬರ ಮಾತುಗಳು ಸಾರ್ವತ್ರಿಕ ಮತ್ತು ಸಾರ್ವಕಾಲಿಕವಾಗಿ ಕಾಣಿಸುತ್ತಿವೆ.
ಇದನ್ನು ಗಮನಿಸಿದರೆ ಈ ಲೋಕದಲ್ಲಿ ಆ ‘ಒಡೆಯ’ನಿಲ್ಲ ಎಂಬ ಅನುಮಾನ ಮೂಡುತ್ತದೆ. ಅದರ/ಅವನ/ಅವಳ ಗೈರುಹಾಜರಿ ಎದ್ದುಕಾಣಿಸುತ್ತದೆ. ಇಂತಹದೇ ಅನುಮಾನವನ್ನು ಬಸವಣ್ಣ ಈ ವಚನದಲ್ಲಿ ವ್ಯಕ್ತಪಡಿಸಿರುವಂತೆ ಅನ್ನಿಸುತ್ತದೆ. ಆ ಶಕ್ತಿಯಿದ್ದಿದ್ದರೆ ಇಶ್ಟೊಂದು ರಕ್ತಪಾತ, ಮೋಸ, ವಂಚನೆ ದುಶ್ಟಕೂಟಗಳ ಅಟ್ಟಹಾಸ ನಡೆಯುತ್ತಿರಲಿಲ್ಲ. ಅದರ ಸಹಸ್ರಬಾಹುಗಳು ತಡೆಯುತ್ತಿದ್ದವೇನೋ? ಆ ಶಕ್ತಿಯ ಸಂಕೇತಗಳಲ್ಲಿ ಪ್ರಾಮಾಣಿಕ ನಂಬಿಕೆಯಿಟ್ಟವರೂ ಕ್ರೌರ್ಯದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ದೇವರ ಹೆಸರು ದುರ್ಬಳಕೆಯಾಗುತ್ತಿರಲಿಲ್ಲ.
ಇಂದು ದೇವರ ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಲೋಕವನ್ನು ವಂಚಿಸುವ ಮಟ್ಟಿಗೆ ಹುಸಿತನಗಳು ವಿಶಯಗಳು ಹುಲ್ಲು ರಜಗಳು ಜನರಲ್ಲಿ ಮತ್ತು ಆಳುವವರಲ್ಲಿ ಹುಟ್ಟಿವೆ. ಅಂದರೆ ಆ ‘ಒಡೆಯ’ನಲ್ಲಿ ನಂಬಿಕೆಯಿಟ್ಟವರೂ ಕ್ರೌರ್ಯದಲ್ಲಿ ವಂಚನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲವೇ ಕುರುಡಾಗಿ ಆ ಶಕ್ತಿಯನ್ನು ನಂಬಿ ತಮ್ಮ ಎಲ್ಲ ಹೀನ ಕೃತ್ಯಗಳನ್ನು ಎಸಗಲಾಗುತ್ತಿದೆ. ಮಾನವರು ಸೃಶ್ಟಿಸಿಕೊಂಡಿರುವ ಈ ಸಮಸ್ಯೆಗಳಿಗೆ ಯಾವುದೇ ‘ದೈವನ್ಯಾಯ’ ದೊರೆತ ಉದಾಹರಣೆಗಳಿಲ್ಲ. ಆದರೆ ಜನರು ಮಾತ್ರ ಆ ದೇವರು ನೋಡಿಕೊಳ್ಳುತ್ತಾನೆ. ಅವನಲ್ಲಿ ಎಲ್ಲ ಲೆಕ್ಕವಿರುತ್ತದೆ ಎಂದು ಸಮಾಧಾನ ಮಾಡಿಕೊಳ್ಳುತ್ತಾರೆಯಶ್ಟೇ.
ಇದನ್ನು ಚನ್ನಾಗಿ ಬಲ್ಲ ಲೋಕದ ಪುರೋಹಿತಶಾಹಿ ವ್ಯವಸ್ಥೆ ಜನರನ್ನು ವ್ಯವಸ್ಥಿತವಾಗಿ ವಂಚಿಸಿ ಸಮಾಜದ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದೆ. ದುರಂತವೆಂದರೆ ಈ ಬಗೆಯ ವಂಚನೆಯನ್ನು ಜನರು ಅರಿಯುವಲ್ಲಿ ಸೋಲುತ್ತಿದ್ದಾರೆ. ಅವರೂ ಕೂಡ ಅರಿವುಗೇಡಿಗಳಾಗಿ ಬಹಳ ಸುಲಭವಾಗಿ ವಂಚಕರಿಗೆ ಬಲಿಯಾಗಿ ಪುರೋಹಿತಶಾಹಿಯ ಸೇವೆ ಮಾಡಲು ಮುಂದಾಗುತ್ತಾರೆ.
