ಬಹಿರಂಗ
ಪಾದಪೂಜೆ ಮತ್ತು ಪಾದೋದಕ ಸೇವನೆ ಎಂಬ ಅನಿಷ್ಟ ಪದ್ದತಿ
ನಾನು ಅಪಾರವಾಗಿ ಗೌರವಿಸುವ ಯುವ ಸಮಾಜವಾದಿ ಚಿಂತಕ, ಸಾಮಾಜಿಕ ಕಾರ್ಯಕರ್ತ, ಗೆಳೆಯ ಜಿ.ಟಿ.ನರೇಂದ್ರಕುಮಾರ್ ಅವರು, ನಿನ್ನೆ ದಿನ ಸಂಜೆ ನನಗೆ ಫೋನಾಯಿಸಿ, ಜಾರ್ಖಂಡ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿರಿಯ ಬಿಜೆಪಿ ಕಾರ್ಯಕರ್ತರೋರ್ವರು ತಮ್ಮ ಪಕ್ಷದ ಗೊಡ್ಡ ಕ್ಷೇತ್ರದ ಸಂಸದ ನಿಶಿಕಾಂತ್ ದುಬೆ ಅವರ ಪಾದಗಳನ್ನು ತೊಳೆದು ಆ ನೀರನ್ನು ಸೇವಿಸಿದ ಅಸಹ್ಯಕರ ಘಟನೆ ಕುರಿತು ಮಾತನಾಡಿದರು.
ನಮ್ಮ ಮಾತು ಬಸವಮೂರ್ತಿ ಮಾದಾರ ಚೆನ್ನಯ್ಯನು ಪಾದ ಪೂಜೆ ಮಾಡಿಸಿಕೊಂಡ ಅವೈಜ್ಞಾನಿಕ ನಡೆಯ ಕಡೆಗೆ ಹಾಗೂ ನಾನು ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ ಕಡೆಗೆ ಹೊರಳಿಕೊಂಡಿತು. ಬುದ್ಧಗುರು – ಬಸವಣ್ಣ- ಗಾಂಧಿ- ಅಂಬೇಡ್ಕರ್- ಲೋಹಿಯಾ- ಕುವೆಂಪು ಮುಂತಾದವರ ವೈಚಾರಿಕ ಚಿಂತನೆಗಳನ್ನು ಅಪಾರವಾಗಿ ಓದಿಕೊಂಡಿರುವ ಜಿ.ಟಿ.ನರೇಂದ್ರಕುಮಾರ್, ಭಾರತದ ಮೊದಲನೇ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಅವರು ಕಾಶಿಯಲ್ಲಿ ಪಂಕ್ತಿಯಲ್ಲಿ ಕುಳಿತಿದ್ದ ನೂರಾರು ಬ್ರಾಹ್ಮಣರ ಪಾದಪೂಜೆ ಮಾಡಿದ ಕಾರಣ, ರಾಮಮನೋಹರ ಲೋಹಿಯಾ ಅವರ ಕಟು ಟೀಕೆಗೆ ಗುರಿಯಾಗಿ, ತಮ್ಮ ಜೀವಮಾನದಲ್ಲಿ ಮತ್ತಿನ್ನೆಂದೂ ಪಾದಪೂಜೆ ಮಾಡದಂತೆ ಸುದ್ದಿಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಅಪಮಾನಕ್ಕೆ ಗುರಿಯಾದ ಚಾರಿತ್ರಿಕ ಸನ್ನಿವೇಷ ಕುರಿತು ನನ್ನ ಗಮನಕ್ಕೆ ತಂದರು.
