ದಿನದ ಸುದ್ದಿ
ದೀಪಾವಳಿ ಅಲ್ಲ ‘ದೀಪ ದಾನ ಉತ್ಸವ’ ಆಚರಿಸೋಣ
- ವಿಶ್ವನಾಥ ಎಸ್ ಕರಡಿ
ಬೌದ್ಧರು(ಬಹುಜನರು)ಆಚರಣೆ ಮಾಡಬೇಕಿರುವುದು ದೀಪಾವಳಿ ಹಬ್ಬ ಅಲ್ಲ ಅದರ ಬದಲಾಗಿ ‘ದೀಪ ದಾನ ಉತ್ಸವ’ವನ್ನು ಆಚರಿಸಬೇಕು.
ಈ ದೀಪ ಧಾನ ಉತ್ಸವದ ಹಿನ್ನೆಲೆ ಏನೆಂದರೆ ಕಪಿಲವಸ್ತುವಿನ ರಾಜಕುಮಾರ ಸಿದ್ದಾರ್ಥ ಮನೆಯನ್ನು ಬಿಟ್ಟು ಹೋಗಿ ವೇಸಾಕ ಪೂರ್ಣಿಮೆಯಂದು ಭೋದಿ ಪ್ರಾಪ್ತಿ ಮಾಡಿಕೊಂಡು ಬುದ್ದ ಆಗುತ್ತಾರೆ. ಬುದ್ದ ಆದ ನಂತರ ಅವರು ಮನೆ ಬಿಟ್ಟು ಸತತ 17 ವರುಷಗಳ ನಂತರ ಕಪಿಲವಸ್ತುವಿಗೆ ಬುದ್ಧರಾಗಿ ಬಂದಾಗ ಊರಿನ ತುಂಬಾ ದೀಪಗಳನ್ನು ಪ್ರಜ್ವಲಿಸುವ ಮುಖಾಂತರ ಬುದ್ಧರನ್ನು ಸ್ವಾಗತಿಸುತ್ತಾರೆ.
ಸಾಮ್ರಾಟ ಅಶೋಕನು ಕಳಿಂಗ ಯುದ್ಧದ ನಂತರ ಶಸ್ತ್ರ ತ್ಯಾಗ ಮಾಡಿ ಬೌದ್ದ ಧಮ್ಮಕ್ಕೆ ಶರಣಾಗಿ ಒಂದು ತಿಂಗಳು ಬೌದ್ದ ಸ್ಥಳಗಳಿಗೆ ಭೇಟಿ ಕೊಡುತ್ತಾನೆ. ಈ ಭೇಟಿಯ ನಂತರ ಕಾರ್ತಿಕ ಅಮವಾಸೆಯ ದಿನ ಬುದ್ಧರನ್ನು ಕಪಿಲವಸ್ತುವಿಗೆ ಸ್ವಾಗತಿಸಿದ ದಿನವನ್ನು ಸಾಮ್ರಾಟ ಅಶೋಕನು ‘ದೀಪ ದಾನ ಉತ್ಸವ‘ ಎಂಬ ಆಚರಣೆಯನ್ನು ಮಾಡುತ್ತಾನೆ.
ದೀಪ ಧಾನ ಉತ್ಸವದಲ್ಲಿ ಹೊಸ ಬಟ್ಟೆ ಧರಿಸಿ ಬುದ್ದ, ಧಮ್ಮ, ಸಂಘಕ್ಕೆ ವಂದಿಸಿ ಸಿಹಿ ತಿಂಡಿ ಮಾಡಿ ತಿಂದು ಸ್ನೇಹಿತರು, ಬಂಧುಗಳು ತಂದೆ, ತಾಯಿ, ಮಕ್ಕಳು ಎಲ್ಲರೂ ಜ್ಞಾನದ ಸಂಕೇತವಾಗಿರುವ ದೀಪವನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಈ ಹಬ್ಬವನ್ನು ಆಚರಿಸಬೇಕು. ಈ ಆಚರಣೆಯ ಉದ್ದೇಶ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವುದಾಗಿದೆ.
ಆದರೆ ಇಂದು ದೀಪ ದಾನ ಉತ್ಸವವನ್ನು ವಿಕೃತಗೊಳಿಸಿ ಮನುವಾದಿಗಳು ದೀಪಾವಳಿ ಮಾಡಿದ್ದಾರೆ ಈ ಹಬ್ಬದಲ್ಲಿ ಪಟಾಕಿ ಸಿಡಿಸಿ ಶಬ್ದಮಾಲಿನ್ಯ ಉಂಟುಮಾಡಿ ಲಕ್ಷ್ಮಿ ಪೂಜೆ ಮಾಡುತ್ತಾರೆ ಮತ್ತು ದನ ಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಾರೆ. ಬುದ್ಧರ ತಾಯಿ ಮಹಾಮಾಯೆಯನ್ನು ಲಕ್ಷ್ಮಿ ದೇವಿಯನ್ನಾಗಿ ವಿಕೃತಿಸಿದ್ದು ಕೂಡ ಇದೆ.
