ಅಂತರಂಗ

ಸಾಧನೆ ಬದುಕಿನ ಮಾರ್ಗ ಮಾತ್ರ ಆಗಿರಬೇಕು..!

Published

on

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಬಯಸುವವರು ಬಹಳ. ಎಲ್ಲರೂ ಗುರುತಿಸುವ ಸಾಧನೆ ನಾನು ಮಾಡಬೇಕು ಎಂದು ಎಷ್ಟೋ ಜನ ಹಂಬಲಿಸಿತ್ತಾರೆ. ಇದಕ್ಕಾಗಿ “ಗುರಿ ಮುಟ್ಟುವ ವರೆಗೆ ನಿಲ್ಲದಿರು” ಎಂದಿದ್ದ ಸ್ವಾಮಿ ವಿವೇಕಾನಂದರನ್ನೂ ನೆನೆಸಿಕೊಳ್ಳುತ್ತಾರೆ. ತಾವು ಬದುಕಿರುವುದೇ ಸಾಧನೆ ಮಾಡಲು, ಏನನ್ನಾದರೂ ಸಾಧಿಸದ ಬದುಕು ವ್ಯರ್ಥ ಎಂದು ಅನೇಕರು ಯೋಚಿಸುತ್ತಾರೆ…

ಹೀಗೆ ನಾನಾ ರೀತಿಯಲ್ಲಿ “ಸಾಧನೆಗಳ” ಬೆನ್ನು ಹತ್ತಿ ಸಾಧನೆ ಮಾಡುವುದೇ ಬದುಕಿನ ಉದ್ದೇಶ ಎಂದು ತಿಳಿದು ಹೊರಡುವುದು ಅಂತಿಮವಾಗಿ ವ್ಯಕ್ತಿಗಳನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಗೊತ್ತೆ?
ಬೇರೆಲ್ಲಿಗೂ ಅಲ್ಲ ಯಾವ ಮಹತ್ಸಾಧನೆಗೂ ಅಲ್ಲ. ಅದು ಅವರನ್ನು ಒಯ್ದು ನಿಲ್ಲಿಸುವುದು ಪರಮ ಸ್ವಾರ್ಥದ ಬದುಕಿಗೆ. ಇಂತಹ ಬಹುತೇಕ “ಸಾಧಕರು” ಸ್ವಾರ್ಥ ಸಾಧನೆಯಲ್ಲಿ ಕಳೆದು ಹೋಗುತ್ತಾರೆ.

ಯಾಕೆಂದರೆ ಸಾಧನೆ ಮಾಡುವುದೇ ಬದುಕಿನ ಅಂತಿಮ ಗುರಿಯಾದಾಗ, ಆ ತಾವು ಪರಿಭಾವಿಸಿಕೊಂಡ ಸಾಧನೆಯನ್ನು ಸಾಧಿಸಲು ಯಾವ ಮಾರ್ಗವೂ ಅವರಿಗೆ ತಪ್ಪು ಎನಿಸುವುದಿಲ್ಲ. ಪೈಪೋಟಿಯೇ ಅವರಿಗೆ ಮುಖ್ಯ ಆಗುತ್ತದೆ. ಈ ಪೈಪೋಟಿಯಲ್ಲಿ, ಸಾಧನೆಯ ರೇಸಿ‌ನಲ್ಲಿ ತಮ್ಮ ಎದುರಾಳಿ ಎಂದುಕೊಂಡವರನ್ನು ಹತ್ತಿಕ್ಕುವುದು ಅಥವಾ ತುಳಿಯುವುದೂ ಅನಿವಾರ್ಯವಾಗುತ್ತದೆ. ಜೊತೆಗಿರುವವರಿಗೇ ಚೂರಿ ಹಾಕಿದರೂ ಇದೆಲ್ಲಾ ಸಾಧನೆಗೆ ಅನಿವಾರ್ಯ ಎಂಬ ಸಮರ್ಥನೆ ಒಳಗಿನಿಂದಲೇ ಬರುತ್ತದೆ.

