ದಿನದ ಸುದ್ದಿ

ಅಂಬೇಡ್ಕರ್ ಚಿಂತನೆಗಳು ಮತ್ತು ಸಮಾಜವಾದ

Published

on

  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ಅಂಬೇಡ್ಕರ್, ಮಾರ್ಕ್ಸ್‌ವಾದ ಹಾಗೂ ಮಾರ್ಕ್ಸ್‌ವಾದಿಗಳ ಬಗೆಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಎಂಬುದು ದಿಟ. ಅವರು ತಮ್ಮ ‘ಬುದ್ಧ ಅಥವಾ ಮಾರ್ಕ್ಸ್’ ಕೃತಿಯಲ್ಲಿ ಮೇಲೆ ಪುಸ್ತಾಪಿಸಿರುವ ಭಿನ್ನಾಭಿಪ್ರಾಯಗಳ ಬಗೆಗೆ ವಿಶದವಾಗಿ ಚರ್ಚಿಸಿದ್ದಾರೆ. ಸಂಘಟನಾತ್ಮಕವಾಗಿಯೂ ಅವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ ಕುರಿತು ಭಿನ್ನಮತವಿತ್ತು. ಇದರ ಹಿನ್ನೆಲೆಯಲ್ಲೇ, ಅವರು 1936ರಲ್ಲಿ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿದರು. ಆದರೆ ಈ ಎರಡೂ ಪಕ್ಷಗಳ ಗುರಿ ಒಂದೇ ಆಗಿತ್ತು.

ಅದೇ ಭಾರತದಲ್ಲಿ ಸಮಾಜವಾದಿ ವ್ಯವಸ್ಥೆಯ ಸ್ಥಾಪನೆ. ಅವರು 1938ರ ಮೇ 15ರಂದು ಮಹಾರಾಷ್ಟ್ರದ ದೇವರಖ ಎಂಬ ಸ್ಥಳದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತ, ” ನಮ್ಮ ದೇಶದಲ್ಲಿ ರೈತರು ಮತ್ತು ಕಾರ್ಮಿಕರೇ ಬಹುಸಂಖ್ಯಾತರು. ಈ ವರ್ಗದವರೇ ಆಡಳಿತ ವರ್ಗವಾಗಿ ಹೊರಹೊಮ್ಮಬೇಕು….” ಹೀಗಾಗಿ ಈ ಎರಡೂ ಪಕ್ಷಗಳ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಇರಲಿಲ್ಲ. ಆದರೆ ಮಾರ್ಗ ಮತ್ತು ಕಾರ್ಯತಂತ್ರಗಳ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು.

ಅವರು ತಮ್ಮ ಅನೇಕ ಬರಹಗಳಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಎರಡೂ ಸಾಂವಿಧಾನಿಕವಾಗಿ ನಮ್ಮ ಮೂಲಭೂತ ಹಕ್ಕಾಗಬೇಕು ಎಂಬ ವಿಷಯವನ್ನು ಮಂಡಿಸುತ್ತ ಇದಕ್ಕೆ ಸಂಬಂಧಿಸಿದ ಅನೇಕ ವಿಚಾರಗಳ ಬಗೆಗೆ ಬೆಳಕನ್ನು ಚೆಲ್ಲಿದ್ದಾರೆ. ಭೂ ಸುಧಾರಣೆ ಕುರಿತು ಸಂಸತ್ತಿನಲ್ಲಿ ಮಾತನಾಡುತ್ತ ನಮ್ಮ ದೇಶದಲ್ಲಿ ಸಮಾನತೆಯು ನೆಲಸಬೇಕಾದರೇ ರಷ್ಯಾದಲ್ಲಿ ಜರುಗಿದಂತೆ ಭೂಮಿಯ ರಾಷ್ಟ್ರೀಕರಣವಾಗಬೇಕು ಎಂದು ಬಲವಾಗಿ ತಮ್ಮ ವಾದವನ್ನು ಮುಂದಿಟ್ಟಿದ್ದರು.

