ದಿನದ ಸುದ್ದಿ
ಪಳವಳ್ಳಿ ಬಳಿ ಬಸ್ ದುರಂತ ; ತಪ್ಪಿತಸ್ಥರ ವಿರುದ್ಧ ಕ್ರಮ: ಸಾರಿಗೆ ಸಚಿವ ಶ್ರೀರಾಮುಲು
ಸುದ್ದಿದಿನ,ಬಳ್ಳಾರಿ : ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಕೆರೆಕಟ್ಟಿ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಖಾಸಗಿ ಬಸ್ ದುರಂತ ದುರದೃಷ್ಟಕರ. ಘಟನಾ ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಳುಹಿಸಿಕೊಡಲಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಖಾಸಗಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಳ್ಳಾರಿಯ ಗೃಹಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಘಟನೆಯಲ್ಲಿ ಸುಮಾರು 8 ಜನರ ಸಾವಿಗೀಡಾಗಿದ್ದು, 25 ಜನರಿಗೆ ಗಾಯವಾಗಿದೆ ಎಂದು ಹೇಳಿದರು. ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಲು ತಿಳಿಸಲಾಗಿದ್ದು, ಬಸ್ಗೆ ಪರ್ಮಿಟ್ ಸರಿಯಾಗಿದೆಯೇ..?,ಫಿಟ್ನೇಸ್ ಪ್ರಮಾಣಪತ್ರ, ಇನ್ಸೂರೆನ್ಸ್ ಇದೆಯೋ, ದುರಂತಕ್ಕೆ ಕಾರಣಗಳೇನು ಎಂಬುದರ ಕುರಿತು ವರದಿ ನೀಡಲು ತಿಳಿಸಲಾಗಿದ್ದು,ಪ್ರಾಥಮಿಕ ವರದಿ ಅನುಸಾರ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.
ಬಸ್ನಲ್ಲಿ ಜನರನು ಓವರ್ ಲೋಡ್ ಆಗಿ ತುಂಬಿಕೊಂಡಿರುವುದು ಮತ್ತು ಅತಿವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿರುವುದು ಈ ದುರಂತಕ್ಕೆ ಕಾರಣ ಎಂಬ ಮಾಹಿತಿ ತಿಳಿದುಬಂದಿದೆ ಎಂದರು.
ಈ ಭಾಗದಲ್ಲಿ ಸರಕಾರಿ ಬಸ್ಗಳು ಓಡಾಡ್ತಾ ಇಲ್ಲ;ಖಾಸಗಿ ಬಸ್ಗಳು ಓಡಾಡ್ತಾ ಇವೆ.
ಈ ಕುರಿತು ಬಸ್ ಡಿಪೋ ವ್ಯವಸ್ಥಾಪಕರಿಗೆ ಆ ಭಾಗದ ಜನರು ಮನವಿ ಮಾಡಿದ್ರೂ ಅವರು ಬಸ್ಗಳು ಓಡಿಸದಿರುವುದು ಗಮನಕ್ಕೆ ಬಂದಿದು;ಈ ದುರಂತಗಳಿಗೆ ಕಾರಣ ಎಂದು ತಿಳಿಸಿದ ಅವರು ಈ ಭಾಗದ ಖಾಸಗಿ ಬಸ್ಗಳ ಪರ್ಮಿಟ್ ರದ್ದುಪಡಿಸಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಮೃತರು ಮತ್ತು ಗಾಯಾಳುಗಳಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜೆ.ಶಾಂತಾ,ಮಾಜಿ ಶಾಸಕ ಸುರೇಶಬಾಬು,ಬುಡಾ ಅದ್ಯಕ್ಷ ಪಾಲನ್ನ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243