ದಿನದ ಸುದ್ದಿ

ಮಾಧ್ಯಮ ಸ್ವಾತಂತ್ರ್ಯದ ಗುಂಗಿನಲ್ಲಿ

Published

on

  • ನಾ ದಿವಾಕರ

ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಹಿಂಜರಿಯುವಷ್ಟು ಮಟ್ಟಿಗೆ ಸುದ್ದಿ ಮಾಧ್ಯಮಗಳು ತಮ್ಮ ಬೌದ್ಧಿಕ ನೆಲೆಯನ್ನು ಕಳೆದುಕೊಂಡಿವೆ. ಯಾವುದೇ ಸಂದರ್ಭದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲದೆ , ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಎಲ್ಲ ದೌರ್ಜನ್ಯಗಳಿಗೂ ವಿಮುಖರಾಗಿ, ಸದಾ ಆಳುವ ವರ್ಗಗಳ ಭಜನೆ ಮಾಡುತ್ತಾ, ಜನಸಾಮಾನ್ಯರ ನೋವು ಸಂಕಷ್ಟಗಳಿಗೆ ಬೆನ್ನು ತೋರಿಸಿ, ಪ್ರಭುತ್ವದ ಪಾದಾರವಿಂದಗಳಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡಿರುವ ಸುದ್ದಿಮನೆಗಳಿಗೆ ಯಡಿಯೂರಪ್ಪನವರ ಸರ್ಕಾರ ಸ್ಪಷ್ಟ ಸಂದೇಶ ನೀಡಿದೆ.

ಪವರ್ ಟಿವಿ ವಾಹಿನಿಯ ಪ್ರಸಾರಕ್ಕೆ ತಡೆಯೊಡ್ಡುವ ಮೂಲಕ ರಾಜ್ಯ ಸರ್ಕಾರ ಮುಂಬರುವ ದಿನಗಳ ಮುನ್ಸೂಚನೆಯನ್ನೂ ನೀಡಿದೆ. ಬೆಂಗಳೂರಿನಲ್ಲಿ ಎನ್ ಐ ಎ ಕಚೇರಿಯನ್ನು ತೆರೆಯುವ ನಿರ್ಧಾರದ ಹಿಂದೆ ಗುಪ್ತ ಕಾರ್ಯಸೂಚಿ ಅಡಗಿರುವುದನ್ನು ಗಮನಿಸದೆ ಹೋದರೆ ಪವರ್ ಟಿವಿ-ರೆಹಮಾನ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

ಇದು ಕೇವಲ ಸರ್ವಾಧಿಕಾರದ ಪ್ರಶ್ನೆಯಲ್ಲ. ಆಳುವ ವರ್ಗಗಳನ್ನು ಪ್ರಶ್ನಿಸುವ, ಖಂಡಿಸುವ, ಸರಕಾರಗಳ ತಪ್ಪುಗಳನ್ನು ಎತ್ತಿ ತೋರುವ ಯಾವುದೇ ಅಭಿವ್ಯಕ್ತಿಯನ್ನು ಸಹಿಸಲಾಗುವುದಿಲ್ಲ ಎಂಬ ಸೂಚನೆಯನ್ನು ಪವರ್ ಟಿವಿ ಪ್ರಕರಣದಲ್ಲಿ ಕಾಣಬಹುದು. ಇತರ ಸುದ್ದಿಮನೆಗಳು, ಮಾಧ್ಯಮಗಳು ಮೌನವಾಗಿರುವುದನ್ನು ನೋಡಿದರೆ ವಿದ್ಯುನ್ಮಾನ ಮಾಧ್ಯಮ ಲೋಕದ ನಿಷ್ಕ್ರಿಯತೆಯನ್ನೂ ಗ್ರಹಿಸಬಹುದು.

ಈಗ ಮಾಧ್ಯಮಗಳಿಗೆ, ಅದರಲ್ಲೂ ಸುದ್ದಿಮನೆಗಳಿಗೆ ಮಾಧ್ಯಮ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ವಿಶೇಷ ಒಲವು ಮೂಡಿದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ನೈತಿಕತೆಯನ್ನು ಎಂದೋ ಕಳೆದುಕೊಂಡುಬಿಟ್ಟಿವೆ.

