ಲೈಫ್ ಸ್ಟೈಲ್
‘ಕೋವಿಡ್’ ನಾ ಕಂಡ ಹಾಗೆ : ಡಾ. ರಾಘವೇಂದ್ರ. ಎಫ್. ಎನ್
- ಡಾ. ರಾಘವೇಂದ್ರ. ಎಫ್. ಎನ್
ಒಬ್ಬ ಯೋದ ಯುದ್ಧದಲ್ಲಿ ಪಾಲ್ಗೊಂಡಾಗ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೊರಾಡುತ್ತಾನೆ. ಕೆಲವರು ಚತುರವಾಗಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡು ಅಲ್ಪಸ್ವಲ್ಪ ಗಾಯ ಮಾಡಿಕೊಂಡರೂ ಸರಿ, ಆದರೂ ಹೋರಾಡಿ ಕೊನೆಗೆ ಗೆಲುವು ಸಾಧಿಸುತ್ತಾರೆ ಆದರೇ ಇನ್ನೂ ಕೆಲವರು ವೀರಾವೇಶದಿಂದ ಉದ್ವೇಗವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಯಾಕೆ ಇದನ್ನು ಹೇಳಿದೆ ಎಂದರೆ ಇದರಿಂದ ಸೋಂಕಿತರಾದ ಕೆಲವರ ಪರಿಸ್ಥಿತಿ ಹಾಗೆಯೆ.
ಕೋವಿಡ್ ಈಗ ಜಾಗತಿಕಮಾರಿ.ಜಗತ್ತನ್ನೇ ಭಯಭೀತಗೊಳಿಸಿ ಊನ ಮಾಡಿರುವ ಈ ವೈರಾಣು ಕೆಲವರನ್ನು ಸ್ವಲ್ಪ ದಿನ ಮಾತ್ರ ಕಾಡಿ ಸುಮ್ಮನೆ ಬಿಟ್ಟುಬಿಟ್ಟರೆ ಇನ್ನೂ ಕೆಲವರನ್ನು ಹಿಂಡಿ ಹಿಪ್ಪೆಕಾಯಿಮಾಡಿ ಪ್ರಾಣವನ್ನೇ ತೆಗೆದುಬಿಡುತ್ತದೆ.ಯಾಕೆ ಹೀಗೆ?
ಕೊರೊನ ಮತ್ತು ದೇಹದ ಯುದ್ಧ..!
ಇಲ್ಲಿ ಬರೀ ಕೊರೊನ ವೈರಾಣುವನ್ನು ಒಂದನ್ನೇ ದೂಷಿಸುವುದು ತರವಲ್ಲ. ನಾನು ಈಗಾಗಲೇ ಹೇಳಿದ ಹಾಗೆ ನಮ್ಮ ದೇಹದ ರೋಗನಿರೋಧಕ ಶಕ್ತಿ, ಸೈನಿಕರ ದಂಡು ಇದ್ದ ಹಾಗೆ ಈ ವೈರಾಣುವನ್ನು ಈ ಸೈನಿಕರು ಎಷ್ಟು ಚಾಣಾಕ್ಷವಾಗಿ ಹದ್ದು ಬಸ್ತಿಗೆ ತರುತ್ತಾರೆಯೋ ಅಥವಾ ಅತಿರೇಕವಾಗಿ ಹೋರಾಡಿ ತಮ್ಮ ದೇಹವನ್ನ ತಾವೇ ಹಾನಿ ಮಾಡಿಕೊಳ್ಳುತ್ತಾರೆಯೋ ಅದರ ಮೇಲೆ ನಿರ್ಭರ.
