ರಾಜಕೀಯ
ಅರಗ ಜ್ಞಾನೇಂದ್ರ ಅವರೇ, ನಾಲಗೆ ಕುಲ ಹೇಳುತ್ತೆ ; ನಂದಿತಾ ಸಾವನ್ನಪ್ಪಿದಾಗ ನಿಮ್ಮದು ಕ್ರಿಮಿನಲ್ ಗಳ ಕುಲ : ಬಿ.ಕೆ ಹರಿಪ್ರಸಾದ್
ಸುದ್ದಿದಿನ ಡೆಸ್ಕ್ : ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ, ನಾಲಗೆ ಕುಲ ಹೇಳುತ್ತೆ ಎಂಬುದು ನಿಜ. ನಂದಿತಾ ಸಾವನ್ನಪ್ಪಿದಾಗ ನಿಮ್ಮದು ಕ್ರಿಮಿನಲ್ ಗಳ ಕುಲ ಎಂದು ನಿಮ್ಮ ನಾಲಗೆ ಹೇಳಿತ್ತು. ನಂದಿತಾ ಸಾವಿಗೆ ಮುಸ್ಲೀಮರು ಕಾರಣ, ಸಿಬಿಐಗೆ ಕೊಡಿ ಎಂದು ಸಮಾಜದ ಸ್ವಾಸ್ಥ್ಯ ಹಾಳು ಮಾಡಿದಿರಲ್ಲಾ, ಈಗ ನೀವೇ ಗೃಹ ಸಚಿವರು ಸಿಬಿಐ ತನಿಖೆ ಮಾಡಿಸಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ತಮ್ಮ ಅನಿಸಿಕೆಯನ್ನು ಫೋಸ್ಟ್ ಮಾಡಿರುವ ಅವರು,ಗೃಹ ಸಚಿವರು ಮತ್ತಿನಲ್ಲಿ ಮಾತನಾಡುತ್ತಾರೆ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಿಮಗೆ ಕೋಮುವಾದದ ಮತ್ತು ಅಡರಿದೆ. ನಿಮಗೆ ಅಮಾನವೀಯತೆಯ, ಕ್ರೂರತೆಯ ಮತ್ತು ತಲೆಗೇರಿದೆ. ಅದು ಡಾರ್ಕ್ ವೆಬ್ ನಲ್ಲಿ ಸಿಗೋ ಮಾಧಕ ವಸ್ತುವಿಗಿಂತಲೂ ಆರ್ ಎಸ್ ಎಸ್ ನ ಮತ್ತು ದೇಶಕ್ಕೆ ಅಪಾಯಕಾರಿ. ಈ ಆರ್ ಎಸ್ ಎಸ್ ಮತ್ತು ಹಿಂದುತ್ವದ ಮತ್ತಿನಿಂದ ಗೃಹ ಸಚಿವರು ಹೊರ ಬರದೇ ಇದ್ದರೆ ಒಬ್ಬ ಮಾನಸಿಕ ಅಸ್ವಸ್ಥ ರಾಜ್ಯದ ಗೃಹಸಚಿವನಾಗಿದ್ದಾನೆ ಎಂದೇ ನಾವಂದುಕೊಳ್ಳಬೇಕಾಗುತ್ತದೆ ಎಂದರು.
ಅಪಘಾತದಲ್ಲಿ ಗಲಾಟೆ ನಡೆದು ಕೊಲೆಯಾದ ಪ್ರಕರಣ ನಡೆದು ಕೆಲವೇ ಕ್ಷಣಗಳಲ್ಲಿ ಹೇಳಿಕೆ ನೀಡಿದ್ರಿ, ಉರ್ದು ಮಾತನಾಡದ್ದಕ್ಕೆ ಅಮಾಯಕ ದಲಿತ ಚಂದ್ರುನನ್ನ ಕೊಚ್ಚಿ ಕೊಚ್ಚಿ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಔಐಬವೀಕರಿಸಿದಾಗ ನಿಮ್ಮ ನಾಲಿಗೆ ಯಾವುದಾಗಿತ್ತು? ಬೆಂಗಳೂರು ಕಮಿಷನರ್ ಹೇಳಿಕೆ ನೀಡಿದ ನಂತರ ನನಗೆ ಬಂದ ಸೋರ್ಸು ಸುಳ್ಳು ಗಲಾಟೆ ನಡೆದು ಕೊಲೆಯಾಗಿದೆ, ಕ್ಷಮಿಸಿ ಎಂದಾಗ ಅದ್ಯಾವ ನಾಲಿಗೆ ಇತ್ತು? ಬಹುಶಃ ನಿಮ್ಮಲ್ಲಿ ಎರಡು ನಾಲಿಗೆ ಇರಬೇಕು. ಒಂದು ಕೇಶವ ಕೃಪದ್ದೋ, ಇನ್ನೊಂದು ಹಾವಿನಪುರದ್ದೋ? ಮೊದಲು ಸ್ಪಷ್ಟಪಡಿಸಿ.
