ಅಂತರಂಗ
ದಾಸೋಹ ಪರಿಕಲ್ಪನೆ..!
- ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ್
ಜಗತ್ತಿನಲ್ಲಿಯೇ ಮೊದಲು ನಡೆದ ಸಾಮಾಜಿಕ ಚಳುವಳಿಗಳಲ್ಲಿ ಹನ್ನೆರಡನೇ ಶತಮಾನದ ವಚನ ಚಳವಳಿ ಅಪರೂಪವಾದುದು ಅಷ್ಟೇ ಪ್ರಮುಖವಾದುದು. ಐತಿಹಾಸಿಕ ಮಹತ್ವವುಳ್ಳ ಈ ಚಳವಳಿ ಭಾರತದಲ್ಲಿ ನಡೆದ ಮೊದಲ ಸಂಘಟಿತ ಸಾಮಾಜಿಕ ಚಳುವಳಿಯಾಗಿದೆ.
ಇದರಲ್ಲಿ ಸಮಾಜದ ಯಾವುದೋ ಒಂದು ಮುಖದ ದೋಷಗಳನ್ನು ಪ್ರಸ್ತಾಪಿಸಿ ಅವುಗಳ ನಿವಾರಣೆಗೆ ಪ್ರಯತ್ನಿಸದೇ ಸಮಾಜ ಎದುರಿಸುತ್ತಿದ್ದ ಎಲ್ಲಾ ರೀತಿಯ ಸಮಸ್ಯೆಗಳನ್ನು ಗುರುತಿಸಿ ಅವುಗಳನ್ನು ನಿವಾರಿಸಿ ಸಮಾಜದ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸಿತು. ಅದಕ್ಕಾಗಿ ಅನೇಕ ಮಹತ್ವದ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಂಡಿತು. ಅಂಥ ಪರಿಕಲ್ಪನೆಗಳಲ್ಲಿ ಮುಖ್ಯವಾದವುಗಳೆಂದರೆ..
- ಷಟ್ಸ್ತಲ
- ಗುರು-ಲಿಂಗ-ಜಂಗಮ
- ಕಾಯಕ-ಪ್ರಸಾದ-ದಾಸೋಹ
ಇವುಗಳಲ್ಲಿ ಬಹಳ ಮುಖ್ಯವಾದ ದಾಸೋಹದ ಬಗ್ಗೆ ವಚನಕಾರರ ರಚನೆಗಳನ್ನು ಆಧರಿಸಿ ಕೆಲವು ವಿಚಾರಗಳನ್ನು ತಿಳಿಯಬಹುದು. ವಚನಕಾರರ ವಿಚಾರಗಳು ಸಮಕಾಲೀನ ಸಮಾಜದ ಸಂದರ್ಭದಲ್ಲಿ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ತಿಳಿಯುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದ್ದು ಅಂಥ ಪ್ರಯತ್ನ ಇಲ್ಲಿ ಮಾಡಲಾಗಿದೆ. ದಾಸೋಹದ ತತ್ವವನ್ನು ಕುರಿತು ಬಹುತೇಕ ಎಲ್ಲಾ ಶಿವಶರಣರು ಮಾತನಾಡಿರುವುದು ಅವರ ವಚನಗಳಿಂದ ನಮಗೆ ತಿಳಿದು ಬರುತ್ತದೆ.
ಕಾಯಕವಳಿದ ಠಾವಿನಲ್ಲಿ ಜೀವನ ಸುಳಿವುಂಟೆ ?
ದಾಸೋಹವಳಿದ ಠಾವಿನಲ್ಲಿ ದೇವರ ಕೃಪೆಯುಂಟೆ ?
ಕಾಯಕ ದಾಸೋಹವಳಿದ ಠಾವಿನಲ್ಲಿ ದೇವರಕೃಪೆಯುಂಟೇ
ಕಾಯಕ ದಾಸೋಹಗಳುಕೂಡಿದಲ್ಲಿ ಅದೇ
ಶಿವ ಜೀವೈಕ್ಯವು ; ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದಲ್ಲಿ.