ಅಂಬೇಡ್ಕರ್ ಅವರು ಒಮ್ಮೆ ಫ್ರೆಂಚ್ ಮತ್ತು ರಷ್ಯಾದಲ್ಲಿ ಜರುಗಿದ ಸಮಾಜವಾದಿ ಕ್ರಾಂತಿಗಳನ್ನು ಒಂದು ಸಿಹಿಖಾದ್ಯದ ಉದಾಹರಣೆಯ ಮೂಲಕ ವಿವರಿಸಿದ್ದರು. ” ಫ್ರೆಂಚ್ ಕ್ರಾಂತಿ ಹೋಳಿಗೆಯ ಹೊರಗಡೆಯ ಪದರಾದರೇ ರಷ್ಯಾದ ಕ್ರಾಂತಿ ಅದರ ಹೂರಣದಂತೆ, ಹೋಳಿಗೆಯ ರುಚಿಗೆ ಎರಡೂ ತುಂಬ ಮುಖ್ಯ. ಒಂದರ ಗೈರುಹಾಜರಿ ಇಡೀ ಹೋಳಿಗೆಯ ರುಚಿಗೆ ಧಕ್ಕೆಯಾಗುತ್ತದೆ.” ಎಂಬ ಮಾತುಗಳನ್ನು ಆಡಿದ್ದರು.

1848ರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫುಡ್ರಿಕ್ ಏಂಗಲ್ಸ್ ‘ ಕಮ್ಯುನಿಸ್ಟ್ ಪುಣಾಳಿಕ ‘ (‘ ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಕೊ) ಯನ್ನು ಪ್ರಕಟಿಸಿದರು. ಇದರಲ್ಲಿ ಒಂದು ಸಂಘಟಿತ ಶ್ರಮಜೀವಿ ವರ್ಗ ಆಳುವ ವರ್ಗವಾಗಿ ಪರಿವರ್ತನೆಯಾಗುವುದರ ನಿಟ್ಟಿನಲ್ಲಿ ಕ್ರಮಗಳನ್ನು ತಿಳಿಸಲಾಗಿದೆ. ಅಂಬೇಡ್ಕರ್ 1946ರಲ್ಲಿ ಘಟನಾ ಸಭೆಗೆ ಸಂವಿಧಾನದ ಕರಡನ್ನು ಸಲ್ಲಿಸಿದರು. ಇದನ್ನು ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ನೀಡಲಾಯಿತು. ಮೇಲೆ ಪ್ರಸ್ತಾಪಿಸಿರುವ ಎರಡೂ ದಸ್ತಾವೇಜುಗಳ ನಡುವಿನ ಅನೇಕ ಅಂಶಗಳಲ್ಲಿ ಸಾಮ್ಯತೆಯಿದೆ.

ಕಾರ್ಲ್ ಮಾರ್ಕ್ಸ್ ಮತ್ತು ಫುಡ್ರಿಕ್ ಏಂಗೆಲ್ಸ್’ ಪತಿಪಾದಿಸಿದ್ದನ್ನು ‘ಸಮಾಜವಾದಿ ಪ್ರಭುತ್ವ’ ಎಂದು ಬಣ್ಣಿಸಬಹುದು. ಅಂಬೇಡ್ಕರ್ ಮಂಡಿಸಿದ್ದು ಪ್ರಭುತ್ವ ಸಮಾಜವಾದಿ’ ಆರ್ಥಿಕ ನೀತಿ ಇದನ್ನು ಅವರು 1947ರಲ್ಲಿ ಬರೆದ ಪಭುತ್ವ ಮತ್ತು ಅಲ್ಪಸಂಖ್ಯಾತರು’ ಎಂಬ ಪುಸ್ತಕದಲ್ಲಿ ಈ ನೀತಿಯ ಉಲ್ಲೇಖವಿದೆ.

