ಅಂತರಂಗ
ಬರಿಗಾಲಲ್ಲಿ ಭಾರತ ಸುತ್ತಿ ಬಂದ ; ನೊಂದ ಹೃದಯವ ಸಾಂತ್ವಾನಿಸುವ ‘ಟಿ.ವಿನಾಯಕ್ ಸಾಧನೆ ಗಾಥೆ’ !
ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಚಿಂತನೆ, ಒಂದೊಂದು ಗುರಿ, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯ ಸಾಧನೆ. ಕೆಲವರದ್ದು ಸ್ವಹಿತಾಸಕ್ತಿ, ಸ್ವಯಂ ಅಭಿವೃದ್ಧಿಯ ಹೋರಾಟವಾದರೆ ಕೆಲವೇ ಕೆಲವರದ್ದು ಮಾತ್ರ ಲೋಕ ಕಲ್ಯಾಣಾರ್ಥ ಸೇವಾ ಭಾವನೆ. ಈ ಕೆಲವರ ಸಾಲಿನಲ್ಲಿ ನಿಂತು ಸಾಮಾಜಿಕ ಸೇವೆಯಗುರಿ ಹೊತ್ತು ಸಾಗುತ್ತಿರುವ ಟಿ. ವಿನಾಯಕ್ ನೊಂದ ಹೃದಯಗಳ ಆಪ್ತ ಸಲಹೆಗಾರರೆನಿಸಿದ್ದಾರೆ.
ಒಂದಷ್ಟು ಪರಿಚಯ
ಹುಬ್ಬಳ್ಳಿ ಹತ್ತಿರದ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಗ್ರಾಮದ ನಿವಾಸಿಗಳಾದ ಮಾಲೋಜಿರಾವ್ ಮತ್ತು ಅಕ್ಕೂಬಾಯಿ ದಂಪತಿಗಳ ಸುಪುತ್ರರಾಗಿ 1975 ರಲ್ಲಿ ಜನಿಸಿದ ಟಿ. ವಿನಾಯಕ್ ಅವರದ್ದು ಸದಾ ನೊಂದ ಹೃದಯಗಳ ಸೇವೆಗಾಗಿ ಮಿಡಿವ ಮನಸ್ಸು. ಅತಿ ಹೆಚ್ಚು ಓದಿದ ವಿದ್ಯಾವಂತರಿರುವ ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಸಹ ಅವರಿಗೆ ಆರಂಭದಲ್ಲಿ ಶಿಕ್ಷಣದ ಬಗ್ಗೆ ನಿರಾಸಕ್ತಿ ಇತ್ತು. ಮನಸ್ಸು ಯಾವುದೋ ಕೊರತೆಯನ್ನು ಅನುಭವಿಸುತ್ತಿತ್ತು. ಶೈಕ್ಷಣಿಕ ಸಾಧನೆಯ ಆಚೆ ಇನ್ನೂ ಏನನ್ನೋ ಹೊಸತು ಸಾಧಿಸಬೇಕೆಂಬ ಸೆಳೆತ ಕಾಡುತ್ತಿತ್ತು. ಪರಿಣಾಮವಾಗಿ 10ನೇ ತರಗತಿ ನಂತರ ಅಧ್ಯಾತ್ಮಿಕತೆಯ ಕಡೆ ಮುಖ ಮಾಡಿ 19 ನೇ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೊರ ನಡೆದು ಹಿಮಾಲಯದೆಡೆಗೆ ಪಯಣಿಸಿದರು.