ಎನ್ನುವ ಈ ವಚನ ಶಿವಶರಣೆ ಆಯ್ದಕ್ಕಿ ಲಕ್ಕಮ್ಮನ ದಾಗಿದೆ. ದಾಸೋಹದ ಪರಿಕಲ್ಪನೆಯನ್ನು ಎಳೆ ಎಳೆಯಾಗಿ, ಜನಸಾಮಾನ್ಯರಿಗೆ ತಿಳಿಯುವಂತೆ ವಚನ ರಚನೆ ಮಾಡಿದ್ದಾರೆ.ಕಾಯಕವು ಎಲ್ಲಿ ಇಲ್ಲವೋ ಅಲ್ಲಿ ಜೀವನಕ್ಕೆ ಅರ್ಥವಿಲ್ಲ ; ದಾಸೋಹ ಇಲ್ಲದಿದ್ದಲ್ಲಿ ಸೃಷ್ಟಿಕರ್ತನ ಕೃಪೆ ಸೀಗುವುದಿಲ್ಲಾ, ಕಾಯಕ-ದಾಸೋಹಗಳು ಎಲ್ಲಿ ಇರುತ್ತವೋ ಅಲ್ಲಿ ಸೃಷ್ಟಿಕರ್ತನ ಕೃಪೆ ಸದಾ ಇರುತ್ತದೆ, ನೆಮ್ಮದಿ – ಸಂತೋಷ ಹಾಗೂ ಸ್ನೇಹ ಮಯ ಸಾಮರಸ್ಯ ಜೀವನ ಸಹ ನಮ್ಮದಾಗುತ್ತದೆ ಎಂದು ವಿವರಿಸಿದ್ದಾರೆ.
ಹಾಗಾಗಿ ನಾವೆಲ್ಲರೂ ಕಾಯಕ ಮಾಡಬೇಕು. ಕಾಯಕವೆಂದರೆ ಸತ್ಯದ ನೆಲೆಗಟ್ಟಿನ ಮೇಲೆ ಶುದ್ಧವಾಗಿ , ಲೋಕ ಹಿತಕ್ಕಾಗಿ ಉತ್ಪಾದನೆಯಲ್ಲಿ ತೊಡಗುವ ಕ್ರಿಯೆ. ಮಾನವ ಕುಲಕ್ಕೆ ಹಾನಿಯುಂಟುಮಾಡುವ ಯಾವುದೇ ಕೆಲಸ ಕಾಯಕವಲ್ಲ. ನಿಜವಾದ ಕಾಯಕದಿಂದ ಬಂದಿದ್ದನ್ನು ದೇವರ ಪ್ರಸಾದವೆಂದು ತಿಳಿಯಬೇಕು. ಗಳಿಸಿದ್ದನ್ನೆಲ್ಲ ನಮಗಾಗಿ ಬಳಸದೇ ಅಥವಾ ಸಂಗ್ರಹಿಸದೇ ಸಾಮಾಜಿಕ ಜವಾಬ್ಧಾರಿಯನ್ನು ಪ್ರದರ್ಶಿಸಬೇಕು. ಎಷ್ಟು ಬೇಕೋ ಅಷ್ಟು ಐಹಿಕ ವಸ್ತುಗಳನ್ನು ಪ್ರಸಾದದ ಹಾಗೆ ಸ್ವೀಕರಿಸಬೇಕು. ಅದಕ್ಕಿಂತ ಹೆಚ್ಚಿನದು ವಿಷ ವಸ್ತುವಾಗಿ ಪರಿಣಮಿಸುತ್ತದೆ.
