ದಿನದ ಸುದ್ದಿ

ಸರಳ ತರಳಬಾಳು ಹುಣ್ಣಿಮೆಯಂದು ಗೋಶಾಲೆ ಪುಣ್ಯಕೋಟಿಗೆ ಅರ್ಪಣೆ

Published

on

ಸುದ್ದಿದಿನ,‌ಸಿರಿಗೆರೆ: ಉತ್ಸವಗಳಿಂದ ಸಮಾಜದ ಅಭಿವೃದ್ಧಿ ಮಾಡುವುದಕ್ಕಿಂತ ಉತ್ಸವಗಳ ಸಾರ್ಥಕತೆಯ ನೆನಪಿಗೆ ಸಮಾಜದ ಅಭ್ಯುದಯಕ್ಕೆ ಶ್ರಮಿಸುವ ವಿಶೇಷ ಆಶಯ ಹೊಂದಿ ಆ ಕಾರ್ಯದಲ್ಲಿ ಯಶಸ್ಸು ಗಳಿಸಿದ ಕೀರ್ತಿ ತರಳಬಾಳು ಶ್ರೀ ಜಗದ್ಗುರುವರ್ಯರದು.

ಪರಂಪರೆಗೆ ಮತ್ತು ಅಪಾರ ಶಿಷ್ಯಬಳಗದ ಮನಸ್ಸಿಗೆ ಘಾಸಿ ಮಾಡದಂತೆ ಎಲ್ಲರಿಗೂ ಅನುಕೂಲ ತರುವ ಸರ್ವರೂ ಒಪ್ಟಲೇಬೇಕಾದ ಕಾರ್ಯಕ್ರಮಗಳನ್ನು ಜಾರಿಯ ಅನುಷ್ಠಾನದ ಅಪರೂಪದ ವ್ಯಕ್ತಿತ್ವ ಚಿಂತಕ ಶ್ರೇಷ್ಠರಾದ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರದು.

ನಾಡಿನ ಧಾರ್ಮಿಕ ಸಮಾರಂಭಗಳಿಗೆ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಮಾತೃಸ್ವರೂಪದಂತಹ ಸ್ಥಾನವಿದೆ. ಸಮಾರಂಭದ ಸಾರ್ಥಕತಗೆ ನೂರಾರು ಸಮಾಜ ಮುಖಿ ಕಾರ್ಯಗಳು ಸಾಕ್ಷಿಯಾಗಿವೆ. ಅಂತಹ ಜನಮುಖಿ ಕಾರ್ಯಗಳಲ್ಲಿ ಸಾವಿರಾರು ಕೋಟಿಗಳ ವೆಚ್ಚದಲ್ಲಿ ನೂರಾರು ಕೆರೆಗಳಿಗಳ ಒಡಲಿಗೆ ಗಂಗೆ ಹರಿದು ರೈತರ ನೆಮ್ಮದಿಗೆ ಕಾರಣವಾಗಿರುವುದು ಪ್ರಮುಖವಾದುದು. ಆರು ದಶಕಗಳಿಂದಲೂ ಸರ್ವರ ಜನಾಧರಣೆಯ ಸಮಾರಂಭವಾಗಿ ಆಯಾ ಕಾಲದ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯತೆಯ ಮಹೋತ್ಸವವಾಗಿದೆ.

ಈ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವ ಹೊಯ್ಸಳರ ನಾಡಾದ ಹಳೇಬೀಡಿನಲ್ಲಿ ಆಚರಿಸುವ ಶ್ರೀಗಳ ಆಶಯಕ್ಕೆ ಆ ಭಾಗದ ಭಕ್ತರು ತುದಿಗಾಲಲ್ಲಿ ನಿಂತಿದ್ದರು.

ಭೀಕರ ಬರಗಾಲದ ಛಾಯೆಯನ್ನು ಮನಗಂಡು
ಕಾರ್ಯಕ್ರಮಗಳಿಗೆ ಆ ಭಾಗದ ಜ್ವಲಂತ ಸಮಸ್ಯೆಗಳಿಗೆ ತರಳಬಾಳು ಹುಣ್ಣಿಮೆ ಮಹೋತ್ಸವದ ಮೂಲಕ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರೀಗಳು ಹಳೇಬೀಡು ವ್ಯಾಪ್ತಿಯ ಕೆರೆಗಳಿಗೆ ಶಾಶ್ವತವಾಗಿ ನೀರು ತುಂಬಿಸುವ ಯೋಜನೆ ಕಾರ್ಯಪಾಲನೆಯ ನಂತರ ಹುಣ್ಣಿಮೆ ಮಹೋತ್ಸವ ಆಚರಿಸುವ ಅರ್ಥಪೂರ್ಣ ನಿರ್ಧಾರ ಕೈಗೊಂಡು ಆ ನಿಟ್ಟಿನಲ್ಲಿ ಹೆಜ್ಜೆ ಹಾಕಿದರು.