ಈ ವೈರಾಣು ಹೇಗೆ ದೇಹ ಪ್ರವೇಶಿಸುತ್ತದೆ, ಹೇಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಯಾಕೆ ಕೆಲವರು ಬರೀ ಶೀತ, ಕೆಮ್ಮು, ಜ್ವರ, ಮೈ ಕೈ ನೋವಿನಿಂದ ಬಳಲಿ ಗುಣಮುಖರಾಗುತ್ತಾರೆ ಮತ್ತು ಇನ್ನೂ ಕೆಲವರು ಉಸಿರಾಟದ ತೊಂದರೆ, ಆಯಾಸ, ಅಂಗವೈಫಲ್ಯ, ಆಮ್ಲಜನಕ ಕೊರತೆಯಿಂದ ಬಳಲಿ ಆಸ್ಪತ್ರಗೆ ಸೇರಿ ಆಮ್ಲಜನಕ, ವೆಂಟಿಲೇಟರ್ ಇತ್ಯಾದಿ ಉತ್ತಮ ಮಟ್ಟದ ವೈದ್ಯಕೀಯ ಚಿಕಿತ್ಸೆ, ಔಷಧ ಪಡೆದರೂ ಕೂಡ ಅಸುನೀಗುತ್ತಾರೆ ಎಂಬುದು ಒಂದು ವೈದ್ಯಕೀಯ ವೈಚಿತ್ರವೇ ಸರಿ.
ಇದಕ್ಕೆ ಕಾರಣ ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ಅದು ಹೋರಾಡುವ ಪರಿ ಅತಿಯಾಗಿ ಹೋರಾಡಿದರೆ ದೇಹದಲ್ಲಿನ ರೋಗನಿರೋಧಕ ಕಣಗಳು ಅಗತ್ಯಕ್ಕಿಂತ ಹೆಚ್ಚಾಗಿ ಹೊರಬಂದು, ರಕ್ತ ಸಂಚಲನೆ ತಡೆಯೊಡ್ಡಿ,, ಪುಪ್ಪಸದಲ್ಲಿ ರಕ್ತಹೆಪ್ಪುಗಟ್ಟಿ, ನೀರು ತುಂಬಿ ತೀವ್ರ ಉಸಿರಾಟದ ತೊಂದರೆಯಾಗಿ ಕೊರತೆಯಾಗಿ(ಹೈಪೈಕ್ಸಿಯಾ), ವೆಂಟಿಲೇಟರ್ ಇನ್ನಿತರ ಸಲಕರಣೆ ಮೂಲಕ ಆಮ್ಲಜನಕ ಪೂರೈಕೆ ಮಾಡಿ ಮತ್ತು ಅತೀ ಉನ್ನತ ಔಷಧಗಳನ್ನು ಕೊಟ್ಟರೂ ಸಾವನ್ನಪ್ಪುತ್ತಾರೆ.
ನಮ್ಮ ರೋಗನಿರೋಧಕ ಹೋರಾಟ ಅತೀ ಮಂದವಾಗಿದ್ದರೂ ಹಾನಿ, ಅತೀ ವೇಗವಾಗಿದ್ದರೂ ಹಾನಿ. ಮಧ್ಯಮದಲ್ಲಿದ್ದರೆ ಉತ್ತಮ.ಹಿಡಿತದಲ್ಲಿದ್ದರೆ ದೇಹಕ್ಕೆ ಇನ್ನೂ ಉತ್ತಮ, ಹೀಗಿದ್ದರೆ ಶೀಘ್ರ ಗುಣಮುಖರಾಗಲು ಅಥವಾ ರೋಗ ಸೋಂಕಿದ ನಂತರ, ಗುಣಮುಖರಾದ ಮೇಲೆ ದೇಹದ ಮೇಲೆ ಆಗುವ ಪರಿಣಾಮಗಳನ್ನು ತಡೆಗಟ್ಟಬಹುದು.