ಬಸವಮೂರ್ತಿ ಮಾದಾರ ಚೆನ್ನಯ್ಯನು ಬ್ರಾಹ್ಮಣ ಮತ್ತು ಲಿಂಗಾಯತ ದಂಪತಿಗಳಿಂದ ಪಾದಪೂಜೆ ಮಾಡಿಸಿಕೊಂಡ ಘಟನೆಯನ್ನು ಕುರಿತು ನಾನು ಸಾಮಾಜಿಕ ಜಾಲತಾಣದಲ್ಲಿ ಬರೆದದ್ದನ್ನು ಓದಿದ್ದ ಕೆಲವು ಚೆನ್ನಯ್ಯಾಭಿಮಾನಿ ಗೆಳೆಯರು, ನಮ್ಮ ನರೇಂದ್ರಕುಮಾರ್ ಅವರಿಗೆ ಫೋನ್ ಮಾಡಿ, “ಮೊದಲೇ ನಾವು ಮಾದಿಗರು ಹಿಂದುಳಿದಿದ್ದೇವೆ… ವಡ್ಡಗೆರೆ ಅವರಿಗೆ ಹೀಗೆಲ್ಲಾ ಬರೆಯಬಾರದು ಅಂತಾ ತಾಕೀತುಮಾಡಿ ಹೇಳಿ ಸರ್…. ವಡ್ಡಗೆರೆ ನಿಮ್ಮ ಮಾತು ಕೇಳುತ್ತಾರೆ’” ಎಂದು ಕೇಳಿಕೊಂಡಿದ್ದಾರೆ.
ಅದೇ ಕೆಲವು ಗೆಳೆಯರು, “ಹೊಲೆಮಾದಿಗರ ಸ್ವಾಮೀಜಿಗಳ ವಿಷಯ ಬಂದಾಗ ಮಾತ್ರ ವೈಚಾರಿಕ ಪ್ರಜ್ಞೆ ಜಾಗೃತವಾಗಿ ಟೀಕಿಸುವ ಪ್ರಗತಿಪರ ಚಿಂತಕರು ಬ್ರಾಹ್ಮಣ, ಲಿಂಗಾಯತ, ವಕ್ಕಲಿಗ, ಕುರುಬ, ಕುಂಬಾರ, ತಿಗಳ, ಈಡಿಗ, ನಾಯಕ ಮುಂತಾದ ಜನಾಂಗಗಳ ಸ್ವಾಮೀಜಿಗಳ ಬಗ್ಗೆ ಟೀಕಿಸದೆ ಮೌನವಹಿಸುವಿರೇಕೆ?” ಎಂದು ನನ್ನನ್ನು ಪ್ರಶ್ನಿಸುತ್ತಿದ್ದಾರೆ.
ಇವರ ಪ್ರಶ್ನೆ ಹೇಗಿದೆ ಎಂದರೆ – “ಜಾತೀಯತೆ ಎಲ್ಲಿದೆ? ನಾವು ಮೇಲ್ಜಾತಿಯವರು ನಿಜ. ಆದರೆ ಜಾತೀಯತೆ ನಮ್ಮಲ್ಲಿಲ್ಲ. ನೀವು ಜಾತಿಭೇದಕ್ಕೆ ಮೇಲ್ಜಾತಿಗಳನ್ನು ಮಾತ್ರ ಗುರಿಮಾಡಿ ಮಾತಾಡುತ್ತೀರಲ್ಲಾ ಯಾಕೆ…. ನಿಮ್ಮ ನಿಮ್ಮೊಳಗೇ ಎಡಗೈ ಬಲಗೈ ಹೀಗೆ ಎಷ್ಟೊಂದು ಭೇದವಿದೆ…. ಮೊದಲು ನೀವು ಸರಿಯಾಗಿರಿ…” ಹೀಗೆ ವಿವೇಕರಾಹಿತ್ಯವಾಗಿ ಕೇಳುವ ಮನೋಧೋರಣೆಗಿಂತ ನನ್ನನ್ನು ಕೇಳಿರುವ ಪ್ರಶ್ನೆ ಬೇರೆಯಲ್ಲ. ಜಾತಿ ಹೇರಿದವರೇ ಹೀಗೆ ಜಾತೀಯತೆ ನಿಮ್ಮೊಳಗೇ ಇದೆ ಎಂದು ದಲಿತರ ಕಡೆಗೇ ಬೊಟ್ಟು ಮಾಡಿದರೆ ದಲಿತರು ಯಾರನ್ನು ದೂರಬೇಕು? ಜಾತಿಭೇದ ದಲಿತರು ಮಾತ್ರ ಸೃಷ್ಟಿಸಿಕೊಂಡು ಪೋಷಿಸುತ್ತಿರುವ ಸಂಗತಿಯೇನು?
