ಲೈಫ್ ಸ್ಟೈಲ್
‘ಕೋವಿಡ್’ ನಾ ಕಂಡ ಹಾಗೆ : ಡಾ. ರಾಘವೇಂದ್ರ. ಎಫ್. ಎನ್
- ಡಾ. ರಾಘವೇಂದ್ರ. ಎಫ್. ಎನ್
ಒಬ್ಬ ಯೋದ ಯುದ್ಧದಲ್ಲಿ ಪಾಲ್ಗೊಂಡಾಗ ತನ್ನ ಪ್ರಾಣವನ್ನು ಒತ್ತೆಯಿಟ್ಟು ಹೊರಾಡುತ್ತಾನೆ. ಕೆಲವರು ಚತುರವಾಗಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡು ಅಲ್ಪಸ್ವಲ್ಪ ಗಾಯ ಮಾಡಿಕೊಂಡರೂ ಸರಿ, ಆದರೂ ಹೋರಾಡಿ ಕೊನೆಗೆ ಗೆಲುವು ಸಾಧಿಸುತ್ತಾರೆ ಆದರೇ ಇನ್ನೂ ಕೆಲವರು ವೀರಾವೇಶದಿಂದ ಉದ್ವೇಗವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಯಾಕೆ ಇದನ್ನು ಹೇಳಿದೆ ಎಂದರೆ ಇದರಿಂದ ಸೋಂಕಿತರಾದ ಕೆಲವರ ಪರಿಸ್ಥಿತಿ ಹಾಗೆಯೆ.
ಕೋವಿಡ್ ಈಗ ಜಾಗತಿಕಮಾರಿ.ಜಗತ್ತನ್ನೇ ಭಯಭೀತಗೊಳಿಸಿ ಊನ ಮಾಡಿರುವ ಈ ವೈರಾಣು ಕೆಲವರನ್ನು ಸ್ವಲ್ಪ ದಿನ ಮಾತ್ರ ಕಾಡಿ ಸುಮ್ಮನೆ ಬಿಟ್ಟುಬಿಟ್ಟರೆ ಇನ್ನೂ ಕೆಲವರನ್ನು ಹಿಂಡಿ ಹಿಪ್ಪೆಕಾಯಿಮಾಡಿ ಪ್ರಾಣವನ್ನೇ ತೆಗೆದುಬಿಡುತ್ತದೆ.ಯಾಕೆ ಹೀಗೆ?
ಕೊರೊನ ಮತ್ತು ದೇಹದ ಯುದ್ಧ..!
ಇಲ್ಲಿ ಬರೀ ಕೊರೊನ ವೈರಾಣುವನ್ನು ಒಂದನ್ನೇ ದೂಷಿಸುವುದು ತರವಲ್ಲ. ನಾನು ಈಗಾಗಲೇ ಹೇಳಿದ ಹಾಗೆ ನಮ್ಮ ದೇಹದ ರೋಗನಿರೋಧಕ ಶಕ್ತಿ, ಸೈನಿಕರ ದಂಡು ಇದ್ದ ಹಾಗೆ ಈ ವೈರಾಣುವನ್ನು ಈ ಸೈನಿಕರು ಎಷ್ಟು ಚಾಣಾಕ್ಷವಾಗಿ ಹದ್ದು ಬಸ್ತಿಗೆ ತರುತ್ತಾರೆಯೋ ಅಥವಾ ಅತಿರೇಕವಾಗಿ ಹೋರಾಡಿ ತಮ್ಮ ದೇಹವನ್ನ ತಾವೇ ಹಾನಿ ಮಾಡಿಕೊಳ್ಳುತ್ತಾರೆಯೋ ಅದರ ಮೇಲೆ ನಿರ್ಭರ.
