ದಿನದ ಸುದ್ದಿ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ | ಕವಿಯ ಮೇಲೆ ದಾಖಲಿಸಿರುವ ಪ್ರಕರಣವನ್ನು ವಾಪಾಸು ಪಡೆಯಬೇಕು : ಸಿದ್ದರಾಮಯ್ಯ

Published

on

ಸುದ್ದಿದಿನ,ಕಲಬುರಗಿ : ಕಳೆದ ಮೂರು ದಿನದಲ್ಲಿ ನಾಲ್ಕೈದು ಲಕ್ಷ ಮಂದಿ ಕನ್ನಡಿಗರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದು ಕನ್ನಡಿಗನಾದ ನನಗೆ ಅತ್ಯಂತ ಸಂತಸದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಬುರಗಿಯಲ್ಲಿ ಶುಕ್ರವಾರ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ನಾಡಿಗೆ ಯಾವುದೇ ರಾಜ್ಯದಿಂದ ಬರಲಿ, ಯಾವುದೇ ದೇಶದಿಂದ ಬರಲಿ ಮೊದಲು ಅವರು ಇಲ್ಲಿನ ನಾಡು ನುಡಿಯನ್ನು ಗೌರವಿಸಬೇಕು. ಆಗ ಮಾತ್ರ ಅವರನ್ನು ನಮ್ಮವರಂತೆ ಕಾಣಲು ಸಾಧ್ಯ. ಕನ್ನಡಿಗರಾದ ನಾವು ಎಂದಿಗೂ ನಮ್ಮತನವನ್ನು ಮರೆಯದೆ, ಕನ್ನಡ ವಾತಾವರಣವನ್ನು ಸೃಷ್ಟಿಸಿದರೆ ಹೊರಗಿನಿಂದ ಬಂದವರು ಕೂಡ ಇಲ್ಲಿನ ಭಾಷೆಯನ್ನು ಕಲಿಯುತ್ತಾರೆ ಎಂದು ಹೇಳಿದರು.

ಕನ್ನಡ ಕಾವಲು ಸಮಿತಿಯ ಮೊಟ್ಟಮೊದಲ ಅಧ್ಯಕ್ಷನಾಗಿ ವರ್ಷಗಳ ಕಾಲ ನಾಡು ನುಡಿಯ ಸೇವೆ ಮಾಡಿದ್ದೆ. ರಾಜ್ಯಾದ್ಯಂತ ಸಂಚರಿಸಿ ಕನ್ನಡದ ಬೆಳವಣಿಗೆಗಾಗಿ ಸಾಕಷ್ಟು ಶ್ರಮಿಸಿದ್ದೆ. ನಾಡು ನುಡಿಯ ಸೇವೆ ಮಾಡುವುದು ಎಂದರೆ ಹೆತ್ತ ತಾಯಿಯ ಸೇವೆ ಮಾಡಿದಂತೆ ಎಂಬ ನಂಬಿಕೆ ನನ್ನದು.

ಈ ಕಾರಣಕ್ಕಾಗಿಯೇ ಅಂದಿನ ದಿನಗಳು ನೆನಪಾದಾಗೆಲ್ಲ ಹೆಮ್ಮೆ ಎನಿಸುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಪತ್ರ ಅಥವಾ ಟಿಪ್ಪಣಿಗಳನ್ನು ತಂದರೂ ಅದಕ್ಕೆ ನಾನು ಸಹಿ ಮಾಡುತ್ತಿರಲಿಲ್ಲ. ನೀವು ಯಾವ ರಾಜ್ಯದಿಂದ ಬಂದಿದ್ದೀರ ನನಗದು ಮುಖ್ಯವಲ್ಲ, ನೀವೀಗ ಕರ್ನಾಟಕದಲ್ಲಿದ್ದೀರ, ನೀವು ನಮ್ಮಂತೆ ಕನ್ನಡಿಗರು, ಕನ್ನಡ ಕಲಿಯಿರಿ ಎಂದು ಅಧಿಕಾರಿಗಳನ್ನು ವಾಪಾಸು ಕಳಿಸುತ್ತಿದ್ದೆ ಎಂದು ನುಡಿದರು.

ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಬೇಕು. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಭಾಷೆಯ ವಿಚಾರದಲ್ಲಿ ಉದಾರತೆ ಸಲ್ಲದು. ಭಾಷೆಯ ವಿಚಾರದಲ್ಲಿ ತೋರುವ ಉದಾರತೆಯಿಂದ ಭಾಷೆಯ ಅಸ್ಮಿತೆಗೆ ಧಕ್ಕೆಯಾಗುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಇದನ್ನು ನಾವೇ ಒಪ್ಪದಿದ್ದರೆ ಇತರರು ನಮ್ಮ ಭಾಷೆಯನ್ನು ಹೇಗೆ ಗೌರವಿಸುತ್ತಾರೆ?

ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ‌ ಮಾತೃಭಾಷೆಯಲ್ಲಿ ಸಿಗುವಂತಾಗಬೇಕು. ಇದು ಭಾಷೆಯ ಉಳಿವಿನ ಹಾಗೂ ಮಗುವಿನ ಮನೋವಿಕಾಸದ ದೃಷ್ಟಿಯಿಂದ ಅತ್ಯಗತ್ಯ. ಸರ್ಕಾರಕ್ಕೆ ಈ ವಿಚಾರದಲ್ಲಿ ಬದ್ಧತೆಯಿರಬೇಕು. ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನೂ ತೆರೆಯುತ್ತೇವೆ, ಕನ್ನಡ ಭಾಷೆಗೂ ಪ್ರಾಮುಖ್ಯತೆ ನೀಡುತ್ತೇವೆ ಎಂದರೆ ಅದು ಎರಡು ದೋಣಿಯ ಮೇಲೆ ಕಾಲಿಟ್ಟಂತೆ ಎಂದು ಎಚ್ಚರಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದೆ. ಆಗ ಮಕ್ಕಳ ಶೈಕ್ಷಣಿಕ ಆಯ್ಕೆಯ ವಿಚಾರವನ್ನು ಅವರ ಪೋಷಕರಿಗೆ ಬಿಡೋಣ ಎಂದು ಮತ್ತೆ ಸುಪ್ರೀಂ ಕೋರ್ಟ್ ಹೇಳಿತು. ಅಂದಿನ ನನ್ನ ನಿಲುವಿಗೆ ನಾನು ಈಗಲೂ ಬದ್ಧನಿದ್ದೇನೆ.

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸುವ ಬಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಾವೆಲ್ಲ ಒಗ್ಗಟ್ಟಾದರೆ ಬದಲಾವಣೆ ಸಾಧ್ಯ ಎಂದು ವಿನಂತಿಸಿದೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಅವರ ಅಭಿಪ್ರಾಯ ಸಂಗ್ರಹಿಸಿ ಸಂವಿಧಾನಕ್ಕೆ ತಿದ್ದುಪಡಿ ತನ್ನಿ ಎಂದು ಪ್ರಧಾನಿಯವರಿಗೂ ಪತ್ರ ಬರೆದೆ. ಆದರೆ ಅವರಿಂದ ಯಾವುದೇ ರೀತಿಯ ಸ್ಪಂದನೆ ವ್ಯಕ್ತವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಮಾಧ್ಯಮದಲ್ಲಿ ಓದಿದ ಪ್ರೊ. ಸಿ.ಎನ್ ಆರ್ ರಾವ್ ಅವರಿಗೆ ಜಗತ್ತಿನ ವಿವಿಧ ದೇಶಗಳ 40ಕ್ಕೂ ಅಧಿಕ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿ ಗೌರವಿಸಿವೆ. ಇದು ಮಾತೃಭಾಷೆ ಶಿಕ್ಷಣದ ಸಾಮರ್ಥ್ಯ. ಇದನ್ನು ಎಲ್ಲ ತಂದೆ ತಾಯಂದಿರು ಅರ್ಥ ಮಾಡಿಕೊಂಡು ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ಸಿಗುವಂತೆ ಮಾಡಬೇಕು.

ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮಾನತೆ ದೂರಮಾಡಿ ಹೈದರಾಬಾದ್ ಕರ್ನಾಟಕಕ್ಕೆ ಪ್ರಾದೇಶಿಕ ನ್ಯಾಯ ದೊರಕಿಸಿಕೊಡಬೇಕೆಂದು ನಮ್ಮ‌ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಪರಿಚ್ಚೇದ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿತ್ತು. ಈ ಕಾರಣದಿಂದಲೇ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾಗಿರುವುದು.

ಈಗ ಕಲ್ಯಾಣ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿದವರು, ವಿರೋಧಿಸಿದವರು ಯಾರು ಎನ್ನುವುದನ್ನು ಕೂಡಾ ಮರೆಯಬಾರದು. ನಮ್ಮ ಸರ್ಕಾರ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರಿಂದಲೇ ಇಂದು ಉದ್ಯೋಗ ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ಸಿಗುತ್ತಿದೆ ಎಂದರು.

ಕತೆ, ಕವನ, ನಾಟಕಗಳಂತಹ ಸೃಜನಶೀಲ ಅಭಿವ್ಯಕ್ತಿಯನ್ನು ದಮನಿಸುವ ರಾಜ್ಯ ಸರ್ಕಾರದ ಕ್ರಮವನ್ನು ಸಹಿಸಿಕೊಂಡಿರಲು ಸಾಧ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಬೀದರ್‌ನ ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲಿನ ಪ್ರಕರಣ ಮಾತ್ರವಲ್ಲ, ಕೊಪ್ಪಳ ಕವಿಯ ಮೇಲೆ ದಾಖಲಿಸಿರುವ ಪ್ರಕರಣವನ್ನು ವಾಪಾಸು ಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಒತ್ತಾಯಿಸಿದರು. ‌

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version