ನಾನು ವೈಯಕ್ತಿಕವಾಗಿ ನನ್ನ ಅನುಭವ ಪರಿಧಿಗೆ ಬಂದ ಯಾವುದೇ ಮೌಢ್ಯವನ್ನು ನನ್ನದೇ ಮಿತಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ವೈಚಾರಿಕವಾಗಿ ಮುಖಾಮುಖಿಯಾಗುತ್ತಾ ಬಂದಿದ್ದೇನೆ. ಸಹಜವಾಗಿ ಅನೇಕ ಜಾತಿಗಳ ಬಹುತೇಕ ಸ್ವಾಮೀಜಿಗಳು ನನ್ನ ವೈಚಾರಿಕ ವಿಮರ್ಶೆಗೆ ಒಳಗಾಗಿದ್ದಾರೆ. ನನ್ನಲ್ಲಿರುವ ಮೌಢ್ಯದ ಮುಖಕ್ಕೆ ಯಾರೇ ಕನ್ನಡಿ ಹಿಡಿದರೂ ನಾನು ತಿದ್ದಿಕೊಳ್ಳಲು ಸಿದ್ಧನಾಗಿದ್ದುಕೊಂಡೇ ವಿಮರ್ಶಿಸುವುದು ನನ್ನ ಜಾಯಮಾನ.
ಮಾದಾರ ಚೆನ್ನಯ್ಯ ಪಾದಪೂಜೆ ಮಾಡಿಸಿಕೊಂಡಿರುವ ಸಂಗತಿ ಖಂಡನೀಯವಾದುದು. ವ್ಯಕ್ತಿಯ ಕಾಲು ತೊಳೆದ ನೀರು ಪವಿತ್ರ ತೀರ್ಥವಲ್ಲ, ಅದು ಕಲುಷಿತ ನೀರು. ಅದು ಕುಡಿಯಲಾಗಲೀ, ಅಡುಗೆಗೆ ಬಳಸಲಾಗಲೀ ಯೋಗ್ಯವಲ್ಲ, ಅದರಿಂದ ರೋಗ- ರುಜಿನಗಳು ಬರುತ್ತವೆ. ಇಷ್ಟು ಪ್ರಾಥಮಿಕ ತಿಳಿವಳಿಕೆ ಇರುವ ಯಾವುದೇ ವ್ಯಕ್ತಿ ತನ್ನ ಪಾದ ತೊಳೆಸಿಕೊಂಡು ಆ ನೀರನ್ನು ಇತರರಿಗೆ ಕುಡಿಸಲಾರ. ಇತರರ ಪಾದ ತೊಳೆದು ತಾನೂ ಕುಡಿಯಲಾರ.
ಸರಿ.ಈಗ ಗೆಳೆಯರು ನನ್ನನ್ನು ಕೇಳಿದ ಪ್ರಶ್ನೆಗೆ ಬರೋಣ…
ಮಠಪೀಠಗಳ ಗುರುಪದವಿ ಅಲಂಕರಿಸಿ ಕುಳಿತಿರುವ ದಲಿತ ಹಿಂದುಳಿದ ಜನಾಂಗಗಳ ಸ್ವಾಮೀಜಿಗಳಿಗೇನಾಗಿದೆ? ಅವರಿಗೆ ರಾಜಕೀಯ ಮೋಹವಿದ್ದರೆ ಕಾವಿ ಕಳಚಿ ಬಿಸಾಕಿ ಖಾದಿ ತೊಟ್ಟುಕೊಳ್ಳಲಿ. ಕಾವಿ ಕಿತ್ತೆಸೆದು ರಾಜಕೀಯಕ್ಕೆ ಬರುವುದಷ್ಟೇ ಅಲ್ಲ, ಸಂಸಾರ ಕಟ್ಟಿಕೊಳ್ಳಲು ಬಯಸಿದರೆ ಮದುವೆಯನ್ನೂ ಆಗಲಿ. ಕಾವಿ ತೊಟ್ಟು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಸಿದ್ಧಾಂತಕ್ಕೆ ಬದ್ದವಾಗಿ ನಡೆದುಕೊಳ್ಳಬೇಕಾದ ಹಂಗಿಗೆ ಬಿದ್ದ ಬಳಿಕವೂ, ತಾವು ಧರ್ಮಾಧಿಕಾರಿಗಳಾಗಿ ತಮ್ಮ ಸಮಾಜದ ಜನರಿಗೆ ಯಾವ ಧರ್ಮಬೋಧೆ ಮತ್ತು ದಾರ್ಶನಿಕತೆಯನ್ನು ತಿಳಿಸಿಕೊಡಲು ಸಾಧ್ಯ?