ಹೀಗಾಗಿ ಸಾಧನೆಗಾಗಿ ಬದುಕುವುದು ಅತ್ಯಂತ ಸ್ವಾರ್ಥದ, ಕಿತ್ತು ತಿನ್ನುವ ಪೈಪೋಟಿಯ ಅನಾರೋಗ್ಯಕರ ಸಮಾಜವೊಂದನ್ನು ಸೃಷ್ಟಿಸುತ್ತದೆ.‌ ಈಗ ನಮ್ಮ ಕಣ್ಣೆದುರಿಗೆ ಇರುವುದೂ ಅದೇ ಆಗಿದೆ.‌

ಇದರ ಅರ್ಥ ನಾವು ಯಾವುದೇ ಸಾಧನೆ ಮಾಡಬಾರದು ಎಂದಲ್ಲ. ಆದರೆ ಯಾವುದೇ ಸಾಧನೆಗೆ ತೊಡಗುವ‌ ಮೊದಲು ನಮಗೆ ನಮಗೆ ಒಂದಲ್ಲ ಹತ್ತು ಸಲ ಸ್ಪಷ್ಟಪಡಿಸಿಕೊಳ್ಳಬೇಕಾದ ವಿಷಯ ಒಂದಿದೆ.
ಅದು ಈ ಸಾಧನೆ ಯಾಕಾಗಿ? ಏನನ್ನೋ ಸಾಧಿಸುವ ಅವಕಾಶ ನೀಡುವ ಈ ಬದುಕಿನ ಗಮ್ಯವೇನು? ಬದುಕಿನ ಅಂತಿಮ ಉದ್ದೇಶವೇನು ಎಂಬ ಪ್ರಶ್ನೆಗೆ ಉತ್ತರಿಸಿಕೊಳ್ಳುವುದು. ಸಾಧನೆಯನ್ನೇ ಬದುಕಿನ ಅಂತಿಮ ಉದ್ದೇಶ ಮಾಡಿಕೊಳ್ಳುವುದು ತಪ್ಪು ನಡೆಗಳಿಗೆ ಒಯ್ಯಬಹುದು. ಸಾಧನೆ ಬದುಕಿನ ಮಾರ್ಗ ಮಾತ್ರ ಆಗಿರಬೇಕು.

ಹೀಗೆ ಹೇಳಿದಾಗ ಬದುಕಿಗೆ ಒಂದು ಬೇರೆಯದೇ ಉದ್ದೇಶವಿರುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. Achievement is not an end in itself, rather a means to reach an end. ಹಾಗಾದರೆ ಬದುಕಿನ ಉದ್ದೇಶವೇನಾಗಿರಬೇಕು? ಈ ಪ್ರಶ್ನೆಗೆ ಅನೇಕ ದಾರ್ಶನಿಕರು ಅನೇಕ ಉತ್ತರ ನೀಡಿರಬಹುದು. ಆದರೆ ನನಗೆ ಸರಿ ಎನಿಸಿರುವ ಬದುಕಿನ ಉದ್ದೇಶ ಸರಳವಾಗಿದೆ. ಮನುಕುಲಕ್ಕೆ ಸೇವೆ ಸಲ್ಲಿಸುವುದು, ಸಹ ಮನುಷ್ಯರ ಕಷ್ಟಕ್ಕೆ ಸಹಾಯ ಮಾಡುವುದು; ಸ್ವಲ್ಪ ಜನರಲ್ ಆಗಿ ಹೇಳಬೇಕೆಂದರೆ ನಮಗೆ ಬದುಕುವ ಅವಕಾಶ ಒದಗಿಸಿರುವ ಈ ವಿಸ್ಮಯಕಾರಿ ವಿಶ್ವದ ಒಂದು ಅದ್ಭುತ ಸೃಷ್ಟಿಯಾದ ನಮ್ಮ ಭೂಮಿಯನ್ನು, ಇಲ್ಲಿನ ಸಕಲ ಜೀವಿ ಚರಾಚರಗಳ ಒಳಿತಿಗಾಗಿ ಶ್ರಮಿಸುವುದು. ಸಕಲ ಜೀವಿಗಳ, ನಮ್ಮ ಭೂಮಿಯ ಒಳಿತಿನಲ್ಲಿಯೇ ಮನುಜರ ಒಳಿತೂ ಅಡಗಿದೆ ಎಂಬುದನ್ನು ಅರಿಯುವುದು.

