ಭಾವ ಭೈರಾಗಿ

ಪರ್ಯಾಯಗಳನ್ನು ಕಾಣಿಸುವ ‘ಓದು’

Published

on

  • ಡಾ.ಎನ್.ಕೆ.ಪದ್ಮನಾಭ

ಗಾಗಲೇ ಆಗಿಹೋದದ್ದರೊಳಗೆ ಗಟ್ಟಿಯಾದದ್ದನ್ನು ಹಿಡಿದಿಟ್ಟು ಇಂದು ಮತ್ತು ನಾಳೆಗಳ ಸಮೃದ್ಧಿಗಾಗಿ ವಿನಿಯೋಗಿಸಿ ದಾಟಿಸುವ ಕಾಲಾಂತರದ ಸಾಂಸ್ಕೃತಿಕ ಜವಾಬ್ದಾರಿ ವಿಮರ್ಶೆಯದ್ದು. ಟೊಳ್ಳುತನದೊಂದಿಗಿನ ಎಲ್ಲ ಬಗೆಯ ಅತಿರೇಕಗಳೊಂದಿಗೆ ಮನುಷ್ಯ ಮುಖಾಮುಖಿಯಾಗಲು ಬೇಕಾಗುವ ಪ್ರಜ್ಞೆಯ ಮಾದರಿ ರೂಪಿಸಿಕೊಳ್ಳುವುದಕ್ಕೆ ಅದು ನೆರವಾಗುತ್ತಲೇ ಇರುತ್ತದೆ. ನೆರವಾಗುತ್ತಲಿರಲೇಬೇಕು.

ಹಾಗೆ ಸಹಾಯಕವಾಗಿ ನಿಲ್ಲುವುದರಲ್ಲಿಯೇ ಅದರ ಹೆಗ್ಗಳಿಕೆ ಇದೆ. ಅದರಲ್ಲೂ ಮನುಷ್ಯ ಅಹಂನ ಕೋಟೆ ಸೃಷ್ಟಿವಿರೋಧಿ ಪ್ರತಿಗಾಮಿ ಶಕ್ತಿಯ ಬೃಹತ್ ಸ್ವರೂಪ ಪಡೆದುಕೊಂಡಾಗ ವಿಮರ್ಶಾತ್ಮಕ ದೃಷ್ಟಿಕೋನದ ಪಾತ್ರ ವೈವಿಧ್ಯಮಯವಾಗುತ್ತದೆ. ವ್ಯಕ್ತಿಗತ ಆತ್ಮೋದ್ಧಾರದ ಕಡೆಗೆ ಚಲಿಸುವ ಮತ್ತು ಆ ಮೂಲಕ ನಿಜದ ಲೋಕಕಲ್ಯಾಣ ಪರಿಕಲ್ಪನೆಯನ್ನು ಪ್ರತಿಯೊಂದು ಕಾಲಘಟ್ಟದಲ್ಲೂ ಜೀವಂತವಾಗಿರಿಸುವ ವೈವಿಧ್ಯಮಯ ಪಾತ್ರ ವಿಮರ್ಶೆಯಿಂದ ನಿರ್ವಹಿಸಲ್ಪಡುತ್ತದೆ.

