ದಿನದ ಸುದ್ದಿ

ದಾವಣಗೆರೆ | ನಗರದ ಸ್ವಚ್ಚತೆಗಾಗಿ ರಾಸಾಯನಿಕ ಔಷಧ ಸಿಂಪಡಣೆ

Published

on

ಸುದ್ದಿದಿನ,ದಾವಣಗೆರೆ : ನಗರವನ್ನು ಸ್ವಚ್ಚವಾಗಿಟ್ಟುಕೊಳ್ಳವುದು ಮತ್ತು ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಅಗ್ನಿಶಾಮಕ ಇಲಾಖೆ ಮತ್ತು ಮಹಾನಗರಪಾಲಿಕೆ ಸಹಯೋಗದೊಂದಿಗೆ ನಗರದ ಅರಳಿಮರ ಸರ್ಕಲ್‍ನಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಹನುಮಂತರಾಯ ಹಾಗೂ ಮಹಾನಗರಪಾಲಿಕೆ ಮೇಯರ್ ಅಜಯ್‍ಕುಮಾರ್ ನೇತೃತ್ವದಲ್ಲಿ ರಾಸಾಯನಿಕ ಔಷಧಿ ಸಿಂಪಡಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೊರೊನಾ ವೈರಸ್ ಹರಡುವುದದನ್ನು ನಿಯಂತ್ರಿಸಲು ಹಾಗೂ ನಗರದ ಸ್ವಚ್ಚತೆಯ ದೃಷ್ಟಿಯಿಂದ ಔಷಧಿ ಸಿಂಪಡಿಸುವ ಕಾರ್ಯ ಮಾಡಲಾಗುತ್ತಿದೆ. ವಿಶೇಷವಾಗಿ ಹಳೆ ದಾವಣಗೆರೆಯಲ್ಲಿ ಸ್ವಚ್ಚತೆ ಕಡಿಮೆ ಎಂಬ ಮಾತಿನಂತೆ ನಾವು ಮೊದಲು ಹಳೇ ದಾವಣಗೆರೆಯಿಂದ ಆರಂಭಿಸಿ ನಗರದ 45 ವಾರ್ಡ್‍ಗಳಲ್ಲಿಯೂ ಔಷಧ ಸಿಂಪಡಣೆ ಕಾರ್ಯಾಚರಣೆ ಮಾಡಲಾಗುವುದು ಎಂದರು.

ಜಿಲ್ಲೆಯ ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಧಿಕಾರಿ ಬಸವ ಪ್ರಭು ಶರ್ಮ ಇವರ ನೇತೃತ್ವದಲ್ಲಿ ಈ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಔಷಧ ಸಿಂಪಡಣೆಗಾಗಿ ಅಗ್ನಿ ಶಾಮಕ ಇಲಾಖೆಯ ಎರಡು ವಾಹನಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು 4,000 ಮತ್ತು 500 ಲೀಟರ್ ಸಾಮಾರ್ಥವನ್ನು ಹೊಂದಿದ್ದು, ಇಡೀ ನಗರವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಪ್ರತಿದಿನ ನಡೆಸಲಾಗುವುದು. ಇದರಲ್ಲಿ ಮಹಾನಗರಪಾಲಿಕೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಸಿದ್ದರಿದ್ದು, ನಾವು ಪ್ರತಿದಿನ 10 ಸಾವಿರ ಲೀಟರ್ ಔಷಧ ಸಿಂಪಡಿಸಿದರೆ ಆದಷ್ಟು ಬೇಗ ನಗರದಲ್ಲಿರುವ ಬಹಳಷ್ಡು ಏರಿಯಾಗಳನ್ನು ಕವರ್ ಮಾಡಬಹುದು. ಇದಕ್ಕಾಗಿ ಅಗತ್ಯ ಬಿದ್ದರೆ ಮಹಾನಗರಪಾಲಿಕೆಯಲ್ಲಿರುವ 2 ಟ್ಯಾಂಕರ್‍ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಇದು ಅಷ್ಟೇ ಅಲ್ಲದೇ ಸಿವಿಲ್ ಸೊಸೈಟಿಯಿಂದ ಹಲವಾರು ಜನ ಕರೆ ಮಾಡಿ ತಾವು ಕೊರೊನಾ ಸೈನಿಕರಾಗಿ ಕೆಲಸ ಮಾಡಲು ಸಿದ್ದರಿದ್ದೇವೆ. ನಮ್ಮನ್ನು ನಿಮ್ಮೊಂದಿಗೆ ಸೇರಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಈ ವಿಷಯದ ಬಗ್ಗೆ ಸಿವಿಲ್ ಸೊಸೈಟಿ ಮಿತ್ರರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಹಕ್ಕಿಜ್ವರ

ಹಕ್ಕಿಜ್ವರದಿಂದಾಗಿ ಜಿಲ್ಲೆಯ ಎರಡು ಗ್ರಾಮ/ಫಾರಂಗಳಲ್ಲಿ ಹಕ್ಕಿಗಳು ಸಾಯುತ್ತಿವೆ ಎಂಬ ಸುದ್ದಿ ಮಾಧ್ಯಮಗಳಿಂದ ತಿಳಿದು ಬಂದಿದ್ದು, ಇಂದೇ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ತಂಡವನ್ನು ಕಳುಹಿಸಲಾಗಿದೆ. ಅವರಿಂದ ವರದಿ ಬಂದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು.

ಹಕ್ಕಿಜ್ವರದ ಹಿನ್ನಲೆಯಲ್ಲಿ ಸಾಧ್ಯವಾದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಯಾವುದೇ ಆತಂಕ ಮತ್ತು ಭೀತಿಗೆ ಒಳಗಾಗಬಾರದು. ಜಿಲ್ಲೆಯಲ್ಲಿ ಈಗಾಗಲೇ ಕೋಳಿ ಮಾಂಸ, ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ. ಜನರು ಅವುಗಳನ್ನು ಕೊಂಡು ಕೊಳ್ಳಬಾರದೆಂದು ವಿನಂತಿಸುತ್ತೇನೆ ಎಂದರು.