ಫೇಬಿಯನ್ ಸಮಾಜವಾದಿಯಾಗಿದ್ದ (ಜವಹರ್ ಲಾಲ್ ನೆಹರೂರವರನ್ನೂ ಹೀಗೆಂದೇ ಕರೆಯಲಾಗುತ್ತದೆ) ಅಂಬೇಡ್ಕರ್, ಕೈಗಾರಿಕೆ, ಶಿಕ್ಷಣ, ಕೃಷಿ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರದ ಪಾತ್ರವೇ ಶಿಖರಪ್ರಾಯವಾಗಿರಬೇಕೆಂದು ಅಭಿಪ್ರಾಯಪಟ್ಟಿದ್ದರು. ಪುಸ್ತುತ ಕಾಲಘಟ್ಟದಲ್ಲಿ ಆಳುವ ಸರ್ಕಾರಗಳು ಖಾಸಗೀಕರಣಕ್ಕೆ ಮಣೆಯನ್ನು ಹಾಕುತ್ತಿವೆ. ನಮ್ಮ ದೇಶದಲ್ಲಿರುವ ಸಾರ್ವಜನಿಕ ಕ್ಷೇತ್ರದ, ಜನತೆಯ ಹಣದಿಂದ ರಚಿಸಿರುವ ಆಸ್ತಿಗಳನ್ನು ಖಾಸಗಿಶಕ್ತಿಗಳಿಗೆ ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಹೀಗೆ, ಅಂಬೇಡ್ಕರ್ ಪ್ರತಿಪಾದಿಸಿದ ಪ್ರಭುತ್ವ ಸಮಾಜವಾದಿ,ಆರ್ಥಿಕ ನೀತಿ ಈಗ ಮೂಲೆಗುಂಪಾಗಿದೆ.

ಸ್ವಾತಂತ್ರವನ್ನು ಪಡೆದ ಮೊದಲ ವರ್ಷಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಒಂದು ಮನನಯೋಗ್ಯ ಹೇಳಿಕೆಯನ್ನು ನೀಡಿದ್ದರು. “1947ರಲ್ಲಿ ಭಾರತ ರಾಜಕೀಯ ಪುಜಾಪ್ರಭುತ್ವವನ್ನು ಗಳಿಸಿತು. ಆದರೆ ಸಾಮಾಜಿಕ ಮತ್ತು ಆರ್ಥಿಕ ಪಜಾಪಭುತ್ವವನ್ನು ಪಡೆದಾಗಲೇ ರಾಜಕೀಯ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ.”

ಇಂದು ನಮ್ಮ ದೇಶಾದ್ಯಂತ 131ನೇ ಅಂಬೇಡ್ಕರ್ ಜಯಂತಿಯನ್ನು ನಾನಾ ರೀತಿಗಳಲ್ಲಿ ಆಚರಿಸಲಾಗುತ್ತಿದೆ. ಪುಸ್ತುತ, ನಮ್ಮಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಟ್ಟಹಾಸದಿಂದ ಮುನ್ನಡೆಯುತ್ತಿವೆ. ಇವುಗಳಿಗೆ ಎದುರಾಗಿ ಪ್ರತಿರೋಧದ ನಡೆಗಳೂ ಇವೆ. ಆದರೆ ಅವು ಒಗ್ಗಟ್ಟಿನ ದನಿಗಳಾಗಿಲ್ಲ; ಹಜ್ಜೆಗಳಾಗಿಲ್ಲ. ಅಂಬೇಡ್ಕರ್ ಆಶಯದ ಸಮಾಜವಾದಿ ಸಮಾಜವನ್ನು ಸಾಕಾರಗೊಳಿಸುವುದು ಸಮಸಮಾಜ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ಬದ್ಧತೆಯಿರುವ ಎಲ್ಲ ಜನಪರ ಸಂಘಟನೆಗಳ ಆದ್ಯತೆಯಾಗಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version