ಇಂಥದ್ದೊಂದು ಪಾತ್ರಸಾಧ್ಯತೆಯ ಸಮಕಾಲೀನ ಸಾಕ್ಷಿಯಾಗಿ ‘ಬೊಗಸೆಯಷ್ಟು ಓದು’ ಕೃತಿ ಮುಖ್ಯವೆನ್ನಿಸುತ್ತದೆ. ಇದನ್ನು ವಿಮರ್ಶಾ ಕೃತಿ ಎಂದು ಗುರುತಿಸುವುದಕ್ಕಿಂತಲೂ ಎಲ್ಲಾ ಕಾಲಗಳ ಸಾಮಾಜಿಕ ವ್ಯವಸ್ಥೆಯನ್ನು ಚಲನಶೀಲಗೊಳಿಸುವುದಕ್ಕೆ ಬೇಕಾಗುವ ಸಕಾಲಿಕ ಒತ್ತಡ ರೂಪಿಸುವಂಥ ಅಕ್ಷರ ರೂಪಕಾಕೃತಿಯಾಗಿ ನೋಡಬೇಕು. ಇಡೀ ಕೃತಿಯೊಳಗೆ ಸಾಹಿತ್ಯಕ ಸೃಜನಶೀಲತೆ ನಿಕಷಕ್ಕೊಳಪಟ್ಟಿದ್ದರೂ ಮನುಷ್ಯನನ್ನು ಹೊಸತಿನೆಡೆಗೆ ಕರೆದೊಯ್ಯುವ ಒತ್ತಾಸೆಯೇ ಕೇಂದ್ರ ಆಶಯವಾಗಿದೆ.

ಸದ್ಯವನ್ನು ಗೆಲ್ಲುವ ಹಠಕ್ಕಿಂತಲೂ ಅತ್ಯಂತ ಸಹಜವಾಗಿ ಕಾಲವನ್ನು ದಾಟಿಕೊಳ್ಳುವ ಸಂಯಮದ ಕಡೆಗೆ ಹೊರಳಿಸುವ ಅನಿವಾರ್ಯತೆಯನ್ನು ಮನಗಾಣಿಸುವುದರೆಡೆಗೇ ಈ ಆಶಯ ಕೇಂದ್ರೀಕೃತವಾಗಿದೆ. ನಾಳೆಗಳ ಉಜ್ವಲತೆಯು ಮನುಷ್ಯಸಹಜ ವಿಕೃತಿ ಮತ್ತು ಉನ್ಮಾದಗಳಿಂದ ಸಾಧಿತವಾಗುವಂಥದ್ದಲ್ಲ. ಬದಲಾಗಿ ಅಂಥ ಉಜ್ವಲ ಭವಿಷ್ಯ ಇಂದಿನ ಬದುಕಿನ ಸಹಜತೆಯೊಂದಿಗೇ ತಳುಕುಹಾಕಿಕೊಂಡಿದೆ ಎನ್ನುವುದನ್ನು ಅತ್ಯಂತ ಸರಳವಾಗಿ ಒಪ್ಪಿಸುವ ಕ್ರಮವನ್ನು ಇಲ್ಲಿ ಕಾಣಬಹುದು. ಈ ಆಲೋಚನಾಕ್ರಮದೊಂದಿಗೇ ಡಾ.ರಾಜಶೇಖರ ಹಳೆಮನೆ ಅವರು ಸಾಹಿತ್ಯಕ ಕೃತಿಗಳನ್ನು ಚರ್ಚೆಗೆ ಒಳಪಡಿಸಿದ್ದಾರೆ.

ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ಕೂಪಮಂಡೂಕ ಸ್ಥಿತಿಯನ್ನು ಧಿಕ್ಕರಿಸಿ ಹೊಸತಾದ ಪರ್ಯಾಯಗಳ ಹಾದಿ ಕಾಣಿಸುವ ಲೇಖಕರ ಒಳನೋಟಗಳು ಕೃತಿಯ ಅಂದವನ್ನು ಹೆಚ್ಚಿಸಿವೆ. ಈ ಅಂದ-ಚಂದಕ್ಕೆ ವಿಮರ್ಶಾ ಪರಿಭಾಷೆಯ ವೈಭವೀಕೃತ ಸಿಂಗಾರದ ಹಂಗು ಇಲ್ಲ. ಲೇಖಕರಿಗೆ ಅದು ಮುಖ್ಯವೂ ಅಲ್ಲ. ಅದನ್ನು ಮುಖ್ಯವಾಗಿಸಿಕೊಂಡಿದ್ದಿದ್ದರೆ ಈ ಕೃತಿಯ ಆವರಣ ಭಿನ್ನವಾಗುತ್ತಿರಲಿಲ್ಲ. ಇಡೀ ಕೃತಿಯನ್ನು ಚಲನಶೀಲ ಅಕ್ಷರ ರೂಪಕಾಕೃತಿಯನ್ನಾಗಿ ನೋಡುವಂತೆ ಇಲ್ಲಿಯ ವಿವಿಧ ಅಧ್ಯಾಯಗಳಲ್ಲಿ ಅಡಕವಾಗಿರುವ ವಿವರಣಾತ್ಮಕ ವಿಶ್ಲೇಷಣೆ ಸಹಜ ಒತ್ತಡವನ್ನುಂಟುಮಾಡುತ್ತದೆ.