ಅವುಗಳ ಬಳಕೆಯಿಂದ ಭವರೋಗ ಬರುವುದು. ಆದ್ದರಿಂದ ಅವಶ್ಯಕತೆಗಿಂತ ಹೆಚ್ಚಿನ ವಸ್ತುಗಳನ್ನು ವಿಷ ವಸ್ತುವಾಗಿಸದೇ ದಾಸೋಹ ರೂಪದಲ್ಲಿ ಸಮಾಜಕ್ಕೆ ಅರ್ಪಿಸುವುದೇ ಭವ ರೋಗದಿಂದ ಮುಕ್ತವಾಗುವ ಕ್ರಮ.ಆ ದಿಸೆಯಲ್ಲಿ ಪ್ರತಿಯೊಬ್ಬರೂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುವುದು ಶ್ರೇಷ್ಠ ಸನ್ಮಾರ್ಗ ಎಂಬುದು ನಾವೆಲ್ಲರೂ ನೆನಪಿಡಬೇಕಾದದ್ದು ಅತಿ ಮುಖ್ಯ.
ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯಾ ಎಂಬ ಬಸವ ವಾಣಿಯಂತೆ ನಾವೆಲ್ಲರೂ ಹೆಜ್ಜೆ ಹಾಕುವುದು ಸೊಕ್ತ, ಕೇವಲ ತೋರಿಕೆಗಾಗಿ ದಾಸೋಹ ಸೇವೆ ಮಾಡದೇ ಅಂತರಂಗದ ಆತ್ಮ ಶಾಂತಿಗಾಗಿ ದಾಸೋಹ ಮಾಡುವ ಮೂಲಕ ಹಸಿದವರ ಹಸಿವನ್ನು ನೀಗಿಸುವ ಕೆಲಸವನ್ನು ನಿರಂತರವಾಗಿ ನಮ್ಮ ಜೀವಿತಾವಧಿಯಲ್ಲಿ ಮಾಡೋಣ.
ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಸರ್ವರ ಹಿತವನ್ನು ಬಯಸುವ ದಿಸೆಯಲ್ಲಿ ಕಾಯಕ ಮಾಡುತ್ತಾ,ಕಾಯಕದಲ್ಲಿ ಬರುವ ಸ್ವಲ್ಪ ಹಣದಲ್ಲಿ ದಾಸೋಹ ಮಾಡೋಣ, ಮಾಡುವ ಮೂಲಕ ಇತರರಿಗೆ ಅಂದರೆ ಜಗತ್ತಿಗೆ ಮಾದರಿಯಾಗೋಣ.
ಶರಣರ ದಾಸೋಹ ಕಲ್ಪನೆ
ವ್ಯಕ್ತಿ ಮತ್ತು ಸಮಾಜಕ್ಕೆ ಕಾಯಕದ ಮೂಲಕ ದಾಸೋಹಕ್ಕೆ ಬೆಸುಗೆ ಹಾಕಿದವರು ಶರಣರು. ಇಂದು ಉದ್ಯೋಗ ಅಥವಾ ವರ್ಕ್ ಎನ್ನುವುದಕ್ಕೆ ಪರ್ಯಾಯವಾಗಿ ಬಳಸಲಾಗುವ ಕಾಯಕ ಎಂಬ ಶಬ್ದಕ್ಕೆ ವಿಭಿನ್ನ ಆಯಾಮಗಳಿವೆ. ವಿಭಿನ್ನ ಅರ್ಥ ಪರಂಪರೆಗಳಿವೆ. ಉದ್ಯೋಗಕ್ಕೂ ಮತ್ತು ಶರಣರು ಬಳಸಿದ ಕಾಯಕಕ್ಕೂ ಅಗಾಧವಾದ ಅಂತರವಿದೆ.