ಈ ವೈರಾಣು ಹೇಗೆ ದೇಹ ಪ್ರವೇಶಿಸುತ್ತದೆ, ಹೇಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಯಾಕೆ ಕೆಲವರು ಬರೀ ಶೀತ, ಕೆಮ್ಮು, ಜ್ವರ, ಮೈ ಕೈ ನೋವಿನಿಂದ ಬಳಲಿ ಗುಣಮುಖರಾಗುತ್ತಾರೆ ಮತ್ತು ಇನ್ನೂ ಕೆಲವರು ಉಸಿರಾಟದ ತೊಂದರೆ, ಆಯಾಸ, ಅಂಗವೈಫಲ್ಯ, ಆಮ್ಲಜನಕ ಕೊರತೆಯಿಂದ ಬಳಲಿ ಆಸ್ಪತ್ರಗೆ ಸೇರಿ ಆಮ್ಲಜನಕ, ವೆಂಟಿಲೇಟರ್ ಇತ್ಯಾದಿ ಉತ್ತಮ ಮಟ್ಟದ ವೈದ್ಯಕೀಯ ಚಿಕಿತ್ಸೆ, ಔಷಧ ಪಡೆದರೂ ಕೂಡ ಅಸುನೀಗುತ್ತಾರೆ ಎಂಬುದು ಒಂದು ವೈದ್ಯಕೀಯ ವೈಚಿತ್ರವೇ ಸರಿ.
ಇದಕ್ಕೆ ಕಾರಣ ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ಅದು ಹೋರಾಡುವ ಪರಿ ಅತಿಯಾಗಿ ಹೋರಾಡಿದರೆ ದೇಹದಲ್ಲಿನ ರೋಗನಿರೋಧಕ ಕಣಗಳು ಅಗತ್ಯಕ್ಕಿಂತ ಹೆಚ್ಚಾಗಿ ಹೊರಬಂದು, ರಕ್ತ ಸಂಚಲನೆ ತಡೆಯೊಡ್ಡಿ,, ಪುಪ್ಪಸದಲ್ಲಿ ರಕ್ತಹೆಪ್ಪುಗಟ್ಟಿ, ನೀರು ತುಂಬಿ ತೀವ್ರ ಉಸಿರಾಟದ ತೊಂದರೆಯಾಗಿ ಕೊರತೆಯಾಗಿ(ಹೈಪೈಕ್ಸಿಯಾ), ವೆಂಟಿಲೇಟರ್ ಇನ್ನಿತರ ಸಲಕರಣೆ ಮೂಲಕ ಆಮ್ಲಜನಕ ಪೂರೈಕೆ ಮಾಡಿ ಮತ್ತು ಅತೀ ಉನ್ನತ ಔಷಧಗಳನ್ನು ಕೊಟ್ಟರೂ ಸಾವನ್ನಪ್ಪುತ್ತಾರೆ.
ನಮ್ಮ ರೋಗನಿರೋಧಕ ಹೋರಾಟ ಅತೀ ಮಂದವಾಗಿದ್ದರೂ ಹಾನಿ, ಅತೀ ವೇಗವಾಗಿದ್ದರೂ ಹಾನಿ. ಮಧ್ಯಮದಲ್ಲಿದ್ದರೆ ಉತ್ತಮ.ಹಿಡಿತದಲ್ಲಿದ್ದರೆ ದೇಹಕ್ಕೆ ಇನ್ನೂ ಉತ್ತಮ, ಹೀಗಿದ್ದರೆ ಶೀಘ್ರ ಗುಣಮುಖರಾಗಲು ಅಥವಾ ರೋಗ ಸೋಂಕಿದ ನಂತರ, ಗುಣಮುಖರಾದ ಮೇಲೆ ದೇಹದ ಮೇಲೆ ಆಗುವ ಪರಿಣಾಮಗಳನ್ನು ತಡೆಗಟ್ಟಬಹುದು.