ವಿವರಣಾತ್ಮಕ ಕ್ರಮದೊಂದಿಗೆ ಕೃತಿಯೊಂದರ ಒಟ್ಟು ಸ್ವರೂಪವನ್ನು ಪರಿಚಯಿಸುವುದರ ಜೊತೆಜೊತೆಗೇ ಒಳಿತು-ಕೆಡಕುಗಳನ್ನು ಪರಾಮರ್ಶಿಸುವ ವೈಯಕ್ತಿಕ ವಿವೇಚನೆಯನ್ನು ಆಯ್ದುಕೊಳ್ಳುವ ಪ್ರೇರಣೆಯಾಗಿ ಮಾರ್ಪಡುವುದರಲ್ಲಿ ಇಲ್ಲಿಯ ವಿಮರ್ಶೆಯ ವಿಶೇಷತೆ ಇದೆ. ವಿವಿಧ ಕಾಲಘಟ್ಟಗಳ ಬರಹಗಾರರು ಮತ್ತು ಅವರ ಸಾಹಿತ್ಯಕ ಕಾಣ್ಕೆಗಳ ಉದ್ದೇಶಪೂರ್ವಕ ಆಯ್ಕೆ ರಾಜಶೇಖರ ಹಳೆಮನೆ ಅವರ ಆದ್ಯತೆಯನ್ನು ಸ್ಪಷ್ಟಪಡಿಸುತ್ತದೆ.

ಹೊಸದನ್ನು ನಿರಾಕರಿಸುವ ಜಡ್ಡುಗಟ್ಟಿದ ಮನಸ್ಥಿತಿಯು ಎಲ್ಲ ಕಾಲಕ್ಕೆದುರಾಗುವ ಸವಾಲು. ಹಳೆಮನೆ ಅವರಿಗೆ ಈ ಕುರಿತಾದ ಸ್ಪಷ್ಟ ಅರಿವಿದೆ. ಹಾಗಾಗಿಯೇ ಚರ್ಚೆಯ ಉದ್ದೇಶಕ್ಕಾಗಿ ಅವರು ಅತ್ಯಂತ ಎಚ್ಚರದಲ್ಲಿ ಕೃತಿಗಳನ್ನು ಆಯ್ದುಕೊಳ್ಳುತ್ತಾರೆ. ಸಾಹಿತ್ಯದ ಮೂಲಕ ಸಾಮಾಜಿಕ ಸ್ಥಿತ್ಯಂತರದ ಉದಾತ್ತ ಆಶಯವನ್ನು ಪ್ರತಿಪಾದಿಸಿದ ವಿವಿಧ ಕಾಲಗಳ ಬರಹಗಾರರ ಕಲಾಕೃತಿಗಳ ಸಹಾಯದೊಂದಿಗೆ ಹೊಸತಿನೊಂದಿಗೆ ನಿಲ್ಲುವ ಚಿಂತನೆಯನ್ನು ಪ್ರಸ್ತುತಪಡಿಸುತ್ತಾರೆ.