ಪರಂಪರೆಯಂತೆ ಸಾಂಕೇತಿಕವಾಗಿ ಸರಳವಾಗಿ 2019ರ ಫೆಬ್ರುವರಿ 19ರಂದು ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆಯ ಜೊತೆಗೆ ನಾಡಿನ ಗೋವುಗಳ ಪಾಲನೆಗೆ ಅಂದೇ ಗೋಶಾಲೆಯ ಉದ್ಘಾಟಿನೆಯ ಕೈಂಕರ್ಯಕ್ಕೆ ಶ್ರೀ ಜಗದ್ಗುವರ್ಯರು ಮನಸ್ಸು ಮಾಡಿರುವುದು ಅತ್ಯಂತ ಸಂದರ್ಭೋಚಿತವಾದುದಾಗಿದೆ.

ಸದಾ ಜನಮುಖಿ ಕಾರ್ಯಗಳಲ್ಲಿ ಸಂತೃಪ್ತಿ ಕಾಣುವ, ನಿತ್ಯವೂ ರೈತಬಂಧುಗಳ ಉನ್ನತಿಗೆ ಶ್ರಮಿಸುವ ಕನ್ನಡ ನಾಡಿನ ಅಪರೂಪದ ವಿದ್ವತ್ಪೂರ್ಣ, ಸಂತಶ್ರೇಷ್ಟರಾಗಿ ,ರೈತ ಮೆಚ್ಚಿದ ಮಹಾಗುರುವೆಂದೇ ಸುಪ್ರಸಿದ್ಧಿಯಾದ ಪರಮ ಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರ ನೂರಾರು ಸಮಾಜಮುಖಿ ಸಾಧನೆಗಳಿಗೆ ಮತ್ತೊಂದು ಸೇರ್ಪಡೆ ಎನ್ನುವಂತೆ ತರಳಬಾಳು ಶ್ರೀ ಮಠದ ಸಾವಿರಾರು ಎಕರೆ ಭೂಮಿಯಲ್ಲಿ ಸಕಲ ಸೌಲಭ್ಯಗಳಿಂದ ಕೂಡಿದ ಗೋಶಾಲೆಯ ನಿರ್ಮಾಣದ ತಯಾರಿ ಭರದಿಂದ ಸಾಗಿದೆ.

ಅಕ್ಷರ,ಅನ್ನ,ಆಸರೆ,ಶಿಕ್ಷಣ,
ಉದ್ಯೋಗ,ನ್ಯಾಯದಾನ, ಕನ್ನಡ ಜಾನಪದ ಕಲೆಗಳ ಪುನರುಜ್ಜೀವನ , ಸಾಮಾಜಿಕ ಕಾಳಜಿ,ಪರಿಸರ ರಕ್ಷಣೆ, ಶರಣ ಸಂಸ್ಕೃತಿಯನ್ನು ವಿಶ್ವಕ್ಕೆ ದರ್ಶಸಿದ ಗಣಕ ಋಷಿ ಎಂದೇ ನಾಮದೇಯರಾಗಿರುವ ಶ್ರೀ ಗುರುವರ್ಯರ ಸಾಧನೆಗಳ ಕುರಿತು ಬರೆಯುವುದೆಂದರೆ ಅದು ಸೂರ್ಯನನ್ನು ಕನ್ನಡಯಲ್ಲಿ ಹಿಡಿದಂತೆ..!

ಶ್ರೀಗಳ ದೂರದರ್ಶಿತ್ವ ಹೇಗಿದೆ ಎಂದರೆ. ಈ ವರ್ಷ ಬರದ ಮುನ್ಸೂಚನೆ ಅರಿತ ಶ್ರೀಗಳವರು ಪುಣ್ಯಕೋಟಿ ಉಳಿಸುವ ಅಭಿದಾನಕ್ಕೆ ಕೈ ಹಾಕಿ ಆರು ತಿಂಗಳಿಂದ ಕರ್ತವ್ಯ ಮಗ್ನರಾಗಿ ನೂರಾರು ಲೋಡ್ ಮೇವನ್ನು ಭಕ್ತರ ಮೂಲಕ ಸಂಗ್ರಹಿಸಿ ಕಾಮಧೇನುಗಳ ಸ್ವಾಗತಕ್ಕೆ ಕಾದು ಕುಳಿತಿದ್ದಾರೆ. ಸಿರಿಗೆರೆ ಸಮೀಪದ ಮೇಗಳಹಳ್ಳಿ ಬಳಿ ದೊಡ್ಡ ಕಾವಲೆಂದೇ ಕಲೆಯಲ್ಪಡುವ ಶ್ರೀ ಮಠದ ಒಡೆತನದ ಸಾವಿರಾರು ಎಕರೆ ಭೂ ಪ್ರದೇಶವನ್ನು ಶಿವಕುಮಾರ ವನವನ್ನಾಗಿಸಿ ಹತ್ತಾರು ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರುವ ಪ್ರದೇಶದಲ್ಲಿ ತರಳಬಾಳು ಗೋಶಾಲೆ ನಿರ್ಮಾಣವಾಗುತ್ತಿದೆ.