ಆದರೇ ಇದು ನಮ್ಮ ಕೈಯಲ್ಲಿಲ್ಲ ಆದರೂ ವಿಜ್ಞಾನಿಗಳು ಇಂತಹ ಪರಿಸ್ಥಿತಿ ಎದುರಿಸಲು ಕೆಲವು ಔಷಧಗಳನ್ನು ಕಂಡುಹಿಡಿದಿದ್ದಾರೆ. ವೈರಾಣುವನ್ನು ದೇಹದ ಒಳಗೆ ಬರುವುದನ್ನು ತಡೆಗಟ್ಟುವ ಕೆಲವು ಔಷಧಗಳಾದ ಹೈಡ್ರಾಕ್ಸಿಕ್ಲೋರೊಕ್ಕಿನ್, ವೈರಾಣು ದೇಹದೊಳಗಡೆ ದ್ವಿಗುಣಗೊಳ್ಳುವುದನ್ನು ತಡೆಗಟ್ಟಲು ಐವರ್ಮೆಕ್ಟಿನ್, ಲೋಪಿನವೀರ್, ಫೆವಿಪಿರವೀರ್, ರೆಮಿಡೀಸ್ವೀರ್ ಇತ್ಯಾದಿಗಳು ಹಾಗು ದೇಹದ ರೋಗನಿರೋಧಕ ಶಕ್ತಿ ಅತೀ ಹೆಚ್ಚು ಪ್ರಮಾಣದಲ್ಲಿದ್ದು ದೇಹಕ್ಕೆ ಹಾನಿ ಮಾಡುವಂಥ ಸೈಟೋಕೈನ್ ಎಂಬ ನಮ್ಮ ರೋಗ ನಿರೋಧಕ ಕಣಗಳೇ ನಮಗೆ ವೈರಿಯಾಗಿ ಬಿಡುತ್ತವೆ ಮತ್ತು ಸೈಟೊಕೈನ್ರಭಸದ ಖಾಯಿಲೆ ಅಥವಾ ಸೈಟೊಕೈನ್ಸ್ಟಾಮ್ ಸಿಂಡ್ರೋಮ್ ಅನ್ನುವ ಪರಿಸ್ಥಿತಿ ನಿರ್ಮಾಣವಾಗಿ ಅತೀಶೀಘ್ರವಾಗಿ ಸಾವನ್ನಪ್ಪುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇದು ಎರಡನೇ ವಾರದಲ್ಲಿ ಕೆಲವರಲ್ಲಿ ಆಗುವ ಸಂಭವ ಹೆಚ್ಚು. ಹೀಗೆ ಹೆಚ್ಚಾದ ಸಂದರ್ಭದಲ್ಲಿ, ಅದನ್ನು ತಡೆಗಟ್ಟುವ ಔಷಧಗಳಾದ ಸ್ಟಿರಾಯ್ಡ್ಸ್, ಟೋಕ್ಲಿಜುಮ್ಯಾಬ್, ಉಲಿನ ಸ್ಟಾಟಿನ್ಹೀಗೆ ಇನ್ನೂ ಇತ್ಯಾದಿ ಔಷಧಗಳನ್ನ ಬಳಸಬಹುದು. ಆದರೇ ಇದು ಸಂಪೂರ್ಣವಾಗಿ ವೈದ್ಯರ ಮಾರ್ಗದರ್ಶನದಲ್ಲಿ, ತೀವ್ರ ನಿಗಾ ಘಟಕದಲ್ಲಿ ಕೊಡಬೇಕು. ಇದರಲ್ಲಿ ಕೆಲವರು ತೀವ್ರತೆ ಇಂದ ಹೊರಬರುತ್ತಾರೆ ಇನ್ನೂ ಕೆಲವರು ಇದಕ್ಕೆ ಸ್ಪಂದಿಸದೆ ಅಸುನೀಗುತ್ತಾರೆ.
