ಬಹಿರಂಗ
ಗಾಂಧೀಜಿಯವರಿಗೆ ಅಂಬೇಡ್ಕರ್ ಕೊಟ್ಟ ಒಂದು ಪ್ರತ್ಯುತ್ತರ : ಡಾ.ಬಿ.ಆರ್. ಅಂಬೇಡ್ಕರ್ ಈ ಬರಹ ಓದಿ
ಜಾತ್ – ಪತ್ – ತೋಡಕ್ ಮಂಡಲಕ್ಕಾಗಿ ನಾನು ಸಿದ್ದಪಡಿಸಿದ ಜಾತಿ ವಿಷಯದ ಉಪನ್ಯಾಸವನ್ನು ಗಮನಿಸಿ ತಮ್ಮ ಹರಿಜನ ಪತ್ರಿಕೆಯಲ್ಲಿ ಉಲ್ಲೇಖಿಸುವ ಮೂಲಕ ಮಹಾತ್ಮರು ನನ್ನನ್ನು ಗೌರವಿಸಿದ್ದಾರೆ. ಇದನ್ನು ನಾನು ತುಂಬ ಮೆಚ್ಚುತ್ತೇನೆ. ಅವರು ಮಾಡಿದ ನನ್ನ ಉಪನ್ಯಾಸದ ವಿಮರ್ಶೆಯನ್ನು ನೋಡಿದರೆ ಜಾತಿಯ ಬಗೆಗೆ ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಹಾತ್ಮಾಜಿ ಸಂಪೂರ್ಣವಾಗಿ ವಿರೋಧಿಸುತ್ತಾರೆಂಬುದು ಸ್ಪಷ್ಟವಾಗುತ್ತದೆ.
ವಿರೋಧಿಗಳೊಡನೆ ವಾದಕ್ಕೆ ನಿಲ್ಲುವುದು ನನ್ನ ಪದ್ಧತಿಯಲ್ಲ. ನಾನು ವಾದಿಸಲೇಬೇಕೆಂಬಂತಹ ವಿಶೇಷ ಕಾರಣಗಳಿದ್ದರೆ ಆ ಮಾತು ಬೇರೆ. ನನ್ನ ವಿರೋಧಿ ಯಾವನೋ ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ನಾನು ಅವನ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ನನ್ನನ್ನು ವಿರೋಧಿಸಿ ನಿಂತವರು ಮಹಾತ್ಮರಾಗಿರುವುದರಿಂದ ಅವರ ವಾದವನ್ನು ನಾನು ವಿಮರ್ಶಿಸಿ ಉತ್ತರಿಸಬೇಕಾಗಿದೆ. ನನ್ನನ್ನು ಗೌರವಿಸಿದ್ದಕ್ಕಾಗಿ ಅವರನ್ನು ಮೆಚ್ಚುತ್ತೇನೆ. ಆದರೆ ವೇದಿಕೆಯಿಂದ ವ್ಯಕ್ತಮಾಡಲಾಗದ ಉಪನ್ಯಾಸವನ್ನು ನಾನು ಮುದ್ರಿಸಿದ್ದು ನನ್ನನ್ನು ಜನ ಮರೆಯಕೂಡದೆಂಬ ಉದ್ದೇಶದಿಂದ ಎಂದು ಸೂಚಿಸಿ ಪ್ರಚಾರಕ್ಕಾಗಿ ನಾನು ಆತುರಪಡುತ್ತಿದ್ದೇನೆಂದು ಆರೋಪಿಸಲಾಗಿದೆ. ಇಂತಹ ದೋಷಾರೋಪಣೆಗೆ ಸ್ವತಃ ಮಹಾತ್ಮರು ಕೈಯಿಕ್ಕಿದುದನ್ನು ಕಂಡು ನನಗೆ ವಿಸ್ಮಯವಾಗಿದೆ.
ಮಹಾತ್ಮರು ಏನೇ ಹೇಳಲಿ, ಹಿಂದೂಗಳನ್ನು ಕೆಣಕಿ ಅವರು ತಮ್ಮ ಸ್ಥಿತಿಯನ್ನು ಸರಿಯಾಗಿ ಅರಿತುಕೊಳ್ಳಲೆಂದು ಪ್ರೇರೇಪಿಸುವ ಉದ್ದೇಶದಿಂದ ಮಾತ್ರ ನಾನು ಆ ಉಪನ್ಯಾಸವನ್ನು ಮುದ್ರಿಸಿ ಪ್ರಕಟಿಸಿದೆನು. ಪ್ರಚಾರಕ್ಕಾಗಿ ನಾನು ಎಂದೂ ಹಾತೊರೆದವನಲ್ಲ. ಹಾಗೆ ನೋಡಿದರೆ ನನಗೆ ಅವಶ್ಯಕವಾದುದಕ್ಕಿಂತ ಹೆಚ್ಚಾಗಿಯೇ ಅದು ನನಗೆ ದೊರೆತಿದೆ. ಒಂದು ವೇಳೆ ಪ್ರಚಾರಾಪೇಕ್ಷೆಯಿಂದಲೆ ನಾನು ಅದನ್ನು ಪ್ರಕಟಿಸಿದೆನೆಂದು ಇಟ್ಟುಕೊಳ್ಳಿ, ಆಗ ನನ್ನ ಮೇಲೆ ಕಲ್ಲು ಒಗೆಯುವವರು ಯಾರು ? ಮಹಾತ್ಮರಂತೆ ಗಾಜಿನ ಮನೆಯಲ್ಲಿ ಇರುವವರಂತೂ ಹಾಗೆ ಮಾಡಕೂಡದು .
–ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಸುದ್ದಿದಿನ.ಕಾಂ|ವಾಟ್ಸಾಪ್|9986715401