ದಿನದ ಸುದ್ದಿ
ಕೊರೋನಾ ತಂದಿದೆ ಆಪತ್ತು; ತಲ್ಲಣಗೊಂಡಿದೆ ಮಕ್ಕಳ ಜಗತ್ತು..!
ಹೋಯ್ತಾ ಕೊರೋನಾ..? ಶಾಲೆಗೆ ಹೊರಡೋಣ..?
- ವಿ.ಕೆ.ಕುಮಾರಸ್ವಾಮಿ, ಶಿಕ್ಷಕರು, ರಾಮನಗರ
ಅಮ್ಮಾ ನನ್ ಲಂಚ್ ಬಾಕ್ಸ್ ಎಲ್ಲಿ? ನನ್ ಡ್ರಾಯಿಂಗ್ ಬುಕ್ ಎಲ್ಲೋಯ್ತು? ಅಯ್ಯೋ ಲೇಟ್ ಆಯ್ತು, ವ್ಯಾನ್ ಬಂದೇಬಿಡ್ತು ಅಮ್ಮಾ, ಲೇ ಪುಟ್ಟಾ ನೆನ್ನೆ ಮಿಸ್ಸು ಕನ್ನಡ ಹೋಮ್ವರ್ಕ್ ಕೊಟ್ಟಿದ್ರಲ್ಲಾ ಅದನ್ನ ಕಂಪ್ಲೀಟ್ ಮಾಡಿದ್ಯೇನೋ? ಲೋ ಸಾಗರ್ ಬಿಡೋ ಇವತ್ತು ಫಸ್ಟ್ ಪೀರಿಯಡ್ ಪಿ.ಟಿ ಇದೆ, ಚೆನ್ನಾಗಿ ಆಟ ಆಡೋಣ ಆಮೇಲೆ ಮಿಕ್ಕಿದ್ದು ನೋಡ್ಕಳಣ! ಅಬ್ಬಾ! ಮಕ್ಕಳ ಲೋಕ ಅದೆಷ್ಟು ಚೆಂದ ಅಲ್ವಾ. ಹೀಗಿದ್ದ ಮಕ್ಕಳ ಆಟ ಪಾಠಗಳ ತುಂಟಾಟಕ್ಕೆ ಇಂದು ಕೊರೋನಾ ಹೆಮ್ಮಾರಿ ಬ್ರೇಕ್ ಹಾಕಿರುವುದು ವಿಷಾದನೀಯ.
ಶೈಕ್ಷಣಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಮಕ್ಕಳ ಮನದ ತುಂಬಾ ಮೋಡ ಕವಿದ ವಾತಾವರಣ ಆವರಿಸಿದ್ದು ಖಿನ್ನತೆ, ಮಾನಸಿಕ ಅಸಮತೋಲನ, ವರ್ತನೆಯಲ್ಲಿ ಬದಲಾವಣೆ, ಮೊಬೈಲ್ ಗೀಳು ಹೆಚ್ಚಾಗಿ ಅವರ ಬದುಕು ಬಿರುಗಾಳಿಗೆ ಸಿಕ್ಕ ನಾವೆಯಂತೆ ಉಯಿಲಾಡುತ್ತಿದೆ. ಈ ಬಗ್ಗೆ ಇಲ್ಲೊಂದು ಅವಲೋಕನ..
ಹಿರಿದಾಗುತ್ತಿದೆ ಶೈಕ್ಷಣಿಕ ಅಂತರ
ಪ್ರಸ್ತುತ ಸಂದರ್ಭದಲ್ಲಿ ಇಡೀ ಶೈಕ್ಷಣಿಕ ಚಟುವಟಿಕೆಗಳು ನಿಂತುಹೋಗಿದ್ದು, ಕಳೆದ ಮೂರು ತಿಂಗಳಿಂದ ಮಕ್ಕಳ ಕಲಿಕೆಯ ಅಂತರ ಹಿರಿದಾಗುತ್ತಿದೆ. ಈಗಾಗಲೇ ಕೊರೋನಾ ಎಂಬ ವಿಷ ಕ್ರಿಮಿ ತನ್ನ ಬಾಹುಗಳನ್ನು ವಿಸ್ತಾರವಾಗಿ ಚಾಚುತ್ತಿರುವುದರಿಂದ, ಮಕ್ಕಳ ಸುರಕ್ಷತೆಯೊಂದಿಗೆ ಶಾಲೆಗಳ ಆರಂಭ ಅಷ್ಟು ಸುಲಭದ ಮಾತಲ್ಲ. ಈ ಸಂಬಂಧ ಸರ್ಕಾರ ಅಥವಾ ಪೋಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಅದು ಮಕ್ಕಳ ಮೇಲೆ ನೇರ ಶಿಕ್ಷಣ ಪದ್ಧತಿಯಷ್ಟು ತೀವ್ರ ಪರಿಣಾಮ ಬೀರದಿರುವುದು ಆತಂಕದ ಸಂಗತಿಯಾಗಿದೆ.