ಪಾದಯಾತ್ರೆ – ಭಾರತದರ್ಶನ
ವಿವಿಧ ರಾಜ್ಯಗಳ ಜನಜೀವನ ವೇಷಭೂಷಣ, ಕಲೆ-ಸಂಸ್ಕøತಿ, ಇತಿಹಾಸಗಳ ಅಧ್ಯಯನಕ್ಕಾಗಿ ಟಿ.ವಿನಾಯಕ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪಾದಯಾತ್ರೆ ಮೂಲಕವೇ ಭಾರತದರ್ಶನ ಮಾಡಿ ಬಂದಿದ್ದಾರೆ. 18 ರಾಜ್ಯಗಳು, 100 ನಗರಗಳು ಮತ್ತು 17 ರಾಜಧಾನಿಗಳನ್ನು ಸಂದರ್ಶಿಸಿ, ವಿವಿಧ ರಾಜ್ಯಗಳ ಸಾಂಸ್ಕøತಿಕ – ಸಾಮಾಜಿಕ ಅಧ್ಯಯನ ಮಾಡಿದ್ದಾರೆ. ಒಟ್ಟಾರೆ 1400 ಕಿ.ಮೀ. ದೂರದ ಈ ನಡಿಗೆಯನ್ನು ಒಬ್ಬಂಟಿಯಾಗಿ ಕ್ರಮಿಸಿ ಹೋದೆಡೆಯಲ್ಲೆಲ್ಲ ಸಾಂಸ್ಕøತಿಕ ಪರಿಚಯ ಹಾಗೂ ಆಧ್ಯಾತ್ಮಿಕ ಪ್ರಸರಣ ಕಾರ್ಯ ಕೈಗೊಂಡಿದ್ದಾರೆ.
ಹಿಮಾಲಯ ತಪ್ಪಲಲ್ಲಿ ನಿರಂತರಧ್ಯಾನ ಹಾಗೂ ವಿಶಿಷ್ಠ ಆಧ್ಯಾತ್ಮಿಕ ಸಾಧಕರ ಸಂಪರ್ಕದಲ್ಲಿ ನಿರತರಾದ ಪರಿಣಾಮ ತಮ್ಮಲ್ಲಿರುವ ವಿಶೇಷ ಶಕ್ತಿಯ ಅರಿವು ಮೂಡಿತು. ಅಲ್ಲದೇ ಆ ವಿಶಿಷ್ಠ ಶಕ್ತಿ ಸಮಾಜದ ನೊಂದ ಹೃದಯಗಳಿಗೆ ಚೇತೋ ಹಾರಿಯಾಗಲಿ ಎಂದು ಮನಸ್ಸು ಹಂಬಲಿಸಿತು. ಸತತ ಎರಡು ವರ್ಷಗಳ ಕಾಲ ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಹಿಮಾಲಯ ತಲುಪಿ ಅಲ್ಲಿ ನೆಲೆಸಿದ್ದ ವೇಳೆ ಗಂಗೋತ್ರಿ, ಉತ್ತರಕಾಶಿ, ಋಷಿಕೇಶ, ಬದರಿನಾಥ ಸೇರಿದಂತೆ ಇತರೆಡೆ ಅನೇಕ ಆಶ್ರಮಗಳನ್ನು ಭೇಟಿ ಮಾಡಿ ಅಲ್ಲಿನ ತಪೋನಿಷ್ಠರ ಮಾರ್ಗದರ್ಶನದಲ್ಲಿ ಮನಃಶಾಸ್ತ್ರದ ಅಧ್ಯಯನ ಮಾಡಿ ವಿಶೇಷ ಪರಿಣಿತಿ ಪಡೆದರು. ಅಲ್ಲಿಂದ ತೆರಳಿದ ನಂತರ ತಮ್ಮ ಸಾಧನಾ ಸಾಮಥ್ರ್ಯವನ್ನು ಜನತೆಯ ಜೀವನ ವಿಕಾಸಕ್ಕಾಗಿ ಬಳಸಲು ತೊಡಗಿದರು.
ಮನಸನರಳಿಸುವ ಮಾನಸಿ
2009ರಲ್ಲಿ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಜೀವನ ವಿಕಾಸ ಕೇಂದ್ರದ ಸ್ಥಾಪನೆಗೆ ಮುನ್ನಡಿ ಇಟ್ಟರು. ಆ ಮೂಲಕ ಅಂದಿನಿಂದ ಈವರೆಗೆ ಎಲ್.ಕೆ.ಜಿ.ಯಿಂದ ಪದವಿವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು, ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು, ಗರ್ಭೀಣಿ ಸ್ತ್ರೀಯರು ಸೇರಿದಂತೆ ಇತರೆಯವರಿಗೆ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಿ ನೊಂದ ಮನಸ್ಸುಗಳಿಗೆ ಸಾಂತ್ವಾನ ನೀಡುವ ಕೈಂಕರ್ಯ ಸಾಗುತ್ತಿದೆ.