ಆದರೇ ಇದು ನಮ್ಮ ಕೈಯಲ್ಲಿಲ್ಲ ಆದರೂ ವಿಜ್ಞಾನಿಗಳು ಇಂತಹ ಪರಿಸ್ಥಿತಿ ಎದುರಿಸಲು ಕೆಲವು ಔಷಧಗಳನ್ನು ಕಂಡುಹಿಡಿದಿದ್ದಾರೆ. ವೈರಾಣುವನ್ನು ದೇಹದ ಒಳಗೆ ಬರುವುದನ್ನು ತಡೆಗಟ್ಟುವ ಕೆಲವು ಔಷಧಗಳಾದ ಹೈಡ್ರಾಕ್ಸಿಕ್ಲೋರೊಕ್ಕಿನ್, ವೈರಾಣು ದೇಹದೊಳಗಡೆ ದ್ವಿಗುಣಗೊಳ್ಳುವುದನ್ನು ತಡೆಗಟ್ಟಲು ಐವರ್ಮೆಕ್ಟಿನ್, ಲೋಪಿನವೀರ್, ಫೆವಿಪಿರವೀರ್, ರೆಮಿಡೀಸ್ವೀರ್ ಇತ್ಯಾದಿಗಳು ಹಾಗು ದೇಹದ ರೋಗನಿರೋಧಕ ಶಕ್ತಿ ಅತೀ ಹೆಚ್ಚು ಪ್ರಮಾಣದಲ್ಲಿದ್ದು ದೇಹಕ್ಕೆ ಹಾನಿ ಮಾಡುವಂಥ ಸೈಟೋಕೈನ್ ಎಂಬ ನಮ್ಮ ರೋಗ ನಿರೋಧಕ ಕಣಗಳೇ ನಮಗೆ ವೈರಿಯಾಗಿ ಬಿಡುತ್ತವೆ ಮತ್ತು ಸೈಟೊಕೈನ್ರಭಸದ ಖಾಯಿಲೆ ಅಥವಾ ಸೈಟೊಕೈನ್ಸ್ಟಾಮ್ ಸಿಂಡ್ರೋಮ್ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಅತೀಶೀಘ್ರವಾಗಿ ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದು ಎರಡನೇ ವಾರದಲ್ಲಿ ಕೆಲವರಲ್ಲಿ ಆಗುವ ಸಂಭವ ಹೆಚ್ಚು. ಹೀಗೆ ಹೆಚ್ಚಾದ ಸಂದರ್ಭದಲ್ಲಿ, ಅದನ್ನು ತಡೆಗಟ್ಟುವ ಔಷಧಗಳಾದ ಸ್ಟಿರಾಯ್ಡ್ಸ್, ಟೋಕ್ಲಿಜುಮ್ಯಾಬ್, ಉಲಿನ ಸ್ಟಾಟಿನ್ಹೀಗೆ ಇನ್ನೂ ಇತ್ಯಾದಿ ಔಷಧಗಳನ್ನ ಬಳಸಬಹುದು. ಆದರೇ ಇದು ಸಂಪೂರ್ಣವಾಗಿ ವೈದ್ಯರ ಮಾರ್ಗದರ್ಶನದಲ್ಲಿ, ತೀವ್ರ ನಿಗಾ ಘಟಕದಲ್ಲಿ ಕೊಡಬೇಕು. ಇದರಲ್ಲಿ ಕೆಲವರು ತೀವ್ರತೆ ಇಂದ ಹೊರಬರುತ್ತಾರೆ ಇನ್ನೂ ಕೆಲವರು ಇದಕ್ಕೆ ಸ್ಪಂದಿಸದೆ ಅಸುನೀಗುತ್ತಾರೆ.
