ಭಾವ ಭೈರಾಗಿ
ಕವಯಿತ್ರಿ ಅರುಂಧತಿ ರಮೇಶ್ ರವರ ಕಣ್ಣಲ್ಲಿ ಜಿ ಎಸ್ ಸುಶೀಲಾದೇವಿ ಆರ್ ರಾವ್ ಮತ್ತು ಅವರ ಸಾಹಿತ್ಯ
- ಶ್ರೀಮತಿ ಅರುಂಧತಿ ರಮೇಶ್, ಕವಯಿತ್ರಿ, ದಾವಣಗೆರೆ
ಸ್ತ್ರೀ ವರ್ಗದ ಭಾವನೆ, ತುಮುಲ, ಸಂಕಷ್ಟ ಮತ್ತು ಸ್ವಾಭಿಮಾನ ಕುರಿತಾದ ಸಾಹಿತ್ಯವನ್ನು ಓದುಗರಿಗೆ ದಶಕಗಳಿಂದ ನೀಡಿದ ಲೇಖಕಿಯರಲ್ಲಿ ಶ್ರೀಮತಿ ಜಿ. ಎಸ್. ಸುಶೀಲಾದೇವಿ ಆರ್. ರಾವ್ ಪ್ರಮುಖರು. ಅವರು ‘ಗಟ್ಟಿ ಕಥೆಗಳನ್ನು ಬರೆದೂ ಪ್ರಧಾನ ವಾಹಿನಿಯಲ್ಲಿ ಚರ್ಚೆಗೆ ಬಾರದೇ ಹೋದ ಕಥೆಗಾರ್ತಿ’. ಎಂಬ ನೋವು, ‘ಅಕ್ಯಾಡೆಮಿಕ್ ಅಳತೆ ಪಟ್ಟಿಗೆ ಅರ್ಥವೆ ಅಗಲಾರದ ಬದುಕಿನ ಸೂಕ್ಷ್ಮ ಗಳು ಅವರ ಕಥೆಗಳಲ್ಲಿವೆ’ ಎಂಬ ಮೆಚ್ಚುಗೆ ವಿಮರ್ಶಕ ಶ್ರೀ ಎನ್ ಎಸ್ ಶ್ರೀಧರಮೂರ್ತಿಯವರದು.
1952 ರಲ್ಲಿ ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿ ಗುಂಜಿಗನೂರಿನಲ್ಲಿ ಶ್ಯಾನುಭೋಗ್ ಶ್ರೀನಿವಾಸಯ್ಯ ಮತ್ತು ಜಾನಕಮ್ಮ ದಂಪತಿಗಳ. ಏಳು ಮಕ್ಕಳಲ್ಲಿ ಕಿರಿಯ ಮಗಳು. ತಂದೆ ಓದುತ್ತಿದ್ದ ಕುಮಾರವ್ಯಾಸ ಭಾರತ, ಜೈಮಿನಿ ಭಾರತಗಳು ಸಾಹಿತ್ಯದ ಆರಂಭಿಕ ಪ್ರೇರಣೆಗಳು. ಬಾಲ್ಯದಲ್ಲಿಯೇ ಟೈಫಾಯಿಡ್ನಿಂದ ನರಳುತ್ತ ಕೋಮಾ ಆವರಿಸಿ ‘ಬದುಕಿಲ್ಲ’ ಎಂಬ ಧೃಢವಾದ ನಂಬಿಕೆಯೊಂದಿಗೆ ಅಂತ್ಯ ಸಂಸ್ಕಾರಕ್ಕೇ ಸಿದ್ಧರಾದಾಗ ಒಬ್ಬ ಅಜ್ಜಿ ‘ಇಲ್ರಪಾ ಮಕದಾಗೆ ಜೀವದ ಕಳೆ ಐತೆ ತಡೀರಿ’ ಎಂದು ಬುಡ್ಡಿ ಹಚ್ಚಿ ದಪ್ಪ ಬಳೇಚೂರು ಕಾಸಿ ಚುಟುಕಿ ಇಟ್ಟಾಗ ಅದರ ಬಿಸಿಗೆ ಮೈ ಮಿಸುಕಾಡಿತಂತೆ.
ರಾತ್ರಿ ಇಡೀ ಮಗ್ಗುಲಲ್ಲಿ ಕಾದು ಕೂತ ಅಜ್ಜಿಯ ನಂಬಿಕೆಯಂತೆ ಬೆಳಿಗ್ಗೆ ಕಣ್ತೆರೆದು “ಅಮ್ಮ” ಎಂದು ದನಿ ಹೊರಡಿಸಿದ್ದಾರೆ. ಇದರಿಂದಾದ ಶ್ರವಣ ಸಮಸ್ಯೆಯಿಂದಾಗಿ ಹೊರಗಿನ ಶಬ್ದಲೋಕ ಅವರ ಪಾಲಿಗೆ ಕ್ಷೀಣಿಸಿದರೂ ಸಾಹಿತ್ಯ ಕೃಷಿ ಸಮೃದ್ಧವಾಗುತ್ತ ಬೆಳೆದಿದೆ. ಅವರ ಓದು, ಅನುಭವ, ನೋಟಗಳಿಗೆ ಸಿಕ್ಕಿದ, ದಕ್ಕಿದ ಸಂಭವನೀಯತೆಗಳ ವಿಸ್ತಾರ ಅಪಾರ.