ಕಥೆ, ಕವಿತೆ, ಕಾದಂಬರಿಗಳ ಓದು ಕಾಲಕಳೆಯುವುದಕ್ಕಷ್ಟೇ ಅಲ್ಲದೇ ಅದರಾಚೆಗೆ ಮತ್ತಿನ್ನೇನನ್ನೋ ಗೊತ್ತುಮಾಡಿಕೊಂಡು ಅರಿವಿನ ಎತ್ತರ ಪಡೆಯುವುದಕ್ಕೆ ಎಂಬ ಹೊಳಹು ಹೊಳೆಸುವುದಕ್ಕೇ ಅವರು ವಿಮರ್ಶೆಯನ್ನು ಬಳಸಿಕೊಳ್ಳುತ್ತಾರೆ. ಇಡೀ ಕೃತಿಯು ಈ ಅಂಶವನ್ನು ಆಪ್ತವಾಗಿ ಮನಗಾಣಿಸುತ್ತದೆ. ಪಂಪ, ತದನಂತರದ ವಚನಕಾರರು, ಆಧುನಿಕ ಕಾಲದ ಕೃತಿಕಾರರನ್ನು ರಾಜಶೇಖರ ಅವರು ವಿಮರ್ಶೆಗೊಳಪಡಿಸುವಾಗ ಓದುಗರನ್ನು ಅರಿವಿನ ಎತ್ತರದ ಗಮ್ಯಕ್ಕೆ ತಲುಪಿಸುವ ಅಪೇಕ್ಷೆಯನ್ನೇ ಕೇಂದ್ರವಾಗಿಸಿಕೊಳ್ಳುತ್ತಾರೆ.

ನಿರಂಜನ, ಬಸವರಾಜ ಕಟ್ಟೀಮನಿ, ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ, ಲಂಕೇಶ, ಮೂಡ್ನಕೂಡು ಚಿನ್ನಸ್ವಾಮಿ ಇವೆರೆಲ್ಲರ ಸಾಹಿತ್ಯಕ ಕಾಣ್ಕೆಗಳನ್ನು ವಿಶ್ಲೇಷಿಸುವಾಗ ಇದೇ ಕೇಂದ್ರಪ್ರಜ್ಞೆ ಮಹತ್ವದ ಪಾತ್ರನಿರ್ವಹಿಸಿದೆ. ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಚದುರಂಗ, ಅನಂತಮೂರ್ತಿ, ತೇಜಸ್ವಿ, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ ಮತ್ತಿತರ ಬರಹಗಾರರ ಮೌಲ್ಯವನ್ನು ವರ್ತಮಾನದ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಲೇ ಸಾಹಿತ್ಯದ ಕಾಣ್ಕೆಯ ಪರಂಪರೆಯ ಹೆಜ್ಜೆಗಳು ಭವಿಷ್ಯದಲ್ಲಿ ಯಾವ ರೀತಿಯವಾಗಬೇಕು ಎಂಬುದನ್ನು ಅಧಿಕೃತ ಧ್ವನಿಯಲ್ಲಿ ಪ್ರತಿಪಾದಿಸುವಲ್ಲಿ ರಾಜಶೇಖರ ಯಶಸ್ವಿಯಾಗಿದ್ದಾರೆ.

ವಿಮರ್ಶೆಯ ಕುರಿತಾದ ತಪ್ಪುಕಲ್ಪನೆಯನ್ನು ಹೋಗಲಾಡಿಸುವಲ್ಲಿಯೂ ಈ ಕೃತಿ ನಮಗೆ ನೆರವಾಗುತ್ತದೆ. ಹಿಂದಿನದ್ದನ್ನು ಅತಿಭಾವುಕತೆಯ ನೆಲೆಯಲ್ಲಿ ನೆನಪಿಸಿಕೊಂಡು ಸದ್ಯವನ್ನು ನಿರಾಕರಿಸುವ ಮನಸ್ಥಿತಿಯೊಂದಿಗಿನ ವಿಮರ್ಶೆಯಿಂದ ಪ್ರಯೋಜನವಿಲ್ಲ. ನಾವು ವರ್ತಮಾನದಲ್ಲಿ ಸಂಕುಚಿತತೆಯ ಮಿತಿಯನ್ನು ಮೀರುವುದಕ್ಕೆ ಇಂಥ ಮನಸ್ಥಿತಿಯೊಂದಿಗಿನ ವಿಮರ್ಶೆ ನೆರವಾಗುವುದಿಲ್ಲ. ಹಿಂದಿನದ್ದೆಲ್ಲವೂ ಶ್ರೇಷ್ಠ ಎಂಬ ಅತಿಭಾವುಕ ವ್ಯಸನ ಉಂಟುಮಾಡುವ ಅಪಾಯದಿಂದ ನಮ್ಮನ್ನು ಪಾರುಮಾಡುವುದೇ ನಿಜವಾದ ವಿಮರ್ಶೆ.

