ದಿನದ ಸುದ್ದಿ
ದಾವಣಗೆರೆ | ನಮ್ಮ ನಗರ-ನಮ್ಮ ಕೆರೆ ಸ್ವಚ್ಚತಾ ಆಂದೋಲನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
ಸುದ್ದಿದಿನ,ದಾವಣಗೆರೆ : ನಗರದ ಆಕರ್ಷಕ ಬಿಂದುವಾದ ಕುಂದುವಾಡ ಕೆರೆ ಸುತ್ತಲಿನ ವಾಕಿಂಗ್ ಪಾಥ್ನಲ್ಲಿ ಕೆಬೆಳಗಿನ ಚುಮು ಚುಮು ಚಳಿಯಲ್ಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ, ಪಾಲಿಕೆ ಆಯುಕ್ತರು ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಬಿರುಸಿನಿಂದ ಸ್ವಚ್ಚತೆ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದು ಎಲ್ಲರಿಗೂ ಮಾದರಿಯಾಗಿ ಕಂಡು ಬಂದಿತು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಕುಂದುವಾಡ ಕೆರೆ ಪ್ರದೇಶದಲ್ಲಿ ನ.26 ರ ಬೆಳಿಗ್ಗೆ 6 ಗಂಟೆಯಿಂದ ‘ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ಇಲ್ಲಿ ಭಾಗವಹಿಸುವುದರೊಂದಿಗೆ ಕೈ ಜೋಡಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ನಮ್ಮ ನಗರ-ನಮ್ಮ ಕೆರೆ ಸ್ವಚ್ಚತಾ ಆಂದೋಲನಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ವಚ್ಚತೆ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಚಾಲನೆ ನೀಡಿದರು.
ನಾವು ನಮ್ಮ ಸುತ್ತಮುತ್ತ ಬಯಸುವ ಬದಲಾವಣೆ ಮೊದಲು ನನ್ನಲ್ಲಿ ಆಗಬೇಕು. ಆಗ ಮಾತ್ರ ಧನಾತ್ಮಕ ಬದಲಾವಣೆ ಸಾಧ್ಯ. ನಾಗರೀಕ ಮಿತ್ರರಾದ ನಾವೆಲ್ಲ ನಮ್ಮ ಮನೆ ಸುತ್ತಮುತ್ತ ವಾತಾರವಣ ಸ್ವಚ್ಚವಾಗಿಟ್ಟುಕೊಳ್ಳುವ, ಚರಂಡಿ ಇತರೆ ಸ್ವಚ್ಚವಾಗಿಟ್ಟುಕೊಳ್ಳುವ ಸಂಕಲ್ಪ ತೊಡಬೇಕು. ಆಗ ಇಡೀ ನಗರ ಸ್ವಚ್ಚವಾಗಿ ಕಂಗೊಳಿಸುತ್ತದೆ. ನಾವು ಇಂದು ಎಷ್ಟು ಲೋಡ್ ಕಸ ಸಂಗ್ರಹಿಸಿದೆವು ಎನ್ನುವುದಕ್ಕಿಂತ ಮುಖ್ಯವಾಗಿ, ಎಷ್ಟು ಹಸುರೀಕರಣ ಮಾಡಿದೆವು ಅನ್ನುವುದು ಮುಖ್ಯವಾಗುತ್ತೆ.
ಜಿಲ್ಲಾಡಳಿತ, ಪಾಲಿಕೆ, ದೂಡದವರೇ ಸ್ವಚ್ಚತೆ ಮಾಡಬೇಕೆಂದು ವ್ಯವಸ್ಥೆಯನ್ನು ದೂರುವ ಬದಲಾಗಿ ಎಲ್ಲರೂ ಕೂಡಿ ಕೆಲಸ ಮಾಡೋಣ ಎಂಬ ಮನಸ್ಥಿತಿ ನಿರ್ಮಾಣ ಆಗಬೇಕು. ಆಗ ಬದಲಾವಣೆ ಸಾಧ್ಯ. ನಗರದ ಒಬ್ಬೊಬ್ಬರು ಒಂದು ಕಳೆಯ ಗಿಡವನ್ನು ಕಿತ್ತರೂ ಸಾಕು ನಗರ ಸ್ವಚ್ಚವಾಗುತ್ತದೆ. ಹಾಗೂ ನಾಗರೀಕರು ಮನಸ್ಸು ಮಾಡಿದರೆ ಇಂತಹ 10 ಕೆರೆಯನ್ನು ಸ್ವಚ್ಚಗೊಳಿಸಬಹುದು. ಪ್ರಜ್ಞಾವಂತ ನಾಗರೀಕರಾದ ನಾವು ಇತರರನ್ನು ದೂರುವ ಮುನ್ನ ನಮ್ಮನ್ನು ನಾವು ಬದಲಾಯಿಸಿಕೊಂಡು ನಮ್ಮ ಸುತ್ತಮುತ್ತ ಹಾಗೂ ನಮ್ಮ ನಗರ, ನೆಲೆಯನ್ನು ಸ್ವಚ್ಚವಾಗಿಟ್ಟುಕೊಳ್ಳೋಣ ಎಂದು ಕರೆ ನೀಡಿದರಲ್ಲದೇ ನಿರಂತರ ಈ ಸ್ಚಚ್ಚತೆ ಕಾರ್ಯ ಸಾಗಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ ಸೇರಿದಂತೆ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕರು, ವಾಯು ವಿಹಾರ ಬಳಗದವರು ಸಂತೋಷದಿಂದ ಕೈಜೋಡಿಸಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದೀರಿ. ಇದು ಇಂದಿಗೆ ಮಾತ್ರ ಸೀಮಿತವಲ್ಲ. ಬದಲಾಗಿ ನಿರಂತರವಾಗಿ ನಡೆಯುವಂತಹ ಕೆಲಸ. ಆಸಕ್ತರೆಲ್ಲರೂ ದಿನವೂ ತಮ್ಮ ಶ್ರಮದಾನ ಮಾಡಬಹುದು. ಕುಂದುವಾಡ ಕೆರೆ ಸುತ್ತ ಉತ್ತಮ ಗಿಡ ಮರಗಳಿದ್ದು ಮೈಕ್ರೋ ಪರಿಸರ ಏರ್ಪಟ್ಟಿದೆ. ಇದು ಮನಸ್ಸಿಗೆ ಚೇತೋಹಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮದಾನದ ಮೂಲಕ ನಮ್ಮ ನಗರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳೋಣ ಎಂದು ಹೇಳಿದರು.
ಸ್ವಚ್ಚತಾ ಆಂದೋಲನದಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ, ದೂಡಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ವಾಯುವಿಹಾರ ಬಳಗದವರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243