ಅಂದರೆ ಜಿಂಕೆಗಳೆಲ್ಲವೂ ಸೇರಿ ಹುಲಿಯನ್ನು ಸ್ತುತಿಸಿದಂತೆ, ಪೂಜಿಸಿದಂತೆ ನಿತ್ಯ ಅದರ ಪಾದಕ್ಕೆರಗಿ ನಮಸ್ಕರಿಸುವಂತೆ ಕಾಣಿಸುತ್ತದೆ. ಈ ಸೇವೆ ಮಾಡುವ ಜನರಿಗೆ ಬಸವಣ್ಣನಂತೆ ಆ ‘ಒಡೆಯನಿದ್ದಾನೋ ಇಲ್ಲವೋ?’ ಎಂಬ ಒಂದು ಸಣ್ಣ ಅನುಮಾನವನ್ನೂ ವ್ಯಕ್ತಪಡಿಸುವುದಿಲ್ಲ. ಆ ಶಕ್ತಿ ಎಂದೂ ಯಾರಿಗೂ ಪ್ರತ್ಯಕ್ಶವಾಗಿ ದರ್ಶನ ಕೊಟ್ಟಿಲ್ಲ. ಎಲ್ಲವೂ ಪುರಾಣಗಳಲ್ಲಿ ದಂತಕತೆಗಳಲ್ಲಿ ಕಟ್ಟಿರುವ ಪವಾಡದ ಕತೆಗಳಶ್ಟೇ.
ಆದರೂ ‘ಇದ್ದಾನೋ ಇಲ್ಲವೋ’ ಎಂಬ ಅನುಮಾನದೊಂದಿಗೆ ನಿರಂತರವಾಗಿ ಆ ಶಕ್ತಿಯನ್ನು ಕಾಣುವ ಪ್ರಯತ್ನವನ್ನು ಮಾಡದೆ ಕೇವಲ ಕುರುಡಾಗಿ ನಂಬಲಾಗುತ್ತಿದೆ. ಹಾಗಾಗಿ ಕೇವಲ ನಂಬಿಕೆಯ ಲೋಕ ದೈವಜ್ಞಾನಶಾಸ್ತ್ರ ಶಾಖೆಗೆ ಯಾವುದೇ ಹೊಸ ಕೊಡುಗೆ ನೀಡುವುದಿಲ್ಲ. ಬದಲಿಗೆ ಹೊಸ ಹೊಸ ಕುರುಡು ಆಚರಣೆಗಳನ್ನು ಸೃಶ್ಟಿಸಲಾಗುತ್ತದೆ. ಜ್ಯೋತಿಶಿಗಳೇ ಸರ್ವಾಂತರ್ಯಾಮಿಗಳೂ ಸರ್ವಜ್ಞಾನಿಗಳೂ ಆಗಿ ಲೋಕದೆದುರು ಕಾಣಿಸಿಕೊಳ್ಳುತ್ತಾರೆ. ಇಂತಹವರೇ ಹುಸಿ ಹುಲ್ಲು ರಜ ವಿಶಯಗಳನ್ನು ತುಂಬಿಕೊಂಡಿರುವ ಮಾನವರು!
ಇಂತಹವರಿಂದ ಪ್ರಭಾವಗೊಳ್ಳುವ ಜನರು, ‘ಭಕ್ತರು’, ಅರಿವಿನಿಂದ ದೂರವಾಗಿ ನಾಶವಾಗುತ್ತಾರೆ. ಮಜವೆಂದರೆ ಇಶ್ಟೆಲ್ಲವನ್ನೂ ಮತ್ತೆ ಆ ಶಕ್ತಿಯ ಹೆಸರಲ್ಲಿಯೇ ಮಾಡಲಾಗುತ್ತದೆ. ದೇವರ ಹೆಸರಿನಲ್ಲಿಯೇ ಅಕ್ರಮಗಳನ್ನು ನಡೆಸಲಾಗುತ್ತಿದೆ. ಈ ಸಮಸ್ಯೆಗಳಿಗೆ ಆ ಒಡೆಯ ಪರಿಹಾರ ಸೂಚಿಸಲಿಲ್ಲ. ಮತ್ತೆ ಜನರು ಈ ಸಮಸ್ಯೆಗಳ ಮನುಶ್ಯ ಮೂಲವನ್ನು, ಹುನ್ನಾರಗಳನ್ನು ಅರಿತು ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುವುದಿಲ್ಲ.