ಅತ್ಯಾಚಾರವಾದಾಗ ಅವಳ್ಯಾಕೆ ರಾತ್ರಿ ಹೊರ ಬರಬೇಕಿತ್ತು ಎಂದು ಹೇಳಿಕೆ ನೀಡುವ ಗೃಹ ಸಚಿವರು ಸಮರ್ಥ ಗೃಹ ಸಚಿವರಾ ? ಅಪಘಾತಕ್ಕೆ ಒಂದು ಸಮುದಾಯವನ್ನು ಹೊಣೆ ಮಾಡಿ ಕೋಮುಗಲಭೆಗೆ ಪ್ರಚೋಧನೆ ನೀಡುವವರು ಸಮರ್ಥ ಗೃಹಸಚಿವರು ಅನ್ನಿಸಿಕೊಳ್ತಾರಾ ? ತನ್ನ ಇಲಾಖೆಯ ಸಿಬ್ಬಂದಿಗಳೇ ಸರಿ ಇಲ್ಲ ಎಂದು ಹೇಳುವ ಗೃಹ ಮಂತ್ರಿಗೆ ಮಾನಸಿಕ ಸ್ವಸ್ಥತೆ ಇದೆಯಾ ? ಎಂದು ಪ್ರಶ್ನಿಸಿದರು.
ನೀವು ಬಹಳ ಪ್ರಾಮಾಣಿಕ ಗೃಹ ಸಚಿವರು. ಅದ್ಯಾವುದೋ ಮನಿ.ಕಾಮ್ ಅಂತ ಇದೆಯಂತಲ್ಲಾ ? ಅದರಲ್ಲಿ ಯಾರು ಹೂಡಿಕೆ ಮಾಡಿದ್ದು ? ಅದು ಬೇನಾಮಿ ಹೂಡಿಕೆಯೋ ? ಅಧಿಕೃತ ಹೂಡಿಕೆಯೋ ? ಆ ಮನಿ ಡಾಟ್ ಕಾಮ್ ಎಷ್ಟು ಜನರಿಗೆ ವಂಚನೆ ಮಾಡಿದೆ ? ಜನರಿಗೆ ವಂಚಿಸಿದ ಅದ್ಯಾವುದೋ ಮನಿ ಡಾಟ್ ಕಾಮ್ ಕಚೇರಿಯಲ್ಲಿ ಗೃಹ ಸಚಿವರ ಕುಟುಂಬದ ಸದಸ್ಯರೊಬ್ಬರು ಯಾಕೆ ಚೇರ್ ಹಾಕಿ ಕುಳಿತಿದ್ದಾರೆ ?
ಪಿಎಸ್ ಐ ಎಕ್ಸಾಂನಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿದೆ. ಅದರಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಪಾಲು ಇಲ್ವಾ ? ಅರಗ ಜ್ಞಾನೇಂದ್ರರಿಗೆ ಪಿಎಸ್ ಐ ಎಕ್ಸಾಂ ಹಗರಣದ ಹಣ ಹೋಗಿಲ್ಲ ಎಂದರೆ ರಾಜೀನಾಮೆ ನೀಡಿ ತನಿಖೆಗೆ ಆದೇಶಿಸಿ. ಕ್ಲೀನ್ ಚಿಟ್ ಸಿಕ್ಕಿದ್ರೆ ಮತ್ತೆ ಗೃಹ ಸಚಿವರಾಗಲಿ.