ಬಹುತೇಕ ಇಂದಿನ ಮಕ್ಕಳಲ್ಲಿ ಕಾಡುತ್ತಿರುವ ತಾತ್ಕಾಲಿಕ ನೆನಪಿನ ಶಕ್ತಿಯ ಪರಿಣಾಮವಾಗಿ, ಮಕ್ಕಳನ್ನು ಈ ಮೊದಲಿನ ಸಹಜ ಸ್ಥಿತಿಗೆ ತರುವುದು ತೀರಾ ಪ್ರಾಯಾಸದ ಕೆಲಸವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್ಲೈನ್ ಶಿಕ್ಷಣ ದುಸ್ತರವಾಗುತ್ತಿದ್ದು, ಇದು ಶೈಕ್ಷಣಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಕೊರೋನಾ ಹೋಯ್ತಾ? ಶಾಲೆಗೆ ಆರಂಭವಾಯ್ತಾ? ಎಂಬುದು ಇಂದು ಏನೂ ಅರಿಯದ ಮುಗ್ಧ ಮಕ್ಕಳನ್ನು ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ. ಹೀಗೆ ಕೊರೋನಾ ಮಧ್ಯದಲ್ಲಿ ಅಡಕತ್ತರಿಗೆ ಸಿಕ್ಕಂತಾಗಿರುವ ಮಕ್ಕಳ ಬದುಕು ನಿಜಕ್ಕೂ ತಲ್ಲಣಗೊಂಡಿದೆ.
ಸಾಮಾಜೀಕರಣಕ್ಕೆ ಬ್ರೇಕ್
ಮಕ್ಕಳನ್ನು ಸಾಮಾಜೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಕುಟುಂಬದಷ್ಟೇ, ಶಾಲೆ, ನೆರೆಹೊರೆ ಹಾಗೂ ಸಮಕಾಲೀನ ವಯೋಮಾನದವರ ಪಾತ್ರವೂ ಸಹ ಹಿರಿದಾಗಿದೆ. ಆದರೆ ಕೊರೋನಾ ವಿಷ ಪೀಡೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿರುವುದರಿಂದ, ಅವರು ಮನೆಯಿಂದ ಹೊರಗೆ ಬಾರದಂತಾಗಿ ಖಿನ್ನತೆ ಹೆಚ್ಚಾಗುತ್ತಿದೆ.
ಇದರಿಂದ ಅವರಲ್ಲಿ ವಯೋ ಸಹಜ ಮಾನಸಿಕ ಬೆಳವಣಿಗೆ ಕ್ಷೀಣಿಸುತ್ತಿದ್ದು, ವರ್ತನೆಯಲ್ಲಿ ವಿಭಿನ್ನ ಬದಲಾವಣೆಗಳು ಕಂಡು ಬರುತ್ತಿದೆ. ನಿತ್ಯವೂ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮಕ್ಕಳ ಲೋಕ ಇಂದು ಮಂಕಾಗುತ್ತಿದೆ. ಹೀಗಾಗಿ ಸಾಮಾಜೀಕರಣ ಪ್ರಕ್ರಿಯೆ ತಡವಾಗುವುದರ ಜೊತೆಗೆ, ಅವರ ಭವಿಷ್ಯವೂ ಸಹ ಡೋಲಾಯಮಾನವಾಗುತ್ತಿದೆ.
ಮೊಬೈಲ್ ಬಳಕೆಯಿಂದ ಆಪತ್ತು
ಮನೆಯಲ್ಲೇ ಉಳಿದುಕೊಂಡಿರುವ ಕೋಟ್ಯಂತರ ಮಕ್ಕಳು ಇಂದು ಕಾಲ ಕಳೆಯಲೆಂದೋ ಅಥವಾ ಆನ್ಲೈನ್ ತರಗತಿಗಳಿಗೆಂದೋ ಮೊಬೈಲ್ ಮೊರೆ ಹೋಗಿದ್ದಾರೆ. ಆದರೆ ಭಾರತದಲ್ಲಿನ ಬಹುಪಾಲು ಪೋಷಕರ ಅನಕ್ಷರತೆ ಸಮಸ್ಯೆಯಿಂದಾಗಿ ತಮ್ಮ ಮಕ್ಕಳು ಮೊಬೈಲ್ನ್ನು ಸರಿಯಾದ ಉದ್ದೇಶಕ್ಕೆ ಬಳಸುತ್ತಿದ್ದಾರೆಯೇ ಎಂಬುದನ್ನು ತಿಳಿಯುವುದರಲ್ಲಿ ವಿಫಲತೆ ಎದುರಾಗಿದೆ.
