ದಿನದ ಸುದ್ದಿ
ಕಾರ್ನಾಡ್ ನಡೆ ಒಪ್ಪುವಂತದ್ದಲ್ಲ: ಮಹೇಶ್ ಚಂದ್ರ ಗುರು ವಿರೋಧ
ನಾನು ನಗರದ ನಕ್ಸಲೀಯ ಎಂಬ ಬೋರ್ಡ್ ಹಾಕಿಕೊಂಡು ಗೌರಿದಿನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಈಗ ವಿವಾದದಲ್ಲಿ ಸಿಕ್ಕಿದ್ದಾರೆ.
ಕಾರ್ನಾಡರ ನಡೆ ಕುರಿತು ಪ್ರಗತಿಪರ ಚಳವಳಿಗಳು, ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಪ್ರೊ. ಮಹೇಶ್ ಚಂದ್ರ ಗುರು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಿಂಸೆಯನ್ನು ಪ್ರತಿಪಾದಿಸುವವರ ಜೊತೆ ವಿಚಾರವಾದಿಗಳು ಗುರುತಿಸಿಕೊಳ್ಳಬಾರದು
ಇತ್ತೀಚೆಗೆ ಕಲಬುರ್ಗಿಯಲ್ಲಿ ಜರುಗಿದ ಗೌರಿ ಲಂಕೇಶರ ಮೊದಲ ವರ್ಷದ ಸ್ಮರಣೆ ಸಂದರ್ಭದಲ್ಲಿ ನಾಡಿನ ಹಿರಿಯ ಕಲಾವಿದ ಹಾಗೂ ಜನಪರ ಚಿಂತಕ ಶ್ರೀ ಗಿರೀಶ್ ಕಾರ್ನಾಡ್ ’ನಾನು ನಗರದ ನಕ್ಸಲೀಯ’ ಎಂಬ ಫಲಕವನ್ನು ಹಾಕಿಕೊಂಡಿರುವುದನ್ನು ಮಾಧ್ಯಮಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ಇವರಿಗೆ ಮತ್ತೊಬ್ಬ ಪ್ರತಿಭಾವಂತ ಚಿಂತಕ ಹಾಗೂ ಕಲಾವಿದ ಈ ಫಲಕವನ್ನು ತೊರಿಸುತ್ತಿರುವ ಚಿತ್ರ ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದು ನಿಜಕ್ಕೂ ಭಾರತೀಯ ಬಹು ಸಂಸ್ಕೃತಿ ಮತ್ತು ಸಂವಿಧಾನಾತ್ಮಕ ಆಶಯಗಳಿಗೆ ವಿರುದ್ಧವಾಗಿದೆ. ಭಾರತದ ಬಹುಜನರು ಬುದ್ಧನ ಮಾರ್ಗದರ್ಶನದಲ್ಲಿ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಮಾರ್ಗಗಳ ಮೂಲಕ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ.
ಸ್ವಾತಂತ್ರ ಚಳುವಳಿ ಕೂಡ ಅಹಿಂಸಾ ಮಾರ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ಗಾಂಧಿ ನೇತೃತ್ವದಲ್ಲಿ ಜರುಗಿತು. ’ಬ್ರಿಟೀಷರ ಬಂದೂಕು ಶಕ್ತಿಯನ್ನು ಗಾಂಧಿಯವರ ಅಹಿಂಸಾತ್ಮಕ ಲೇಖನ ಶಕ್ತಿ ಮಣಿಸಿತು’ ಎಂಬ ಅಭಿಮಾನದ ಮಾತುಗಳನ್ನು ಹಿಂದಿನ ಪ್ರಧಾನಿ ಚರ್ಚಿಲ್ ಹೇಳಿದ್ದಾರೆ. ಅಂಬೇಡ್ಕರ್ ತಮ್ಮ ’ಬುದ್ಧ ಮತ್ತು ಮಾರ್ಕ್ಸ್’ ಎಂಬ ಕೃತಿಯಲ್ಲಿ ’ಮಾರ್ಕ್ಸ್ವಾದಿಗಳು ಹಿಂಸಾಮಾರ್ಗದಲ್ಲಿ ಮುನ್ನಡೆದು ಸಮಾನತೆ ಗಳಿಸಬಹುದು, ಆದರೆ ಭ್ರಾತೃತ್ವವನ್ನು ಕೊಂದು ಗಳಿಸುವ ಸಮಾನತೆ ಮೌಲ್ಯರಹಿತವಾಗಿದೆ ಮತ್ತು ಅಸಮರ್ಥನೀಯವಾಗಿದೆ’ ಎಂಬ ಮಾತುಗಳನ್ನು ಹೇಳಿರುವುದು ಸಾರ್ವಕಾಲಿಕ ಪ್ರಸ್ತುತತೆ ಹೊಂದಿದೆ.
ಯುದ್ಧದಿಂದ ಜಗತ್ತನ್ನು ಉಳಿಸಲು ಬುದ್ಧಮಾರ್ಗ ಮತ್ತು ಅನಭಿವೃದ್ಧಿಯಿಂದ ಅಭಿವೃದ್ಧಿಯೆಡೆಗೆ ಜಗತ್ತನ್ನು ಮುನ್ನಡೆಸಲು ಅಂಬೇಡ್ಕರ್ರವರ ಅಂತ್ಯೋದಯ ಮಾದರಿ ಇಂದು ಅನಿವಾರ್ಯವಾಗಿದೆ ಎಂಬ ಸತ್ಯವನ್ನು ವಿಶ್ವಸಂಸ್ಥೆ ಮನಗಂಡಿದೆ. ಮಾನವ ಬದುಕಿನ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸರ್ವಜನರ ಅಭ್ಯುದಯಗಳಿಗೆ ಪೂರಕವಾದ ವಿಶ್ವಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ರಚಿಸಿದ್ದಾರೆ. ನೂತನ ಸಹಸ್ರಮಾನದಲ್ಲಿ ಜಾಗತೀಕರಣವೆಂದರೆ ಮಾನವೀಕರಣವೆಂದೇ ಅರ್ಥೈಸಬೇಕು.