ಇವರು ಓದುತ್ತಿದ್ದ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕಥೆಗಾರ ಎನ್ ಎಸ್ ಚಿದಂಬರರಾವ್ರ ಪ್ರೋತ್ಸಾಹ. ಸುಶೀಲಾರು ತಮ್ಮ ಬರಹವನ್ನು ಪತ್ರಿಕೆಗಳಿಗೆ ಕಳಿಸಲು ಉತ್ಸಾಹ ತುಂಬಿತು. ಹಾಗೆಂದು ಪ್ರಚಾರದ ವ್ಯಾಮೋಹಕ್ಕೆ ಸಿಕ್ಕದೆ, ಮಾಗಿದ ಅನುಭವಕ್ಕೆ ನಿಲುಕಿದ ನಂತರವೇ ಕಥೆಯಾಗಿಸುವ ಬದ್ಧತೆ ಇವರದು. ಹಾಗಾಗಿ ನಲವತ್ತು ದಶಕಗಳನ್ನು ದಾಟಿದ ಸಾಹಿತ್ಯ ಯಾತ್ರೆಯಲ್ಲಿ ನೂರಾರು ಕಥೆಗಳನ್ನು ಬರೆದರು. ತಮ್ಮಲ್ಲೆ ಇದ್ದ ಒಬ್ಬ ಜಾಗೃತ ವಿಮರ್ಶಕಿಯಿಂದ ಯಾವುದೇ ವಿಷಯಕ್ಕೂ ನ್ಯಾಯ ಒದಗಿಸುವ ಸ್ವತಃ ಪ್ರೇರೇಪಣೆ ಹೊಂದಿದ್ದರು.
ಆರೋಗ್ಯ ಇಲಾಖೆಯ ಪದೇ ಪದೇ ವರ್ಗವಾಗುವ ಸರ್ಕಾರಿ ಹುದ್ದೆಯಲ್ಲಿದ್ದ ಶ್ರೀ ರಾಘವೇಂದ್ರ ರಾವ್ ಅವರೊಂದಿಗೆ ಹದಿನೆಂಟನೇ ವಯಸ್ಸಿಗೆ ವಿವಾಹವಾಯಿತು. ಬಳ್ಳಾರಿಯ ಬಿರು ಬಿಸಿಲು, ಬೆಳೆಯುತ್ತಿದ್ದ ಸಂಸಾರ, ಕುಟುಂಬದ ಸಾಕಷ್ಟು ಜವಾಬ್ದಾರಿ, ಇಂತಹ ಸಮಸ್ಯೆಗಳ ನಡುವೆಯೂ ಅವರ ಕಥಾ ಲೋಕ ಶ್ರೀಮಂತವಾಗುತ್ತಲೇ ಇತ್ತು. ‘ಸ್ವಾಭಿಮಾನಿ’, ‘ಬೆಂಕಿಯ ಒಡಲಲ್ಲಿ ‘ಸಂಬಂಧದ ಸಂಕೋಲೆಗಳು’.. ಇತ್ಯಾದಿ ಕಾದಂಬರಿಗಳು ‘ಕಿಟ್ಟು ಪುಟ್ಟಿಯರ ಸಾಹಸಗಳು’ ಮಕ್ಕಳ ಕಾದಂಬರಿ, ‘ಷೋಕೇಸಿನ ಗೊಂಬೆ’ ಕಥಾ ಸಂಕಲನ ಪ್ರಕಟವಾದವು.
ಪತಿಯ ಅನಿರೀಕ್ಷಿತ ಸಾವು ಅಘಾತಕಾರಿಯಾಗಿ ಸಂಪೂರ್ಣ ಹೊಣೆಗಾರಿಕೆ ಸುಶೀಲಾರವರ ಹೆಗಲೇರಿತು. ಮಗ ಅನಂದ್, ಮಗಳು ಲತಾ ಇವರ ವಿದ್ಯಾಭ್ಯಾಸ ಮತ್ತು ಏಳ್ಗೆ ಸುಶೀಲಾರ ಅತ್ಯಂತ ಜಾಗರೂಕ ಸಮತೂಕದ ನಿರ್ವಹಣೆಯಲ್ಲಿ ನಡೆಯಿತು. ಬಹುಷಃ ಬೆಂಕಿಯ ಮಡಿಲಲ್ಲಿದ್ದೂ ಸ್ವಾಭಿಮಾನಿಯಾಗಿ ಕುಟುಂಬವನ್ನು ಕಾಪಾಡಿ ಒಂದು ನೆಲೆಗೆ ನಿಲ್ಲಿಸಿದ ಹಿರಿಮೆ ಸಾರ್ಥಕತೆ ಸುಶೀಲಾವರದ್ದು.
ಬದುಕಿನಿಂದ ಬರಹ ಬದುಕಿಗಾಗಿ ಬರಹ ಎಂಬ ಸಿದ್ದಾಂತದಿಂದ ಸಾಹಿತ್ಯಕ್ಕೆ ಬದ್ಧರಾದವರು. ಗ್ರಾಮೀಣ ಬದುಕನ್ನು, ಸುತ್ತಣ ಜಗತ್ತನ್ನು ಕಂಡ ಬೆರಗು, ಜನರ ನೋವು, ನಲಿವು, ದ್ವೇಷ, ತುಮುಲಗಳು ಶೋಷಣೆ ಇವುಗಳನ್ನು ಎದುರಿಸುತ್ತ ಬದುಕನ್ನು ಕಟ್ಟಿಕೊಂಡ ಸ್ತ್ರೀಯರು, ಬದುಕಿನ ಬಗ್ಗೆ ಅಪಾರ ಪ್ರೀತಿ ಭರವಸೆ ಇರಿಸಿಕೊಂಡವರು, ವೈವಿಧ್ಯಮಯ ವ್ಯಕ್ತಿತ್ವಗಳ ಕಂಡ ಉಂಡ ಬದುಕೆಲ್ಲ ಕಥೆಯಾಗಿ ಹರಿದು ಬಂದಿದೆ ಎಂಬುದು ಅವರದೇ ಮಾತು.