ಇದರಿಂದ ಮಕ್ಕಳ ಮೇಲಿನ ಹಿಡಿತ ತಪ್ಪಿ, ಅವರ ಮನಸ್ಸು ವ್ಯಗ್ರವಾಗಿ ವಿವಿಧ ಸೈಬರ್ ಕ್ರೈಮ್ಗಳತ್ತ ಮುಖ ಮಾಡುತ್ತಿದ್ದಾರೆ. ಅಲ್ಲದೇ ಪ್ರತಿದಿನ ಗೇಮ್ ಆಡಲು, ಚಾಟ್ ಮಾಡಲು ಇನ್ನಿತರ ಉದ್ದೇಶಗಳಿಗಾಗಿ ದೀರ್ಘಾವಧಿಯವರೆಗೆ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೂ ಇದು ತೊಡಕಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳ ಮೇಲೆ ಆಘಾತಕಾರಿ ಪರಿಣಾಮಗಳು ಸೃಷ್ಟಿಯಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.
ಮೌಲ್ಯಗಳ ಕುಸಿತ
ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಹುತೇಕ ಇಂದಿನ ಡಿಜಿಟಲ್ ಯುಗದ ಮಕ್ಕಳು ಪೋಷಕರ ಮಾತಿಗೆ ಮನ್ನಣೆ ನೀಡುವುದು ಕಡಿಮೆಯೇ. ಮನೆಯಲ್ಲೇ ಉಳಿದ ಮಕ್ಕಳ ಮನಸ್ಸು ದಿಕ್ಕು ತಪ್ಪಿದಂತಾಗಿ, ಅವರಲ್ಲಿ ತೀವ್ರತರ ಮಾನಸಿಕ ಅಸಮತೋಲನ ಉಂಟಾಗುತ್ತಿದೆ. ಇದರಿಂದ ಪೋಷಕರು ಮಕ್ಕಳಿಗೆ ಏನು ಹೇಳಿದರೂ ಅದು ತಪ್ಪೇ ಎಂಬಂತಾಗುತ್ತಿದೆ.
ಸುಮಾರು ಮಕ್ಕಳು ತಮ್ಮ ಪೋಷಕರ ವಿರುದ್ಧ ವಾಗ್ವಾದಕ್ಕೆ ಇಳಿಯುತ್ತಿರುವುದು, ಆತ್ಮಹತ್ಯೆ ಬೆದರಿಕೆಗಳನ್ನು ಒಡ್ಡುತ್ತಿರುವುದು, ತಮ್ಮ ವಯೋಮನಕ್ಕೆ ಮೀರಿದ ಭಾಷೆಯ ಬಳಕೆ, ಮಾನಸಿಕ ಸಂಘರ್ಷಗಳು, ಮಾನಸಿಕ ಕ್ಷೋಭೆ, ಇವುಗಳಿಂದಾಗಿ ಮಕ್ಕಳಲ್ಲಿರಬೇಕಾದ ನಿರೀಕ್ಷಿತ ಮೌಲ್ಯಗಳು ಕ್ಷೀಣಿಸುತ್ತಿವೆ. ಅತಿಯಾದ ಟಿ.ವಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಅತ್ಯಂತ ಕ್ಷಿಷ್ಟಕರವಾಗುತ್ತಿದೆ. ಇವಿಷ್ಟೇ ಅಲ್ಲದೆ ಪೌಷ್ಟಿಕಾಂಶಗಳ ಕೊರತೆ, ಕೌಟುಂಬಿಕ ದೌರ್ಜನ್ಯಗಳು, ಬಲವಂತದ ದುಡಿಮೆ, ಮುಂತಾದ ಸಮಸ್ಯೆಗಳು ಮಕ್ಕಳಲ್ಲಿ ತಲೆದೋರುತ್ತಿದೆ.
-ವಿ.ಕೆ.ಕುಮಾರಸ್ವಾಮಿ,
ಬರಹಗಾರ, ಶಿಕ್ಷಕರು,
ವಿರುಪಾಪುರ, ಸುಗ್ಗನಹಳ್ಳಿ ಅಂಚೆ,
ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 561101
ಮೊ: 9113906120, 9740840678 (ವಾಟ್ಸಪ್)
ಇ ಮೇಲ್ : kumarvirupapura@gmail.com
ಸುದ್ದಿದಿನ.ಕಾಂ|ವಾಟ್ಸಾಪ್|9980346243