ಸರ್ವಧರ್ಮಗಳು ಮತ್ತು ಜನಾಂಗಗಳು ಶಾಂತಿಯಿಂದ ಸಹಬಾಳ್ವೆ ನಡೆಸಲು ಪ್ರಜಾಪ್ರಭುತ್ವ, ಬಹುತ್ವ, ಬಂಧುತ್ವ, ಧರ್ಮ ನಿರಪೇಕ್ಷತೆ, ರಕ್ತಪಾತ ರಹಿತವಾದ ಪರಿವರ್ತನೆ ಇಂದು ಅತ್ಯವಶ್ಯಕ. ಗೌರಿ ಲಂಕೇಶ್ ಪ್ರಜಾಸತ್ತಾತ್ಮಕ ಹಾಗೂ ಅಹಿಂಸಾತ್ಮಕ ಹೋರಾಟಗಳನ್ನು ಪ್ರಜ್ಞಾಪೂರ್ವಕವಾಗಿ ಬೆಂಬಲಿಸಿ ದೇಶದ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನವನ್ನು ಗಳಿಸಿದ್ದಾರೆ. ಅವರು ನಕ್ಸಲೀಯರನ್ನು ರಕ್ತಪಾತ ಕೇಂದ್ರಿತ ಹೋರಾಟವನ್ನು ಬಿಟ್ಟು ಮುಖ್ಯವಾಹಿನಿಗೆ ಬಂದು ಶಾಂತಿ ಮಾರ್ಗದಲ್ಲಿ ಉದ್ಧಾರವಾಗಿ ಎಂದು ಕರೆ ನೀಡಿದರು.
ಗೌರಿ ಲಂಕೇಶರ ಬಗ್ಗೆ ಅತೀವ ಪ್ರೀತಿ ಮತ್ತು ಅಭಿಮಾನ ಹೊಂದಿರುವ ಗಿರೀಶ್ ಕಾರ್ನಾಡ್ ’ನಾನೂ ನಗರದ ನಕ್ಸಲೀಯ’ ಎಂಬ ಫಲಕವನ್ನು ಇತ್ತೀಚಿನ ಸಭೆಯಲ್ಲಿ ಪ್ರದರ್ಶಿಸಿರುವುದು ಭಾರತದ ಸಂವಿಧಾನ ಮತ್ತು ಬಹುತ್ವಗಳಿಗೆ ನಿಜವಾಗಿಯೂ ಅಪಚಾರವುಂಟಾಗಿದೆ. ಪ್ರಕಾಶ್ರಾಜ್ರವರು ಕೂಡ ನಕ್ಸಲೀಯ ಸಿದ್ಧಾಂತವನ್ನು ಹೀಗೆ ಬಹಿರಂಗವಾಗಿ ಸಮರ್ಥಿಸುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ನಗರದಲ್ಲಿರಲಿ ಅಥವಾ ಹಳ್ಳಿಯಲ್ಲಿರಲಿ ’ನಾವೆಲ್ಲರೂ ಮನುಷ್ಯರು – ಮಾನವತಾವಾದವೇ ಜಗತ್ತನ್ನು ಉಳಿಸುವ ಮಹಾ ಶಕ್ತಿ’ ಎಂಬ ಸಂದೇಶವನ್ನು ವಿಚಾರವಾದಿಗಳು ಮತ್ತು ಜನಪರ ಹೋರಾಟಗಾರರು ಎಲ್ಲೆಡೆ ಎಲ್ಲರಿಗೂ ನೀಡುವುದು ಅತ್ಯವಶ್ಯಕ.
ಬಲಪಂಥೀಯ ರಾಜಕಾರಣ ಮತ್ತು ನಕ್ಸಲೀಯ ಹೋರಾಟಗಳು ದೇಶದ ಶಾಂತಿ, ಸುವ್ಯವಸ್ಥೆ, ಸಾಮರಸ್ಯ ಮತ್ತು ಪ್ರಗತಿಗಳಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿವೆ. ಇಂದು ಜಗತ್ತನ್ನು ಉಳಿಸುವ ಮತ್ತು ಉದ್ಧರಿಸುವ ಸಲುವಾಗಿ ನಾವೆಲ್ಲರೂ ಬುದ್ಧನ ಮಧ್ಯಮಾರ್ಗವನ್ನು ಅನುಸರಿಸುವುದು ಅನಿವಾರ್ಯ. ಗಾಂಧಿ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ನಾರಾಯಣ ಗುರು ಮೊದಲಾದ ದಾರ್ಶನಿಕರು ನಮಗೆ ಇಂದು ಅನುಕರಣೀಯ ವ್ಯಕ್ತಿಗಳು ಮತ್ತು ಶಕ್ತಿಗಳಾಗಬೇಕು.
(ಲೇಖಕರು-
ಡಾ.ಬಿ.ಪಿ.ಮಹೇಶ ಚಂದ್ರ ಗುರು
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಶೈಕ್ಷಣಿಕ ಮಂಡಳಿ ಸದಸ್ಯರು)