ಮೊದಲೇ ರೋಗಲಕ್ಷಣಗಳು ಕಂಡಾಗ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮ. ಬೆರಳತುದಿಗೆ “ಪಲ್ಸ್ಆಕ್ಸಿಮೀಟರ್” ಎಂಬ ದೇಹದೊಳಗಿನ ಆಮ್ಲಜನಕ ಸಾಂದ್ರತೆ ಅಳೆಯುವ ಚಿಕ್ಕ ಮಾಪನವನ್ನು ತೂರಿಸಿ ಪರೀಕ್ಷೆಮಾಡಿಕೊಳ್ಳುವುದು ಬಹಳಮುಖ್ಯ. ಎಷ್ಟೋ ಜನ ಮೇಲ್ನೋಟಕ್ಕೆ ಆರೋಗ್ಯವಾಗಿ ಕಂಡರೂ ಅವರ ಆಮ್ಲಜನಕ ಸಾಂದ್ರತೆ (ಎಸ್ಪಿ 02)ಕಡಿಮೆ ಇರುತ್ತದೆ ಅದು ಹೊರಗಡೆ ತೋರ್ಪಡದೆ ಇದ್ದಕ್ಕಿದ್ದ ಹಾಗೆ ತೀವ್ರ ಉಸಿರಾಟದ ತೊಂದರೆಗೆ ಒಳಗಾಗುವವರು ಬಹಳ. ಇದಕ್ಕೆ ಇಂಗ್ಲಿಷ್ನಲ್ಲಿ “ಹ್ಯಾಪಿಹೈಪೆಕ್ಸಿಯಾ” ಅಥವಾ “ಒಳ ಹುದುಗಿರುವ ಕ್ಷೀಣಗೊಂಡ ಆಮ್ಲಜನಕದ ಕೊರತೆ” ಇಂಥ ಸಂದರ್ಭದಲ್ಲಿ ಬೇಗನೆ ಆಮ್ಲಜನಕ ಪೂರೈಕೆ ಮಾಡಿದರೆ ಬಹಳಷ್ಟು ಜನ ಬದುಕುವರು.
ಸಾಮಾನ್ಯವಾಗಿ ಈ ಆಮ್ಲಜನಕ ಸಾಂದ್ರತೆ ದೇಹದಲ್ಲಿ ಶೇಕಡಾ 95 ಅಥವಾ ಮೇಲ್ಪಟ್ಟು ಇರಬೇಕು. 90 ರಿಂದ 95 ಇದ್ದರೆ ಮಧ್ಯಮ, 90 ಕ್ಕಿಂತಲೂ ಕಡಿಮೆ ಇದ್ದರೆ ತೀವ್ರ ಹಾಗು 85 ಕ್ಕಿಂತಲೂ ಕಡಿಮೆ ಇದ್ದರೆ ಅತೀ ತೀವ್ರ ಆಮ್ಲಜನಕ ಕೊರತೆ ಎನ್ನುವರು. ಇಂಥವರಿಗೆ, ಸಿಲಿಂಡರ್ ಮೂಲಕ, ವಿಧವಾದ ಮಾಸ್ಕ್ ಮೂಲಕ ಅಥವಾ ನಳಿಕೆಗಳ ಮೂಲಕ ತೀವ್ರ ಆಮ್ಲಜನಕ ಪೂರೈಕೆ (ಹೆಚ್.ಎಫ್.ಎನ್.ಸಿ) ಅಥವಾ ಕೊನೆಗೆ ಕೃತಕ ಉಸಿರಾಟವನ್ನು ವೆಂಟಿಲೇಟರ್ ಮೂಲಕ ಪೂರೈಸಬೇಕಾಗಬಹುದು. ಇವೆಲ್ಲದರ ನಿರ್ಧಾರವನ್ನು ತೀವ್ರ ನಿಗಾ ಘಟಕದ ತುರ್ತು ವೈದ್ಯತಂಡದ ವೈದ್ಯರು ನಿರ್ಧರಿಸುತ್ತಾರೆ.
ರಕ್ತಪರೀಕ್ಷೆಗಳಾದ, ರಕ್ತಕಣಗಳು, ಡಿಡೈಮರ್, ಫೆರಿಟೀನ್, ಎಲ್ಡಿಹೆಚ್, ಸಕ್ಕರೆ ಪ್ರಮಾಣ, ಉಪ್ಪಿನಂಶ, ಇಂಟೆರ್ಲುಕಿನ್ 6 ಹೀಗೆ ಅನೇಕ ರಕ್ತಪರೀಕ್ಷೆಗಳನ್ನ ವೈದ್ಯರು ಮಾಡಿಸಿ ಅವರ ಮಾರ್ಗದರ್ಶನದಂತೆ ಚಿಕಿತ್ಸೆಕೊಡುತ್ತಾರೆ. ಎದೆಯ ಭಾಗದ ಕ್ಷ ಕಿರಣ ಚಿತ್ರ ಹಾಗೂ ಎದೆಯ ಸಿಟಿ ಸ್ಕ್ಯಾನ್ ಅನ್ನು ವೈದ್ಯರು ಸಲಹೆ ನೀಡಿ, ಅದರ ಉಪಲಬ್ಧತೆ ಮೇರೆಗೆ ಮಾಡಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವರು. ಇವೆಲ್ಲವನ್ನೂ ನಾಲ್ಕರಿಂದ ಎಂಟನೇ ದಿನಗಳ ಮಧ್ಯದಲ್ಲಿ ಮಾಡಿಸಿ ನಿರ್ಧರಿಸುತ್ತಾರೆ.
