ರಾಜಕೀಯ
ಕೇಂದ್ರ ಸರ್ಕಾರ: ನೈತಿಕ ಜವಾಬ್ದಾರಿ ಹೊತ್ತ ರಾಜೀನಾಮೆಗಳ ಸುತ್ತಮುತ್ತ..!
- ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು
ಆಗಸ್ಟ್ 1956ರಲ್ಲಿ ಆಂಧ್ರ ಪ್ರದೇಶದ ಮೆಹಬೂಬ್ ನಗರದಲ್ಲಿ ದೊಡ್ಡ ರೈಲು ಅಪಘಾತ ಜರುಗುತ್ತದೆ. 112 ಪ್ರಯಾಣಿಕರು ಅಸುನೀಗುತ್ತಾರೆ. ನೈತಿಕ ಜವಾಬ್ದಾರಿಯನ್ನು ಹೊತ್ತ ರೈಲು ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆಯನ್ನು ನೀಡುತ್ತಾರೆ. ಆದರೆ ಪ್ರಧಾನಿ ನೆಹರು ಅದನ್ನು ಸ್ವೀಕರಿಸುವುದಿಲ್ಲ.
ನಂತರ ಅದೇ ವರ್ಷ ನವೆಂಬರ್ ತಿಂಗಳಲ್ಲಿ ತಮಿಳುನಾಡಿನ ಅರಿಯಲೂರ್ನಲ್ಲಿ ಜರುಗಿದ ಭೀಕರ ರೈಲು ಅಪಘಾತದಲ್ಲಿ 144 ಮಂದಿ ಸಾಯುತ್ತಾರೆ. ಆಗಲೂ ಶಾಸ್ತ್ರಿ ರಾಜೀನಾಮೆಯನ್ನು ನೀಡಲು ಮುಂದಾಗುತ್ತಾರೆ. ಬೇಗನೆ ಸ್ವೀಕರಿಸಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸುತ್ತಾರೆ. ನೆಹರು ಮಾತನಾಡಿದ ತರುವಾಯವೂ ಶಾಸ್ತ್ರಿ ತಾವು ತೆಗೆದುಕೊಂಡ ನಿರ್ಧಾರದಿಂದ ವಿಮುಖರಾಗುವುದಿಲ್ಲ.
ಲೋಕಸಭೆಯಲ್ಲಿ ಈ ವಿಷಯದ ಬಗೆಗೆ ಮಾತನಾಡುತ್ತ ನೆಹರು ತಾವು ಶಾಸ್ತ್ರಿಯವರ ರಾಜೀನಾಮೆಯನ್ನು ಸ್ವೀಕರಿಸಲೇ ಬೇಕಾದ ಅನಿವಾರ್ಯತೆಯಿರುವುದೆಂದು ತಿಳಿಸಿದಾಗ, 30 ಸಂಸದರು ಈ ಅಪಘಾತಕ್ಕೆ ರೈಲ್ವೆ ಬೋರ್ಡ್ ಕಾರಣವೆಂದು, ಶಾಸ್ತ್ರಿಯವರು ಜವಾಬ್ದಾರರಲ್ಲ ಎಂದು ತಿಳಿಸುತ್ತಾರೆ. ಶಾಸ್ತ್ರಿ ತಮ್ಮ ಪಟ್ಟನ್ನು ಸಡಿಲಿಸುವುದಿಲ್ಲ. ಕೊನೆಗೆ ವಿಧಿಯಿಲ್ಲದೇ ನೆಹರು ರಾಷ್ಟ್ರಪತಿಗೆ ರಾಜೀನಾಮೆಯನ್ನು ರವಾನಿಸುತ್ತಾರೆ.
*ಈ ಘಟನೆಗಳು ಜರುಗಿದ 43 ವರ್ಷಗಳ ತರುವಾಯ ಅಂದರೆ ಆಗಸ್ಟ್ 1999ರಲ್ಲಿ ಅಸ್ಸಾಂನ ಗೈಸಲ್ನಲ್ಲಿ ಜರುಗಿದ ರೈಲು ದುರಂತದಲ್ಲಿ 290 ಜನ ಸಾಯುತ್ತಾರೆ. ಆಗಿನ ರೈಲು ಸಚಿವ ನಿತೀಶ್ ಕುಮಾರ್ ನೈತಿಕ ಜವಾಬ್ದಾರಿಯನ್ನು ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಾರೆ.*
2000ರಲ್ಲಿ ಎರಡು ರೈಲು ಅವಘಡಗಳು ಜರುಗುತ್ತವೆ. ರೈಲು ಖಾತೆಯ ಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಯನ್ನು ಸಲ್ಲಿಸುತ್ತಾರೆ. ಆದರೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜೀನಾಮೆಯನ್ನು ತಿರಸ್ಕರಿಸುತ್ತಾರೆ.