ಚಿತ್ರದುರ್ಗದ ಕೊರೊನಾ ಸೋಂಕಿತ ಮಹಿಳೆಯನ್ನು ದಾವಣಗೆರೆಯ ಎಸ್‍ಎಸ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಜಿಲ್ಲೆಯ ಜನತೆ ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಆಯುಕ್ತರೊಂದಿಗೆ ಚರ್ಚೆ ಮಾಡಿ, ಚಿತ್ರದುರ್ಗ ಜಿಲ್ಲಾಧಿಕಾರಿಯ ಅನುಮತಿ ಪಡೆದ ನಂತರ ಆ ಮಹಿಳೆಯನ್ನು ಸುರಕ್ಷಿತವಾಗಿ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರತ್ಯೇಕ ಕೋವಿಡ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಯಾವುದೇ ರೀತಿಯ ಆತಂಕ ಮತ್ತು ಭಯ ಪಡುವ ಅವಶ್ಯಕತೆ ಇಲ್ಲ ಎಂದರು.

ಭಾರತ ಸರ್ಕಾರದ ಆದೇಶ ಬಂದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾಮಾನ್ಯ ಜನರ ಜೀವನ ನಿರ್ವಹಣೆಗೆ ಯಾವುದೇ ಅನಾನುಕೂಲವಾಗದಂತೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿನ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಿದ್ದರಿದ್ದೇವೆ ಎಂದರು.

ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯಪ್ಪ ಮಾತನಾಡಿ, ಭಾರತ ಲಾಕ್‍ಡೌನ್ ವಿಷಯ ತಿಳಿದ್ದಿದ್ದರೂ ಜನ ಹೊರಗಡೆ ಓಡಾಡುತ್ತಿದ್ದಾರೆ. ಜನರ ಆರೋಗ್ಯದ ಹಿತರಕ್ಷಣೆಯಿಂದಾಗಿ ಜನತೆ ಮನೆಯಿಂದ ಹೊರಗೆ ಬಾರದೇ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು.

ಅನಗತ್ಯವಾಗಿ ಬಟ್ಟೆ, ಬಂಗಾರದ ಅಂಗಡಿ ಮತ್ತು ಅಗತ್ಯ ವಿಲ್ಲದ ಅಂಗಡಿಗಳನ್ನು ತೆರೆಯುವಂತಿಲ್ಲ. ಜನರು ಅನಗತ್ಯವಾಗಿ ತಿರುಗಾಡುವುದನ್ನು ತಪ್ಪಿಸಲು ಪೊಲೀಸ್ ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದೇವೆ. ಜನರು ಅನಗತ್ಯವಾಗಿ ಹೊರಗಡೆ ತಿರುಗಾಡುವುದನ್ನು ಬಿಡಬೇಕು. ಜಿಲ್ಲಾಧಿಕಾರಿಗಳ ಆದೇಶದ ಮೇರಿಗೆ ಇಂದು ರಾತ್ರಿಯಿಂದಲೇ ಹೂವಿನ ಮಾರಕಟ್ಟೆಯನ್ನು ಬಂದ್ ಮಾಡಲಾಗುವುದು ಎಂದರು.

ಮಹಾನಗರಪಾಲಿಕೆ ಮೇಯರ್ ಅಜಯ್‍ಕುಮಾರ್ ಮಾತನಾಡಿ, ಸೋಡಿಯಂ ಹೈಕ್ಲೋಪ್ಲೋರೆಡ್ ಎಂಬ ರಾಸಾಯನಿಕ ಔಷಧಿಯನ್ನು ಮಹಾನಗರಪಾಲಿಕೆಯವರು ಅಗ್ನಿಶಾಮಕ ಇಲಾಖೆಯ ಮತ್ತು ಆರೋಗ್ಯ ಇಲಾಖೆಯ ಸಹಕಾರ, ಜಿಲ್ಲಾಡಳಿತ ಮತ್ತು ಎಸ್‍ಪಿಯವರ ಸಹಯೋಗದೊಂದಿಗೆ ದಾವಣಗೆರೆ ನಗರವನ್ನು ಸ್ವಚ್ಚವಾಗಿಡಬೇಕು ಎಂಬ ಉದ್ದೇಶದಿಂದ ಈ ಔಷಧಿ ಸಿಂಪಡಿಸುವ ಕೆಲಸ ಮಾಡುತ್ತಿದ್ದೇವೆ. ನಗರದ 45 ವಾರ್ಡ್‍ಗಳು ಮುಗುಯುವರೆಗೂ ಪ್ರತಿದಿನ ಈ ಕಾರ್ಯ ನಿರ್ವಹಿಸಲಾಗುವುದು ಎಂದರು.

ನಗರದ ಸ್ವಚ್ಚತೆಯ ದೃಷ್ಟಿಯಿಂದ ಪಾಲಿಕೆ ಸಿಬ್ಬಂದಿಗಳು ಹೆಚ್ಚು ಜಾಗೃತರಾಗಿ ಕೆಲಸ ಮಾಡುತ್ತಿದ್ದಾರೆ. ಸ್ವಚ್ಚತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಔಷಧ ಸಿಂಪಡಣೆ ಕಾರ್ಯಚರಣೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿವೈಎಸ್‍ಪಿ ನಾಗೇಶ್ ಐತಾಳ್, ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು, ಮಹಾನಗರಪಾಲಿಕೆ ಸಿಬ್ಬಂದಿಗಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version