ರಕ್ತದಲ್ಲಿ ಕಣಗಳ ಸಾಂದ್ರತೆ ಹೆಚ್ಚಾದರೆ ಉಸಿರಾಟದ ಏರುಪೇರು ಹೆಚ್ಚು. ವಯಸ್ಸಾದವರು, ಸಕ್ಕರೆಖಾಯಿಲೆ, ಹೃದಯ, ಕಿಡ್ನಿ, ಲಿವರ್, ಕ್ಯಾನ್ಸರ್, ರೋಗನಿರೋಧಕ ಶಕ್ತಿ ಕುಂಠಿತಗೊಂಡ ಖಾಯಿಲೆಗಳ ರೋಗಿಗಳು ಹೆಚ್ಚಾಗಿ ತೊಂದರೆ ಅನುಭವಿಸುತ್ತಾರೆ. ಮಕ್ಕಳಲ್ಲಿ, ಯುವಕರಲ್ಲಿ ಮತ್ತು ಗರ್ಭಿಣಿಯರಲ್ಲಿ ಇದರ ತೀವ್ರತೆ ಕಡಿಮೆ.
ಬೋರಲು ಮಲಗುವುದು..!
ಹೌದು, ಬೋರಲು ಮಲಗುವುದು ಅಥವಾ ಪ್ರೈನ್ಪೊಸಿಷನ್ಲ್ಸೀಪಿಂಗ್ ಅಂತ ಏನು ಹೇಳುತ್ತೇವೆಯೋ ಇದರಲ್ಲಿ ಬೋರಲಾಗಿ ಮಲಗಿ ನಂತರ ಎಡಪಕ್ಕ ತಿರುಗಿ, ಹಾಗೆ ಬಲಪಕ್ಕ ತಿರುಗಿ ಮತ್ತೇ ಬೋರಲು ಮಲಗುವ ಈ ಚಕ್ರವನ್ನು ಪ್ರತಿ ಅರ್ಧ ಗಂಟೆಯಿಂದ ಒಂದು ಘಂಟೆ ಮಾಡುತ್ತಾ ಹೋದರೆ ಪುಪ್ಪಸಕ್ಕೆ ಮತ್ತು ಅದರ ಕೆಳಭಾಗಕ್ಕೆ ಹೆಚ್ಚು ಆಮ್ಲಜನಕ ಪೂರೈಕೆ ಆಗುತ್ತದೆ. ಈ ಕೊರೊನದಿಂದ ಉಂಟಾಗುವ ಊತ ಅಥವಾ ನ್ಯುಮೋನಿಯಾ ಪುಪ್ಪಸದ ಕೆಳಭಾಗಕ್ಕೆ ಹೆಚ್ಚು ಅಂಟಿಕೊಳ್ಳುತ್ತ್ತದೆ, ಇಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಈ ಬೋರಲು ಮಲಗುವ ಅಭ್ಯಾಸ ಬಹಳ ಉಪಾಯಕಾರಿ.