ಕಾವಿ ತೊಟ್ಟು ಬಸವಮೂರ್ತಿ ಮಾದಾರ ಚನ್ನಯ್ಯ ಎಂಬ ಹೆಸರಿಟ್ಟುಕೊಂಡಿರುವ ಕೃಷ್ಣಮೂರ್ತಿ, ಘನಶರಣರಾದ ಬಸವಣ್ಣ ಮತ್ತು ಮಾದಾರ ಚೆನ್ನಯ್ಯನವರ ಧ್ಯೇಯ – ತತ್ವಾದರ್ಶಗಳಿಗೆ ವಿರುದ್ಧವಾಗಿ ಯಾಕೆ ನಡೆದುಕೊಳ್ಳಬೇಕು? ಇವತ್ತು ರಾಜಕೀಯ ಪಕ್ಷಗಳ ಪರ ವಿರೋಧ ಚಿಂತನೆಗಳನ್ನು ಪ್ರಚಾರ ಮಾಡಿಕೊಂಡು ಗಬ್ಬೆದ್ದು ನಾರುತ್ತಿರುವ ರಾಜಕೀಯದ ಗಾಳಕ್ಕೆ ಸಿಲುಕಿದ ಮೀನಾಗಬೇಕೇನು ಈ ಸ್ವಾಮೀಜಿ? ಪುರೋಹಿತಶಾಹಿ ವ್ಯವಸ್ಥೆಗೆ ಕಾವಲು ನಾಯಿಯಾದ ಚೆನ್ನಯ್ಯನಂತಹ ಮತ್ತಾವ ಸ್ವಾಮೀಜಿಯನ್ನೂ ದಲಿತರಲ್ಲಿ ನಾಕಾಣೆನು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯು ವ್ಯಾವಹಾರಿಕವಾಗಿ ಮಾತ್ರ ಚೆನ್ನಯ್ಯನ ಹೆಸರು ಹೇಳಿಕೊಳ್ಳುತ್ತಾರೆಯೇ ವಿನಃ, ಆಂತರಿಕವಾಗಿ, ಧಾರ್ಮಿಕವಾಗಿ, ಬೌದ್ಧಿಕವಾಗಿ ಎಂದಿಗೂ ವಚನಕಾರ ಮಾದಾರ ಚೆನ್ನಯ್ಯನಂತೆ ಯೊಚಿಸಿದವರಲ್ಲ,.
ಯಾರೇ ಸ್ವಾಮೀಜಿಯಾದವರಿಗೆ ಬೇಕಿರುವುದು ರಾಜಕೀಯ ಪ್ರಜ್ಞೆಯೇ ಹೊರತು, ತಂತ್ರ ಪ್ರತಿತಂತ್ರ ವ್ಯೂಹದ ರಾಜಕೀಯವಲ್ಲ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಹಾಗೂ ಎಲ್ಲಾ ತತ್ವ ಸಿದ್ಧಾಂತಗಳಲ್ಲಿ ದಲಿತರು ಇರುತ್ತಾರೆ. ಹೀಗಿರುವಾಗ ತಮ್ಮ ಸ್ವಾಮಿಗಳ ಮಾತು ಕೇಳಿಕೊಂಡು ದಲಿತರೆಲ್ಲರೂ ಪಕ್ಷರಾಜಕಾರಣಕ್ಕಿಳಿದು ಪರಸ್ಪರ ಕಚ್ಚಾಡಲು ಸಾಧ್ಯವಿಲ್ಲ. ಸ್ವಾಮಿಯಾದವನಿಗೆ ಬೇಕಾಗಿರುವುದು ಜನರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಶ್ರದ್ಧೆಯೇ ಹೊರತು ಜನರ ರಾಜಕೀಯವಲ್ಲ.