ಮೊದಲೇ ರೋಗಲಕ್ಷಣಗಳು ಕಂಡಾಗ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ. ಬೆರಳತುದಿಗೆ “ಪಲ್ಸ್ಆಕ್ಸಿಮೀಟರ್” ಎಂಬ ದೇಹದೊಳಗಿನ ಆಮ್ಲಜನಕ ಸಾಂದ್ರತೆ ಅಳೆಯುವ ಚಿಕ್ಕ ಮಾಪನವನ್ನು ತೂರಿಸಿ ಪರೀಕ್ಷೆಮಾಡಿಕೊಳ್ಳುವುದು ಬಹಳಮುಖ್ಯ. ಎಷ್ಟೋ ಜನ ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡರೂ ಅವರ ಆಮ್ಲಜನಕ ಸಾಂದ್ರತೆ (ಎಸ್ಪಿ 02)ಕಡಿಮೆ ಇರುತ್ತದೆ ಅದು ಹೊರಗಡೆ ತೋರ್ಪಡದೆ ಇದ್ದಕ್ಕಿದ್ದ ಹಾಗೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗುವವರು ಬಹಳ. ಇದಕ್ಕೆ ಇಂಗ್ಲಿಷ್ನಲ್ಲಿ “ಹ್ಯಾಪಿಹೈಪೆಕ್ಸಿಯಾ” ಅಥವಾ “ಒಳ ಹುದುಗಿರುವ ಕ್ಷೀಣಗೊಂಡ ಆಮ್ಲಜನಕದ ಕೊರತೆ” ಇಂಥ ಸಂದರ್ಭದಲ್ಲಿ ಬೇಗನೆ ಆಮ್ಲಜನಕ ಪೂರೈಕೆ ಮಾಡಿದರೆ ಬಹಳಷ್ಟು ಜನ ಬದುಕುವರು.
ಸಾಮಾನ್ಯವಾಗಿ ಈ ಆಮ್ಲಜನಕ ಸಾಂದ್ರತೆ ದೇಹದಲ್ಲಿ ಶೇಕಡಾ 95 ಅಥವಾ ಮೇಲ್ಪಟ್ಟು ಇರಬೇಕು. 90 ರಿಂದ 95 ಇದ್ದರೆ ಮಧ್ಯಮ, 90 ಕ್ಕಿಂತಲೂ ಕಡಿಮೆ ಇದ್ದರೆ ತೀವ್ರ ಹಾಗು 85 ಕ್ಕಿಂತಲೂ ಕಡಿಮೆ ಇದ್ದರೆ ಅತೀ ತೀವ್ರ ಆಮ್ಲಜನಕ ಕೊರತೆ ಎನ್ನುವರು. ಇಂಥವರಿಗೆ, ಸಿಲಿಂಡರ್ ಮೂಲಕ, ವಿಧವಾದ ಮಾಸ್ಕ್ ಮೂಲಕ ಅಥವಾ ನಳಿಕೆಗಳ ಮೂಲಕ ತೀವ್ರ ಆಮ್ಲಜನಕ ಪೂರೈಕೆ (ಹೆಚ್.ಎಫ್.ಎನ್.ಸಿ) ಅಥವಾ ಕೊನೆಗೆ ಕೃತಕ ಉಸಿರಾಟವನ್ನು ವೆಂಟಿಲೇಟರ್ ಮೂಲಕ ಪೂರೈಸಬೇಕಾಗಬಹುದು. ಇವೆಲ್ಲದರ ನಿರ್ಧಾರವನ್ನು ತೀವ್ರ ನಿಗಾ ಘಟಕದ ತುರ್ತು ವೈದ್ಯತಂಡದ ವೈದ್ಯರು ನಿರ್ಧರಿಸುತ್ತಾರೆ.
