ದಿನದ ಸುದ್ದಿ
ಬಜೆಟ್ ನಲ್ಲಿ ಘೋಷಿಸಲಾಗಿರುವ ಯೋಜನೆಗಳು ಈ ತಿಂಗಳಾಂತ್ಯದಲ್ಲಿಯೇ ಅನುಷ್ಠಾನ : ಸಿಎಂ ಬಸವರಾಜ ಬೊಮ್ಮಾಯಿ
ಸುದ್ದಿದಿನ,ಹರಪನಹಳ್ಳಿ(ವಿಜಯನಗರ): ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಆ ಪ್ರಗತಿಯ ರಿಪೋರ್ಟ್ ಕಾರ್ಡ್ ನೊಂದಿಗೆ ಜನರ ಮುಂದೆ ಹೋಗಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಎಚ್.ಪಿ.ಎಸ್ ಕಾಲೇಜು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವ ಹಾಗೂ ಶಾಸಕ ಕರುಣಾಕರರೆಡ್ಡಿ ಅವರ ಷಷ್ಠ್ಯಾಬ್ದಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಜೆಟ್ ನಲ್ಲಿ ಘೋಷಿಸಲಾಗಿರುವ ಯೋಜನೆಗಳನ್ನು ಈ ತಿಂಗಳಾಂತ್ಯದಲ್ಲಿಯೇ ಅನುಷ್ಠಾನಕ್ಕೆ ಆದೇಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಭಿವೃದ್ಧಿ ಸುತ್ತಲೂ ಜನರಿರಬಾರದು;ಜನರ ಸುತ್ತಲೂ ಅಭಿವೃದ್ಧಿ ಇರಬೇಕು ಎನ್ನುವ ಉದ್ದೇಶದಿಂದ ನಮ್ಮ ಸರಕಾರ ಕಾರ್ಯನಿರ್ವಹಿಸುತ್ತಿದೆ. ಬಜೆಟ್ ನಲ್ಲಿನ ಯೋಜನೆಗಳ ಅನುಷ್ಠಾನದ ಪ್ರಗತಿಯ ವರದಿಯೊಂದಿಗೆ ಜನರ ಮುಂದೆ ಹೋಗಲಾಗುವುದು.2023ರಲ್ಲಿಯೂ ಜನರು ನಮಗೆ ಆಶೀರ್ವದಿಸಲಿದ್ದಾರೆ ಮತ್ತು ನಾವೇ ಅಧಿಕಾರಕ್ಕೆ ಬಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳಲಿದ್ದೇವೆ ಎಂಬ ಅದಮ್ಯ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3ಸಾವಿರ ಕೋಟಿ ರೂ: ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಸರಕಾರ 3ಸಾವಿರ ಕೋಟಿ ರೂ.ಗಳ ಅನುದಾನ ನೀಡುವುದರ ಮೂಲಕ ಈ ಪ್ರದೇಶದ ಮೇಲಿನ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ತಿಂಗಳೊಳಗೆ 3ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗುವುದು ಮತ್ತು ವರ್ಷಾಂತ್ಯಕ್ಕೆ ಖರ್ಚು ಮಾಡಲಾಗುವುದು ಎಂದರು.
ಈ ಹಿಂದಿನ ಸರಕಾರ 1500 ಕೋಟಿ ರೂ. ನೀಡುತ್ತಿತ್ತು;ಅದು ಕೂಡ ಖರ್ಚಾಗುತ್ತಿರಲಿಲ್ಲ. ಅದೆಲ್ಲದಕ್ಕೂ ನಮ್ಮ ಸರಕಾರ ಇತಿಶ್ರೀ ಹಾಡಿದೆ ಎಂದರು.
ಚಿಗಟೇರಿ ಸೇರಿದಂತೆ ಹರಪನಹಳ್ಳಿ ತಾಲೂಕಿನ 107 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ನಾನೇ ಬಂದು ಭೂಮಿಪೂಜೆ ನೆರವೇರಿಸುವೆ ಎಂದರು.
ಕರುಣಾಕರ ರೆಡ್ಡಿ ಅವರದ್ದು ವಿಶಿಷ್ಟ ವ್ಯಕ್ತಿತ್ವ
ಹರಪನಹಳ್ಳಿ ಶಾಸಕ ಕರುಣಾಕರರೆಡ್ಡಿ ಅವರದ್ದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಎಂತ ಸವಾಲುಗಳು ಸಮಸ್ಯೆಗಳೇ ಎದುರಾದರೂ ಸಂಯಮ ಕಳೆದುಕೊಳ್ಳದೇ ಸ್ಥಿತಪ್ರಜ್ಞರಾಗಿ ಶಾಂತರೀತಿಯಿಂದ ಸಮಸ್ಯೆಗಳನ್ನು ಬಗೆಹರಿಸುವಂತ ವ್ಯಕ್ತಿತ್ವ ಎಂದರು.
ಬಳ್ಳಾರಿ ಜಿಲ್ಲೆಯ ಇತಿಹಾಸವನ್ನು ಮೆಲುಕುಹಾಕಿ ನೋಡಿದರೇ ಕೆಲವೇ ಕೆಲವು ಶಕ್ತಿಗಳ ಕೈಯಲ್ಲಿದ್ದ ಬಳ್ಳಾರಿ ಪ್ರಾಂತ್ಯದಲ್ಲಿನ ಶಕ್ತಿಗಳ ವಿರುದ್ಧ ಧ್ವನಿ ಎತ್ತಿ ನಮ್ಮಪಕ್ಷ ಭದ್ರವಾಗಿ ನೆಲೆಯೂರಿಸಿದ ಕೀರ್ತಿ ಜನಾರ್ಧನ ರೆಡ್ಡಿ,ಕರುಣಾಕರರೆಡ್ಡಿ, ಬಿ.ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರಿಗೆ ಸಲ್ಲುತ್ತದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243