ಅಂತರಂಗ

ನಮ್ಮ ಕಣ್ಣೋಟವೇ ತಪ್ಪು ಇನ್ನು ಮುನ್ನೋಟ ಹೇಗೆ–ಕೊರೋನಾ ಪ್ರಶ್ನೆ..?

Published

on

  • ನಾ ದಿವಾಕರ

ಭಾರತದ ಆಳುವ ವರ್ಗಗಳ ಮುಂದೆ ಕೊರೋನ ಬಹುಆಯಾಮದ ಸಮಸ್ಯೆಗಳನ್ನು ತಂದು ನಿಲ್ಲಿಸಿದೆ. ಬಹುಶಃ 70 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಸಮಾಜದ ಎಲ್ಲ ಮಜಲುಗಳನ್ನೂ ಎಳೆಎಳೆಯಾಗಿ ಹೊರಗೆಳೆದು ನಡುರಸ್ತೆಯಲಿ ಬೆತ್ತಲೆ ನಿಲ್ಲಿಸುವಂತಹ ಪ್ರಸಂಗ ಎದುರಾಗಿರಲಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ರಾಜಕೀಯ ನೆಲೆಗಳಲ್ಲಿ ಸಮಸ್ಯೆಗಳು ಎದುರಾಗುತ್ತಿವೆ. ನಮ್ಮದೇ ವ್ಯವಸ್ಥೆ ಪೋಷಿಸಿರುವ ವಿಕೃತಿಗಳ ಪರಿಣಾಮ ಕೊರೋನಾ ಸಾಂಸ್ಕೃತಿಕ ಸಮಸ್ಯೆಗಳನ್ನೂ ಸೃಷ್ಟಿಸಿದೆ.

ಸರ್ಕಾರದ ಅಥವಾ ವ್ಯವಸ್ಥೆಯ ವೈಫಲ್ಯವನ್ನು ಕುರಿತು ಸೊಲ್ಲೆತ್ತಿದ ಕೂಡಲೇ ನಮ್ಮಲ್ಲಿ ರಾಜಕೀಯ ಪರ ವಿರೋಧದ ನೆಲೆಗಳು ಧುತ್ತೆಂದು ಎದುರಾಗಿಬಿಡುತ್ತವೆ. ಇದು ಅನಿವಾರ್ಯವಲ್ಲ. ಏಕೆಂದರೆ ನಾವು ಎದುರಿಸುತ್ತಿರುವ ಸಮಸ್ಯೆಗಳ ಮೂಲ ವ್ಯವಸ್ಥೆಯ ಬೇರುಗಳಲ್ಲಿದೆ. ಪ್ರಭುತ್ವ ಈ ದೋಷಪೂರಿತ ಬೇರುಗಳನ್ನು ಪೋಷಿಸುತ್ತಾ ಮತ್ತಷ್ಟು ಹದಗೆಡಿಸುತ್ತಿದೆ. ಸರ್ಕಾರಗಳು ಇತ್ತ ಬದಲಾವಣೆಯೂ ಸಾಧ್ಯವಾಗದೆ, ನಿರ್ವಹಣೆಯೂ ಸಾಧ್ಯವಾಗದೆ, ಪ್ರಭುತ್ವದ ನೀತಿಗಳನ್ನು ಪ್ರಶ್ನಾತೀತವಾಗಿಸಿ ಆಡಳಿತ ನಡೆಸುತ್ತಿವೆ. ಈ ವ್ಯತ್ಯಾಸವನ್ನು ಗ್ರಹಿಸದೆ ಹೋದರೆ ನಾವು ಪಕ್ಷ ರಾಜಕಾರಣದ ಬಂದಿಗಳಾಗಿಬಿಡುತ್ತೇವೆ.

50 ದಿನಗಳ ಲಾಕ್ ಡೌನ್ ಭಾರತದಲ್ಲಿ ಕೊರೋನಾ ಹರಡುವಿಕೆಯನ್ನು ಕಡಿಮೆ ಮಾಡಿದೆ. ಇದು ವಾಸ್ತವ. ಈ ಲಾಕ್ ಡೌನ್ ಮಾಡದೆ ಹೋಗಿದ್ದಲ್ಲಿ ಈ ಹೊತ್ತಿಗೆ ಲಕ್ಷಾಂತರ ಸಂಖ್ಯೆಯ ಜನ ಕೊರೋನಾ ಪೀಡಿತರಾಗುತ್ತಿದ್ದರು ಎಂದು ವೈದ್ಯಕೀಯ ವಲಯದಲ್ಲೂ ಹೇಳಲಾಗುತ್ತಿದೆ. ಆದರೆ ಲಾಕ್ ಡೌನ್ ಹೊರತಾಗಿಯೂ ಕೊರೋನಾ ಹರಡುವಿಕೆಯನ್ನು ತಡೆಗಟ್ಟುವುದರಲ್ಲಿ ಸಂಪೂರ್ಣ ಯಶಸ್ಸು ಕಾಣಲಾಗಿಲ್ಲ.

ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಂಕಿಅಂಶಗಳನ್ನು ಕೆಲಹೊತ್ತು ಬದಿಗಿಡೋಣ. ಇತ್ತೀಚೆಗೆ ಇದು ಹವಾಮಾನ ವರದಿಯಂತೆ ಕಾಣುತ್ತಿದೆ. ಇಂದು ನಮ್ಮ ಮುಂದಿರುವ ಬೃಹತ್ ಸಮಸ್ಯೆ ಲಾಕ್ ಡೌನ್ ನಡುವೆಯೂ ದೇಶದ ಅರ್ಥವ್ಯವಸ್ಥೆಯನ್ನು ಹದಗೆಡದಂತೆ ನೋಡಿಕೊಳ್ಳುವುದು ಮತ್ತು ಈ ಅರ್ಥವ್ಯವಸ್ಥೆಯನ್ನು ಸಂರಕ್ಷಿಸುವ ದುಡಿಮೆಯ ಕೈಗಳನ್ನು ಸಂರಕ್ಷಿಸುವುದು. ಮೊದಲನೆಯ ಆದ್ಯತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಶ್ರಮ ವಹಿಸುತ್ತಿವೆ. ಎರಡನೆಯದು ಕೇವಲ ಆಯ್ಕೆಯಾಗಿದೆಯೇ ಹೊರತು, ಆದ್ಯತೆಯಾಗಿಲ್ಲ.

ಈ ಎರಡನೆ ಆದ್ಯತೆಯ ಫಲಾನುಭವಿಗಳು ಈ ದೇಶದ ಕಾರ್ಮಿಕರು ಮತ್ತು ವಿಶೇಷವಾಗಿ ಅಸಂಘಟಿತ ವಲಸೆ ಕಾರ್ಮಿಕರು. ಮಹಾರಾಷ್ಟ್ರದ ಔರಂಗಾಬಾದ್ ಬಲಿ 16 ವಲಸೆ ಕಾರ್ಮಿಕರು ಚಲಿಸುವ ರೈಲಿಗೆ ಬಲಿಯಾಗಿದ್ದರೆ, ಹೈದರಾಬಾದ್ ನಿಂದ ಉತ್ತರಭಾರತಕ್ಕೆ ಮಾವಿನ ಹಣ್ಣಿನ ಲಾರಿಯೊಂದರಲ್ಲಿ ಹೊರಟಿದ್ದ ಐವರು ಕಾರ್ಮಿಕರು ಇಂದು ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ವ್ಯವಸ್ಥೆ ಕಾರಣವೇ ? ಈ ಪ್ರಶ್ನೆಯೇ ನಮ್ಮನ್ನು ವಿಚಲಿತಗೊಳಿಸಬೇಕು.

ಯಾವ ವ್ಯವಸ್ಥೆಯನ್ನು ದೂಷಿಸಬೇಕು. ಆಡಳಿತ ವ್ಯವಸ್ಥೆಯೋ ಅಥವಾ ನಮ್ಮ ಸಾಮಾಜಿಕ ವ್ಯವಸ್ಥೆಯೋ ? ವ್ಯವಸ್ಥೆಯನ್ನೇ ದೂಷಿಸುತ್ತಾ ಕುಳಿತರೆ ಜನಸಾಮಾನ್ಯರಲ್ಲಿ ಅರಿವು ಮೂಡುವುದು ಯಾವಾಗ ? ಈ ಪ್ರಶ್ನೆಗಳು ಒಂದೆಡೆಯಾದರೆ ಮತ್ತೊಂದೆಡೆ ಸರ್ಕಾರ ಇವರಿಗೆ ಎಲ್ಲ ಸವಲತ್ತುಗಳನ್ನೂ ನೀಡುತ್ತಿಲ್ಲವೇ ? ವಿಮೆ, ಭವಿಷ್ಯ ನಿಧಿ, ಕನಿಷ್ಟ ಕೂಲಿ, ಉಚಿತ ಪಡಿತರ ಎಲ್ಲವನ್ನೂ ನೀಡುತ್ತಿಲ್ಲವೇ ? ಈ ಪ್ರಶ್ನೆಗಳೂ ಕೇಳಿಬರುತ್ತವೆ.