ತೀರ್ಥಹಳ್ಳಿ ಸಮಿಪದ ಮಲ್ಲೆಸರದ ಮುರುಳಿ ಮೇಲೆ ಗಾಂಜಾ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ ನಡೆದು ತಿಂಗಳುಗಳೆ ಕಳೆದರೂ ಕೆಲ ಆರೋಪಿಗಳ ಬಂಧನ ಯಾಕಾಗಿಲ್ಲಾ? ಆಸ್ಪತ್ರೆಯ ರಿಪೋರ್ಟ್ ಬದಲಿಸಿ ಆರೋಪಿಗಳನ್ನು ರಕ್ಷಿಸಲು ನಿಮ್ಮ ಪಕ್ಷದ ನಾಯಕನೊಬ್ಬ ಪ್ರಯತ್ನಿಸಿರುವುದು ಮಣಿಪಾಲ್ ಆಸ್ಪತ್ರೆಯ ಸಿಸಿಟಿವಿ ಫೂಟೇಜ್ ತೆಗೆದರೆ ಬಹಿರಂಗವಾಗುವುದಿಲ್ಲವೇ? ನಿಮಗೆ ಯಾಕೆ ಗಾಂಜಾದವರ ಮೇಲೆ ಪ್ರೀತಿ ? ಅದಕ್ಕಾಗಿಯೇ, ನೀವು ಕುಡಿಯಲ್ಲ ನಿಜ. ಗಾಂಜಾ ಸೇವಿಸ್ತೀರಾ ಅಂತ ಮತ್ತೆ ಮತ್ತೆ ಕೇಳ್ತೀನಿ ಎಂದು ಹರಿಹಾಯ್ದರು.
ಅದ್ಯಾವುದೋ ಮನಿ ಡಾಟ್ ಕಾಮ್ ಗೂ ನಿಮ್ಮ ಫ್ಯಾಮಿಲಿಗೂ ಏನ್ ಸಂಬಂಧ ? ನಮ್ಮ ದೇಶದ ಹೆಸರನ್ನು ನೀವು ಚುನಾವಣೆಗೆ ಮಾತ್ರವಲ್ಲ ಬೇನಾಮಿ ಹಣಕ್ಕೂ ಬಳಸ್ತೀರಾ ? ಮನಿ ಡಾಟ್ ಕಾಮ್ ರಿವ್ಯೂ ಕಮೆಂಟ್ ಒಮ್ಮೆ ನೋಡಿ. ಎಷ್ಟು ಜನರಿಗೆ ಅದು ವಂಚನೆ ಮಾಡಿದೆ ಎಂದು ಗೊತ್ತಾಗುತ್ತೆ. ಅಂತಹ ವಂಚಕ ಕಂಪನಿಯಲ್ಲಿ ಗೃಹ ಸಚಿವರ ಕುಟುಂಬ ಸದಸ್ಯರು ಕುರ್ಚಿ ಹಾಕಿ ಕೂತಿದ್ದು ಯಾಕೆ ?
ಭಾರೀ ಪ್ರಾಮಾಣಿಕ ಗೃಹ ಸಚಿವರು ನೀವು. ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿಯ ಸಚಿವರೇ ಹೇಳಿದರೂ ಇನ್ನೂ ಯಾವ ನೈತಿಕತೆಯಲ್ಲಿ ಸಚಿವರಾಗಿ ಮುಂದುವರೆದಿದ್ದೀರಿ ? ಪೊಲೀಸ್ ಪರೀಕ್ಷೆಯಲ್ಲಿ ಅಕ್ರಮ ನಡೆದೇ ಇಲ್ಲ ಎಂದು ಸದನದಲ್ಲಿ ಗೃಹ ಸಚಿವರಾಗಿ ಹೇಳಿಕೆ ಕೊಡ್ತಿರಿ. ಹೇಳಿಕೆ ಬಳಿಕ ಪೊಲೀಸರು ಪರೀಕ್ಷಾ ಅಕ್ರಮದ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸುತ್ತಾರೆ. ಹಾಗಾದರೆ ಗೃಹ ಸಚಿವರಾಗಿ ಯಾರನ್ನು ರಕ್ಷಿಸಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೀರಿ ? ಇದು ಬಹುಕೋಟಿ ಹಗರಣ ಅಲ್ವಾ ?
ನಿಮ್ಮ ಸ್ಥಾನದ ಮೇಲೆ ಗೌರವ ಇದ್ದರೇ ರಾಜೀನಾಮೆ ನೀಡಿ ಕುರ್ಚಿ ಖಾಲಿ ಮಾಡಿ. ನಿಮಿಗೆ ಆ ಸ್ಥಾನದ ಘನತೆಯೂ ಅರಿವೂ ಇಲ್ಲ, ಗೌರವವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243