ಅವರ ತವರಾದ – ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ – ಗುಂಜಿಗನೂರು ಗ್ರಾಮದಲ್ಲಿನ ಕೊಪ್ಪದಮ್ಮನ ಗುಡಿ ದೆವ್ವ ಬಿಡಿಸಲು ಪ್ರಖ್ಯಾತವಾಗಿತ್ತು. ಇದನ್ನು ಕಣ್ಣಾರೆ ಕಂಡ ಲೇಖಕಿ, ದೆವ್ಬದ ನಂಬಿಕೆಯನ್ನು ಬಿಟ್ಟು ಇರಬಹುದಾದ ಮನೋರೋಗಗಳ ಬಗ್ಗೆ ಮನೋವೈಜ್ಞಾನಿಕ ಗ್ರಂಥಗಳನ್ನು ಅಧ್ಯಯನ ಮಾಡಿ ಬರೆದ ಕಥೆಯೇ “ಮನಮಂದಿರ”. ಶಾಲಾ ವಾರ್ಷಿಕೋತ್ಸವದ ದಿನ ಊರ ಹೊರಗಿನ ಹುಣಿಸೇ ಮರದ ಕೆಳಗೆ ಬಕ್ಕತಲೆಯ ವ್ಯಕ್ತಿಯೊಬ್ಬ ಕಥಾ ನಾಯಕಿ ಉಮಾಳ ಮೇಲೆ ಅತ್ಯಾಚಾರ ಕೃತ್ಯವೆಸಗಿದ ಪರಿಣಾಮ ಮನೋವ್ಯಾಧಿಗೆ ಒಳಗಾಗುತ್ತಾಳೆ.
ಹಗಲಿನ ಅವಳ ಚಟುವಟಿಕೆ ರಾತ್ರಿಯ ಮಂಕು ಮುಸುಕಿಗೆ ಬದಲಾಗುತ್ತಿತ್ತು.ಒಂದೊಂದಾಗಿ ಸುಮಿತ್ರಾ ಎಂಬಾಕೆ ಮನೆಯವರ ಕಟ್ಟು ಪಾಡು, ದೌರ್ಜನ್ಯಗಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದು ಅವಳ ಕಾಟದಿಂದಲೇ ಉಮಾ ತಲೆ ತಿರುಗಿ ಬೀಳುವ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆಂಬ ನಂಬಿಕೆ ಬಲವಾಗಿ ಬೇರೂರಿತ್ತು. ಮನೋವೈದ್ಯರ ಚಿಕಿತ್ಸೆಯಿಂದಾಗಿ ಕಾರಣ ತಿಳಿಯುವುದು ಮಾತ್ರವಲ್ಲದೆ ವ್ಯಾಧಿಯೂ ಗುಣಮುಖವಾಗುತ್ತದೆ. ಬಾಲ್ಯಸ್ನೇಹಿತ ಆನಂದ್ ವಿಷಯ ತಿಳಿದೂ ಅವಳನ್ನು ಪ್ರೀತಿಯಿಂದ ಒಪ್ಪಿಕೊಂಡು ಸಂಸಾರಿಯಾಗಿರುತ್ತಾನೆ. ಯಾವುದೇ ಅನುಮಾನ ಆತಂಕಗಳಿಲ್ಲದೆ ಬಂಧ ಬೆಸುಗೆಯಾದ ಸುಖಾಂತ.
ಬಲವಂತದ ಮದುವೆಯಿಂದಾಗಿ ಗಂಡನಿಂದ ತಿರಸ್ಕೃತಳಾದರೂ ಸ್ವಾಭಿಮಾನದಿಂದ ಬದುಕನ್ನು ಎದುರಿಸುವ ಕತೆ “ಸ್ವಾಭಿಮಾನಿ”. ಜನಪ್ರಿಯವಾದ ಈ ಕಾದಂಬರಿಯ ವಿಶೇಷವೆಂದರೆ, ಮಾಸಪತ್ರಿಕೆಯಲ್ಲಿ ಈ ಧಾರಾವಾಹಿ ಪ್ರಕಟವಾಗುತ್ತಿದ್ದಾಗ ಕುಮಟಾದ ನರಸಿಂಹ ಗೋವಿಂದ ಶಾನುಭಾಗರು ತುಂಬ ಆಸಕ್ತಿಯಿಂದ ಓದುತ್ತಿದ್ದರು. ಹಠಾತ್ತನೆ ಅವರ ಆರೋಗ್ಯ ಬಿಗಡಾಯಿಸಿ ಮೃತ್ಯುಶಯ್ಯೆಯಲ್ಲಿದ್ದಾಗ, ಧಾರಾವಾಹಿಯ ಸುಮಿತ್ರಳ ಮುಂದಿನ ಬದುಕಿನ ಬಗ್ಗೆ ಹಂಬಲಿಸಿ, ಸಂಪಾದಕರ ಅನುಮತಿ ಪಡೆದು ಮುಂದಿನ ಕಂತುಗಳನ್ನು ತರಿಸಿಕೊಂಡು ಓದಿಸಿಕೊಂಡು ಕೇಳಿದ್ದಾರೆ. ನಂತರ ನಿಧನರಾಗಿದ್ದಾರೆ. ಇದಲ್ಲವೆ ನಿಜವಾದ ಜನಪ್ರಿಯತೆ ಅಂದರೆ?