ನಿಜ ಸರ್ಕಾರ ಎಲ್ಲ ಸವಲತ್ತುಗಳನ್ನೂ ನೀಡುತ್ತಿದೆ. ಹಾಗಾಗಿಯೇ ವಲಸೆ ಕಾರ್ಮಿಕರು ತಾವು ದುಡಿದ ಅಲ್ಪ ಆದಾಯದಲ್ಲೇ ಜೀವನ ಸವೆಸುತ್ತಾ ತಮ್ಮ ಸುತ್ತಲಿನ ಸಮಾಜಕ್ಕೆ ಹಿತವಲಯಗಳನ್ನು ಸೃಷ್ಟಿಮಾಡುತಿದ್ದರು. ತಮ್ಮ ಆದಾಯದ ಇತಿಮಿತಿಯಲ್ಲೇ ಸಾವಿರಾರು ಮೈಲು ದೂರದಲ್ಲಿರುವ ಕುಟುಂಬವನ್ನೂ ಸಲಹಿ ತಮ್ಮನ್ನೂ ಪೋಷಿಸಿಕೊಳ್ಳುತ್ತಿದ್ದ ಈ ಕಾರ್ಮಿಕರು ಎಂದಾದರೂ ದೇಹಿ ಎಂದಿದ್ದಾರೆಯೇ ? ಇಲ್ಲವಲ್ಲಾ .

ಈಗ ಇವರೇಕೆ ನಮಗೆ ಸಮಸ್ಯೆಯಾಗಿ ಕಾಣುತ್ತಿದ್ದಾರೆ ? ಏಕೆಂದರೆ ಅವರ ಆದಾಯ ಸ್ಥಗಿತಗೊಂಡಿದೆ. ಅವರ ನಾಳಿನ ಕೂಳು ಇಲ್ಲವಾಗಿದೆ. ಇವರನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಬೀದಿಪಾಲಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ವಲಸೆ ಕಾರ್ಮಿಕರಲ್ಲಿ ಕಾಣುತ್ತಿರುವ ಸ್ವಗ್ರಾಮದ ಸೆಳೆತ ನಮ್ಮ ದೃಷ್ಟಿಯಲ್ಲಿ ಅಕ್ಷಮ್ಯ ಎನಿಸಿದರೆ ನಾವು ನಾಗರಿಕರೇ ಅಲ್ಲ ಎನ್ನಬೇಕಾಗುತ್ತದೆ.

“ ವಲಸೆ ” ಎನ್ನುವ ಪದಬಳಕೆಯೇ ನಮ್ಮ ಮತ್ತು ಅವರ ನಡುವೆ ಒಂದು ಗೋಡೆ ನಿರ್ಮಿಸಿಬಿಡುತ್ತದೆ. ಹಾಗೆ ಕೂಡಿ ಬಾಳಿದವರಿಗೇ ಗೋಡೆಯಿಂದಾಚೆ ಇರಲು ಹೇಳುವ ಒಂದು ಸಮಾಜ ವಲಸಿಗರಿಗೆ ಇನ್ನೇನು ಹೇಳಲು ಸಾಧ್ಯ ? ವಲಸೆ ಕಾರ್ಮಿಕರು ಎಂದಾಕ್ಷಣ ನಮ್ಮ ಮನಸಿನಲ್ಲಿ ಅಸ್ಮಿತೆಗಳ ತಾಕಲಾಟ ಶುರುವಾಗುತ್ತದೆ. ಎಲ್ಲಿಂದ ಬಂದವರು, ಯಾವ ಭಾಷಿಕರು, ಅಸ್ಪೃಶ್ಯರೋ ಸ್ಪೃಶ್ಯರೋ, ಉತ್ತರದವರೋ ಈಶಾನ್ಯದವರೋ, ಬಿಹಾರಿಯೋ ಬಂಗಾಲಿಯೋ ಹೀಗೆ.

ಈ ಅಸ್ಮಿತೆಗಳ ಗೋಡೆಗಳನ್ನು ಕಟ್ಟಿಕೊಳ್ಳುತ್ತಲೇ ನಾವು ಅವರನ್ನು ಆಶ್ರಯಿಸುತ್ತೇವೆ. ಅವರು ನಮ್ಮನ್ನು ಆಶ್ರಯಿಸುವುದಿಲ್ಲ, ಅವರ ದುಡಿಮೆಯನ್ನು ಆಶ್ರಯಿಸುತ್ತಾರೆ. ಕೊನೆಗೆ ನಮಗೆ ಸೂರು ಕಲ್ಪಿಸಲು ವರ್ಷಗಟ್ಟಲೆ ದುಡಿಯುವ ನೂರಾರು ಕೈಗಳಿಗೆ ನಾವು ನೀಡುವುದು ಅಳಿದುಳಿದ ಅನ್ನವನ್ನೇ ಹೊರತು ಭೂರಿ ಭೋಜನವೇನಲ್ಲ.

ಇವರಲ್ಲಿ ನಾವು ನಾಗರಿಕ ಪ್ರಜ್ಞೆ ಅಪೇಕ್ಷಿಸುತ್ತೇವೆ, ಸಾಮಾನ್ಯ ಜ್ಞಾನ ಅಪೇಕ್ಷಿಸುತ್ತೇವೆ, ಸಂಯಮ, ತಾಳ್ಮೆ, ಸಹನೆ ಎಲ್ಲವನ್ನೂ ಅಪೇಕ್ಷಿಸುತ್ತೇವೆ. ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಉಚಿತ ಅಕ್ಕಿ ನೀಡಿರಲಿಲ್ಲವೇ ಎನ್ನುವ ಪ್ರಶ್ನೆ ಸಹಜ. ಆದರೆ ಜೀವನ ಎಂದರೆ ಅನ್ನ ಮಾತ್ರವೇ ? ಅಷ್ಟೇ ಆಗಿದ್ದರೆ ದುಡಿಮೆಯೂ ಬೇಕಿಲ್ಲ ಅಲ್ಲವೇ ? ನಾವು ಸುಂದರ ಬದುಕಿನ ಕೋಟೆ ಕಟ್ಟಿಕೊಳ್ಳಲು ಕನಸು ಕಾಣುತ್ತೇವೆ, ಅವರು ತಮ್ಮ ಜೀವನ ಸವೆಸಲು ಅಪೇಕ್ಷಿಸಿದರೆ ನಮ್ಮ ಮನಸಿಗೆ ಹುಳಿ ಹಿಂಡಿದಂತಾಗುತ್ತದೆ.

ಏಕೆ ಹೀಗೆ ? ನಮ್ಮ ಕನಸಿನ ಬದುಕನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಅವರ ಕನಸುಗಳನ್ನೂ ಇಟ್ಟು ನೋಡೋಣವೇ ? ನಮ್ಮ ತಟ್ಟೆಯಲ್ಲಿ ಕುಟುಂಬ, ಮನೆ, ವಾಹನ, ಶಿಕ್ಷಣ, ಉದ್ಯೋಗ, ಮನರಂಜನೆ, ವಿಹಾರ, ಪ್ರಯಾಣ ಇವೆಲ್ಲವೂ ತೂಗುತ್ತವೆ. ಅವರ ತಟ್ಟೆಯಲ್ಲಿ ಆಹಾರ, ಕುಟುಂಬ, ತಂಗಲು ಒಂದು ಚಾವಡಿ ಇಷ್ಟಲ್ಲದೆ ಇನ್ನೇನು ತೂಗುತ್ತದೆ. ಆದರೂ ನಾವು ತುಲಾಭಾರ ಮಾಡಲು ಸದಾ ಸಜ್ಜಾಗಿರುತ್ತೇವೆ.

ಮುಂಬಯಿಯ ಧಾರವಿಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಈ ವಾಸ್ತವ ಮುಖಕ್ಕೆ ರಾಚುತ್ತದೆ. ಹತ್ತು ಅಡಿ ವಿಸ್ತೀರ್ಣದ ಗೂಡಿನಲ್ಲಿ ಹತ್ತು ಜನ ಇರುತ್ತಾರೆ ಎಂದರೆ ನಮಗೆ ಊಹಿಸಲು ಸಾಧ್ಯವೇ ? ಇದನ್ನು ಕಾಣಲು ಅಲ್ಲಿಗೇ ಹೋಗಬೇಕಿಲ್ಲ, ನಾವು ಖರೀದಿಸುವ ಫ್ಲಾಟ್ ಸುತ್ತಲೂ ಅದೇ ವಸತಿಸಮುಚ್ಚಯದ ನಿರ್ಮಾಣದಲ್ಲಿ ತೊಡಗಿರುವ ವಲಸಿಗರ ಗೂಡುಗಳತ್ತ ಒಮ್ಮೆ ಕಣ್ಣು ಹಾಯಿಸಿದರೂ ಸಾಕು, ಧಾರವಿ ಪರಿಚಯವಾಗುತ್ತದೆ. ನಾವು ಅತ್ತ ನೋಡುವುದಿಲ್ಲವಷ್ಟೆ.