ಮಹಾರಾಷ್ಟ್ರ, ಬೆಂಗಳೂರು, ಮಂಡ್ಯ, ಮೈಸೂರು, ಬಿಜಾಪುರ, ಬೆಳಗಾವಿ, ತುಮಕೂರು, ಗದಗ, ಹುಬ್ಬಳ್ಳಿ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿನ ಅನೇಕರು ಇದರ ಪ್ರಯೋಜನ ಪಡೆದಿದ್ದಾರೆ. 8000 ಕ್ಕೂ ಹೆಚ್ಚು ತಾಯಂದಿರು, 2000 ಕ್ಕೂ ಹೆಚ್ಚು ಮಕ್ಕಳು ಹಾಗೂ 200ಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಮಾರ್ಗದರ್ಶನ ಪಡೆದು ಅನೇಕ ಸಮಸ್ಯೆಗಳಿಂದ ಮುಕ್ತಿ ಹೊಂದಿ ಸುಖ ಜೀವನ ನಡೆಸುತ್ತಿದ್ದಾರೆ.
ಎಲ್ಲಾ ಸಮಸ್ಯೆಯ ಮೂಲ ಮನಸ್ಸು. ಮನುಜರ ಮನಸ್ಸನರಿತು ಪರಿಹಾರ ನೀಡಿ ಪರರ ಜೀವನ ವಿಕಾಸಕ್ಕೆ ಸಹಕಾರಿಯಾದ ಕಾಯಕ ತನ್ನದಾಗಿದೆ. ಹಾಗಿದ್ದ ಮೇಲೆ ಅದಕ್ಕೆ ಪೂರಕವಾದ ಹೆಸರನ್ನೇ ಇಟ್ಟರಾಯಿತು ಎಂದು ಚಿಂತಿಸಿದ ವಿನಾಯಕ ಅವರು, ಒಂದೆರಡು ವರ್ಷಗಳಲ್ಲೇ ತಮ್ಮ ಕೇಂದ್ರಕ್ಕೆ “ಮಾನಸಿ” (ಕೌನ್ಸಲಿಂಗ್ ಸೆಂಟರ್) ಆಪ್ತ ಸಲಹಾ ಕೇಂದ್ರ ಎಂದು ಮರುನಾಮಕರಣ ಮಾಡಿ ಇಂದಿಗೂ ಅದೇ ಹೆಸರಿನಲ್ಲಿ ಕೇಂದ್ರವನ್ನು ಮುನ್ನೆಡೆಸುತ್ತಿದ್ದಾರೆ.
ಪರರ ಜೀವನ – ವಿಕಾಸಕ್ಕಾಗಿ ಮಿಡಿವ ಹೃದಯ
ತಮ್ಮ ಕೇಂದ್ರದ ಮೂಲಕ ವಿನಾಯಕ ಅವರು ರಾಜ್ಯಾದ್ಯಂತ ಸಂಚರಿಸಿ ನೊಂದವರ ಸಮಸ್ಯೆ ನಿವಾರಣೆಗಾಗಿ ಶ್ರಮಿಸುತ್ತಿದ್ದಾರೆ. ಶಾಲಾ ಕಾಲೇಜುಗಳ ಭೇಟಿ, ಸಂಘ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು ಸೇರಿದಂತೆ ಇತರೆಡೆ ಸಮಾಲೋಚನಾ ಸಭೆಗಳ ಮೂಲಕ ಸಾರ್ವಜನಿಕರ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದಾರೆ.