ಉದರ ಪೋಷಣೆಗಾಗಿ, ತನ್ನ ಸಂಸಾರಕ್ಕಾಗಿ ದುಡಿಯುವುದು ಉದ್ಯೋಗವಾದರೆ, ತನ್ನ ಹಿತಾಸಕ್ತಿಯ ಜೊತೆಗೆ ಸಮಷ್ಟಿಯ ಹಿತವನ್ನು ಬಯಸುವ ದಾಸೋಹ ಮನೋಭಾವದಿಂದ ದುಡಿಯುವುದು, ಆತ್ಮೋದ್ಧಾರದ ಜೊತೆಗೆ ಸಮಾಜೋದ್ಧಾರವನ್ನು ಸಾಧಿಸುವ ಉದ್ಯೋಗವೇ ಕಾಯಕ. ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ವಲಯಗಳನ್ನು ಒಂದು ಕಟ್ಟಿನಲ್ಲಿ ಸುಭದ್ರವಾಗಿ ಕಟ್ಟಬಲ್ಲ ತತ್ವ ಇದು.
ಸತ್ಯಶುದ್ಧ ಹಾದಿಯಲ್ಲಿ ದುಡಿಯುವುದರಿಂದ ಆರಂಭವಾಗಿ ದಾಸೋಹವ ಮಾಡುವಲ್ಲಿ ಕಾಯಕದ ಅರ್ಥ ಪೂರ್ಣವಾಗುವುದು. ದಾಸೋಹದಲ್ಲಿ ಕೊಡುವವನ ಕೈ ಮೇಲಾಗಿರುವುದಿಲ್ಲ; ಪಡೆಯುವವನ ಕೈ ಕೀಳಾಗಿರುವುದಿಲ್ಲ. ಅದೊಂದು ಸಾಮಾಜಿಕ ಜವಾಬ್ದಾರಿಯ ಕಾರ್ಯ. ಹೀಗೆ ‘ಕಾಯಕ’ ಪದಕ್ಕೆ ಪರ್ಯಾಯವೇ ಇಲ್ಲವೆನಿಸುವಷ್ಟು ಅದರ ಅರ್ಥ ವಿಶಾಲವಾಗಿದೆ. “ಅಂದಂದಿನ ಕಾಯಕ ಅಂದಂದು ಮಾಡಿ ಶುದ್ಧವಾಗಿರಬೇಕು” ಎಂದ ಶರಣರು ಅಂತೆಯೇ ನಿಶ್ಚಿಂತವಾಗಿ ಬದುಕಿ ತೋರಿದರು.
ಮಾಡುವ ಕೆಲಸಕ್ಕೆ ಕರ್ಮವಾದವನ್ನು ಹಚ್ಚಿ ಶೋಷಣೆ ಮಾಡುತ್ತಿದ್ದವರಿಗೆ ಈ ನಡೆ ಅನಿರೀಕ್ಷಿತ ಆಘಾತ ತಂದಿತ್ತು. ಕಾಯಕದೊಂದಿಗೆ ಅಸಂಗ್ರಹ ಗುಣವನ್ನೂ, ದಾಸೋಹ ಭಾವವನ್ನೂ ಜೊತೆ ಮಾಡಿದ ಬಗೆ ಅಸಾಧಾರಣ ಬದಲಾವಣೆಗೆ ನಾಂದಿ ಹಾಡಿತು. ಕಾಯಕದಲ್ಲಿ ಸತ್ಯಶುದ್ಧ ಮನಸ್ಸಿನ ಜೊತೆಯಿದೆ. ಪ್ರಾಮಾಣಿಕತೆ ಮೇಳೈಸಿದೆ. ಸಂಗ್ರಹ ಮನೋಭಾವದ ವಾಸನೆಯಿಲ್ಲ. ಚಿತ್ತ ಚಾಂಚಲ್ಯಕ್ಕೆ ಜಾಗವಿಲ್ಲ.ಇಹ-ಪರಗಳ ಉನ್ನತಿಯನ್ನು ಸಾಧಿಸಬಲ್ಲ ಸಾಮರ್ಥ್ಯವಿದೆ ಮತ್ತು ಶರಣರ ಪ್ರಮುಖ ದಂಡನಾಯಕ ಬಸವಣ್ಣನವರು ಖ್ಯಾತ ಅರ್ಥಶಾಸ್ತ್ರಜ್ಞರಾಗಿ – ಸಮಾಜವಾದಿ ಚಿಂತಕರಾಗಿ ಮಾಡಿರುವ ದಾಸೋಹ ಸೇವೆ ಅಪಾರ.