ರಕ್ತಪರೀಕ್ಷೆಗಳಾದ, ರಕ್ತಕಣಗಳು, ಡಿಡೈಮರ್, ಫೆರಿಟೀನ್, ಎಲ್ಡಿಹೆಚ್, ಸಕ್ಕರೆ ಪ್ರಮಾಣ, ಉಪ್ಪಿನಂಶ, ಇಂಟೆರ್ಲುಕಿನ್ 6 ಹೀಗೆ ಅನೇಕ ರಕ್ತಪರೀಕ್ಷೆಗಳನ್ನ ವೈದ್ಯರು ಮಾಡಿಸಿ ಅವರ ಮಾರ್ಗದರ್ಶನದಂತೆ ಚಿಕಿತ್ಸೆಕೊಡುತ್ತಾರೆ. ಎದೆಯ ಭಾಗದ ಕ್ಷ ಕಿರಣ ಚಿತ್ರ ಹಾಗೂ ಎದೆಯ ಸಿಟಿ ಸ್ಕ್ಯಾನ್ ಅನ್ನು ವೈದ್ಯರು ಸಲಹೆ ನೀಡಿ, ಅದರ ಉಪಲಬ್ಧತೆ ಮೇರೆಗೆ ಮಾಡಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವರು. ಇವೆಲ್ಲವನ್ನೂ ನಾಲ್ಕರಿಂದ ಎಂಟನೇ ದಿನಗಳ ಮಧ್ಯದಲ್ಲಿ ಮಾಡಿಸಿ ನಿರ್ಧರಿಸುತ್ತಾರೆ.
ರಕ್ತದಲ್ಲಿ ಕಣಗಳ ಸಾಂದ್ರತೆ ಹೆಚ್ಚಾದರೆ ಉಸಿರಾಟದ ಏರುಪೇರು ಹೆಚ್ಚು. ವಯಸ್ಸಾದವರು, ಸಕ್ಕರೆಖಾಯಿಲೆ, ಹೃದಯ, ಕಿಡ್ನಿ, ಲಿವರ್, ಕ್ಯಾನ್ಸರ್, ರೋಗನಿರೋಧಕ ಶಕ್ತಿ ಕುಂಠಿತಗೊಂಡ ಖಾಯಿಲೆಗಳ ರೋಗಿಗಳು ಹೆಚ್ಚಾಗಿ ತೊಂದರೆ ಅನುಭವಿಸುತ್ತಾರೆ. ಮಕ್ಕಳಲ್ಲಿ, ಯುವಕರಲ್ಲಿ ಮತ್ತು ಗರ್ಭಿಣಿಯರಲ್ಲಿ ಇದರ ತೀವ್ರತೆ ಕಡಿಮೆ.
ಬೋರಲು ಮಲಗುವುದು..!
ಹೌದು, ಬೋರಲು ಮಲಗುವುದು ಅಥವಾ ಪ್ರೈನ್ಪೊಸಿಷನ್ಲ್ಸೀಪಿಂಗ್ ಅಂತ ಏನು ಹೇಳುತ್ತೇವೆಯೋ ಇದರಲ್ಲಿ ಬೋರಲಾಗಿ ಮಲಗಿ ನಂತರ ಎಡಪಕ್ಕ ತಿರುಗಿ, ಹಾಗೆ ಬಲಪಕ್ಕ ತಿರುಗಿ ಮತ್ತೇ ಬೋರಲು ಮಲಗುವ ಈ ಚಕ್ರವನ್ನು ಪ್ರತಿ ಅರ್ಧ ಗಂಟೆಯಿಂದ ಒಂದು ಘಂಟೆ ಮಾಡುತ್ತಾ ಹೋದರೆ ಪುಪ್ಪಸಕ್ಕೆ ಮತ್ತು ಅದರ ಕೆಳಭಾಗಕ್ಕೆ ಹೆಚ್ಚು ಆಮ್ಲಜನಕ ಪೂರೈಕೆ ಆಗುತ್ತದೆ. ಈ ಕೊರೊನದಿಂದ ಉಂಟಾಗುವ ಊತ ಅಥವಾ ನ್ಯುಮೋನಿಯಾ ಪುಪ್ಪಸದ ಕೆಳಭಾಗಕ್ಕೆ ಹೆಚ್ಚು ಅಂಟಿಕೊಳ್ಳುತ್ತ್ತದೆ, ಇಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಈ ಬೋರಲು ಮಲಗುವ ಅಭ್ಯಾಸ ಬಹಳ ಉಪಾಯಕಾರಿ.