ಹೆತ್ತವರ ಪ್ರೀತಿ ಕಾಣದೆ ತಿರಸ್ಕೃತಳಾದರೂ ವಿಧವೆ ಅತ್ತೆಯ ಮಡಿಲಲ್ಲಿ ಬೆಳೆದ ವಿಚಾರವಂತ ಹೆಣ್ಣುಮಗಳಾದ ಇಂದಿರಾಳ ಮನೋರಂಗದ ತಲ್ಲಣಗಳ ಸ್ಪಷ್ಟವಾಗಿ ಬಿಂಬಿಸಿದ ಮನೋ ವೈಜ್ಞಾನಿಕ. ಕಾದಂಬರಿ ” ಬೆಂಕಿಯ ಒಡಲಲ್ಲಿ”. ಅಕ್ಕಂದಿರ ಶೋಷಣೆ, ತನ್ನ ಮೇಲಿನ ಅತ್ಯಾಚಾರದ ಪ್ರಯತ್ನ, ಸುತ್ತಲೂ ಆವರಿಸಿದ್ದ ದೇವದಾಸಿ ಪದ್ಧತಿಯ ಆಚರಣೆಗಳು, ಇವೆಲ್ಲ ಹೆಣ್ಣನ್ನು ತುಳಿದು ವಿಜೃಂಭಿಸುವಂತೆ ಕಂಡು ಪುರುಷ ದ್ವೇಷಿಯಾಗುತ್ತಾಳೆ. ಒತ್ತಾಯದಿಂದ ತನ್ನನ್ನು ಮದುವೆಯಾದ ವಿಶ್ವನಾಥ ಈ ಮೊದಲು ಅಮಾಯಕ ಹೆಣ್ಣನ್ನು ವಿಚ್ಛೇದನದಿಂದ ದೂರಮಾಡಿದ್ದು ತಿಳಿದು ತೀವ್ರ ಮನೋರೋಗಕ್ಕೆ ತುತ್ತಾಗುತ್ತಾಳೆ.
ವೈದ್ಯರ ಚಿಕಿತ್ಸೆಯ ಮೂಲಕ ಮನಸಿನ ಒಳಪದರಗಳು ಒಂದೊAದಾಗಿ ಬಿಚ್ಚಿಕೊಳ್ಳುತ್ತ ವೇದನೆಗಳ ಮೂಲಗಳು ಒಂದೊAದಾಗಿ ಹೊರಬರುತ್ತವೆ. ಗರ್ಭ ಕೋಶವಿಲ್ಲದೆ ದಾಂಪತ್ಯ ಅಸಫಲವೆನಿಸಿ ತಾನೆ ಸ್ವಇಚ್ಛೆಯಿಂದ ವಿಚ್ಛೇದನ ನೀಡಿ, ತನ್ನನ್ನು ವಿವಾಹವಾಗಲು ಅವಕಾಶ ಮಾಡಿಕೊಟ್ಟ ಮೊದಲ ಹೆಂಡತಿಯ ಬಗ್ಗೆ ತಿಳಿದಾಗ ಮನೋರೋಗದ ಚಿಕಿತ್ಸೆ ಫಲಪ್ರದವಾಗಿ ಸುಖಾಂತ್ಯವಾಗುವ ಕಾದಂಬರಿ.
ಅಲ್ಪ ವಿದ್ಯಾವಂತ ಹೆಣ್ಣುಮಗಳು ಸಾಂದರ್ಭಿಕ ಬಿಕ್ಕಟ್ಟಿನಲ್ಲಿ ಕೌಟುಂಬಿಕ ವ್ಯವಹಾರಗಳಲ್ಲೇ ಮುಳುಗಿ ತನ್ನ ಓದಿನ ಬಳಕೆಯೇ ಆಗದ ಪರಿಸ್ಥಿತಿ. ಮಗಳು ಅಜ್ಜಿಯ ಮನೆಯಲ್ಲಿ ಸುಂದರ ಯುವತಿಯಾಗಿ ಬೆಳೆಯುತ್ತಾಳೆ. ಅವಳ ತಂದೆಯಿAದ ಪಡೆದ ಋಣಭಾರದ ಕೃತಜ್ಞತೆಯಿಂದಾಗಿ ಡಾ ಸುದರ್ಶನ್ ಅವಳನ್ನೆ ಮದುವೆಯಾಗುತ್ತಾನೆ, ಮಗನನ್ನೂ ಪಡೆಯುತ್ತಾರೆ.