ವಿದ್ಯಾರ್ಥಿಗಳ ತುಂಟತನ, ಹಠಮಾರಿತನ, ಓದಿನಲ್ಲಿ ಹಿಂದುಳಿಯುವಿಕೆ, ಏಕಾಗ್ರತೆಯ ಕೊರತೆ, ನೆನಪಿನ ಶಕ್ತಿಯ ಕೊರತೆ, ಸೋಮಾರಿತನ, ಅಶಿಸ್ತು, ಹಾಸಿಗೆಯಲ್ಲಿ ಮೂತ್ರ ಮಾಡುವುದು, ಆಕ್ಷರಭ್ಯಾಸದ ಲೋಪದೋಷಗಳು, ಚಂಚಲ ಸ್ವಭಾವ, ಪರೀಕ್ಷಾ ಭಯ ಸೇರಿದಂತೆ ಇತ್ಯಾದಿ ತೊಂದರೆಗಳನ್ನು ನಿವಾರಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಸ್ವಭಾವದಲ್ಲಿ ಬದಲಾವಣೆ ತರುವ ಮೂಲಕ ಹೆಚ್ಚು ಅಂಕಗಳಿಗೆ ಹಾಗೂ ಒಳ್ಳೆಯ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಮಾಗದರ್ಶನ ನೀಡುತ್ತಿದ್ದಾರೆ.
ಮಹಿಳೆಯರಲ್ಲಿರುವ ಯಾರಿಗೂ ಹೇಳಿಕೊಳ್ಳಲಾಗದ ಕೌಟುಂಬಿಕ ಹಾಗೂ ವೈಯಕ್ತಿಕ ಸಮಸ್ಯೆಗಳಿಗೂ ಇವರಲ್ಲಿ ಅಭೂತಪೂರ್ವ ಪರಿಹಾರವಿದೆ. ದಂಪತಿಗಳಲ್ಲಿ ಭಿನ್ನಾಭಿಪ್ರಾಯ, ಹೊಂದಾಣಿಕೆಯ ಕೊರತೆ, ಬದುಕಿನಲ್ಲಿ ನಿರಾಸೆ – ಜಿಗುಪ್ಸೆ, ಮಾನಸಿಕ ಒತ್ತಡ, ಸಾವಿನ ಯೋಚನೆ, ಸಹೋದ್ಯೋಗಿಗಳಿಂದ ಮಹಿಳೆಯರಿಗೆ ಉಂಟಾಗುತ್ತಿರುವ ಮಾನಸಿಕ ಕಿರುಕುಳ, ಉದ್ಯೋಗದ ಚಿಂತೆ, ಸಾಧನೆ ಮಾಡಲಾಗದ ಒತ್ತಡ – ಯಾತನೆಯ ಸಮಸ್ಯೆ, ಸಮಯದ ಹೊಂದಾಣಿಕೆಯ ಕೊರಗು ಸೇರಿದಂತೆ ಇತರೆ ಸಮಸ್ಯೆಗಳಿಗೆ ಇವರ ಕೆಲವು ಕೌಶಲ್ಯಯುತ ಪರಿಹಾರ ಮಾನಸಿಕ ನೆಮ್ಮದಿ ಒದಗಿಸುತ್ತಿವೆ.