ಹಾಗಾಗಿಯೇ ಮನುಶ್ಯರಿಗೆ ಅಂಟಿರುವ ಎಲ್ಲ ರೋಗಗಳು, ದುಶ್ಟತನಗಳು ಅದರಿಂದ ನಿತ್ಯವೂ ನಡೆಯುವ ಎಲ್ಲ ಬಗೆಯ ಕೇಡುಗಳಿಗೆ ಪರಿಹಾರವೇ ಇಲ್ಲದಂತಾಗಿದೆ. ಲೋಕ ಭೀಕರ ಕದನಗಳ, ಪೈಪೋಟಿಯ, ಹಿಂಸಾಭೂಮಿಯಾಗಿ ಪರಿವರ್ತನೆಯಾಗಿದೆ. ನಾಗರಿಕತೆಯ ಬಹುದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಇದೇ ನಾಗರಿಕತೆಯ ‘ಕಾಲಿಗೆ ಕಟ್ಟಿದ ಗುಂಡು ಕೊರಳಿಗೆ ಕಟ್ಟಿರುವ ಬೆಂಡು’. ಅದು ವೇಗವಾಗಿ ಚಲಿಸಲು ಬಿಡುವುದಿಲ್ಲ. ಬದುಕಲೂ ಬಿಡುವುದಿಲ್ಲ ಸಾಯಲೂ ಬಿಡುವುದಿಲ್ಲ.
ಹಾಗಾದರೆ ಇದಕ್ಕೆ ಪರಿಹಾರವೇನು? ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಇದಕ್ಕೆ ಬಸವಣ್ಣನ ಇತರೆ ವಚನಗಳಲ್ಲಿಯೇ ಉತ್ತರವಿದೆ. ನಡೆನುಡಿಗಳು ಒಂದಾಗಿರಬೇಕಾದ ಆಚಾರ ವಿಚಾರಗಳು ಕೂಡಬೇಕಾದ ಸಲಹೆಗಳಿವೆ. ಹಾಗೆಯೇ ಇತರೆ ಶರಣರಲ್ಲಿ ಉತ್ತರವಿದೆ. ಬುದ್ಧನಲ್ಲಿ ಉತ್ತರವಿದೆ. ಗಾಂಧಿ ಅಂಬೇಡ್ಕರ್ ಅವರಲ್ಲಿ ಉತ್ತರವಿದೆ. ಮಾನವರು ತಮ್ಮ ಅಂತರಂಗವನ್ನು ತಾವೇ ಶೋಧಿಸಿಕೊಂಡು ಅದರೊಳಗೆ ಅರಿವಿನ ಒಡೆಯನನ್ನು ಕಟ್ಟಿಕೊಳ್ಳುವ ಕೆಲಸ ಮಾಡಬೇಕಿದೆ. ಜಡಶಿಲೆಯ ಒಡೆಯನನ್ನಲ್ಲ.
ಅಂತರಂಗವೇ ಕಾಯಕದ ಅರಿವಿನ ಮನೆಯಾಗಿ ಅದೇ ಸ್ವರ್ಗವಾಗಬೇಕಿದೆ. ಅಂತಹ ಕಡೆ ಹುಸಿತನ ರಜಭಾವಗಳು ವಿಶಯಗಳ ಕ್ರೌರ್ಯ ಯಾವುದೂ ಇರಬಾರದು. ಅಂದರೆ ಎಲ್ಲ ದುರಂತಗಳಿಗೂ ಮನುಶ್ಯರೇ ನೇರ ಕಾರಣವಾಗಿರುವುದರಿಂದ ಇದಕ್ಕೆ ಮಾನವರೇ ಪರಿಹಾರವನ್ನು ಕಂಡುಕೊಳ್ಳಬೇಕು. ಇದಕ್ಕೆ ಯಾವ ‘ದೈವಿಕ ಪರಿಹಾರ’ಗಳೂ ಇಲ್ಲ. ಇದು ದುಶ್ಟಕೂಟಕ್ಕೆ ಚನ್ನಾಗಿ ತಿಳಿದಿದೆ. ಸದ್ಯ ದುಶ್ಟರಕೂಟಗಳು ಎಲ್ಲ ದೇಶಗಳಲ್ಲಿಯೂ ಅಧಿಕಾರದ ಗದ್ದುಗೆಗೇರಿರುವುದರಿಂದ ಮಾನವರ ಸಮಾಜ ನಿತ್ಯವೂ ಕ್ಶೋಭೆಗಳಲ್ಲಿ ಬೇಯುತ್ತಿದೆ. ಇದುವರೆಗಿನ ಪ್ರಪಂಚದ ಚರಿತ್ರೆಯನ್ನು ಗಮನಿಸಿದರೆ ಅಲ್ಲಿ ಇಂತಹ ದುಶ್ಟಕೂಟಗಳೇ ಆಳ್ವಿಕೆ ನಡೆಸಿರುವುದು.