ಪ್ರಸ್ತುತ ಉತ್ತರ ಪ್ರದೇಶದ ಲಖೀಂಪುರದ ದಾರುಣ ಘಟನೆಯತ್ತ ಗಮನವನ್ನು ಹರಿಸೋಣ. ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾರ ಕಾರನ್ನು ಚಲಿಸಲಾಗುತ್ತದೆ. ರೈತರೂ ಸೇರಿದಂತೆ ಎಂಟು ಮಂದಿ ಮರಣವನ್ನಪ್ಪುತ್ತಾರೆ. ಪ್ರತ್ಯಕ್ಷದರ್ಶಿಗಳು ಸಚಿವರ ಮಗ ಆಶೀಶ್ ಮಿಶ್ರಾ ಸ್ವತಃ ಗಾಡಿಯನ್ನು ಓಡಿಸುತ್ತಿದ್ದರೆಂದು ತಿಳಿಸಿದ್ದಾರೆ.
ಈ ಹೇಯ ಘಟನೆಗೆ ಸಂಬಂಧಿಸಿದ ಕೆಲವು ವೀಡಿಯೊಗಳು ಹರಿದಾಡುತ್ತಿವೆ. ರೈತ ಸಂಘಗಳು ಮತ್ತು ವಿಪಕ್ಷಗಳು ಅಜಯ್ ಕುಮಾರ್ ಮಿಶ್ರಾ ರಾಜೀನಾಮೆಯನ್ನು ನೀಡಬೇಕೆಂದು ಒತ್ತಾಯಿಸಿವೆ. ಆದರೆ ತನ್ನ ಮಗ ಘಟನೆ ಜರುಗಿದ ಸ್ಥಳದಲ್ಲಿ ಇರಲಿಲ್ಲ , ತಾವು ರಾಜೀನಾಮೆಯನ್ನು ನೀಡುವುದಿಲ್ಲ ಎಂದು ಮಿಶ್ರಾ ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಉತ್ತರ ಪ್ರದೇಶದ ಪೊಲೀಸರು ಸರಿಯಾಗಿ ತನಿಖೆಯನ್ನು ಜರುಗಿಸುತ್ತಿಲ್ಲ ಎಂದು ತರಾಟೆ ತೆಗೆದುಕೊಂಡಿತು. ತರುವಾಯ ಆಶೀಶ್ ಮಿಶ್ರಾ ಪೊಲೀಸರ ವಿಚಾರಣೆಗೆ ಹಾಜರಾದದ್ದು ಎಲ್ಲ ರೀತಿಯಿಂದ ಬಲಿಷ್ಠರಾದವರ ಕಾರುಬಾರು ನಮ್ಮ ದೇಶದಲ್ಲಿ ಹೇಗೆ ಜರುಗುತ್ತಿದೆ ಎಂಬುದರ ದ್ಯೋತಕವೆನ್ನಬಹುದು.
ಇಂತಹ ಪ್ರಕರಣಗಳು ಅಂತಿಮ ಹಂತದಲ್ಲಿ ಕೇಂದ್ರ ಸರ್ಕಾರದ ಗೃಹ ಖಾತೆಗೆ ತಲುಪುವ ಸಾಧ್ಯತೆಗಳು ಇದ್ದೇ ಇರುತ್ತವೆ. ಪೊಲೀಸ್ ಇಲಾಖೆ ಕೂಡ ಕೇಂದ್ರ ಸರ್ಕಾರದ ಗೃಹ ಖಾತೆಯ ಸುಪರ್ದಿಗೆ ಬರುತ್ತದೆ. ಹೀಗಿರಬೇಕಾದರೇ, ಅಜಯ್ ಮಿಶ್ರಾ ಸಚಿವ ಸ್ಥಾನದಲ್ಲಿ ಮುಂದುವರೆದರೇ, ನ್ಯಾಯ ಹಳ್ಳದ ಹಿಡಿಯುವುದರಲ್ಲಿ ಸಂಶಯವೇ ಇಲ್ಲ ಎಂಬುದು ಸಾರ್ವಜನಿಕ ವಲಯದ ಪ್ರಜ್ಞಾವಂತರ ಅಳಲಾಗಿದೆ.
ಈ ಆಘಾತಕಾರಿ, ಅಮಾನವೀಯ ಘಟನೆಯ ಬಗೆಗೆ ನಮ್ಮ ಪ್ರಧಾನಿ ದಿವ್ಯ ಮೌನವನ್ನು ವಹಿಸಿದ್ದಾರೆ. ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತಮ್ಮದು ಭಿನ್ನ ಪಕ್ಷವೆಂದು ಟಾಂಟಾಂ ಮಾಡುವವರ ಈ ವರಸೆ ಸಾರ್ವಜನಿಕ ವಲಯದಲ್ಲಿ ಕಟು ಟೀಕೆಗೆ ಒಳಗಾಗಿದೆ.
(ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು
ಇಮೈಲ್: msmurali1961@gmail.com
ಜಂಗಮವಾಣಿ :9481200960)
ಸುದ್ದಿದಿನ.ಕಾಂ|ವಾಟ್ಸಾಪ್|9980346243