ಕನಸಿನ ಕೂಸು ಪಡೆಯಲು ತರಬೇತಿ
ಬಹುತೇಕ ಮಂದಿ ಮಗುವಿನ ಶಿಕ್ಷಣ ಹುಟ್ಟಿ ಬೆಳೆದ ಮೇಲೆ ಆರಂಭವಾಗುತ್ತದೆ ಎಂಬ ತಪ್ಪು ಅಭಿಪ್ರಾಯ ಹೊಂದಿರುತ್ತಾರೆ. ಆದರೆ ಮಗುವಿಗೆ ನಿಜವಾದ ಶಿಕ್ಷಣವನ್ನು ತಾಯಿಯ ಗರ್ಭಾವಸ್ಥೆಯಲ್ಲಿಯೇ ನೀಡಬೇಕು ಎನ್ನುತ್ತಾರೆ ವಿನಾಯಕ್. ಅದಕ್ಕಾಗಿ ಹಲವು ವೈಜ್ಞಾನಿಕ ನಿದರ್ಶನಗಳ ಮೂಲಕ ಸಮರ್ಥನೆ ನೀಡುವ ಜೊತೆ ಮನವರಿಕೆ ಕೂಡ ಮಾಡಿ ಕೊಡುತ್ತಾರೆ. ಅಲ್ಲದೆ ತಮ್ಮ ಕನಸಿನ ಕೂಸನ್ನು ಪಡೆಯುವುದಕ್ಕಾಗಿ ಗರ್ಭಿಣಿ ಸ್ತ್ರೀಯರಿಗೆ ತರಬೇತಿಯನ್ನು ಕೂಡ ನೀಡುತ್ತಿದ್ದಾರೆ. ಇದೊಂದು ಹೊಸ ಪರಿಕಲ್ಪನೆ ಎನಿಸಿದೆ ಹಾಗೂ ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಮುಂಬರುವ ತಮ್ಮ ಕನಸಿನ ಕೂಸು ಗರ್ಭಾವಸ್ಥೆಯಲ್ಲಿ ಇರುವಾಗಲೇ ಅದಕ್ಕೆ ಉತ್ತಮ ಸಂಸ್ಕಾರ, ಸುಸಂಸ್ಕøತತೆ, ಏಕಾಗ್ರತೆ, ಪ್ರೀತಿ, ಶಾಂತ ಮನಸ್ಥಿತಿ, ನೆನಪಿನ ಶಕ್ತಿ, ಗ್ರಹಣ ಶಕ್ತಿ, ಸಂಕೋಚವಿಲ್ಲದೆ ಎಲ್ಲರೊಂದಿಗೆ ಬೆರೆಯುವುದು, ಧೈರ್ಯ-ಸ್ಥೈರ್ಯದಿಂದ ಮುಂದಾಳತ್ವ ವಹಿಸುವುದು, ಕನ್ನಡ, ಇಂಗ್ಲೀಷ್, ಹಿಂದಿ ಅಕ್ಷರಗಳನ್ನು ಕಲಿಸುವುದು, ಕಂಪ್ಯೂಟರ್, ಗಣಿತ, ಜನರಲ್ ನಾಲೆಡ್ಜ್ ಪರಿಚಯಿಸುವುದು ಸೇರಿದಂತೆ ಒಟ್ಟಾರೆ ಎಲ್ಲರೂ ಹೆಮ್ಮೆ ಪಡುವಂತಹ ವ್ಯಕ್ತಿತ್ವದ ನಿರ್ಮಾಣ ಹಾಗು ಜೀನಿಯಸ್ ಮಗುವಿನ ಕೊಡುಗೆಗಾಗಿ ಈ ತರಬೇತಿ ನೀಡಲಾಗುತ್ತಿದೆ.
ಸ್ಪರ್ಶ ಹೀಲಿಂಗ್
ಅದೆಷ್ಟೋ ನೊಂದ ಹೃದಯಗಳಿಗೆ ಸ್ಪರ್ಶ ಚಿಕಿತ್ಸೆಯ ಮೂಲಕವೂ ಪರಿಹಾರ ನೀಡಿರುವ ಕೀರ್ತಿಗೂ ಭಾಜನರಾಗಿದ್ದಾರೆ ವಿನಾಯಕ್. ಆತ್ಮಹತ್ಯೆ, ಖಿನ್ನತೆ, ನಕರಾತ್ಮಕ ಯೋಚನೆಗಳಿಂದ ಬಳಲುವವರು, ಇನ್ನೇನು ತಾನು ಬದುಕುಳಿಯಬಾರದು, ಸತ್ತೇ ಹೋಗಬೇಕೆಂದು ಯೋಚಿಸಿದ ಅದೆಷ್ಟೋ ಆಶಕ್ತರು ಇವರ ಬಳಿ ಪರಿಹಾರ ಪಡೆದು ಹೊಸ ಬದುಕ ಕಟ್ಟಿಕೊಂಡಿದ್ದಾರೆ.