ವಿಶ್ವ ಕಂಡ ಮಹಾನ್ ಸಾಹಿತಿ ಲಿಯೋ ಟಾಲ್ ಸ್ಟಾಯ್ ಹೇಳುತ್ತಾರೆ “ಜೀವನದಲ್ಲಿ ಅತ್ಯಂತ ಶ್ರೇಯಸ್ಕರವಾದುದು ಎಂದರೆ ಮನುಕುಲದ ಒಳಿತಿಗಾಗಿ ಶ್ರಮಿಸುವುದು” ಎಂದು. ಟಾಲ್ ಸ್ಟಾಯ್ ತಮ್ಮ ಇವಾನ್ ಇಲ್ಯಿಚ್ ನ ಸಾವು ” ಎಂಬ ಪ್ರಸಿದ್ಧ ಕತೆಯಲ್ಲಿ ಇದೇ ತತ್ವವನ್ನು ಇಲ್ಯಿಚ್ ಎಂಬ ಸರ್ಕಾರಿ ಕಚೇರಿಯೊಂದರ ಗುಮಾಸ್ತನ ಬದುಕಿನ ಮೂಲಕ ತಿಳಿಸಲು ಯತ್ನಿಸುತ್ತಾರೆ. ಇದೇ ಕತೆಯನ್ನು ಲೋಕಪ್ರಸಿದ್ಧ ಸಿನಿಮಾ ನಿರ್ದೇಶಕ ಅಕಿರಾ ಕುರಾಸೋವಾ “ಇಕಿರು” ಹೆಸರಿನ ಸಿನಿಮಾ ಮಾಡಿದ್ದಾರೆ. ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾಗಿರುವ ಕುರೋಸಾವಾ ಅವರ “ಇಕಿರು” (ಅಂದರೆ ಬದುಕು) ಅವರ ಸಿನಿಮಾಗಳಲ್ಲೇ ನನ್ನ ಇಷ್ಟದ ಸಿನಿಮಾ ಕೂಡಾ.

ಜೀವನದ ಬಹುಪಾಲು ಮಾಮೂಲಿ ಅಧಿಕಾರಶಾಹಿಯ ವಿಳಂಬ ನೀತಿ (red tapism) ಯಲ್ಲಿ ಕಳೆಯುವ, ಬದುಕಿಗೆ ಯಾವ ಅರ್ಥವೂ ಇಲ್ಲದೇ ಬದುಕುವ ನೌಕರನೊಬ್ಬ ತನಗೆ ಕ್ಯಾನ್ಸರ್ ಇದೆ ಎಂದು ವೈದ್ಯರು ಹೇಳಿದ ನಂತರ, ಇನ್ನು ಆರು ತಿಂಗಳಲ್ಲಿ ತನ್ನ ಸಾವು ಖಚಿತ ಎಂದು ತಿಳಿದ ಮೇಲೆ ಆ ಆರು ತಿಂಗಳು ಹೇಗೆ ಬದುಕಿದ ಎಂದು ಅವನು ಸತ್ತ ನಂತರ ಸಹೋದ್ಯೋಗಿಗಳು ನಡೆಸುವ ಮಾತುಕತೆಯಲ್ಲಿ ತೆರೆದುಕೊಳ್ಳುತ್ತದೆ. ಆತನ ಬದುಕು ದೊಡ್ಡ ರೂಪಾಂತರವನ್ನೇ ಹೊಂದುತ್ತದೆ. ಆ ಅವಧಿಯಲ್ಲಿ ಅವನು ಮಾಡುವುದೆಲ್ಲಾ ಒಳ್ಳೆಯ ಸಾಧನೆ ಆಗುತ್ತದೆ.