ಹಾಗಾಗಿ ಅವರ ದಾಸೋಹ ವಿಚಾರದಲ್ಲಿ ಸಮಗ್ರ ಸಮಾಜದ ದೃಷ್ಟಿಕೋನವಿರುತ್ತಿತ್ತು. ಕಲ್ಯಾಣವು ಸಮೃದ್ಧಿಯ ಬೀಡಾಗಲು ಕಾರಣವಾದದ್ದು ದಾಸೋಹ ಮಾಡುವ ಕಾಯಕ ಜೀವಿಗಳೇ. ಕಾಯಕದ ತುಡಿತ ಸ್ವಾವಲಂಬಿ ಸಮಾಜ ನಿರ್ಮಾಣ. ಹೊಟ್ಟೆಪಾಡಿಗಾಗಿ ಅಥವಾ ಕುಟುಂಬದ ಪೋಷಣೆಗಾಗಿ ಕೈಗೊಳ್ಳುವ ದುಡಿಮೆ ಕಾಯಕವಾಗಲಾರದು. ಅದೇ ರೀತಿ ಕೀರ್ತಿ- ಪ್ರತಿಷ್ಠೆಗಳಿಗಾಗಿ ಮಾಡುವ ಜನಕಲ್ಯಾಣದ ದಾಸೋಹ ಕಾರ್ಯವೂ ಕಾಯಕ – ದಾಸೋಹವಾಗಲಾರದು. “ಎನ್ನೊಡಲ ಅವಸರಕ್ಕೆ ಕುದಿದೆನಾದಡೆ ತಲೆದಂಡ” ಎನ್ನುತ್ತಾರೆ ಬಸವಣ್ಣನವರು.
ಹೀಗೆ ನಮ್ಮ ಹಿತದೊಂದಿಗೆ ಸಮಷ್ಟಿಯ ಹಿತವನ್ನೂ ಕಾಯುವ ಶಕ್ತಿ ಕಾಯಕ – ದಾಸೋಹದ್ದು. ಸತ್ಯ ಶುದ್ಧದಿಂದ ಗಳಿಸಿದ ಆದಾಯದಲ್ಲಿ ಒಂದು ಪಾಲು ದಾಸೋಹ ರೂಪದಲ್ಲಿ ಸಮಾಜಕ್ಕೂ, ಇನ್ನೊಂದು ಪಾಲು ತೆರಿಗೆಯ ರೂಪದಲ್ಲಿ ರಾಜ್ಯಕ್ಕೂ ಸಂದಾಯವಾಗಬೇಕೆಂಬ ನಿಯಮ ಶರಣರದು. ಇದು ಸಮಷ್ಟಿಯ ಏಳ್ಗೆಯಲ್ಲಿ ತನ್ನ ಅಭಿವೃದ್ಧಿಯನ್ನೂ, ಸಮಷ್ಟಿಯ ಹಿತದಲ್ಲಿ ತನ್ನ ಹಿತವನ್ನೂ ಕಾಣುವ ಶರಣರ ಕಾಯಕ ದಾಸೋಹದ ನಡೆ ಎನ್ನಬಹುದು.ಆದ್ದರಿಂದ ತನು ಮನ ಬಳಲಿಸಿ ತಂದು ದಾಸೋಹವ ಮಾಡುವ ಸದ್ಭಕ್ತನ ತೋರಯ್ಯ ಎನ್ನುತ್ತಾರೆ ಬಸವಣ್ಣನವರು. ಹೀಗೆ ದಾಸೋಹ ತತ್ವವು ಶರಣರು ಜಗತ್ತಿಗೆ ನೀಡಿದ ಶ್ರೇಷ್ಠ ಬಹುದೊಡ್ಡ ಕೊಡುಗೆ.