ಅತಿಭಾವುಕ ವ್ಯಸನದೊಂದಿಗಿನ ನೋಟ ನಮ್ಮನ್ನು ಮತ್ತಷ್ಟು ಕುಬ್ಜರನ್ನಾಗಿಸುತ್ತದೆ. ಹಿಂದಿನದ್ದರಲ್ಲಿ ನಮ್ಮನ್ನು ಎಚ್ಚರಿಸುವ ಮಾದರಿಗಳೂ ಇವೆ, ಅವುಗಳೊಂದಿಗೆ ಜೊಳ್ಳೂ ಇದೆ ಎಂಬುದನ್ನು ಅತ್ಯಂತ ಸಂಯಮಪೂರ್ಣವಾಗಿ ನಿರೂಪಿಸುವ ಧಾಟಿಯೊಂದಿಗಿನ ಚಿಂತನೆಯು ವಿಮರ್ಶೆಯ ಚಲನಶೀಲತೆಗೆ ಹೊಸ ಆಯಾಮ ನೀಡುತ್ತದೆ.
ಮಹತ್ವದ್ದೇನನ್ನೋ ಕಟ್ಟಿಕೊಟ್ಟಿದ್ದಾರೆ ಎಂಬ ಭ್ರಮೆಯನ್ನು ಸೃಷ್ಟಿಸುವ ಬರಹಗಾರರೂ ಈ ಹಿಂದೆ ಆಗಿಹೋಗಿರುತ್ತಾರೆ. ಅವರೂ ಚರ್ಚೆಯ ವಸ್ತುವಾಗಿರುತ್ತಾರೆ.

ಅಷ್ಟು ಮಾತ್ರಕ್ಕೆ ಭವಿಷ್ಯದ ಚಲನಶೀಲ ಪರಂಪರೆಗೆ ಬೇಕಾಗುವಂಥ ಬರಹಗಾರರಾಗುವುದಿಲ್ಲ. ಆ ಬರಹಗಾರರು ಕಟ್ಟಿಕೊಟ್ಟ ಕೃತಿಗಳ ಮಹತ್ವ ಯಾವ ಕಾರಣಕ್ಕೆ ಪರಿಗಣನೆಗೆ ಒಳಗಾಗಬೇಕು ಎನ್ನುವ ನೆಲೆಯಲ್ಲಿ ವಿಮರ್ಶೆಯು ಸಂವಾದವನ್ನು ರೂಪಿಸಬೇಕಾಗುತ್ತದೆ. ಈ ಸಂವಾದದ ಸಹಾಯದಿಂದಲೇ ವಿಮರ್ಶೆಯು ಚಲನಶೀಲತೆಯ ಪರವಾಗಿ ನಿಲ್ಲಬೇಕಾಗುತ್ತದೆ. ಹಳತಾದುದೆಲ್ಲವೂ ಶ್ರೇಷ್ಠ ಎಂಬ ಮೂಢನಂಬಿಕೆಯ ಬದಲಾಗಿ ಹಳತಿನೊಳಗೆ ಹೊಸದನ್ನು ಶೋಧಿಸಿ ಅದಷ್ಟೇ ಹೊಸಕಾಲದ ಚಲನೆಗೆ ಬೇಕಾಗುವ ಅಂಶ ಎನ್ನುವ ಸ್ಪಷ್ಟತೆ ಕಂಡುಕೊಳ್ಳುವುದಕ್ಕೂ ವಿಮರ್ಶೆ ಅನುವುಮಾಡಿಕೊಡುತ್ತದೆ.