ಹೀಗೆ ಸತತವಾಗಿ ಆಮ್ಲಜನಕ ತೆಗೆದುಕೊಂಡವರು ಅಥವಾ ವೆಂಟಿಲೇಟನಿರ್ಂದ ಹೊರ ಬಂದವರು ತಮ್ಮ ಪುಪ್ಪಸದ ಮೊದಲಿನ ಶಕ್ತಿ ಮತ್ತು ಅಯಸ್ಸನ್ನು ಕಳೆದುಕೊಳ್ಳುವ ಸಂಭವ ಹೆಚ್ಚು. ಅದನ್ನು ತಡೆಗಟ್ಟಲು ಉಸಿರಾಟದ ಪುನಸ್ರ್ಥಾಪನೆ, ಪ್ರಾಣಾಯಾಮ, ಪರಿಶುದ್ಧ ಗಾಳಿ ಸೇವನೆ, ಮಾನಸಿಕ ಸ್ಥೈರ್ಯ, ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದರಿಂದ ದೇಹವು ಮತ್ತೆ ಮೊದಲಿನಂತೆ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಮಾಡುತ್ತದೆ. ಇದನ್ನು ಉಳಿಸಿಕೊಳ್ಳಲು ವೈದ್ಯರ ಸಲಹೆ ಮೇರೆಗೆ ಸ್ಟಿರೋಯ್ಡ್, ಹೊಸ ಔಷಧಗಳು, ಆಸ್ಪಿರಿನ್ಹೀಗೆ ಇತ್ಯಾದಿಗಳನ್ನು ಕೆಲವು ದಿನ ಅಥವಾ ತಿಂಗಳುಗಟ್ಟಲೆ ಮುಂದುವರಿಸ ಬೇಕಾಗಬಹುದು
ಆಂಟಿಬಯೋಟಿಕ್ಸ್ ಮೊದಲ ದಿನ ದಿಂದಲೇ ಕೊಟ್ಟರೆ ಅಷ್ಟೇನೂ ಲಾಭವಿಲ್ಲ ಆದರೇ ವಾರದ ಕೊನೆ ಅಥವಾ ಎರಡನೇ ವಾರದ ಹಂತದಲ್ಲಿ ಬ್ಯಾಕ್ಟೀರಿಯಾ ಎಂಬ ರೋಗಾಣುಗಳು ಈ ವೈರಸ್ನಿಂದ ಕ್ಷೀಣಗೊಂಡ ರೋಗನಿರೋಧಕ ಶಕ್ತಿಯ ಅವಕಾಶ ಉಪಯೋಗಿಸಿಕೊಂಡು ದೇಹದ ಮೇಲೆ ದಾಳಿ ಮಾಡುತ್ತವೆ, ಅದನ್ನು ತಡೆಗಟ್ಟಲು ಈ ಅಂಟಿಬಯೋಟಿಕ್ ಉಪಯೋಗಿಸಬಹುದು.
ವಿಟಮಿನ್ಸಿ, ಜಿಂಕ್, ಡಿ ಹಾಗು ಇತರೆ ಮಾತ್ರೆಗಳು, ಮನೆ ಮದ್ದುಗಳು, ಆರೋಗ್ಯಕರವಾದ ಹಣ್ಣು ಮತ್ತು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆಯೇ ಹೊರತು ಕೊರೊನ ಬರದೇ ಇರುವ ಹಾಗೆ ತಡೆಗಟ್ಟುವುದಿಲ್ಲ. ಇವೆಲ್ಲವನ್ನು ವೈದ್ಯರ ಸಲಹೆ ಮೇರೆಗೆ ಬಳಸಿದರೆ ತಪ್ಪೇನಿಲ್ಲ.
ಜಗತ್ತಿನಾದ್ಯಂತ ಎಷ್ಟೊಂದು ಚರ್ಚೆಗಳು, ಸಂಶೋಧನೆಗಳು, ಔಷದ ಮತ್ತು ರೋಗನಿರೋಧಕ ಲಸಿಕೆ ಕಂಡುಹಿಡಿಯುವತ್ತ ಹಗಲುರಾತ್ರಿ ಬಿಡುವಿಲ್ಲದೆ ಕೆಲಸಗಳು ನಡೆಯುತ್ತಲಿವೆ, ಈ ಕೆಲಸಗಳ ಮಧ್ಯೆ, ಊಟ ಉಪಚಾರ ನಿದ್ದೆ ಮರೆತು ವೈದ್ಯರು ಹಗಲಿರುಳೆನ್ನದೆ ಸೇವೆ ಮಾಡುತ್ತಿದ್ದಾರೆ. ವೈದ್ಯರ ಈ ನಿಸ್ವಾರ್ಥ ಮನೋಭಾವವನ್ನು ಜೀವನಮಾನವಿಡಿ ನೆನೆದರೆ ಸಾಲದು.