ಕೊನೆಯದಾಗಿ
12 ನೇ ಶತಮಾನದಲ್ಲಿ ತಾಂಡವವಾಡುತ್ತಿದ್ದ ಸಾಮಾಜಿಕ ಅಸಮಾನತೆ, ಮೌಢ್ಯ, ಕಂದಾಚಾರಗಳನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಬಸವಣ್ಣನವರು ಸೇರಿದಂತೆ ಸಕಲ ಶರಣರು ಮಾಡಿದ ಕ್ರಾಂತಿ ಅದ್ಬುತ. ಪ್ರತಿಯೊಬ್ಬರು ತಾವು ದುಡಿದು ಇತರರಿಗೂ ನೀಡಬೇಕು ಎಂಬುದು ಎಲ್ಲಾ ಶಿವಶರಣರ ಕನಸಾಗಿತ್ತು. ಅಂದರಂತೆ 12 ನೇ ಶತಮಾನದಲ್ಲೇ ದಾಸೋಹದ ಪರಿಕಲ್ಪನೆಯ ಕುರಿತು ಜಾಗೃತಿ ಮೂಡಿಸಿ ನುಡಿದಂತೆ ನಡೆದ್ದರು ಜೊತೆಗೆ ಸಾಮಾಜಿಕ ಅಸಮಾನತೆ, ಜಾತೀಯತೆ ಹೋಗಲಾಡಿಸಲು ಮುಂದಾದರು.
ಬಸವಣ್ಣನವರು ಸ್ಥಾಪನೆ ಮಾಡಿದ ಅನುಭವಮಂಟಪದಲ್ಲಿ ಶೇ. 90 ಮಂದಿ ಕೆಳವರ್ಗದ ಶರಣರೇ ಇದ್ದರು. ಲಿಂಗಭೇದ,ಅಸಮಾನತೆ, ಆಸ್ತಿಯ ಅಸಮಾನಹಂಚಿಕೆಯ ವಿರುದ್ಧವೇ ಅಂದು ಬಸವಣ್ಣನವರು ಧ್ವನಿ ಎತ್ತಿ ಹೋರಾಟ ಮಾಡಿದ ಕಾರಣದಿಂದಲೇ ಇಂದು ಕೇಲವರಿಗೆ ನ್ಯಾಯ ಸೀಗುತ್ತಿದೇ ಎನ್ನುವದಂತು ಸುಳ್ಳಲ್ಲ.ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ್ದರು. ಅಂದರಂತೆ ನಡೆದು ತೋರಿಸಿದ್ದಾರೆ.
ಮಾನವರೆಲ್ಲರೂ ಸಮಾನರು ಎಂದು ಜಾಗತಿಕ ಮಟ್ಟದಲ್ಲಿ ಸಾರಿದ್ದಾರೆ. ಹೀಗಾಗಿ ಅವರ ಆದರ್ಶ ನಿಲುವು – ದಾಸೋಹ ತತ್ವಗಳು ಪಾಲನೆ ಮಾಡುವುದು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ.ಮಹಿಳೆ ಮತ್ತು ಪುರುಷರು ಎಂಬ ಭೇದ ಭಾವ ಬದಿಗೊತ್ತಿ ಪ್ರತಿಯೊಬ್ಬರು ಕಾಯಕ ಮಾಡಿ, ಜೀವನ ನಡೆಸಬೇಕು ಎನ್ನುವ ಬಸವಣ್ಣನವರ ದಾಸೋಹದ ಪರಿಕಲ್ಪನೆ ಜಗತ್ತಿಗೆ ಮಾದರಿ ಎನ್ನುವುದು ನಾವೆಲ್ಲರೂ ಯಾವತ್ತೂ – ಎಂದೆಂದಿಗೂ ಮರೆಯಬಾರದು ಶರಣ ಬಂಧುಗಳೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243