ಆದರೆ ಡಾಕ್ಟರ್ ಶರ್ಮಿಳಾಳ ಭೇಟಿ, ಹೋಲಿಕೆ ಮತ್ತು ಆಕರ್ಷಣೆ ಇವರ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ಮುಂದೆ ಶರ್ಮಿಳಾಳ ಆಕ್ರಮಣಕಾರಿ ಸ್ವಭಾವ ಆತನ ಕನಿಷ್ಠ ಸ್ವಾತಂತ್ರ್ಯವನ್ನೂ ಕಸಿದು ಪ್ರತಿ ಹೆಜ್ಜೆ ನಿರ್ಬಂಧಿತವಾಗುತ್ತದೆ. ಮೊದಲ ಮಗನನ್ನು ಜೊತೆಗೇ ಉಳಿಸಿಕೊಂಡರೂ, ಅವನ ದುಶ್ಚಟಗಳನ್ನು ದೂರ ಮಾಡುವ ಪ್ರಯತ್ನ ಫಲಿಸದ ಪರಿಸ್ಥಿತಿ. ಸುದರ್ಶನ್ ಅವರ ನಿರ್ಗಮನದ ಸಂದಭದಲ್ಲಿ ಇನ್ನೂ ಗರ್ಭಸ್ಥವಾಗಿದ್ದ ಶಿಶು ದೃಷ್ಟಿ ಸಮಸ್ಯೆ ಪಡೆದೇ ಹುಟ್ಟುತ್ತದೆ.
ಯಾವುದೇ ಆಸ್ತಿ ಅಧಾರವಿಲ್ಲದೆಯೂ ವಸುಮತಿ ಅತ್ಯಂತ ಕಷ್ಟಪಟ್ಟರೂ ಮಗನ ಸಂಗೀತಾಭ್ಯಾಸಕ್ಕೆ ಪುಷ್ಠಿ ಕೊಡುತ್ತಾಳೆ. ತನ್ನ ಮಕ್ಕಳೇ ನಿರ್ಲಕ್ಷಿಸಿದಾಗ, ದೂರವಿಟ್ಟ ಹೆಂಡತಿ ಶರ್ಮಿಳ, ಡಾ|| ಸುದರ್ಶನ್ ಅವರಿಗೆ ಸಂಬಂಧಗಳು ತಿರುಚಿಕೊಂಡು ಸಂಕೋಲೆಗಳಾಗಿ ಅವರು ಸೋತು ಬಳಲಿ ಬಂದಾಗ ವಸುಮತಿಯ ನಿರ್ಧಾರ ಅವಳ ಮಟ್ಟಿಗೆ ಸೂಕ್ತ. ಶ್ರೀಮಂತಿಕೆಗಿಂತ ಪ್ರೀತಿ, ವಿಶ್ವಾಸ, ನಂಬಿಕೆ, ಅನ್ಯೋನ್ಯತೆಗಳು ಸಂಬಂಧಗಳ ಬೆಸುಗೆಗೆ ಅತ್ಯವಶ್ಯ, ಇಲ್ಲವಾದರೆ ಬದುಕಿನ ಸಂಕೋಲೆಗಳಾಗುವುದನ್ನು ಕಾದಂಬರಿ ನೇರವಾಗಿ ಯಾರನ್ನೂ ಕೆಟ್ಟವರನ್ನಾಗಿ ಚಿತ್ರಿಸದೇ ತಿಳಿಸುತ್ತದೆ. ಅನುವಂಶೀಯತೆ ಪ್ರಕಟಗೊಳ್ಳುವ ಸಾಕ್ಷಿಯಾಗಿರುವ ಕಾದಂಬರಿ ಬದುಕಿನ ಮೌಲ್ಯಗಳನ್ನು ಅರ್ಥೈಸುತ್ತದೆ.
ಮಕ್ಕಳಿಗೆ ಖುಷಿ ಕೊಡುವ “ಕಿಟ್ಟು-ಪುಟ್ಟಿಯರ ಸಾಹಸಗಳು” ಮಕ್ಕಳ ಕಾದಂಬರಿ. ನಗರ ಪರಿಸರದಲ್ಲಿ ಬೆಳೆದ ಮಕ್ಕಳು ರಜೆಯಲ್ಲಿ ಅಜ್ಜಿತಾತನ ಊರಿನ ಸ್ವಚ್ಛಂದ ವಿಹಾರದಲ್ಲಿ ಅವರ ಒಳಗಿನ ಶೌರ್ಯ ಸಾಹಸಗಳು ಗರಿಗೆದರಿದಾಗಿನ ತಿಳಿ ಹೊಳೆಯ ಓಟ ನೋಟ. ಹಳ್ಳಿಯ ಮುಗ್ಧ ಜನರೊಂದಿಗೆ ಬೆರೆತು ಕೊಲೆ, ಕಳ್ಳತನ ಕಿಡ್ನಾಪ್ ಕೇಸುಗಳನ್ನು ಪತ್ತೆ ಹಚ್ಚುವ ಪುಟ್ಟ ಪತ್ತೇದಾರರಾಗುತ್ತಾರೆ. ಬಸುರಿ ಹೆಂಗಸನ್ನು ಬದುಕಿಸುವ ಭಾಗ್ಯವಂತರಾಗುತ್ತಾರೆ.