ಈಗ ನಾನು ಹೇಳಹೊರಟಿರುವುದು ಬುದ್ಧಗುರು – ಬಸವಣ್ಣ – ಅಂಬೇಡ್ಕರ್ ಸಿದ್ಧಾಂತಗಳ ಬಗ್ಗೆ. ಕೋಮುವಾದದ ಬಗ್ಗೆ. ದಲಿತ ಸಮುದಾಯಗಳ ಸ್ವಾಭಿಮಾನವನ್ನು ಬ್ರಾಹ್ಮಣ್ಯದ ಅಮಲಿನಲ್ಲಿ ಹರಾಜು ಹಾಕುತ್ತಿರುವುದರ ಬಗ್ಗೆ. ದಲಿತ ಸಮುದಾಯವನ್ನು ಆರೆಸ್ಸೆಸ್ ಗೆ ಅಥವಾ ಸಂಘಪರಿವಾರಕ್ಕೆ ಮಾರ್ಟ್ಗೇಜ್ ಮಾಡಲು ಪ್ರಯತ್ನಿಸುತ್ತಿರುವುದರ ಬಗ್ಗೆ.
ದಲಿತರ ಸ್ವಾಬಿಮಾನ ನಮ್ಮ ಪೂರ್ವಿಕ ವೈಚಾರಿಕ ನಡೆಗಳನ್ನು ಬ್ರಾಹ್ಮಣ್ಯ ವಿರೋಧಿ ಬಂಡುಕೋರ ದಂಗೆಗಳನ್ನು ಗೌರವಿಸುವುದು ಮತ್ತು ಊರ್ಜಿತಗೊಳಿಸುವುದರಲ್ಲಿದೆ.
ವೈಯಕ್ತಿಕ ಸ್ವಾರ್ಥಕ್ಕಾಗಿ ಸಂಘಿಯಾಗಿರುವ ಬಸವಮೂರ್ತಿ ಮಾದಾರ ಚನ್ನಯ್ಯ, ಆರೆಸ್ಸೆಸ್ ಬೈಟಕ್ ಗಳನ್ನು ಚಿತ್ರದುರ್ಗದ ತನ್ನ ಮಠದಲ್ಲಿಯೇ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹೀಗಿರಲು ಬಸವಣ್ಣನಿಂದ ವಂದ್ಯನಾದ ಶರಣ ಮಾದಾರ ಚನ್ನಯ್ಯನಾಗುವ ಯೋಗ್ಯತೆಯಂತೂ ಇಲ್ಲದ ಬಳಿಕ, ಮತ್ತೊಮ್ಮೆ ಕೃಷ್ಣಮೂರ್ತಿ ಆಲಿಯಾಸ್ ಕಿಟ್ಟಿಯಾಗಲು ನಮಗಾವ ಆಕ್ಷೇಪವೂ ಇಲ್ಲ. ಕಿಟ್ಟಿ ಯಾವತ್ತಿಗೂ ಶರಣ ಮಾದಾರ ಚೆನ್ನಯ್ಯನಾಗಲಾರ.. ನಮ್ಮ ಬೊಟ್ಟು ನಮ್ಮ ಕಣ್ಣನ್ನೇ ಚುಚ್ಚುತ್ತಿರುವಾಗ ನನಗೆ ಪ್ರಶ್ನೆ ಕೇಳಿದ ಗೆಳೆಯರು ಈ ಸಾಮಾಜಿಕ ವಾಸ್ತವವನ್ನೇಕೆ ಅರ್ಥಮಾಡಿಕೊಳ್ಳುತ್ತಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಒತ್ತೆ ಬಿದ್ದ ಸ್ವಾಮಿಗಳು ಧರ್ಮ ಮತ್ತು ದಾರ್ಶನಿಕತೆಯನ್ನು ಕುರಿತು ಹೇಗೆ ಹೇಳಬಲ್ಲರು ಏನಂತ ಹೇಳಬಲ್ಲರು? ಬಸವಮೂರ್ತಿ ಮಾದಾರ ಚನ್ನಯ್ಯ ತಮ್ಮ ಪೀಠಕ್ಕೆ ರಾಜಿನಾಮೆ ಕೊಟ್ಟು ಫುಲ್ ಟೈಮ್ ಸಂಘಪರಿವಾರದ ಕಾರ್ಯಕರ್ತರಾಗಿರಲಿ ಯಾರು ಬೇಡ ಅಂತಾರೆ?