ಅವರ ಬಳಿ ಚರವಾಣಿ ಇರುವುದಲ್ಲವೇ ಎಂದು ಹುಬ್ಬೇರಿಸುತ್ತೇವೆ ? ಹೊಟ್ಟೆಗೆ ಹಿಟ್ಟಿಲ್ಲದೆ ಗಾದೆಯೂ ನಮಗೆ ನೆನಪಾಗಿಬಿಡುತ್ತದೆ. ಆದರೆ ಈ ವಲಸಿಗರನ್ನು ಸಾವಿರಾರು ಕಿಲೋಮೀಟರ್ ದೂರಕ್ಕೆ ಕರೆದೊಯ್ದಿರುವ ಒಂದು ಅರ್ಥವ್ಯವಸ್ಥೆಯೇ ಅವರಿಗೆ ಚರವಾಣಿಯನ್ನೂ ಒದಗಿಸುತ್ತದೆ, ತರಂಗಾಂತರವನ್ನೂ ಒದಗಿಸುತ್ತದೆ. ಇಲ್ಲಿ ಬಂಡವಾಳದ ಸ್ವಾರ್ಥವೂ ಇರುವುದುನ್ನು ಗಮನಿಸಬೇಕಷ್ಟೆ.

ಉತ್ತರ ಭಾರತದಲ್ಲಿ ವಲಸೆ ಕಾರ್ಮಿಕರಿಗೆಂದೇ ಶ್ರಮಿಕ ರೈಲುಗಳು ಸಜ್ಜಾಗಿದ್ದರೂ ಸಾವಿರಾರು ಕಾರ್ಮಿಕರು ಕಾಲ್ನಡಿಗೆಯಲ್ಲೇ ಹೊರಟಿದ್ದಾರೆ. ಏಕೆಂದರೆ ಅವರಿಗೆ ಆನ್‍ಲೈನ್ ಅರ್ಜಿ ಮತ್ತು ತಮ್ಮ ಕ್ರಮಸಂಖ್ಯೆಗಾಗಿ ಕಾಯುವಷ್ಟು ವ್ಯವಧಾನ ಇರುವುದಿಲ್ಲ.

ಅದಕ್ಕೇ ಮಹಾರಾಷ್ಟ್ರದಲ್ಲಿ ರೈಲಿಗೆ ಸಿಲುಕಿ ಸತ್ತಿದ್ದು, ಸ್ವಲ್ಪ ದಿನ ತಡೆದಿದ್ದರೆ ಏನಾಗುತ್ತಿತ್ತು ? ಮತ್ತೊಂದು ಪ್ರಶ್ನೆ ನಮ್ಮ ನಡುವೆ ಉದ್ಭವಿಸುತ್ತದೆ. ನಿಜ, ತಡೆದಿದ್ದರೆ ಅವರು ಬದುಕಬಹುದಿತ್ತು. ಆದರೆ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಕುಟುಂಬಗಳೊಡನೆ ಸಂಪರ್ಕವನ್ನೇ ಕಡಿದುಕೊಂಡ ಸಾವಿರಾರು ಕಾರ್ಮಿಕರಲ್ಲಿ ನಾವು ವ್ಯವಧಾನವನ್ನು ಅಪೇಕ್ಷಿಸುವುದಾದರೂ ಹೇಗೆ ? ಸರ್ಕಾರ ಅವರಿಗೆ ಉಚಿತ ಅಕ್ಕಿ ನೀಡಿದೆ, ಮೊಬೈಲ್ ರೀಚಾರ್ಜ್ ಮಾಡಿಸಲು 10 ರೂ ಕೊಡುವವರಿಲ್ಲ. ತಮ್ಮ ಹೆಂಡತಿ ಮಕ್ಕಳೊಡನೆ ಮಾತನಾಡುವ ತವಕ ಅವರಿಗೆ ಇರುವುದಿಲ್ಲವೇ ? ಇದು ನಮಗೆ ಗೋಚರಿಸುವುದೇ ಇಲ್ಲ. ಏಕೆಂದರೆ ನಮ್ಮ ಮತ್ತು ಅವರ ನಡುವೆ ಒಂದು ಗೋಡೆ ಇದೆ. ಅದು ಅನೇಕ ಸಂಗತಿಗಳನ್ನು ನುಂಗಿಹಾಕಿಬಿಡುತ್ತದೆ.

