ದಿನದ ಸುದ್ದಿ
ಯೋಗದಲ್ಲಿ ಕರ್ನಾಟಕಕ್ಕೆ ಮೊದಲ ಬಾರಿ ಬೆಳ್ಳಿ ಪದಕ
ಸುದ್ದಿದಿನ,ಶಿವಮೊಗ್ಗ : ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ತೀರ್ಥಹಳ್ಳಿ ತಾ. ಹುಂಚದಕಟ್ಟೆ ಸರ್ಕಾರಿ ಪ್ರೌಢ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ, ಗ್ರಾಮೀಣ ಪ್ರತಿಭೆ ಕಾವ್ಯ ಕೆ.ಎನ್. ಬೆಳ್ಳಿ ಪದಕ ಪಡೆದು ಶಾಲೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ, ಶಿವಮೊಗ್ಗ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುತ್ತಾಳೆ.
ಜೂನ್ 19 ರಂದು ದೆಹಲಿಯ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ಇಲ್ಲಿ ನಡೆದ 16 ವರ್ಷದೊಳಗಿನ ರಾಷ್ಟ್ರಮಟ್ಟದ ಯೋಗ ಒಲಂಪಿಯಾಡ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಮೊದಲ ಬಾರಿಗೆ ರಾಜ್ಯಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಈ ಪ್ರತಿಭಾನ್ವಿತೆ ಗರ್ತಿಕೆರೆ ಸಮೀಪದ ಎಣ್ಣೆನೋಡ್ಲು ಗ್ರಾಮದ ನಾಗರಾಜ್ ಮತ್ತು ಯಶೋಧಮ್ಮ ದಂಪತಿಗಳ ಪುತ್ರಿ. ಇವಳು ಪ್ರಾಥಮಿಕ ಶಿಕ್ಷಣವನ್ನು ಹೊಸನಗರ ತಾಲೂಕಿನ ಅಮೃತದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪಡೆದಿರುತ್ತಾಳೆ.
ಹೆಮ್ಮೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕಾವ್ಯ ಕೆ.ಎನ್ ಇವಳಿಗೆ ಹುಂಚದಕಟ್ಟೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿಗಳು ಹಾಗೂ ಸಹಪಾಠಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243