ಭಾವ ಭೈರಾಗಿ

ಕವಿತೆ | ಹಳ್ಳಿಯ ಚೆಲುವೆಗೆ

Published

on

ಚಿತ್ರ ಕಲೆ : ಶ್ರೀಕಾಂತ್ ಧೋತ್ರೆ

 

ವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ |
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ ||
ಬೆಳ್ಳಬೆಳ್ಳಗೆ ತೆಳ್ಳಗಿಹೆ ನೀನು
ಬೇಟೆಗಾರನ ಬಿಲ್ಲಿನಂತಿರುವೆ ನೀನು
ಒತ್ತಾಗಿ ಕಪ್ಪಾಗಿ ಬೆಳೆದಿರುವ ಹುಬ್ಬು
ಪಾರಿವಾಳದ ಕಣ್ಗೆ ನೆರಳನಿತ್ತಿಹುದು
ನವಿಲೂರಿನೊಳಗೆಲ್ಲ……..

ಉಟ್ಟ ರೇಸಿಮೆಗಿಂತ ನಿನ್ನ ಮೈ ನುಣುಪು
ಬೆಟ್ಟದರಗಿಳಿಗಿಂತ ನಿನ್ನ ನುಡಿ ಇಂಪು
ತುಂಬು ಹರೆಯದ ಹುಡುಗಿ ನೀನೊಲುಮೆಗೀಡು
ನಂಬಿ ನನ್ನನು ವರಿಸಿ ಸಂತಸದಿ ಬಾಳು
ನವಿಲೂರಿನೊಳಗೆಲ್ಲ……..

ಹಗಲೆಲ್ಲ ದುಡಿಯುವೆನು ಕೆಸರ ಗದ್ದೆಯಲಿ
ಶ್ರಮವೆಲ್ಲ ಹೊನ್ನಹುದು ವರ್ಷದಂತ್ಯದಲಿ
ನಿನ್ನ ಹೊಟ್ಟೆಯ ತುಂಬ ಅನ್ನ ನೊರೆಹಾಲು
ನನ್ನ ನುಡಿಯನು ಕೇಳು ; ನನ್ನೊಡನೆ ಬಾಳು
ನವಿಲೂರಿನೊಳಗೆಲ್ಲ……..

ನಿನ್ನೊಲುಮೆ ತಾರೆಗಳ ಹರಡಿರುವ ಬಾನು
ಮುಂಬೆಳಗು ತೆರೆದಿಟ್ಟ ತಾವರೆಯ ಸರಸಿ
ಪ್ರೀತಿಯೊಂದನೆ ನಿನ್ನ ಕೇಳುವುದು ನಾನು
ಮುಂದೆ ಹೋಗೆನ್ನದಿರು ನನ್ನ ಮನದರಸಿ
ನವಿಲೂರಿನೊಳಗೆಲ್ಲ………

(ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ‘ಮೈಸೂರು ಮಲ್ಲಿಗೆ‘ ಕವನ ಸಂಕಲನದಿಂದ ಈ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.)

-ಕೆ.ಎಸ್‌.ನರಸಿಂಹಸ್ವಾಮಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version