ಕರೋನ ಒಂದು ಹೊಸಯುಗವನ್ನೇ ಹುಟ್ಟುಹಾಕಿದೆ, ಹಲವು ಪಾಠಗಳನ್ನು ಕಲಿಸುತ್ತಲಿದೆ ಇನ್ನೂ ಕಲಿಯಬೇಕಾದದ್ದು ಬಹಳಷ್ಟು ಇದೆ ಇಲ್ಲಿ ಯಾರೂ ಪಂಡಿತರಲ್ಲ ಎಲ್ಲರೂ ವಿದ್ಯಾರ್ಥಿಗಳೇ..!
ಇದನ್ನು ತಡೆಗಟ್ಟಲು ಮುಖಕ್ಕೆ ಮತ್ತು ಮೂಗಿಗೆ ಮುಖಗವಸು ಅಥವಾ ಮಾಸ್ಕ್, ಸ್ವಚ್ಛತೆ, ಭೌತಿಕ ಮತ್ತು ಸಾಮಾಜಿಕ ಅಂತರಕಾಯ್ದುಕೊಳ್ಳುವಿಕೆ ಒಂದೇ ರಾಜಮಾರ್ಗ.
ಇದರಿಂದ ಪೀಡಿತರಾದ ರೋಗಿಗಳನ್ನು ವೈದ್ಯರು, ವಿಜ್ಞಾನಿಗಳು ತಮ್ಮ ಶಕ್ತಿಮೀರಿ ವೈಜ್ಞಾನಿಕ ಚೌಕಟ್ಟಿನಲ್ಲಿ ಈ ಕರೋನವನ್ನು ತಡೆಗಟ್ಟಲು ಪ್ರಯತ್ನ ಮಾಡಬಹುದೇ ಹೊರತು ಇದನ್ನು ಸಂಪೂರ್ಣವಾಗಿ ಗುಣಮಾಡುವ ಶಕ್ತಿ ಯಾವ ವೈದ್ಯರ ಕೈಲಿಲ್ಲ.
ಸಮಯಕ್ಕೆ ಸರಿಯಾಗಿ ತಪಾಸಣೆ ಮತ್ತು ಚಿಕಿತ್ಸೆ, ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ವೈರಾಣುವಿನ ಜೊತೆ ಇದರ ಪ್ರತಿಸ್ಪಂದನೆ, ಧನಾತ್ಮಕ ಚಿಂತನೆ ಮತ್ತು ಗಟ್ಟಿಯಾದ ಮನೋಬಲ ನಮ್ಮನ್ನು ಇದರಿಂದ ಕಾಪಾಡಿ ಹೊರತರುವುದರಲ್ಲಿ ಎರಡು ಮಾತಿಲ್ಲ.
–ಡಾ. ರಾಘವೇಂದ್ರ. ಎಫ್. ಎನ್
ಎಂಬಿಬಿಎಸ್. ಎಂಡಿ.
ಸಹಪ್ರಾಧ್ಯಾಪಕರು ಮತ್ತು ಕನ್ಸಲ್ಟೆಂಟ್ಫಿಜಿಷಿಯನ್ ವೈದ್ಯಕೀಯ ವಿಭಾಗ
ಕೋವಿಡ್ ನೊಡಲ್ ಆಫೀಸರ್
ವಿಮ್ಸ್, ಬಳ್ಳಾರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಇಂದು ಕರೆಂಟ್ ಇರಲ್ಲ
ಸುದ್ದಿದಿನ,ದಾವಣಗೆರೆ:ಬೆಸ್ಕಾಂ ಜಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ತುರ್ತು ಜಂಗಲ್ ಕಟಿಂಗ್ ಮತ್ತು ಫೀಡರ್ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 09-00 ರಿಂದ ಸಂಜೆ 05-00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೊರಚರ ಹಟ್ಟಿ ಸರ್ಕಲ್, ಅಂಜನೆಯ ಬಡಾವಣೆ, ಶಕ್ತಿ ನಗರ, ಭಗೀರಥ ಲೇಔಟ್ ಸರ್ಕಲ್, ಕೊಟ್ಟುರೇಶ್ವರ ಬಡಾವಣೆ, , ಡಿ.ಸಿ.ಎಂ ಎಬಿಸಿ ಬ್ಲಾಕ್, ರಾಜೇಂದ್ರ ಬಡಾವಣೆ, ಭೂಮಿಕಾ ನಗರ, ಎಸ್.