ಹೀಗೆ ಸತತವಾಗಿ ಆಮ್ಲಜನಕ ತೆಗೆದುಕೊಂಡವರು ಅಥವಾ ವೆಂಟಿಲೇಟನಿರ್ಂದ ಹೊರ ಬಂದವರು ತಮ್ಮ ಪುಪ್ಪಸದ ಮೊದಲಿನ ಶಕ್ತಿ ಮತ್ತು ಅಯಸ್ಸನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಅದನ್ನು ತಡೆಗಟ್ಟಲು ಉಸಿರಾಟದ ಪುನಸ್ರ್ಥಾಪನೆ, ಪ್ರಾಣಾಯಾಮ, ಪರಿಶುದ್ಧ ಗಾಳಿ ಸೇವನೆ, ಮಾನಸಿಕ ಸ್ಥೈರ್ಯ, ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರಿಂದ ದೇಹವು ಮತ್ತೆ ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಮಾಡುತ್ತದೆ. ಇದನ್ನು ಉಳಿಸಿಕೊಳ್ಳಲು ವೈದ್ಯರ ಸಲಹೆ ಮೇರೆಗೆ ಸ್ಟಿರೋಯ್ಡ್, ಹೊಸ ಔಷಧಗಳು, ಆಸ್ಪಿರಿನ್ಹೀಗೆ ಇತ್ಯಾದಿಗಳನ್ನು ಕೆಲವು ದಿನ ಅಥವಾ ತಿಂಗಳುಗಟ್ಟಲೆ ಮುಂದುವರಿಸ ಬೇಕಾಗಬಹುದು
ಆಂಟಿಬಯೋಟಿಕ್ಸ್ ಮೊದಲ ದಿನ ದಿಂದಲೇ ಕೊಟ್ಟರೆ ಅಷ್ಟೇನೂ ಲಾಭವಿಲ್ಲ ಆದರೇ ವಾರದ ಕೊನೆ ಅಥವಾ ಎರಡನೇ ವಾರದ ಹಂತದಲ್ಲಿ ಬ್ಯಾಕ್ಟೀರಿಯಾ ಎಂಬ ರೋಗಾಣುಗಳು ಈ ವೈರಸ್ನಿಂದ ಕ್ಷೀಣಗೊಂಡ ರೋಗನಿರೋಧಕ ಶಕ್ತಿಯ ಅವಕಾಶ ಉಪಯೋಗಿಸಿಕೊಂಡು ದೇಹದ ಮೇಲೆ ದಾಳಿ ಮಾಡುತ್ತವೆ, ಅದನ್ನು ತಡೆಗಟ್ಟಲು ಈ ಅಂಟಿಬಯೋಟಿಕ್ ಉಪಯೋಗಿಸಬಹುದು.
ವಿಟಮಿನ್ಸಿ, ಜಿಂಕ್, ಡಿ ಹಾಗು ಇತರೆ ಮಾತ್ರೆಗಳು, ಮನೆ ಮದ್ದುಗಳು, ಆರೋಗ್ಯಕರವಾದ ಹಣ್ಣು ಮತ್ತು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆಯೇ ಹೊರತು ಕೊರೊನ ಬರದೇ ಇರುವ ಹಾಗೆ ತಡೆಗಟ್ಟುವುದಿಲ್ಲ. ಇವೆಲ್ಲವನ್ನು ವೈದ್ಯರ ಸಲಹೆ ಮೇರೆಗೆ ಬಳಸಿದರೆ ತಪ್ಪೇನಿಲ್ಲ.