ಈ ಕಾರ್ಮಿಕರಿಗಾಗಿಯೇ ಸರ್ಕಾರಗಳು ಸಾಕಷ್ಟು ಕಾನೂನುಗಳನ್ನು ಜಾರಿ ಮಾಡಿವೆ. ಕಟ್ಟುನಿಟ್ಟಾದ ಕಾಯ್ದೆಗಳಿವೆ. ಆದರೆ ಇವರನ್ನು ನಿರ್ವಹಿಸುವ ಗುತ್ತಿಗೆದಾರರನ್ನು ನಿಯಂತ್ರಿಸಲು ಯಾವ ಕಾಯ್ದೆ ಕಾನೂನು ಇದೆ ಎಂದು ನೋಡಿದಾಗ ಮೂಕವಿಸ್ಮಿತರಾಗುತ್ತೇವೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ, ರಸ್ತೆ ಮತ್ತು ರೈಲು ನಿರ್ಮಾಣ ಕಾಮಗಾರಿಯಲ್ಲಿ, ಸಾರ್ವಜನಿಕ ಸೌಕರ್ಯಗಳ ನಿರ್ಮಾಣ ಕಾಮಗಾರಿಗಳಲ್ಲಿ ಬಂಡವಾಳಿಗರ ಮಾಫಿಯಾ ಎಷ್ಟು ಬಲಿಷ್ಠವಾಗಿದೆಯೋ ಅಷ್ಟೇ ಬಲಿಷ್ಠವಾಗಿರುವುದು ಗುತ್ತಿಗೆದಾರರ ಮಾಫಿಯಾ.

ಇದು ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ, ಆಡಳಿತ ನಿರ್ವಹಿಸುವ ಅಧಿಕಾರಶಾಹಿಗೆ ತಿಳಿಯದ ವಿಷಯವೇನಲ್ಲ. ಆದರೂ ಒಂದು ವ್ಯವಸ್ಥೆ ಎಲ್ಲರನ್ನೂ ತೆಪ್ಪಗಾಗಿಸುತ್ತದೆ. ಈ ವ್ಯವಸ್ಥೆಯ ಅಂಗಳದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳ ದುಷ್ಟ ಕೂಟಗಳು ತಮ್ಮದೇ ಆದ ಸುಭದ್ರ ನೆಲೆಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಸರ್ಕಾರಕ್ಕೆ, ಪ್ರಭುತ್ವಕ್ಕೆ ಇದರ ಸ್ಪಷ್ಟ ಅರಿವು ಇರುತ್ತದೆ. ಆ ವ್ಯವಸ್ಥೆಯನ್ನು ದೂಷಿಸಿದರೆ ತಪ್ಪೇನಿದೆ ?

ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲೆಂದೇ ಜಾಗತಿಕ ಹಣಕಾಸು ಬಂಡವಾಳ ಪ್ರತಿಯೊಂದು ದೇಶದಲ್ಲೂ ತನ್ನದೇ ಹಿತವಲಯದ ಆಡಳಿತ ವ್ಯವಸ್ಥೆಯನ್ನು ರೂಪಿಸುತ್ತದೆ. ನಾವು ಚುನಾಯಿಸುವ ಸರ್ಕಾರಗಳು ಮತ್ತು ನಮ್ಮ ಚಟುವಟಿಕೆಗಳನ್ನು ನಿಯಂತ್ರಿಸುವ ಪ್ರಭುತ್ವ ಈ ವ್ಯವಸ್ಥೆಯ ಚೌಕಟ್ಟಿನಿಂದ ಹೊರಬರುವ ವ್ಯವಧಾನವೂ ಇಲ್ಲದೆ, ಸಂಯಮವೂ ಇಲ್ಲದೆ, ಸಂವೇದನೆಯೂ ಇಲ್ಲದೆ ಬಂಡವಾಳದ ಜೀತದಾಳುಗಳಂತೆ ಕಾರ್ಯನಿರ್ವಹಿಸುತ್ತದೆ.

