ದಿನದ ಸುದ್ದಿ

ಯೂರಿಯಾ ರಸಗೊಬ್ಬರ ಮಿತವಾಗಿ ಬಳಸಿ

Published

on

ಸುದ್ದಿದಿನ,ಗದಗ : ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿ ಭೂಮಿಯ ತೇವಾಂಶ ಹೆಚ್ಚಿದೆ. ಹೀಗಾಗಿ ಕಡಿಮೆ ಪ್ರಮಾಣದ ಯೂರಿಯಾ ರಸಗೊಬ್ಬರ ಬಳಕೆ ಮಾಡಬೇಕು. ಯೂರಿಯಾ ರಸಗೊಬ್ಬರ ಸಸ್ಯಕ್ಕೆ ಸಾರಜನಕ ಒದಗಿಸಿ ಉತ್ತಮ ಫಸಲಿಗೆ ನೆರವಾಗುತ್ತದೆ. ಅಧಿಕ ಫಸಲಿನಾಸೆಗೆ ಹೆಚ್ಚೆಚ್ಚು ಯೂರಿಯಾ ಬಳಸಿದರೆ ಬಂದಿರುವ ಬೆಳೆ ಹಾಳಾಗುತ್ತದೆ. ಅಲ್ಲದೇ, ಜಿಲ್ಲೆಯಲ್ಲಿ ರಾಸಾಯನಿಕ ಗೊಬ್ಬರಗಳ ಕೊರತೆ ಇಲ್ಲದಿರುವುದರಿಂದ ರೈತರು ಆತಂಕ ಪಡಬಾರದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ತಿಳಿಸಿದ್ದಾರೆ.

ಗಿಡಗಳು ಸಾರಜನಕ ಹೀರಿಕೊಳ್ಳುವ ಪ್ರಮಾಣ ಅಧಿಕವಾಗಿದ್ದು, ಸಸ್ಯಗಳ ಶಾರೀರಿಕ ಬೆಳವಣಿಗೆ ಉತ್ತೇಜಿಸುವುದರಿಂದ ಬೆಳೆಯ ಬೆಳವಣಿಗೆಗೆ ನಿಯಂತ್ರಣ ಇರುವುದಿಲ್ಲ. ಇದರಿಂದ ಹೂವುಗಳ ಉತ್ಪಾದನೆ ಕಡಿಮೆಯಾಗಿ ಕಾಳು ಕಟ್ಟುವಿಕೆ ಸಿಮೀತಗೊಂಡು ಉತ್ಪಾದನೆ ಇಳಿಕೆ ಆಗುತ್ತದೆ. ಅಲ್ಲದೇ, ಮುಂದಿನ ಬೆಳೆಗೆ ಭೂಮಿ ತಯಾರಿ ಹಾಗೂ ಬಿತ್ತನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಸ್ಯದ ಶಾರೀರಿಕ ಬೆಳವಣಿಗೆ ಹೆಚ್ಚಾದರೆ ರೋಗ ಹಾಗೂ ಕೀಟಬಾಧೆ ಅಧಿಕವಾಗಿ ಇಳುವರಿ ಕುಂಠಿತಗೊಳ್ಳುತ್ತದೆ. ಇವುಗಳ ಹತೋಟಿಗಾಗಿ ರೋಗನಾಶಕ, ಕೀಟನಾಶಕ ಬಳಸಬೇಕಾದ ಅನಿವಾರ್ಯತೆಯೊಂದಿಗೆ ವ್ಯವಸಾಯದ ಖರ್ಚು ಹೆಚ್ಚುತ್ತದೆ.

ಅವೈಜ್ಞಾನಿಕವಾಗಿ ಯೂರಿಯಾ ರಸಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಅನಗತ್ಯವಾಗಿ ಯೂರಿಯಾ ಬಳಸದೇ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಮಣ್ಣು ಪರೀಕ್ಷೆ ಆಧಾರದ ಮೇಲೆ ಪೋಷಕಾಂಶಗಳನ್ನು ಮಿತವಾಗಿ ಬಳಸಿ ವ್ಯವಸಾಯದ ಖಚ್ಚು ಕಡಿಮೆಗೊಳಿಸಿಕೊಳ್ಳಬೇಕು. ಅಲ್ಲದೇ, ರಸಗೊಬ್ಬರ ಖರೀದಿ ಬಳಿಕ ರಶೀದಿ ಪಡೆದುಕೊಳ್ಳಬೇಕು. ರಸಗೊಬ್ಬರವನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವದು ಅಥವಾ ಯುರಿಯಾ ಗೊಬ್ಬರ ಜೊತೆ ಬೇರೆ ಕೃಷಿ ಪರಿಕರಗಳನ್ನು ಲಿಂಕ್ ಮಾಡುವದು ಕಂಡುಬಂದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಜಾರಿದಳ ಮೊಬೈಲ್ ಸಂಖ್ಯೆ 8618742613ಕ್ಕೆ ಸಂಪರ್ಕಿಸಬೇಕು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version