ಹೌದು, ಬದುಕಿಗೆ ನಾವು ಉದಾತ್ತ ಉದ್ದೇಶಗಳನ್ನು ಹೊಂದಿದಾಗ ಮಾತ್ರ ನಮ್ಮ ಯಾವುದೇ ಸಾಧನೆ ಮತ್ತು ಬದುಕಿನ ಯಾನ ಅರ್ಥಪಡೆಯುತ್ತದೆ. ಬದುಕಿನ ಉದ್ದೇಶ ಸರಿಯಾಗಿ ನಿರ್ಧಾರವಾಗಿದ್ದಾಗ ನಮ್ಮ ಯಾವುದೇ ಸಾಧನೆ “ಸ್ವಾರ್ಥದ” ಹಾದಿ ಹಿಡಿಯುವುದಿಲ್ಲ, ಇನ್ನೊಬ್ಬರನ್ನು ತುಳಿಯುವ, ಇನ್ನೊಬ್ಬರ ಏಳಿಗೆಗೆ ಕರುಬುವ ಅಗತ್ಯ ಕಂಡು ಬರುವುದಿಲ್ಲ. ಸುಳ್ಳು ಶತ್ರುಗಳೂ ಸೃಷ್ಟಿಯಾಗುವುದಿಲ್ಲ, ಒಂದು ಅವಕಾಶ ಹೋದರೆ ಮರುಗುತ್ತಾ ಅದಕ್ಕೆ ಅವರು ಕಾರಣ ಇವರು ಕಾರಣ ಎಂದುಕೊಂಡು ಕತ್ತಿ ಮಸೆಯುವ ಯಾವ ಅಗತ್ಯವೂ ಇರುವುದಿಲ್ಲ.

ಹೀಗೆ ಬದುಕಿಗೆ ಉದಾತ್ತ ಉದ್ದೇಶ ಕಲ್ಪಿಸಿಕೊಂಡು ಆ ಉದ್ದೇಶಗಳಿಗಾಗಿ ಬದುಕಿದವರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್, ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಚೆ ಗುವಾರಾ, ಡಾರ್ವಿನ್, ಐನ್ ಸ್ಟೀನ್, ಸ್ಟೀವನ್ ಹಾಕಿಂಗ್, ಅಬ್ರಹಾಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ, ಗಾಂಧೀಜಿ ಇವರೆಲ್ಲ ನಿಲ್ಲುತ್ತಾರೆ. ಇವರಲ್ಲಿ ಯಾರೂ ಸಾಧನೆಗಾಗಿ ಸಾಧನೆ ಮಾಡಿದವರಲ್ಲ, ಬದುಕಿ‌ನ ಘನ ಉದ್ದೇಶಗಳಿಗಾಗಿ ಅವರು ನಡೆಸಿದ ಪ್ರಾಮಾಣಿಕ, ಶ್ರಮದಾಯಕ ಪ್ರಯತ್ನಗಳೇ ಸಾಧನೆಗಳಾದವು.

ಹೀಗಾಗಿ ಸಾಧನೆ ಕುರಿತು ಯೋಚಿಸುವ ಮುನ್ನ ಬದುಕಿನ ಉದ್ದೇಶದ ಬಗ್ಗೆ ಯೋಚಿಸಿ, ಖಚಿತಪಡಿಸಿಕೊಳ್ಳಿ. ಹಾಗೂ ಆ ನಿಮ್ಮ ಉದ್ದೇಶದಲ್ಲಿ ನೀವೆಷ್ಟು ಪ್ರಾಮಾಣಿಕರು ಎಂದೂ ನೋಡಿಕೊಳ್ಳಿ, ನಿಮ್ಮ ದೈನಂದಿನ ವರ್ತನೆಗಳು ಅದಕ್ಕೆ ಪೂರಕವಾಗಿವೆಯೇ ವ್ಯತಿರಿಕ್ತವಾಗಿದೆಯೇ ಎಂದೂ ನೋಡಿಕೊಳ್ಳಿ. ಬದುಕು ಸಾರ್ಥಕವಾಗುತ್ತದೆ.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version