ದಿನದ ಸುದ್ದಿ
ದಾವಣಗೆರೆ | ಕೆನರಾ ಬ್ಯಾಂಕ್ ವತಿಯಿಂದ ಕೋರೋನಾ ಸಂತ್ರಸ್ತರಿಗೆ ಉಚಿತ ಆಹಾರ ವಿತರಣೆ
ಸಾಧನೆ ಮತ್ತು ಅರ್ಪಣೆಯ ಮೂಲಕ ಕೆನರಾ ಬ್ಯಾಂಕ್ ಸಮಾಜ ಸೇವೆ ಮಾಡುತ್ತಿದೆ.
| ಹೆಚ್.ರಘುರಾಜ, ಸಹಾಯಕ ಮಹಾ ಪ್ರಬಂಧಕರು,
ಕೆನರಾ ಬ್ಯಾಂಕ್
ಸುದ್ದಿದಿನ,ದಾವಣಗೆರೆ : ದೇಶದಲ್ಲಿ ತನ್ನ ಸಾಧನೆಯ ಮೂಲಕ ಅಗ್ರಗಣ್ಯ ರಾಷ್ಟ್ರೀಕೃತ ಬ್ಯಾಂಕಾಗಿರುವ ಕೆನರಾ ಬ್ಯಾಂಕ್ ತನ್ನ ಲಾಭದಲ್ಲಿ ಒಂದಿಷ್ಟು ಪಾಲನ್ನು ಸಮಾಜಕ್ಕಾಗಿ ಅರ್ಪಣೆ ಮಾಡುವುದರ ಮೂಲಕ ಸಮಾಜ ಸೇವೆ ಮಾಡುತ್ತಿದೆ ಎಂದು ಕೆನರಾ ಬ್ಯಾಂಕಿನ ದಾವಣಗೆರೆ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕರಾದ ಹೆಚ್.ರಘುರಾಜ ಅವರು ಹೇಳಿದರು.
ಅವರು ಇಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋರೋನಾ ಸಂತ್ರಸ್ತರಿಗೆ, ಸಂತ್ರಸ್ತರ ಪರಿಚಾರಕರಿಗೆ, ಕೋರೋನಾ ವಾರಿಯರ್ಸ್ಗಳಿಗಾಗಿ ಕೆನರಾ ಬ್ಯಾಂಕ್ ಆಯೋಜಿಸಿದ್ದ ಎರಡನೇ ದಿನದ ಉಚಿತ ಆಹಾರ ಸೇವೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೆನರಾ ಬ್ಯಾಂಕ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಲಾಭ ಗಳಿಸುತ್ತಿದೆ.
ಹಾಗಾಗಿ ಕೋರೋನಾದ ಈ ವಿಷಮ ಪರಿಸ್ಥಿತಿಯಲ್ಲಿ ದೇಶದ ಉದ್ದಗಲದಲ್ಲೂ ಹಲವಾರು ರೀತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ. ಇದು ಕೆನರಾ ಬ್ಯಾಂಕಿಗೆ ಹೆಮ್ಮೆಯ ವಿಷಯ. ಕೋರೋನಾ ವಿರುದ್ಧದ ಹೋರಾಟದಲ್ಲಿ ನಾವು ಸದಾ ಸರಕಾರದೊಂದಿಗೆ ಮತ್ತು ಕೊರೋನಾ ಸಂತ್ರಸ್ತರೊಂದಿಗೆ ಕೈಜೋಡಿಸುತ್ತೇವೆ. ಈ ಆಹಾರ ಸೇವೆ ನಾಳೆಯೂ ಮುಂದುವರೆಯಲಿದೆ ಎಂದು ಹೆಚ್.ರಘುರಾಜ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಸುಶೃತ್ ಡಿ ಶಾಸ್ತ್ರಿ ಮಾತನಾಡಿ ಕೆನರಾ ಬ್ಯಾಂಕ್ ಸದಾ ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸುತ್ತಿದೆ ಎಂದರು.
ಇಂದಿನ ಈ ಆಹಾರ ವಿತರಣಾ ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಸುಶೃತ್ ಡಿ ಶಾಸ್ತ್ರಿ, ಚಿಗಟೇರಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಮಂಜುನಾಥ ಪಾಟೀಲ್, ಜಿಲ್ಲಾಸ್ಪತ್ರೆಯ ಪಾರ್ಮಾಸಿಸ್ಟ್ ಶ್ರೀನಿವಾಸ ಮಠದ್, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳಾದ ಎಸ್.ವಿ.ರಾಮಕೃಷ್ಣ ನಾಯ್ಕ್, ಬಿ.ಎ.ಸುರೇಶ್, ಕೆ.ಶಶಿಕುಮಾರ್, ಕೆ.ವಿಶ್ವನಾಥ ಬಿಲ್ಲವ, ಸಿ.ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಕೆ.ರಾಘವೇಂದ್ರ ನಾಯರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243