ಇದನ್ನೂ ಓದಿ |ಖಾಸಗಿ ವಾಹನಗಳ ನಿರ್ವಾಹಕ-ಕ್ಲೀನರ್ ನೋಂದಣಿಗೆ ಅರ್ಜಿ ಆಹ್ವಾನ
ಹಾಗಾಗಿ ಪ್ರಭುತ್ವ ಎಂದರೇನೆ ದುಶ್ಟಕೂಟಗಳ ಐಕ್ಯತೆಯ ಚರಿತ್ರೆಯೂ ಆಗಿದೆ. ಇದನ್ನು ಮಾನವೀಯಗೊಳಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಆದರೆ ಇಂತಹ ಪ್ರಯತ್ನಗಳನ್ನು ಹತ್ತಿಕ್ಕಲಾಗಿದೆ. ದುಶ್ಟಕೂಟಕ್ಕೆ ಲಜ್ಜೆಯಿಲ್ಲ. ಪ್ರಜ್ಞಾವಂತರಿಗೆ ಸದಾ ಲಜ್ಜೆಯಿರುತ್ತದೆ. ಅವರು ಅಂಜುತ್ತಾರೆ. ಆದ್ದರಿಂದ ಇದಕ್ಕೆ ದುಶ್ಟಕೂಟದಿಂದ ಪರಿಹಾರ ಸಾಧ್ಯವಿಲ್ಲ. ಆ ಎಲ್ಲ ದುಶ್ಟತನಗಳ ಬಗೆಗೆ ಎಚ್ಚರವಿರುವ ಜಾಗೃತ ಜನರು ಸಂಘಟಿತರಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅದು ಮಾತ್ರವೇ ಮನೆಯನ್ನೂ ಮನವನ್ನೂ ಅಂತರಂಗವನ್ನೂ ಬಹಿರಂಗವನ್ನೂ ಶುದ್ಧಗೊಳಿಸಬಲ್ಲದು.
ಬುದ್ಧ ಅಂತಹ ಕೆಲಸಕ್ಕೆ ಕೈಹಾಕಿ ಸಮಾಜವನ್ನು ಕೊಂಚ ದೂರ ನಡೆಸಿಕೊಂಡು ಬಂದಿದ್ದ. ಇಂದು ಆತನ ಅನುಯಾಯಿಗಳು ಕೂಡ ಜನಾಂಗಗಳನ್ನು ನಿರ್ಮೂಲಿಸುವ ಕೆಲಸದಲ್ಲಿ ನಿರತರು. ಇಂತಹ ಪ್ರಮಾದಗಳನ್ನು ಅರಿತು ಚರಿತ್ರೆಯಿಂದ ಪಾಠ ಕಲಿತು ಸಾಧ್ಯವಾದಶ್ಟು ಮಾನವರ ಕುಲದ ಕಶ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಅಂತಹ ಪರಿಹಾರದ ದಾರಿಗಳಲ್ಲಿ ದೇವರು ಸಂಕೇತನಾಮವಾಗದೆ ಅರಿವಿನ ಮಾರ್ಗವಾಗಬೇಕಿದೆ.
ಸ್ವತಃ ಅರಿವೇ ಆಗಬೇಕಿದೆ. ‘ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ತಾಕಲಾಟಗಳಲ್ಲಿ ಪ್ರಾಮಾಣಿಕತೆಯ ಹಾದಿಯಲ್ಲಿ ಅಂತರಂಗದ ಶೋಧದಲ್ಲಿ ಸಾಗಿದರೆ ಸಮಸ್ಯೆಯಿಲ್ಲ. ಅದಿಲ್ಲದೆ ಕೇವಲ ಜಡಶಿಲೆಗೊಳಿಸಿ ದೇವರ ಹೆಸರಿನಲ್ಲಿ ಮೌಢ್ಯಾಚರಣೆಗಳ ಹುತ್ತ ಬೆಳೆಸಿ ಸ್ತುತಿಪಠಣಗಳನ್ನು ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಆಗ ಕೊನೆಗೂ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಎಂಬ ಸಂಶಯ ಉಳಿದೇ ಇರುತ್ತದೆ. ಈ ಸಂಶಯವನ್ನು ಶಾಶ್ವತವಾಗಿ ಇಲ್ಲವಾಗಿಸುವ ಬಗೆಹರಿಸುವ ಉತ್ತರಿಸುವ ‘ಬುದ್ಧಶಕ್ತಿಗಳು’ ಇನ್ನೂ ಉದಯಿಸಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243