ಭಾವ ಭೈರಾಗಿ

ಕವಿತೆ | ಅಕ್ಕ ಹೇಳಿದ್ದು

Published

on

 

ವಾತ್ಸಲ್ಯದ ಬೆಚ್ಚನ್ನ
ಬಿಸಿಲು ಮಾಳಿಗೆಯಲ್ಲಿ
ಮಿಂದ ಕೂದಲ ಸಿಕ್ಕುಬಿಡಿಸುವ
ರತ್ನಗಂಬಳಿಯ ಹಂಸಪಾದಕ್ಕೆ
ಮುಳ್ಳು
ಸೆರೆಗೆಳೆವ ರಾಜರು
ಕೊಂಕು ನೋಟವ ಹೊದ್ದ
ತುಂಬು ಸೆರಗಿನ ಗರತಿಯರು
ಬೇನೆಯರಿಯದ
ಬಂಜೆಯರು

ಹರಿದ ಸೀರೆಯಲರ್ಧ ಕೊಟ್ಟು
ಮೈ ಮುಚ್ಚಬಂದ ತಾಯಂದಿರು
ಹಸಿದ ನಾಯಿನಾಲಗೆಯಮಾವಾಸ್ಯೆಗಳ
ಮಧ್ಯೆ
ಚುಕ್ಕೆ ಬೆಳಕು
ಅಂಗೈ ಲಿಂಗಕ್ಕೆ ಕನಸುಗಳ ನೈವೇದ್ಯ

ಉಡುತಡಿಗು ಕಲ್ಯಾಣಕ್ಕು ಎಷ್ಟು ದೂರ
ನಡೆಮಡಿಯ ಹಾಸಿದವರೂ
ಕೆದಕಿ ಕೇಳಿದರು
ಪತಿಯ ಕುರುಹ
ಹೇಳದಿರೆ ತೊಲಗೆಂದು
ನಿರ್ವಾಣದ ಬೆಳಗು
ಕೊರಳೆತ್ತಿತ್ತು
ಅಯ್ಯ ನಾನು ನೀನೆಂಬುಭಯವಳಿದ
ಪ್ರಭುವೇ
ಎನ್ನೊಡವುಟ್ಟಿದಣ್ಣಂಗಳೇ
ಕೇಳಬಹುದೇ ಪತಿಯ ಕುರುಹ

ಕುರುಹೇ ತಾನಾದ ನನ್ನನ್ನು
ಯಾರು ಹೇಳಿದರು ನಿಮಗೆ
ನಾನು ಬತ್ತಲಿದ್ದೇನೆಂದು
ಇದು ಬತ್ತಲಲ್ಲ
ಬಯಲು ಕಾಣಿರೋ
ನಮ್ಮೆದುರೆ ನಿಂತಿದ್ದೇನಲ್ಲಾ
ಬಯಲಾಗಿ
ಬತ್ತಲಾಗಿ
ಬತ್ತಲೂ ಆಗಿ

ತೊಟ್ಟು ಕಳಚಿದ ಹಣ್ಣ
ಬೇರನರಸುವ
ನುಡಿಯ ಜಾಣಂಗಳೇ
ನಾನಾದರೂ ನಿಮ್ಮ
ಎನ್ನೊಡವುಟ್ಟಿದಣ್ಣಂಗಳೇ
ಎಂದು
ಎಂತುನಂಬಲಿ ಪ್ರಭುವೇ

ಇರಲಿರಲಿ ಶೂನ್ಯಗಳು
ಸಿಂಹಾಸನಗಳು
ಗಿಳಿ ಕೋಗಿಲೆಗಳನ್ನಾದರೂ
ದಾರಿ ಕೇಳುತ್ತ
ನಿಮ್ಮ ನಡೆಮಡಿಯ ಬಿಸುಟು
ಹೋಗುತ್ತೇನೆ
ಕದಳಿಗೆ

ಸ.ಉಷಾ

(ಈ ಕವಿತೆಯನ್ನು ‘ಡಾ.ಶ್ರೀಕಂಠ ಕೂಡಿಗೆ’ ಸಂಪಾದಕತ್ವದ ‘ ಸಮಕಾಲೀನ ಕವಿತೆಗಳು’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version