ಎಸ್ ಹೈ-ಟೆಕ್ ಮೇನ್ ರೋಡ್, ಶೇಶಾಂ ಲೇಔಟ್, ಹೊಂ ಟೈಲಾರ್ ರೋಡ್, ಬನಶಂಕರಿ ದೇವಸ್ಥಾನ, ಶ್ರೀರಾಮ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ. ಎ ಬ್ಲಾಕ್, ನಿಜಲಿಂಗಪ್ಪ ಲೇಔಟ್, ಅಶ್ವಿನಿ ಆರ್ಯುವೇಧಿಕ್ ಆಸ್ಪತ್ರೆ, ಜೊಲ್ಲಿಗುರು ಕಾಂಪೌಡ್, ಮುದ್ದೊಳ್ಳಿ ತೋಟ, ನರಹರಿಶೇಟ ಕಲ್ಯಾಣ ಮಂದಿರ, ಪೊಲೀಸ್ ಹಳೆಯ ವಸತಿ ಗೃಹಗಳು, ವಿನೋಬ ನಗರ 1ನೇ ಮತ್ತು 2ನೇಯ ಮುಖ್ಯ ರಸ್ತೆ ಚರ್ಚ್ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಬಿದರಕೆರೆ ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಎಫ್- ಕಟ್ಟಿಗೆಹಳ್ಳಿ, ಎನ್ಜೆವೈ (NJY) ಜಗಳೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಒಳಪಡುವ ಅರಿಶಿನಗುಂಡಿ ಹಾಗೂ ಜ್ಯೋತಿಪುರ ಎನ್ಜೆವೈ (NJY) 11ಕೆವಿ ಮಾರ್ಗಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಪಂಚಪಾಡಿ ಪದ್ಧತಿಯಲ್ಲಿ ವಿದ್ಯಾಭ್ಯಾಸ | ತ್ಯಾವಣಿಗೆಯ ಮಂದಾರ ಶಾಲೆಯಲ್ಲಿ ಪ್ರವೇಶ ಪ್ರಾರಂಭ
-
ದಿನದ ಸುದ್ದಿ7 days agoಈಜುಕೊಳದಲ್ಲಿ ಸಾವು ; ಪರಿಹಾರಕ್ಕೆ ಆದೇಶ
-
ದಿನದ ಸುದ್ದಿ4 days agoಬಳ್ಳಾರಿ ಗಾಂಧಿನಗರ ಠಾಣೆಯ ವ್ಯಾಪ್ತಿ ಜೂಜಾಟ | ಠಾಣೆಯ ಅಧಿಕಾರಿಗಳು ಮೌನ ; ಕ್ರಮ ಕೈಗೊಳ್ತಾರಾ ಎಸ್ ಪಿ..?
-
ಅಂಕಣ4 days agoಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
-
ದಿನದ ಸುದ್ದಿ3 days agoಅಲ್ಪಸಂಖ್ಯಾತರ ಇಲಾಖೆ ನಿರ್ದೇಶಕ ಜಿಲಾನಿ ಎಚ್. ಮೊಕಾಶಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಇದೇ 22 ರಂದು ಕರ್ನಾಟಕ ಎಜುಕೇಶನ್ ಎಕ್ಸ್ ಪೋ – 2026 ಕಾರ್ಯಕ್ರಮ
-
ದಿನದ ಸುದ್ದಿ5 days agoಕೀಲು ಮತ್ತು ಮೂಳೆ ಚಿಕಿತ್ಸೆ ; ರೋಬೋಟಿಕ್ ಮತ್ತು ಮಿನಿಮಲಿ ಇನ್ನೇಸಿವ್ ಸರ್ಜರಿಗಳಲ್ಲಿ ಮಹತ್ವದ ಬದಲಾವಣೆ : ಡಾ.ಲೋಕೇಶ್ ಎ. ವೀರಪ್ಪ
-
ದಿನದ ಸುದ್ದಿ4 hours agoದಾವಣಗೆರೆ | ಇಂದು ಕರೆಂಟ್ ಇರಲ್ಲ