ಪುರಾತನ ದೇವಾಲಯದ ವಿಗ್ರಹ ಚೋರರ ಬಂಧನಕ್ಕೆ ಕಾರಣರಾಗುತ್ತಾರೆ. ಮನೆತನದ ಮರೆಯಾದ ಗ್ರಂಥಗಳನ್ನು ಬೆಳಕಿಗೆ ತರುವ ಕುಲದೀಪಕರಾಗುತ್ತಾರೆ. ಪವಾಡ ಸದೃಶ ಸಾಹಸಗಳನ್ನು ಕೈಗೊಳ್ಳುತ್ತಾರೆ. ಮಕ್ಕಳಿಗಾಗಿಯೇ ಬರೆದ ಈ ಕಾದಂಬರಿ ಅನೇಕ ಆವೃತ್ತಿಗಳನ್ನು ಕಂಡಿದೆ. ತಮ್ಮ ಸ್ವಂತ ಹುಟ್ಟೂರಿನ ಅನೇಕ ವಿಷಯಗಳನ್ನು ಕಲ್ಪನೆಯಲ್ಲಿ ಹೊಸೆದು ಈ ಮೂಲಕ ಕಾದಂಬರಿ ನಮ್ಮೊಳಗೇ ಇರುವ, ಹೊರಬರುವ ಪಾತ್ರ, ಘಟನೆಗಳಾಗಿ ಸಂಭ್ರಮಿಸುತ್ತವೆ.
ಕಥೆಗೆ ಸಂಬಂಧಿಸಿದ, ಕಥೆಯ ಬೆಳವಣಿಗೆಗೆ ಅಗತ್ಯವಾದ ಕಾನೂನು, ವೈದ್ಯಕೀಯ, ಮನೋವೈಜ್ಞಾನಿಕ, ಭೌಗೋಳಿಕ ಕಾರಣ ಪರಿಣಾಮಗಳ ಅಧ್ಯಯನದಿಂದ ಸುಶೀಲಾರ ಕಥೆ, ಕಾದಂಬರಿಗಳು ಗಟ್ಟಿಯಾಗಿ, ನೈಜತೆಯ ಸ್ಪರ್ಶವನ್ನು ಪಡೆಯುತ್ತವೆ. ಸಹಜ ಮತ್ತು ಸರಾಗವಾಗಿ ಮುಂದುವರಿಸುವ ಸಂಭಾಷಣಾ ಪ್ರಕ್ರಿಯೆಯೇ ಪ್ರಧಾನ ಆಕರ್ಷಣೆ. ಯಾವುದೇ ಆಳವಾದ ಚಿಂತನೆಯೂ ಈ ಪರಿಕ್ರಮದಲ್ಲಿ ಹಿಗ್ಗುತ್ತದೆ.
ಒಗ್ಗುತ್ತದೆ ಕೂಡಾ. ಅಪಾರ ಓದು, ಅಧ್ಯಯನ, ಅಗಾಧವಾದ ಜೀವನೋತ್ಸಾಹದ ಹರವು ಮತ್ತು ಹರಿವು ಇವರ ಕಥೆ, ಕಾದಂಬರಿ, ನಾಟಕಗಳು ಎಲ್ಲ ಪ್ರಕಾರಗಳಿಗೂ ಅಮೂಲ್ಯವಾದ ಸ್ಥಿರತೆಯೊಂದಿಗೆ ಪ್ರಾಮಾಣಿಕ ನೆಲೆಯನ್ನು ಕಟ್ಟಿ ಕೊಡುತ್ತದೆ. ಪ್ರತಿ ಪಾತ್ರಗಳು, ಆಯಾ ಸಂಬಂಧಗಳು, ಅವರವರ ಸ್ವಯಂ ಸ್ವಭಾವಗಳೊಂದಿಗೆ ರೂಪಿಸಿ ಬೆಳೆಸಿದ ಬಳಸಿದ ಮೂರ್ತ ಮಾದರಿಗಳು.
ಬಳ್ಳಾರಿಯ ಹತ್ತು ಹಲವು ಊರುಗಳು, ಭಾಷೆ, ಪರಿಭಾಷೆ, ಜನಪದ, ಆಚಾರ ವಿಚಾರಗಳಿಂದ ಪ್ರಭಾವಿತರಾದ ಅವರ ಬರಹ “ಅಡುಗೆ ಮನೆ ಸಾಹಿತ್ಯ” ಎಂಬ ಪರಿಮಿತಿಯನ್ನು ಮೀರಿ ಬೆಳೆದದ್ದು. ಸಾವಿನ ಹಾಸಿಗೆಯ ಮೇಲೆ ಮಲಗಿದ್ದ ತಾಯಿಯ ಎದುರು ತಮ್ಮ ಸ್ವಾರ್ಥ ದುರಾಸೆ ಸಣ್ಣತನಗಳ ಪ್ರದರ್ಶನ ಮಾಡಿದ ಮಕ್ಕಳ ಕಥೆ “ಅವ್ವ”. ಅವರ ಅತ್ಯುತ್ತಮ ಕಥೆಗಳಲ್ಲಿ ಒಂದು. ಗೌಡರ ಚನ್ನವ್ವ, ದಾಕ್ಷಾಯಣಿ, ತುಂಗ… ಇತ್ಯಾದಿ ಕಥೆಗಳು ಜನಪ್ರಿಯವಾದವು.