ಜಗತ್ತಿನಾದ್ಯಂತ ಎಷ್ಟೊಂದು ಚರ್ಚೆಗಳು, ಸಂಶೋಧನೆಗಳು, ಔಷದ ಮತ್ತು ರೋಗನಿರೋಧಕ ಲಸಿಕೆ ಕಂಡುಹಿಡಿಯುವತ್ತ ಹಗಲುರಾತ್ರಿ ಬಿಡುವಿಲ್ಲದೆ ಕೆಲಸಗಳು ನಡೆಯುತ್ತಲಿವೆ, ಈ ಕೆಲಸಗಳ ಮಧ್ಯೆ, ಊಟ ಉಪಚಾರ ನಿದ್ದೆ ಮರೆತು ವೈದ್ಯರು ಹಗಲಿರುಳೆನ್ನದೆ ಸೇವೆ ಮಾಡುತ್ತಿದ್ದಾರೆ. ವೈದ್ಯರ ಈ ನಿಸ್ವಾರ್ಥ ಮನೋಭಾವವನ್ನು ಜೀವನಮಾನವಿಡಿ ನೆನೆದರೆ ಸಾಲದು.
ಕರೋನ ಒಂದು ಹೊಸಯುಗವನ್ನೇ ಹುಟ್ಟುಹಾಕಿದೆ, ಹಲವು ಪಾಠಗಳನ್ನು ಕಲಿಸುತ್ತಲಿದೆ ಇನ್ನೂ ಕಲಿಯಬೇಕಾದದ್ದು ಬಹಳಷ್ಟು ಇದೆ ಇಲ್ಲಿ ಯಾರೂ ಪಂಡಿತರಲ್ಲ ಎಲ್ಲರೂ ವಿದ್ಯಾರ್ಥಿಗಳೇ..!
ಇದನ್ನು ತಡೆಗಟ್ಟಲು ಮುಖಕ್ಕೆ ಮತ್ತು ಮೂಗಿಗೆ ಮುಖಗವಸು ಅಥವಾ ಮಾಸ್ಕ್, ಸ್ವಚ್ಛತೆ, ಭೌತಿಕ ಮತ್ತು ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ ಒಂದೇ ರಾಜಮಾರ್ಗ.
ಇದರಿಂದ ಪೀಡಿತರಾದ ರೋಗಿಗಳನ್ನು ವೈದ್ಯರು, ವಿಜ್ಞಾನಿಗಳು ತಮ್ಮ ಶಕ್ತಿಮೀರಿ ವೈಜ್ಞಾನಿಕ ಚೌಕಟ್ಟಿನಲ್ಲಿ ಈ ಕರೋನವನ್ನು ತಡೆಗಟ್ಟಲು ಪ್ರಯತ್ನ ಮಾಡಬಹುದೇ ಹೊರತು ಇದನ್ನು ಸಂಪೂರ್ಣವಾಗಿ ಗುಣಮಾಡುವ ಶಕ್ತಿ ಯಾವ ವೈದ್ಯರ ಕೈಲಿಲ್ಲ.
ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ, ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ವೈರಾಣುವಿನ ಜೊತೆ ಇದರ ಪ್ರತಿಸ್ಪಂದನೆ, ಧನಾತ್ಮಕ ಚಿಂತನೆ ಮತ್ತು ಗಟ್ಟಿಯಾದ ಮನೋಬಲ ನಮ್ಮನ್ನು ಇದರಿಂದ ಕಾಪಾಡಿ ಹೊರತರುವುದರಲ್ಲಿ ಎರಡು ಮಾತಿಲ್ಲ.
–ಡಾ. ರಾಘವೇಂದ್ರ. ಎಫ್. ಎನ್
ಎಂಬಿಬಿಎಸ್. ಎಂಡಿ.
ಸಹಪ್ರಾಧ್ಯಾಪಕರು ಮತ್ತು ಕನ್ಸಲ್ಟೆಂಟ್ಫಿಜಿಷಿಯನ್ ವೈದ್ಯಕೀಯ ವಿಭಾಗ
ಕೋವಿಡ್ ನೊಡಲ್ ಆಫೀಸರ್
ವಿಮ್ಸ್, ಬಳ್ಳಾರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243