ವಲಸೆ ಕಾರ್ಮಿಕರಲ್ಲಿ ವ್ಯವಧಾನ ಅಪೇಕ್ಷಿಸುವ ನಾಗರಿಕ ಸಮಾಜ, ಅಂದರೆ ನಾವು, ಈ ವ್ಯವಸ್ಥೆಯ ನಿರ್ವಾಹಕರಲ್ಲಿ ಅದನ್ನು ಬಯಸುವುದಿಲ್ಲ. ಏಕೆಂದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ವ್ಯವಸ್ಥೆಯ ಒಂದು ಭಾಗವಾಗಿರುತ್ತೇವೆ. ಈ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ಸಂರಕ್ಷಿಸುವ ಪ್ರಭುತ್ವ ನಮ್ಮ ಪಾಲಿಗೆ ಅಪ್ಯಾಯಮಾನವಾಗುತ್ತದೆ.

ಕಾರಣ, ಯೋಚಿಸುವ ಮನಸುಗಳನ್ನು ವ್ಯವಸ್ಥೆಯೇ ಖರೀದಿಸುತ್ತದೆ. ಶಿಕ್ಷಣದ ಮೂಲಕ, ಮಾಧ್ಯಮಗಳ ಮೂಲಕ, ಅಂತರ್ಜಾಲದ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ಸಾಂಸ್ಥಿಕ ನೆಲೆಗಳ ಮೂಲಕ. ಈ ವಶೀಕರಣ ಪ್ರಕ್ರಿಯೆಗೆ ನಾವು, ಅಂದರೆ ಆಲೋಚಿಸುವ ಶಕ್ತಿಯುಳ್ಳ ಮನಸುಗಳು, ಸುಲಭ ತುತ್ತಾಗುತ್ತೇವೆ. ನಮ್ಮ ಆಯ್ಕೆಗಳು ಪ್ರಭುತ್ವದ ಆದ್ಯತೆಯಾಗಿಬಿಡುತ್ತವೆ, ನಮ್ಮ ಆದ್ಯತೆಗಳು ವ್ಯವಸ್ಥೆಯ ಆಯ್ಕೆಯಾಗಿಬಿಡುತ್ತದೆ.

ಇದಕ್ಕೆ ಗುರುದಕ್ಷಿಣೆಯಂತೆ ನಾವು ಐದು ವರ್ಷಕ್ಕೊಮ್ಮೆಯೋ, ನಡುನಡುವೆಯೋ ಮತಗಟ್ಟೆಗೆ ಹೋಗಿ ಗುರುವಲ್ಲದ ಗುರುವಿಗೆ ನಮ್ಮ ಹೆಬ್ಬೆರಳುಗಳನ್ನು ಅರ್ಪಿಸುತ್ತಲೇ ಬಂದಿದ್ದೇವೆ. ನಮ್ಮ ಹಿತವಲಯ ಸುರಕ್ಷಿತವಾಗಿಬಿಡುತ್ತದೆ. ನಮ್ಮ ಬೇಕು ಬೇಡಗಳ ಚೆಂಡಾಟಕ್ಕೆ ಮೈದಾನ ಹಿಗ್ಗುತ್ತಲೇ ಹೋಗುತ್ತದೆ. ಹೀಗಿರುವಾಗ ನಮಗೆ ನಾವೇ ಕಟ್ಟಿದ ಗೋಡೆಯ ಆಚೆಗಿನ ಪ್ರಪಂಚ ಕಾಣುವುದಾದರೂ ಹೇಗೆ ?

ಹಾಗಾಗಿಯೇ ನಮಗೆ ಒಂದು ಸೈಕಲ್ ಮೇಲೆ ಸಾವಿರ ಕಿಲೋಮೀಟರ್ ಹೋಗುವವನು, ಬಿರುಬಿಸಿಲಲ್ಲಿ ಮಗುವನ್ನು ತಲೆಯಮೇಲೆ ಹೊತ್ತು ಹೋಗುವವನು, ಕೊಂಕುಳಲ್ಲಿ ಹಸಿವಿನಿಂದ ಅಳುತ್ತಿರುವ ಕಂದಮ್ಮನನ್ನು ಹೊತ್ತು ಹೋಗುವವಳು ವಿಚಿತ್ರವಾಗಿ ಕಾಣುತ್ತಾರೆ. ನಮ್ಮ ಮತ್ತು ಅವರ ನಡುವೆ “ ವಲಸೆ ” ಎನ್ನುವ ಅಕ್ಷರದ ಗೋಡೆಯೊಂದು ನಿಂತಿರುತ್ತದೆ. ಇವರು ಇಲ್ಲೇ ಇದ್ದರೆ ಏನು ಗಂಟು ಹೋಗುತ್ತೆ ಎನ್ನುವ ಪ್ರಶ್ನೆಯೂ ಸಹಜ.