ಈ ಬಗೆಯ ವಿಮರ್ಶೆ ಸಾಮಾನ್ಯ ಓದುಗರೊಳಗೂ ಹೊಸ ಪ್ರಜ್ಞೆ ಹುಟ್ಟುಹಾಕುತ್ತದೆ. ಸಾಹಿತ್ಯವನ್ನು ಪ್ರತಿನಿಧಿಸುವ ಸಮಕಾಲೀನ ಬರಹಗಾರರು ಹೊಸದಾಗಿ ಯೋಚಿಸುವುದಕ್ಕೆ ಪ್ರೇರಣೆಯಾಗಿ ನಿಲ್ಲುತ್ತದೆ. ಸಾಹಿತ್ಯ ವಿದ್ಯಾರ್ಥಿಗಳಷ್ಟೇ ಅಲ್ಲದೇ, ವಿವಿಧ ಕ್ಷೇತ್ರಗಳೊಂದಿಗೆ ಗುರುತಿಸಿಕೊಂಡವರೂ ಪರ್ಯಾಯಗಳ ಬಗ್ಗೆ ಮುಕ್ತ ಮನಸ್ಸು ಹೊಂದುವುದಕ್ಕೆ ಸಹಾಯಕವಾಗುತ್ತದೆ. ರಾಜಶೇಖರ ಹಳೆಮನೆ ಅವರು ತಮ್ಮ ಕೃತಿಯ ಮೂಲಕ ವಿಮರ್ಶೆಗೆ ಈ ಸ್ವರೂಪವೂ ಇದೆ ಎಂಬುದನ್ನು ನೆನಪಿಸಿದ್ದಾರೆ.

ವಿಮರ್ಶಕ ವರ್ತಮಾನದಲ್ಲಿ ಹೇಳಲೇಬೇಕಾದದ್ದಕ್ಕೆ ಈ ಕೃತಿಯ ಶೀರ್ಷಿಕೆಯು ಪೂರಕ ಆವರಣವನ್ನು ಒದಗಿಸಿಕೊಟ್ಟಿದೆ. ತಂತ್ರಜ್ಞಾನದ ಅತಿಯಾದ ಅವಲಂಬನೆಯು ಅತಿಯಾಸೆ, ದುರಾಸೆ, ಅಗತ್ಯಕ್ಕಿಂತ ಹೆಚ್ಚಿನದ್ದನ್ನು ನಿರೀಕ್ಷಿಸುವಿಕೆ, ಸ್ವಾರ್ಥಭಾವವನ್ನು ಸ್ಥಾಯಿಗೊಳಿಸುವ ವಿಚಿತ್ರ ಮನಃಸ್ಥಿತಿಗಳನ್ನು ಸೃಷ್ಟಿಸಿದೆ. ತಾಂತ್ರಿಕತೆಯ ಜೊತೆಗಿನ ವೇಗವನ್ನೇ ನೆಚ್ಚಿಕೊಂಡು ಮುಂದಡಿಯಿಡಬೇಕಾದ ಅನಿವಾರ್ಯತೆಗೆ ಸಿಲುಕಿರುವ ಹೊಸ ಪೀಳಿಗೆಯವರು ಓದಿನ ವ್ಯಾಪ್ತಿ ಪ್ರದೇಶದಿಂದ ಹೊರಗುಳಿದುಬಿಟ್ಟಿದ್ದಾರೆ.