ಸ್ತ್ರೀಯರ ಹಲವಾರು ವರ್ತನೆಗಳಿಗೆ, ಸಂವೇದನೆಗಳಿಗೆ ಮನೋವೈಜ್ಞಾನಿಕ ನೆಲೆಯನ್ನು ವಿಶಿಷ್ಟ ಆಯಾಮವನ್ನು ಪರಿಚಯಿಸಿದ ತ್ರಿವೇಣಿಯವರಂತೆ ಸುಶೀಲಾದೇವಿಯವರೂ ಕೂಡಾ ಮನೋವೈಜ್ಞಾನಿಕ ನೆಲೆಯಲ್ಲಿಯೇ ಉತ್ತರಗಳನ್ನು ಕಂಡುಕೊಂಡವರು. ‘ಮನಮಂದಿರ’, ‘ಬೆಂಕಿಯ ಒಡಲಲ್ಲಿ, ‘ಸ್ವಾಭಿಮಾನಿ’ ಕಾದಂಬರಿಗಳು ಈ ಹಿನ್ನೆಲೆಯನ್ನು ಹೊಂದಿದ್ದರೆ, ‘ಸೇಡು’, ‘ನಿನ್ನ ದಾರಿಯಲ್ಲೀಗ ನನ್ನ ಹೆಜ್ಜೆಗಳು ತಮ್ಮ ಸ್ವಸಾಮರ್ಥ್ಯದಿಂದಲೇ ಜಿಗಿದೆದ್ದು ನಿಂತು ಧೈರ್ಯವಾಗಿ ಹೋರಾಡುವ ಸ್ತ್ರೀಶಕ್ತಿಯ ಜೀವಂತಿಕೆ ಇದೆ.
‘ಮುಗ್ಧಮನ’, ‘ತುಂಗ-ಉತ್ತುಂಗ’, ‘ತಿರುಗುಬಾಣ’ಗಳಂತಹ ಶ್ರವ್ಯನಾಟಕಗಳು ರಾಷ್ಟ್ರೀಯ ರೇಡಿಯೋ ನಾಟಕಗಳಾಗಿ ನಾಡಿನಾದ್ಯಂತ ಬಿತ್ತರಗೊಂಡಿವೆ. ಪುಸ್ತಕಗಳಾಗಿ ಪ್ರಕಟವಾಗದೇ ಇದ್ದರೂ ಆಕಾಶವಾಣಿಯಿಂದ ಪ್ರಸಾರವಾದ ನಾಲ್ಕಾರು ನಾಟಕಗಳು, ಸಾಂದರ್ಭಿಕವಾಗಿ ಬರೆದ ನೂರಾರು ಬಿಡಿ ಲೇಖನಗಳು ಅವರ ಬರಹದ ವಿಸ್ತಾರ, ವಿಪುಲತೆ ಮತ್ತು ಸಮೃದ್ಧತೆಯನ್ನು ಮುಂದಿಡುತ್ತದೆ.
ಸಾಹಿತ್ಯ ವಲಯದ ಜಂಜಾಟ ಚಳುವಳಿಗಳ ಮುಂದಾಳತ್ವ – ಹಿಂಬಾಲಿಕೆಗಳ ಮೀರಿ, ತಾವು ನಂಬಿದ ನಿಲುವು, ಬದುಕಿನ ಬದ್ಧತೆಯನ್ನು ಬರಹದಲ್ಲಿ ನಿರಂತರವಾಗಿ ಕಟ್ಟಿ ಕೊಡುತ್ತಿದ್ದಾರೆ. ಸಹಜ ಸಂಭಾಷಣೆ ಹೊರ ಆಕರ್ಷಣೆ, ಸೂಕ್ಷö್ಮ ಸಂವೇದನೆ ಅವರ ಒಳ ಹರಿವು. ಓದುಗರ ಪ್ರತಿಕ್ರಿಯೆಯೇ ಬರಹಕ್ಕೆ ಸಲ್ಲುವ ಸನ್ಮಾನ ಎಂಬ ನಿಷ್ಠೆಗೆ ಸಂದವರು.
ಕಥಾದ್ವನಿಯಲ್ಲಿ ಅನುಭವ ಮತ್ತು ಅನುಭೂತಿಗಳನ್ನು ತೆರೆದಿಡುತ್ತ ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದ ಸದ್ದಿಲ್ಲದ ಕಥೆಗಾರ್ತಿ ಪ್ರಮುಖ ಸೃಜನಶೀಲ ಮನಸ್ಸುಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟು ಗೌರವಿಸಲ್ಪಟ್ಟಿದ್ದಾರೆ. ಹಾಗಾಗಿಯೇ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕನ್ನಡ ಹಿತರಕ್ಷಣಾ ಸಮಿತಿಯಿಂದ ‘ರಾಜ್ಯೋತ್ಸವ ಪ್ರಶಸ್ತಿ’, ಚಳ್ಳಕೆರೆಯ ಕರುನಾಡು ಸಾಹಿತ್ಯ ಕಲಾವೇದಿಕೆಯ ‘ಮಾಸ್ತಿ ಕಥಾ ಪ್ತಶಸ್ತಿ’. ದಾವಣಗೆರೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ ‘ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿಗಳು ಲಭಿಸಿವೆ. ಪ್ರಚಾರಕ್ಕಾಗಿ ಪ್ರಶಸ್ತಿಗಾಗಿ ಎಂದೂ ಆಶಿಸದ ಈ ಕಥೆಗಾರ್ತಿಗೆ ಹೊಸತು ಪತ್ರಿಕೆಯವರು ಪ್ರತಿ ವರ್ಷ ಶ್ರೇಷ್ಠ ಮಹಿಳಾ ಬರಹಕ್ಕೆ ಕೊಡಮಾಡುವ ಬಹುಮಾನ ಸುಶೀಲಾರ “ನಡೆವುದೊಂದೇ ಭೂಮಿ” ಮತ್ತು “ಅಪರಿಮಿತ ಕತ್ತಲೊಳಗೆ” ಈ ಎರಡೂ ಕಥೆಗಳಿಗೆ ಸಂದಿದೆ.