ಆದರೆ ಈ ಪ್ರಶ್ನೆಯ ಹಿಂದೆ ನಮ್ಮ ಸ್ವಾರ್ಥವೂ ಇದೆ ಅಲ್ಲವೇ ? ನಾಳೆಯಿಂದ ಶ್ರಮದ ಬೆಲೆ ಹೆಚ್ಚಾಗುತ್ತದೆ ಎನ್ನುವ ಆತಂಕ. ಗುತ್ತಿಗೆದಾರನಿಗೆ ಹೆಚ್ಚಿನ ಕೂಲಿ ನೀಡಬೇಕಾದ ಆತಂಕ. ಈ ಆತಂಕಗಳಿಗೆ ವಲಸಿಗರ ತಕ್ಕಡಿಯ ತಟ್ಟೆಯಲ್ಲಿ ಜಾಗವೇ ಇರುವುದಿಲ್ಲ. ನಮಗೆ ಜೀವನ ಮತ್ತು ಜೀವನೋಪಾಯ ಒಂದೇ ಸೂರಿನಡಿ ಇರುತ್ತದೆ. ಅವರಿಗೆ ಎರಡರ ನಡುವೆ ನೂರಾರು ಮೈಲು ಅಂತರ ಇರುತ್ತದೆ.

ಈ ಕಟುವಾಸ್ತವವನ್ನು ಅರಿಯಲು ಬೇಕಾದ ಮುನ್ನೋಟ ನಮ್ಮ ಸಮಾಜದ ಹಲವು ವರ್ಗಗಳಲ್ಲಿ ಇಲ್ಲ ಎನ್ನುವುದನ್ನು ಕೊರೋನಾ ನಿರೂಪಿಸಿದೆ. ಸರ್ಕಾರದಿಂದ ಇದನ್ನು ಅಪೇಕ್ಷಿಸಲಾಗುವುದಿಲ್ಲ. ಪ್ರಭುತ್ವದಿಂದ ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಅವೆರಡೂ ವ್ಯವಸ್ಥೆಯ ಸಂರಕ್ಷಣೆಗಾಗಿಯೇ ಇರುವ ಸಾಂಸ್ಥಿಕ ಸ್ಥಾವರಗಳು.

ಆದರೆ ನಾಗರಿಕ ಸಮಾಜ ಸ್ಥಾವರವಾಗಬಾರದು ಅಲ್ಲವೇ ? ಸದೃಢ ದೇಶ ನಿರ್ಮಾಣಕ್ಕಾಗಿ ಬೆವರು ಸುರಿಸಿ ದುಡಿವ ಶ್ರಮಿಕರ ಮಡುಗಟ್ಟಿದ ಭಾವನೆಗಳು ಜಡಗಟ್ಟಿದ ವ್ಯವಸ್ಥೆಗೆ ಅರ್ಥವಾಗುವುದಿಲ್ಲ. ಒಂದು ಜಂಗಮ ಸ್ವರೂಪಿ ಸಮಾಜಕ್ಕೆ ಮಾತ್ರ ಅರ್ಥವಾಗುತ್ತದೆ. ಅಂತಹ ಒಂದು ಸಮಾಜವನ್ನು ಇನ್ನಾದರು ನಾವು ಕಟ್ಟಬೇಕಿದೆ ಎನಿಸುವುದಿಲ್ಲವೇ ? ಇನ್ನೂ ಹಾಗೆನಿಸಿದದಿದ್ದರೆ, ಕೊರೋನಾ ನಮ್ಮ ನಡುವೆ ಇನ್ನೂ ಇರುತ್ತದೆ. ನಮಗೆ ಈ ಪಾಠವನ್ನು ಕಲಿಸಿಯೇ ತೀರುತ್ತದೆ. ಲಾಕ್ ಡೌನ್ ಇರಲಿ, ಇಲ್ಲದಿರಲಿ, ನಮ್ಮ ಮನಸಿನ ಬಾಗಿಲುಗಳನ್ನು ಸೀಲ್ ಡೌನ್ ಮಾಡುವುದು ಬೇಡ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version