ನಾವುಗಳು ಇರುವುದು ಪ್ರಜೆಗಳಿಗಾಗಿ ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡು ಆಳುವವರ ಭಟ್ಟಂಗಿಗಳಾಗಿರುವ ಮಾಧ್ಯಮಗಳು ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನೂ ಪ್ರತಿಭಟಿಸಲಾಗದಷ್ಟು ಮಟ್ಟಿಗೆ ಸ್ವಂತಿಕೆ ಕಳೆದುಕೊಂಡಿವೆ. ಪವರ್ ಟಿವಿ ಅಥವಾ ರೆಹಮಾನ್ ಇಂದು ಅನಾಥ ಪ್ರಜ್ಞೆಯಿಂದ ನಲುಗುತ್ತಿದ್ದರೆ ಅದಕ್ಕೆ ಸ್ವತಃ ತಾವೇ ಕಾರಣರು, ತಮ್ಮ ಮಾಧ್ಯಮ ಬಂಧುಗಳೇ ಕಾರಣ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮ ಲೋಕ ಆಳುವವರ ಸ್ವಯಂ ನಿರ್ಮಿತ ದೇಗುಲದ ಮುಂದೆ ಗರುಡಗಂಭಗಳಂತೆ ನಿಂತರೆ ಹೀಗೇ ಆಗುವುದು. ದೊರೆಗಳಿಗೆ ಪರಾಕು ಹಾಡುವ ಮಧ್ಯಕಾಲೀನ ಪರಂಪರೆಗೆ ಜಾರಿರುವ ಸುದ್ದಿಮನೆಗಳು ಮತ್ತು ಕುಂತಲ್ಲಿ ಕೂರಲಾಗದೆ ನಾಟ್ಯ ಭಂಗಿಗಳಲ್ಲಿ ಸುದ್ದಿ ನೀಡುವ ಸಂಪಾದಕರು, ಸೂರು ಕಿತ್ತುಹೋಗುವಂತೆ ಏರುದನಿಯಲ್ಲಿ ಸುದ್ದಿ ಹರಡುವ ಕೂಗುಮಾರಿ ನಿರೂಪಕರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ತಮ್ಮ ವೃತ್ತಿಧರ್ಮವನ್ನು ( ಏನಾದರೂ ಉಳಿದಿದ್ದರೆ) ಪಾಲಿಸುವತ್ತ ಗಮನ ಹರಿಸಲು ಇದು ಸಕಾಲ.

ರಾಜ್ಯ ಸರ್ಕಾರದ ಫ್ಯಾಸಿಸ್ಟ್ ಧೋರಣೆಯನ್ನು ಖಂಡಿಸಬೇಕಾದ್ದು ನಾಗರಿಕ ಸಮಾಜದ ಕರ್ತವ್ಯ. ಸಮೂಹ ಸನ್ನಿಗೊಳಗಾಗಿರುವ ಮಧ್ಯಮ ವರ್ಗದ ಸಾರ್ವಭೌಮ ಪ್ರಜೆಗಳಿಗೆ ಇದು ಸ್ವಾಗತಾರ್ಹ ಬೆಳವಣಿಗೆ ಎನಿಸುತ್ತದೆ. ಆದರೆ ನಾಗರಿಕ ಪ್ರಜ್ಞೆ ಇರುವ ಯಾವುದೇ ಪ್ರಜೆಗೆ ಇದು ಆತಂಕಕಾರಿ ಬೆಳವಣಿಗೆಯಾಗಿ ಕಾಣುತ್ತದೆ.

ಈ ಪ್ರಜೆಗಳ ಸಹಾನುಭೂತಿ ಮತ್ತು ಅನುಕಂಪವನ್ನು ನಾವೇಕೆ ಕಳೆದುಕೊಂಡಿದ್ದೇವೆ ಎಂದು ಮಾಧ್ಯಮಗಳು ಯೋಚಿಸಬೇಕಿದೆ. ಆತ್ಮ ಸಾಕ್ಷಿ ಬದುಕಿದ್ದರೆ ಆತ್ಮಾವಲೋಕನ ಮಾಡಿಕೊಳ್ಳಲಿ. ಮಾಧ್ಯಮಗಳು ಇನ್ನೂ ಬದಲಾಗದಿದ್ದರೆ ಸಜೀವ ಸಮಾಧಿಯಾಗುವುದು ಒಳಿತು. ನೈತಿಕತೆ ಇಲ್ಲದೆ ಹೋದಮೇಲೆ ಉಳಿಯುವ ನೈತಿಕ ಹಕ್ಕು ಸಹ ಇಲ್ಲವಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version