ಬಸವಮೂರ್ತಿ ಮಾದಾರ ಚೆನ್ನಯ್ಯ ಎಂಬ ಹೆಸರಿಟ್ಟುಕೊಂಡು ಕನಿಷ್ಟ ಆ ಹೆಸರಿಗಾದರೂ ಒಂದು ತೂಕ ಬರುವಂತಹ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ದಲಿತರ ಮತ್ತು ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಗೋಹತ್ಯಾ ನಿಷೇಧ ಅಜೆಂಡವನ್ನು ಬೆಂಬಲಿಸುವುದು, ರಾಮ ಮಂದಿರದ ನಿರ್ಮಾಣ ಕಾರ್ಯದಲ್ಲಿ ದಲಿತರು ಕೈಜೋಡಿಸಬೇಕೆನ್ನುವುದು, ಹೋಮ ಹವನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಮತಾಂತರ ನಿಷೇಧ ಮಸೂದೆ ಜಾರಿಯಾಗಬೇಕೆಂದು ಒತ್ತಾಯಿಸುವುದು, ಹಿಂದೂ ಸಮಾಜೋತ್ಸವಗಳಲ್ಲಿ ಭಾಗವಹಿಸುವುದ ಇಂತಹವೇ ರೀತಿಯ ಸಂಘಪರಿವಾರದ ಅಜೆಂಡಾಗಳನ್ನು ಬೆಂಬಲಿಸುವ ಈ ಸ್ವಾಮೀಜಿಯ ಮನಸ್ಥಿತಿ ನೋಡಿದರೆ, ಈತ ನಿಜವಾಗಿಯೂ ದಲಿತ ಸಮುದಾಯದವನೇ, ಅಂಬೇಡ್ಕರ್ ಹೆಸರೆತ್ತಲು ಯೋಗ್ಯನೇ ಎಂಬ ಪ್ರಶ್ನೆ ಮೂಡುತ್ತದೆ. ಕೋಮುವಾದ ಮತ್ತು ಭ್ರಷ್ಟಾಚಾರದ ಮಹಾ ರೂಪಕದಂತಿರುವ ಯಡಿಯೂರಪ್ಪನನ್ನು ಶರಣ ಬಸವಣ್ಣನೊಂದಿಗೆ ಹೋಲಿಸುವುದು, ಲ್ಯಾಂಡ್ ಡೀಲಿಂಗ್ ಮುಂತಾದವೆಲ್ಲಾ ಸ್ವಾಮೀಜಿಯಾದವನಿಗೆ ಯಾಕೆ ಬೇಕು?
ಹೇಳಿಕೇಳಿ ಬಸವಮೂರ್ತಿ ಮಾದಾರ ಚೆನ್ನಯ್ಯ, ಚಿತ್ರದುರ್ಗದ ಮುರುಘರಾಜೇಂದ್ರ ಶರಣರ ಶಿಷ್ಯನಾಗಿ ಲಿಂಗದೀಕ್ಷೆ ಪಡೆದುಕೊಂಡವರು. ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸಿದ ಶರಣರು, ದೇಹವನ್ನೇ ದೇವಾಲಯವೆಂದು ಭಾವಿಸಬೇಕಾಗಿಯೂ, ಚಿತ್ಕಳಾರೂಪ ಪ್ರಜ್ವಲನದ ಸಂಕೇತವಾದ ಕರಸ್ಥಲ ಲಿಂಗದ ಹೊರತು ಅನ್ಯ ಸ್ಥಾವರರೂಪಿ ದೇವಾಲಯಗಳಿಗೆ ಹೋಗಬಾರದಾಗಿಯೂ ಶರಣಧರ್ಮದ ವಚನ ಸಂವಿಧಾನ ತಿಳಿಸುತ್ತದೆ. ವಚನ ಸಂವಿಧಾನದ ಘನ ಉದ್ದೇಶವೇ ಜನರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ಸಕಲ ಜೀವಮಂಡಲಕ್ಕೆ ಲೇಸು ಬಯಸುವ ಸಮದರ್ಶನ ಭಾವವನ್ನು ಜಾಗೃತಗೊಳಿಸುವುದಾಗಿದೆ. ಇಂತಹ ಶರಣಧರ್ಮದ ವೈಚಾರಿಕತೆಯ ದಾರಿಯಲ್ಲಿ ನಡೆಯಬೇಕಾದವರು ಪುರೋಹಿತಶಾಹಿಯು ಹೇರಿದ ಗೊಡ್ಡು ಆಚರಣೆಗಳು ಸಂಪ್ರದಾಯಗಳು ಮತ್ತು ವಿಚಾರಗಳನ್ನು ಪೋಷಿಸಲು ಮುಂದಾಗಿರುವುದು ವಿಷಾದನೀಯ ಸಂಗತಿ. ಗುಲಾಮಗಿರಿಯನ್ನು ಕಿತ್ತೊಗೆಯಬೇಕಾದ ಜನರೇ ಬ್ರಾಹ್ಮಣಶಾಹಿಯನ್ನು ಮುದ್ದುಮಾಡಲು ಹೋಗಿ ಪಾದಪೂಜೆ ರೂಪದಲ್ಲಿ ಮತ್ತೆ ಗುಲಾಮಿತನವನ್ನು ಹೇರಿಕೊಳ್ಳುವುದು ಸರಿಯೇನು?
ಆದಿಜಾಂಬವರ ಮಹಾ ದಾರ್ಶನಿಕನಾದ ಮಾತಂಗಮುನಿ ಬ್ರಾಹ್ಮಣ್ಯದ ವಿರುದ್ಧ ಬಂಡೆದ್ದವನು. ಬುದ್ಧಗುರು ಬ್ರಾಹ್ಮಣ್ಯದ ವಿರುದ್ಧ ಹೋರಾಡಿದವನು. ಬಸವಣ್ಣ ದಂಗೆ ಎದ್ದದ್ದೂ ಇದೇ ಬ್ರಾಹ್ಮಣ್ಯದ ವಿರುದ್ಧ. ಕುವೆಂಪು, ಪೆರಿಯಾರ್, ನಾರಾಯಣ ಗುರು ಮುಂತಾದವರು ಸೆಣೆಸಿದ್ಷು ಇದರ ವಿರುದ್ಧವೇ. ಹೀಗಿರಲು ಚೆನ್ನಯ್ಯ ಈ ಬ್ರಾಹ್ಮಣ್ಯದ ಕಾವಲು ನಾಯಿ ಆಗಬೇಕೇನು? ನಮಗೆ ನಮ್ಮ ತಳಸ್ತರರ ಬಹು ಸಂಸ್ಕೃತಿ ಮತ್ತು ಪರಂಪರೆ ಮುಖ್ಯವೋ ಅಥವಾ ಬಹುತ್ವಕ್ಕೆ ವಿರೋಧಿಯಾದ ಏಕಾಕಾರಿ ವೈದಿಕ ಸಂಸ್ಕೃತಿಯ ಭಜನೆ ಮಾಡುವುದು ಮುಖ್ಯವೋ..? ಇಡೀ ರಾಜ್ಯದ ಪ್ರಜ್ಞಾವಂತ ಪ್ರಜ್ಞಾವಂತರು ಸಮಾನತೆಯ ಆಸೆಯಿಂದ ಲಿಂಗಾಯತ ಧರ್ಮದ ನಿರೀಕ್ಷೆಯಲ್ಲಿದ್ದರೆ, ಮಾದಾರ ಚೆನ್ನಯ್ಯನು ಪುರೋಹಿತಶಾಹಿಯ ಗುಲಾಮಗಿರಿ ಮಾಡುತ್ತಾ ಬ್ರಾಹ್ಮಣ್ಯದ ಕೊಚ್ಚೆ ಮೋರಿಯಲ್ಲಿಯೇ ಸುಖ ಅನುಭವಿಸುತ್ತಾ ಇದ್ದಾರೆಂದರೆ ಏನು ಹೇಳೋಣ?
ಲೇಖಕರು – ಡಾ. ವಡ್ಡಗೆರೆ ನಾಗರಾಜಯ್ಯ
ಬೆಂಗಳೂರು
ಮೊ.ಸಂ : 8722724174