ಹೇಗಿರುತ್ತದೆ ಗೋಶಾಲೆ..?

ಕರ್ನಾಟಕದ ಅನೇಕ ಪ್ರದೇಶಗಳು ಪದೇ ಪದೇ ಬರಗಾಲಕ್ಕೆ ತುತ್ತಾಗುವ ಸ್ಥಿತಿ ಇದೆ. ಮನುಷ್ಯರು ಹೇಗಾದರೂ ಬದುಕಿಕೊಳ್ಳುತ್ತಾರೆ. ಆದರೆ ದನಕರುಗಳು ಮೇವು ನೀರಿಲ್ಲದೆ ಕಂಗಾಲಾಗುತ್ತವೆ.

ಚಾಮರಾಜ ನಗರದ ಬಳಿ ಮೇವು ನೀರಿಲ್ಲದೆ ಎಲ್ಲೆಂದರಲ್ಲಿ ದನಕರುಗಳು ಸತ್ತಿರುವ ವರದಿಗಳು ದುಃಖದಾಯಕ ವರದಿಗೆ ಮನನೊಂದ ಶ್ರೀಗಳು
ಸಿರಿಗೆರೆ ಸಮೀಪ ಇರುವ ಶಿವಕುಮಾರ ವನದ1000 ಎಕರೆ ಅರಣ್ಯ ಪ್ರದೇಶದಲ್ಲಿ ಬೃಹತ್ ಗೋಶಾಲೆಯನ್ನು ಆರಂಭಿಸುವ ಯೋಜನೆಯನ್ನು ಶ್ರೀ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸಂಕಲ್ಪಿಸಿದರು.

ಇದೊಂದು ಖಾಯಂ ವ್ಯವಸ್ಥೆಯಾಗಿದ್ದು, ಈ ಕಾರ್ಯಕ್ಕಾಗಿ 2 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಈ ಕಾಡಿನಲ್ಲಿ ಹರಿಯುವ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಮಾಡಿ ಜಾನುವಾರುಗಳಿಗೆ ನೀರನ್ನು ಒದಗಿಸಲಾಗುವುದಲ್ಲದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಮೇವನ್ನು ಬೆಳೆಸಲಾಗುವುದು. ನೀರನ್ನು ಪಂಪ್ ಮಾಡಲು ಸೋಲಾರ್ ವಿದ್ಯತ್ ಉತ್ಪಾದನೆಯ ಬಗ್ಗೆಯೂ ಚಿಂತಿಸಲಾಗುತ್ತಿದೆ. ಕಾಡಿನಲ್ಲಿರುವ ಮೃಗಗಳಿಂದ ಜಾನುವಾರುಗಳಿಗೆ ತೊಂದರೆ ಆಗದಂತೆ ಬೇಲಿಯನ್ನು ನಿರ್ಮಿಸಲಾಗುವುದು. ರಾಜ್ಯದ ಯಾವುದೇ ಭಾಗದ ರೈತರೂ ಇದರ ಪ್ರಯೋಜನ ಪಡೆಯಬಹುದು.

ರೈತರು ಬಯಸಿದರೆ ಜಾನುವಾರುಗಳನ್ನು ಗೋಶಾಲೆಗೆ ತರಲು ಮಠದಿಂದ ಲಾರಿಯನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ಬರ ಪ್ರದೇಶದ ರೈತರು ಇಲ್ಲಿಗೆ ದನಕರುಗಳನ್ನು ತಂದು ಮಳೆಗಾಲ ಬರುವ ತನಕ ಮೇವು ಮತ್ತು ನೀರನ್ನು ಪಡೆದು ಸಾಕಬಹುದು.* *ರಾಸುಗಳೊಂದಿಗೆ ಬರುವ ರೈತರಿಗೂ ಮಠದಿಂದ ಆಹಾರ ಮತ್ತು ವಸತಿಯನ್ನು ನೀಡಲಾಗುವುದು.

ತಮ್ಮ ಭಾಗದಲ್ಲಿ ಮಳೆ ಆರಂಭವಾಗಿ ಮೇವು ನೀರು ದೊರೆಯುವವರೆಗೂ ರೈತರು ಶಿವಕುಮಾರ ವನದಲ್ಲಿ ತನ್ನ ರಾಸುಗಳನ್ನು ಸಾಕಿಕೊಂಡು ಹೋಗಲು ಅನುವು ಮಾಡಿಕೊಡುವುದಾಗಿ ಇಂದು ಗೋಶಾಲೆಯ ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಿದ ಶ್ರೀ ಜಗದ್ಗುರುವರ್ಯರು ತಿಳಿಸಿದರು.

ಬರಹ : ಬಸವರಾಜ ಸಿರಿಗೆರೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version