ಒಟ್ಟಿನಲ್ಲಿ ಬಾಬಾಸಾಹೇಬರು ಹೇಳಿದಂತೆ ಕ್ರಾಂತಿಗೆ ಪ್ರತಿಕ್ರಾಂತಿಯನ್ನು ನಾವು ಸರಿಯಾಗಿ ತಿಳಿದುಕೊಂಡು ನಮ್ಮ ನೈಜ್ಯ ಸಂಸ್ಕೃತಿಯನ್ನು ಆಚರಿಸಿ ಸಂಭ್ರಮಿಸುವ ಅವಶ್ಯಕತೆ ಇದೆ. ಜಂಬೂದ್ವೀಪದ ಸಂಸ್ಕೃತಿಯಲ್ಲಿ ನಾವು ಮಾಡಿರುವ ಕ್ರಾಂತಿಗೆ ಮನು ಸಂತಾನಿಗಳು ಪ್ರತಿಕ್ರಾಂತಿ ಮಾಡಿದ್ದಾರೆ ಆ ಪ್ರತಿಕ್ರಾಂತಿಯ ವೈಭವಿಕೃತ ಹಬ್ಬಗಳನ್ನು ಆಚರಿಸುತ್ತಿದ್ದೇವೆ ಎಂಬುದು ದುಃಖದ ವಿಷಯ. ಅದರಲ್ಲೂ ಬಾಬಾಸಾಹೇಬರ ಹೋರಾಟದ ಬೆವರಿನ ಫಲ ಉಣ್ಣುತ್ತಿರುವ ನೌಕರಸ್ಥರೇ ಇದಕ್ಕೆ ಬೆನ್ನು ಬಿದ್ದಿದ್ದಾರೆ.
ಈ ದೀಪಾವಳಿ ಆಸುಪಾಸು #ಬಲಿಪಾಡ್ಯ ಎಂದು ಕೂಡ ಆಚರಿಸುವುದುಂಟು ಆ ದಿನವನ್ನು ಮೂಲನಿವಾಸಿ ದಾನವ(ದಾನ ನೀಡುವವರು)ರಾಜ ಬಳಿ ಚಕ್ರವರ್ತಿಯನ್ನು ವಾಮನ ಎನ್ನುವ ಬ್ರಾಹ್ಮಣ ಮೋಸದಿಂದ ಕೊಂದ ದಿನವನ್ನೂ ಕೂಡ ಮನು ಸಂತಾನಿಗಳು ಹಬ್ಬವೆಂದು ಆಚರಿಸುವುದುಂಟು. ಬಳಿ ಚಕ್ರವರ್ತಿ ಒಬ್ಬ ದಕ್ಷ ಆಡಳಿತಗಾರ ಹಾಗೂರೈತಾಪಿ ರಾಜ ಆಗಿದ್ದನು.
ಆದರೂ ಅವನನ್ನು ಮೋಸದಿಂದ ಕೊಲ್ಲಲಾಯಿತು ಎಂದು ಹೇಳುವ ಬದಲು ವಾಮನ ಎಂಬುವವ ಮೂರು ಹೆಜ್ಜೆ ಜಾಗ ದಾನ ಬೇಡಿದ ಆಗ ಒಂದು ಹೆಜ್ಜೆ ಭೂಮಿಮೇಲೆ ಇನ್ನೊಂದು ಆಕಾಶಕ್ಕೆ ಮತ್ತೊಂದು ಬಳಿ ಚಕ್ರವರ್ತಿಯ ತಲೆ ಮೇಲೆ ಇಟ್ಟು ಪಾತಾಳಕ್ಕೆ ತಳ್ಳಿದ ಎಂದು ಬುರುಡೆ ಬಿಟ್ಟು ಹಬ್ಬ ಆಚರಿಸುತ್ತಾರೆ. ಪುರಾಣದ ಕಥೆ ಏನೇ ಇರಲಿ ಆದರೆ ಆ ಕಥೆಯಿಂದ ನಮಗೆ ಅವರು ಮೋಸ ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಲಿದ್ದಾರೆ ಎಂಬ ವಿಷಯ ಸ್ಪಷ್ಟವಾಗುತ್ತದೆ.
ಒಟ್ಟಿನಲ್ಲಿ ನಾವು ಮನುವಾದಿಗಳು ನಮ್ಮನ್ನು ಮೂರ್ಖರನ್ನಾಗಿಸಲು ಹೆಣೆದಿರುವ ಮೋಸದ ಕಥೆಗಳನ್ನು ನಂಬದೆ ಅವರ ಶ್ರೇಷ್ಠತ್ವ ಸಾರುವ ಅರ್ಥ ಇಲ್ಲದ ವ್ಯರ್ಥ ಹಬ್ಬಗಳನ್ನು ಆಚರಿಸದೆ ನಮ್ಮದೇ ಇತಿಹಾಸ ಇರುವ ನಮ್ಮ ಸಂಸ್ಕೃತಿಯ ಹಬ್ಬಗಳನ್ನು ಆಚರಿಸಿ ನಮ್ಮ ಇತಿಹಾಸ ನೆನಪಿಸಿಕೊಳ್ಳುತ್ತಾ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುತ್ತಾ ಬುದ್ದ, ಬಸವ, ಅಂಬೇಡ್ಕರರ ಹೋರಾಟದ ರಥವನ್ನು ಗುರಿ ಮುಟ್ಟಿಸುವ ಕಡೆಗೆ ಒಯ್ಯೋಣ ಬನ್ನಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243