ಲೈಫ್ ಸ್ಟೈಲ್
ಬೀದಿ ದನಗಳ ಪಾಡು ಕೇಳೋರು ಯಾರು?
- ಡಾ.ವಡ್ಡಗೆರೆ ನಾಗರಾಜಯ್ಯ
ಮೊನ್ನೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಕೋಣನಕುಂಟೆ – ಕದಿರೇನಹಳ್ಳಿಗೆ ಹೋಗಿದ್ದೆ. ಪ್ಲಾಸ್ಟಿಕ್ ಘನತ್ಯಾಜ್ಯ ಮತ್ತಿತರ ಅಪಾಯಕಾರಿ ತ್ಯಾಜ್ಯಗಳನ್ನು ತಿನ್ನುತ್ತಾ ವಿವಿಧ ರೋಗಗಳಿಗೆ ಈಡಾಗಿರುವ ಬೀಡಾಡಿ ಬೀದಿ ದನಗಳು ಕಾಣಿಸಿದವು. ಈ ದನಗಳು ಮುಖ್ಯ ರಸ್ತೆಗಳಲ್ಲಿ ಮತ್ತು ಪಾದಚಾರಿ ರಸ್ತೆಗಳಲ್ಲಿ ಅಡ್ಡ ನುಗ್ಗುತ್ತಾ ಪ್ರಯಾಣಿಕರಿಗೆ ತೊಂದರೆದಾಯಕವಾಗಿ ಪರಿಣಮಿಸುತ್ತಲೂ ಇವೆ.
ಬಹಳ ಹಿಂದಿನಿಂದಲೂ ಇಲ್ಲಿ ಮಾಲೀಕರು ಯಾರೆಂಬುದು ತಿಳಿದಿರದ ಬೀಡಾಡಿ ದನಗಳು ವಾಸಿಸುತ್ತಿವೆ ಎಂಬುದು ತಿಳಿದುಬಂದಿತು. ರಸ್ತೆ ಅಪಘಾತಗಳಿಗೆ ಸಿಲುಕುತ್ತಿರುವ ಈ ದನಗಳಲ್ಲಿ ಕೆಲವು ಕಾಲು ಮುರಿದು, ಕೊಂಬು ಮುರಿದು, ಮೈಮೇಲೆ ಗಾಯಗಳಾಗಿ ನರಳಿ ಸತ್ತಿದ್ದರೆ ಮತ್ತೆ ಕೆಲವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇವಿಸಿ ಸತ್ತುಹೋಗಿವೆ. ಇಲ್ಲಿ ನಾನು ನೋಡಿದ ದನಗಳ ಪಾದಗಳ ಗೊರಸುಗಳು ರೋಗಪೀಡಿತವಾಗಿ ಅಸ್ತವ್ಯಸ್ತವಾಗಿ ಬೆಳೆದಿದ್ದು ದನಗಳು ಕುಂಟುತ್ತಾ ನಡೆಯುತ್ತಿದ್ದವು.
ಘನತ್ಯಾಜ್ಯಗಳ ತಿಪ್ಪೆಯಲ್ಲಿ ಮೇಯುವಾಗ ಮತ್ತು ಟಾರ್ (ಡಾಂಬರು) ರಸ್ತೆಗಳ ಮೇಲೆ ನಡೆಯುವಾಗ ಚೂಪಾದ ನೊರಜು ಕಲ್ಲುಗಳನ್ನು, ಹರಿತವಾದ ಗಾಜಿನ ಚೂರುಗಳನ್ನು, ಕಬ್ಬಿಣದ ಮೊನಚು ಚೂರುಗಳನ್ನು ಮುಂತಾದ ವಸ್ತುಗಳನ್ನು ತುಳಿದು ಈ ದನಗಳ ಪಾದಗಳು ಹೀಗಾಗಿರಬಹುದು.
ಅನೇಕ ರೀತಿಯ ಚರ್ಮರೋಗ, ಹೊಟ್ಟೆಯುಬ್ಬರ ಮುಂತಾದ ಕಾಯಿಲೆಗಳಿಗೆ ಈಡಾಗಿರುವ ಈ ದನಗಳಿಗೆ ಚಿಕಿತ್ಸೆ ನೀಡಬೇಕಾದದ್ದು ಯಾರ ಕರ್ತವ್ಯ? ಯಾವುದೇ ದನಕ್ಕೆ ಹಗ್ಗ ಮೂಗದಾರ ಕೊರಳದಾರ ಮೊಕಾಡ ಇರುವುದಿಲ್ಲ.
ಈ ದನಗಳು ಮೇವು ನೀರಿಗಾಗಿ ಅಲೆದಾಡುವಾಗ ಕೆಲವೊಮ್ಮೆ ಅಂಗಡಿಗಳ ವಸ್ತುಗಳಿಗೆ ಬಾಯಾಕುತ್ತವೆ. ಮನೆಗಳ ಮುಂದಿರುವ ಮರಗಿಡಗಳಿಗೆ ಬಾಯಾಕುತ್ತವೆ. ಈ ಮೂಕದನಗಳ ಮೇಲೆ ಕರುಣೆ ಇಲ್ಲದ ಜನ ತುಂಡುಕೋಲು ಪ್ಲಾಸ್ಟಿಕ್ ಪೈಪು ಕಬ್ಬಿಣದ ಕಂಬಿ ಮುಂತಾದ ವಸ್ತುಗಳಿಂದ ನಿರ್ದಯವಾಗಿ ಬಾರಿಸಿ ಓಡಿಸುತ್ತಾರೆ.
ಮೈಮೇಲೆ ಆಸಿಡ್ ಎರಚಿರುವ ಪ್ರಕರಣಗಳೂ ನಡೆದಿವೆ. ಇಂತಹ ದನಗಳ ಕ್ಷೇಮಪಾಲನೆ ಯಾರ ಹೊಣೆ? ಸ್ಥಳೀಯ ಜನ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಗೋಹತ್ಯೆ ನಿಷೇಧಕ್ಕೆ ಒತ್ತಾಯಿಸುತ್ತಿರುವ ಮತ್ತು ಗೋಸಂರಕ್ಷಣೆ ಹೆಸರಿನಲ್ಲಿ ನರಭಕ್ಷಣೆ ಮಾಡುತ್ತಾ ಉದ್ದುದ್ದ ಗೋಪ್ರಮೇಯಗಳನ್ನು ಮಂಡಿಸುತ್ತಿರುವ ಭಕ್ತರು ಎಲ್ಲಿ ಅಡಗಿ ಕುಳಿತಿದ್ದಾರೆ?
ನಾನು ನೋಡುತ್ತಾ ನಿಂತಿರುವಾಗಲೇ ಹತ್ತಾರು ದನಗಳು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಅಡ್ಡಹಾಯ್ದು ನಡೆದು ಹೋದವು. ವಿಡಿಯೋ ಚಿತ್ರೀಕರಿಸುವ ಆಲೋಚನೆ ಹೊಳೆದಾಗ ಒಂದು ಹಸು ಮಾತ್ರ ಹೀಗೆ ಪ್ರಯಾಸದಿಂದ ಕುಂಟುತ್ತಾ ನಡೆದು ಹೋಗುತ್ತಿದ್ದದ್ದು ನನ್ನ ಮೊಬೈಲಿನಲ್ಲಿ ಚಿತ್ರೀಕರಣಗೊಂಡಿತು.
ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ
https://m.facebook.com/story.php?story_fbid=1202147213313167&id=100005536987797
ಸುದ್ದಿದಿನ.ಕಾಂ|ವಾಟ್ಸಾಪ್|9980346243