ಅವರನ್ನು ಓದಿನ ವ್ಯಾಪ್ತಿಗೆ ಮತ್ತೆ ಮರಳಿಸುವ ಅಪ್ಪಟ ಕಾಳಜಿಯೊಂದಿಗೆ ಬರೆಯಲ್ಪಟ್ಟ ಈ ಬರಹಗಳಿಗೆ ‘ಬೊಗಸೆಯಷ್ಟು ಓದು’ ಒಟ್ಟಂದವನ್ನು ನೀಡುತ್ತದೆ. ಅತಿಯಾಸೆಯ ಭರಾಟೆಯಲ್ಲಿ ದಾರಿ ತಪ್ಪುವ ಮಕ್ಕಳನ್ನು ಅತ್ಯಂತ ಕಕ್ಕುಲಾತಿಯಿಂದ ಸುಧಾರಿಸುವ ಅಮ್ಮನ ಅಂತಃಕರಣದ ದೃಷ್ಟಿಕೋನ ಈ ಕೃತಿಯೊಳಗೆ ಅಂತಸ್ಥವಾಗಿರುವುದನ್ನು ಶೀರ್ಷಿಕೆ ಧ್ವನಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಿನದ್ದನ್ನು ಅಪೇಕ್ಷಿಸಿ ಸ್ವಲ್ಪವೇ ಪಡೆಯುವುದಕ್ಕಿಂತ, ಸ್ವಲ್ಪದ್ದರಲ್ಲಿಯೇ ಹೆಚ್ಚಿನದ್ದನ್ನು ಪಡೆದುಕೊಳ್ಳುವ ಆಯಾಮ ವಿಶೇಷವಾದದ್ದು.

ಈ ದೃಷ್ಟಿಯಿಂದ ಕೃತಿಯು ಬೊಗಸೆಯಷ್ಟು ಓದನ್ನು ಸಾಧ್ಯವಾಗಿಸಿಕೊಳ್ಳುತ್ತಾ ಹೆಚ್ಚಿನದ್ದನ್ನು ಪಡೆಯಲು ಪೂರಕವಾಗುತ್ತದೆ. ನೀರಿನ ದಾಹವಾದಾಗ ಬೊಗಸೆಯಷ್ಟು ನೀರು ಕೊಡುವ ಖುಷಿ ಮತ್ತು ಕಸುವು ಹೊಸ ಉತ್ಸಾಹ ಮೂಡಿಸುತ್ತದೆ. ತಂತ್ರಜ್ಞಾನ ಸೃಷ್ಟಿಸುವ ಶೂನ್ಯದ ಮರುಭೂಮಿಯ ಮಧ್ಯೆ ಸಕಾರಾತ್ಮಕ ಪರಂಪರೆ ನೆನಪಿಸುವ ಕೃತಿಯೊಂದರ ಓದಿನ ಅವಕಾಶ ಅಂಥದ್ದೇ ಉತ್ಸಾಹ ನೆಲೆಗೊಳಿಸುತ್ತದೆ.

ಈ ಅವಕಾಶವನ್ನು ಹಳೆಮನೆ ಅವರು ತಮ್ಮ ಕೃತಿಯ ಮೂಲಕ ಒದಗಿಸಿದ್ದಾರೆ. ಸಾಹಿತ್ಯ ವಿಮರ್ಶೆಯು ತನ್ನೊಳಗಿಟ್ಟುಕೊಂಡಿರುವ ಅಗಾಧತೆಯ ಮಗ್ಗಲನ್ನು ಪರಿಚಯಿಸುವ ಹಾಗೆಯೇ ‘ಬೊಗಸೆಯಷ್ಟು ಓದು’ ಇದೆ. ಓದು ಕೇವಲ ಯಾಂತ್ರಿಕವಲ್ಲ. ಅದು ವೈಚಾರಿಕವೂ ಹೌದು. ಬೌದ್ಧಿಕ ಮುನ್ನಡೆ ಸಾಧಿಸುವ ಮಾರ್ಗವೂ ಹೌದು. ಈ ಮಾರ್ಗದ ಬೆಂಬಲದೊಂದಿಗೆ ಸ್ವ-ಅರಿವು ಕಂಡುಕೊಳ್ಳುವ ಮತ್ತು ಆ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂಥ ಸಾಧ್ಯತೆಯ ಜೊತೆಗೇ ಈ ಕೃತಿಯ ಅರ್ಥಧ್ವನಿ ಇದೆ.

ಸುದ್ದಿದಿನ.ಕಾಂ | ವಾಟ್ಸಾಪ್ | 9980346243

Trending

Exit mobile version