‘ಮನೆ ಮನೆಯ ಕಥೆಗಳು’ ಸರಣಿಯ ಹಂದರ ಮತ್ತು ವ್ಯಾಪ್ತಿಯ ಬಹುಮುಖ ಫೇಸ್ ಬುಕ್ ಓದುಗರಿಗೂ ಮನಮುಟ್ಟಿದೆ. ಮಲ್ಲಿಗೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಕೇಳಿದ್ರಾ ಸಮಾಚಾರ’ ಒಂದು ಬಗೆಯ ನ್ಯೂಸ್ ಚಾನಲ್ನಂತೆ. ನವಿರು ಹಾಸ್ಯ ನೋವು ರಹಿತ ವಿಡಂಬನೆಯ ಮಾದರಿಗಳು. ಹೇಳಿಯೂ ಹೇಳದಂತೆ ದಾಟಿಸುವ, ಹೇಳದೆಯೂ ಹೇಳಿದಂತೆ ಮುಟ್ಟಿಸುವ ನಯಗಾರಿಕೆ ಇವರ ನ್ಯಾನೊ ಕಥೆಗಳ ಸ್ವಾರಸ್ಯಕರ ಅಂತ್ಯ.
ಮೃದು ಸ್ವಭಾವದ, ನೇರ ಮತ್ತು ದಿಟ್ಟ ನುಡಿಯ ಮುಗ್ಧ ಮನಸ್ಸಿನ ನನ್ನ ಗೆಳತಿಯದು ನಿಷ್ಕಲ್ಮಶ ಪ್ರೀತಿ. ಉಳಿದವರ ಭಾವನೆಗಳಿಗೆ ಸ್ಪಂದಿಸುವ ಸ್ಫಟಿಕ ತರಂಗಿಣಿ. ವಾಸ್ತವದ ನೆಲೆಗಟ್ಟನ್ನು ಶೋಧಿಸಿ ಸುಸ್ಪಷ್ಟಗೊಳಿಸುವ ಪ್ರಯೋಗಶೀಲೆ. ಹೆಣ್ಣು ಮಕ್ಕಳು ತಮ್ಮ ಬದುಕಿನ ಸಮಸ್ಯೆಗಳ ಆಳದ ಸುಳಿಯ ಕತ್ತಲಿನಿಂದ ಹೊರಬರುವ ಬೆಳಕಿನ ದಾರಿಗಳು, ತಲುಪುವ ಹೊಳಪಿನ ಗುರಿಗಳು, ಬದುಕಿನ ಸಿರಿ ಸಂಪತ್ತು ಇವರ ಬರಹದ ಮೂಲ ದ್ರವ್ಯಗಳು.
ಬಿಚ್ಚುಗಣ್ಣಿನ ನೋಟ, ಮುಚ್ಚುಗಣ್ಣಿನ ಧ್ಯಾನ, ನಡುವಣ ಎಚ್ಚರ ಇವರ ಕಥಾ ಸಮನ್ವಯದ ಮುಖ್ಯ ಅಂಶಗಳು. ಕಥೆಯ ಪ್ರವೇಶ- ನಿರ್ಗಮನಗಳ ನಡುವಿನ ಪಯಣದ ಸಮಯ, ನಿರ್ದಿಷ್ಟತೆ ಇದೆಲ್ಲದರ ಇತಿಮಿತಿಯನ್ನು ತಮ್ಮದೇ ಶೈಲಿಯಾಗಿಸಿಕೊಂಡು ಕಥಾಲೋಕವನ್ನು ಪ್ರೀತಿಸಿ ಗೌರವಿಸಿದ್ದಾರೆ. ಭೇದ ಭಾವವಿಲ್ಲದ ನಿಷ್ಪಕ್ಷಪಾತವಾಗಿ ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ತುಂಬು ಹೃದಯದಿಂದ ಒಪ್ಪಿಕೊಳ್ಳುತ್ತಾರೆ, ಪ್ರೀತಿಯಿಂದ ಸ್ಪಂದಿಸುತ್ತಾರೆ.
ಕಥಾ ಜಗತ್ತು ಸುಶೀಲಾರಿಂದ ಮತ್ತಷ್ಟು ಹೊಸದಾರಿ, ಮಾದರಿ, ಸುಳಿವು-ಹೊಳಹುಗಳನ್ನು ಕಾಣಲಿ ಹಾಗೆಯೇ ಕಥಾಲೋಕ ಅವರ ಗೌರವವನ್ನು ಮತ್ತಷ್ಟು ಎತ್ತರಿಸಲಿ ಎಂಬ ಆಶಯದೊಂದಿಗೆ ನನ್ನ ಸಹೋದರಿ, ಆತ್ಮೀಯ ಗೆಳತಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿರುವ ಶುಭ ಸಂದರ್ಭದಲ್ಲಿ ಪರಿಚಯ ಮಾಡುವ ಅವಕಾಶ ದೊರೆತದ್ದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ ಸವಿನಯ ವಂದನೆಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243